ಅಶಿಸ್ತಿನ ವಿರುದ್ಧ ಆಕ್ರೋಶ !

ಚೀನಾದಲ್ಲಿ ಕೊರೋನಾ ನವೆಂಬರ್ ತಿಂಗಳಿನಲ್ಲಿ ಉತ್ಪತ್ತಿಯಾಗಿದೆಯೆಂದು ಹೇಳಲಾಗುತ್ತಿರುವುದರಿಂದ ಕೊರೋನಾ ಬಂದು ಈಗ  ಸುಮಾರು ೯ ತಿಂಗಳಾಗಿವೆ. ಭಾರತದಲ್ಲಿ ಜನವರಿ ತಿಂಗಳಿನಲ್ಲಿ ಮೊದಲ ರೋಗಿ ಪತ್ತೆಯಾದನು. ಈಗ ಕೊರೋನಾಬಾಧಿತರ ಒಟ್ಟು ಸಂಖ್ಯೆ ೩೧ ಲಕ್ಷಗಳಷ್ಟು ಆಗಿದೆ. ಅದರಲ್ಲಿ ಕೇವಲ ಶೇ. ೨೨ ರಷ್ಟು ರೋಗಿಗಳು ಸದ್ಯಕ್ಕೆ ಸೋಂಕಿತರಾಗಿದ್ದು, ಇನ್ನುಳಿದ ರೋಗಿಗಳು ಚೇತರಿಸಿಕೊಂಡಿದ್ದಾರೆ. ಚೇತರಿಸಿಕೊಳ್ಳುವ ಪ್ರಮಾಣವೂ ಸಾಕಷ್ಟು ಅಂದರೆ ಶೇ. ೭೫ ರಷ್ಟಿದೆ. ಆದಾಗ್ಯೂ ದೇಶದಲ್ಲಿ ಕೊರೊನಾದಿಂದ ಮೃತರ ಸಂಖ್ಯೆ ೫೮ ಸಾವಿರಗಳಷ್ಟಾಗಿದ್ದು, ಈ ಸಂಖ್ಯೆ ಕಡಿಮೆಯೇನಲ್ಲ ಎನ್ನುವುದನ್ನು ಗಮನಿಸಬೇಕು. ಸದ್ಯ ಭಾರತವು ಜಗತ್ತಿನಲ್ಲಿ ಕೊರೋನಾಬಾಧಿತರ ಸಂಖ್ಯೆಯಲ್ಲಿ ಮೂರನೇ ಸ್ಥಾನಕ್ಕೆ ತಲುಪಿದೆ. ಈಗ ಪ್ರತಿದಿನ ೬೦ ರಿಂದ ೭೦ ಸಾವಿರಗಳ ಮಧ್ಯದ ಸಂಖ್ಯೆಯಲ್ಲಿ ಕೊರೋನಾಬಾಧಿತರು ಕಂಡು ಬರುತ್ತಿದ್ದಾರೆ. ಒಂದು ವೇಳೆ ಈ ವೇಗವು ಇದೇ ರೀತಿ ಮುಂದುವರಿದರೆ, ಭಾರತವು ಬೇಗನೆ ೧ ಕೋಟಿ ರೋಗಿಗಳ ಸಂಖ್ಯೆಯ ಹಂತವನ್ನು ತಲುಪುವುದರಲ್ಲಿ ಯಾವುದೇ ಸಂಶಯವಿಲ್ಲ.

‘ಮುಂದಿನ ೭೦ ದಿನಗಳಲ್ಲಿ ದೇಶದಲ್ಲಿ ಕೊರೋನಾಗೆ ಲಸಿಕೆ ಸಿಗಲಿದೆ, ಎಂದು ಹೇಳಲಾಗುತ್ತಿದೆ; ಆದರೆ ಅದೇ ಸಮಯದಲ್ಲಿ ‘ಕೊರೋನಾದ ಲಸಿಕೆಯನ್ನು ತೆಗೆದುಕೊಂಡರೂ ಕೊರೋನಾ ಬಾಧಿಸುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದೂ ತಜ್ಞರು ಈಗ ಹೇಳಿದ್ದಾರೆ. ಇದರಿಂದ ಕೊರೋನಾದ ಸೋಂಕು ತಗಲುವ ಸಾಧ್ಯತೆ ದೇಶದಲ್ಲಿಯಷ್ಟೇ ಅಲ್ಲ ವಿದೇಶದಲ್ಲಿಯೂ ಇರಲಿದೆ, ಎನ್ನುವುದನ್ನು ಈಗ ಪ್ರತಿಯೊಬ್ಬರೂ ಸ್ವೀಕರಿಸಲೇ ಬೇಕಾಗಿದೆ. ವಾಸ್ತವದಲ್ಲಿ ದೇಶದ ಹೆಚ್ಚಿನ ನಾಗರಿಕರೂ ಈ ವಾಸ್ತವಾಂಶವನ್ನು ಸ್ವೀಕರಿಸಿದ್ದಾರೆ. ಈ ಕಾರಣದಿಂದ ದೇಶದ ಜನತೆಯು ಈಗ ಕೊರೋನಾದ ಸಂಕಟವನ್ನು ಗಾಂಭೀರ್ಯದಿಂದ ಪರಿಗಣಿಸದಿರುವುದು ಕಂಡುಬರುತ್ತಿದೆ. ಇದರಿಂದಲೇ ‘ಬೇಜವಾಬ್ದಾರಿಯುತ,  ಎಚ್ಚರಿಕೆಯನ್ನು ವಹಿಸದ, ಮಾಸ್ಕ್ ಉಪಯೋಗಿಸದಿರುವ ಜನರಿಂದಲೇ ಭಾರತದಲ್ಲಿ ಕೊರೋನಾ ವೇಗ ವಾಗಿ ಹರಡುತ್ತಿದೆ, ಎಂದು ಭಾರತೀಯ ವೈದ್ಯಕೀಯ ಸಂಶೋಧನೆ ಸಂಘದ (ಐ.ಸಿ.ಎಮ್.ಆರ್.) ನಿರ್ದೇಶಕರಾದ ಬಲರಾಮ ಭಾರ್ಗವ  ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಭಾರ್ಗವ ಇವರ ಆಕ್ರೋಶ ತಪ್ಪೇನಿಲ್ಲ. ಅವರು ಸತ್ಯವನ್ನೇ ನುಡಿದಿದ್ದಾರೆ.  ಮೂಲದಲ್ಲಿ ಹೀಗೆ ಮಾಡುವುದರ ಹಿಂದೆ ಇಲ್ಲಿಯವರೆಗೆ ರಾಜಕಾರಣಿಗಳು ಭಾರತೀಯರಿಗೆ ಶಿಸ್ತು ಹೆಸರಿನ ವಿಷಯವನ್ನು ಎಂದೂ ಕಲಿಸಲಿಲ್ಲ ಎನ್ನುವುದು ಮುಖ್ಯ ಕಾರಣವಾಗಿದೆ. ಅಶಿಸ್ತಿನಿಂದ ನಡೆದುಕೊಳ್ಳುವುದರ ಹಿಂದೆ ಭಾರತೀಯರನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎನ್ನುವುದು ಪ್ರತಿಯೊಂದು ಸ್ಥಳದಲ್ಲಿಯೂ ಕಂಡು ಬರುತ್ತಿರುತ್ತದೆ. ಅದು ಬಸ್  ತಂಗುದಾಣದಲ್ಲಿ ಸರತಿ ಸಾಲು ಆಗಿರಬಹುದು ಅಥವಾ ರಸ್ತೆಯ ಮೇಲೆ ಕಸವನ್ನು ಚೆಲ್ಲುವುದು, ಉಗುಳುವುದು ಇವುಗಳಿಂದ ಕಂಡು ಬರುತ್ತಿರುತ್ತದೆ. ಇಂತಹ ನಾಗರಿಕರಿಗೆ ಕೊರೋನಾದ ವಿಷಯದಲ್ಲಿ ನಿಯಮಗಳನ್ನು ಪಾಲಿಸುವಂತೆ ಹೇಳುವುದೆಂದರೆ ಅವರಿಂದ ಬಹುದೊಡ್ಡ ಅಪೇಕ್ಷೆಯನ್ನು ಪಡುವಂತಿದೆ.

ಮೊದಲ ಬಾರಿಗೆ ಸಂಚಾರ ಸಾರಿಗೆ ನಿರ್ಬಂಧ ವಿಧಿಸಿದಾಗ ಕೊರೋನಾ ಸೋಂಕು ಹೆಚ್ಚಳವಾಗಲಿಲ್ಲ ಎನ್ನುವುದು ವಸ್ತುಸ್ಥಿತಿಯಾಗಿದೆ. ಇದರರ್ಥ ಭಾರತೀಯರ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಿದರೆ ಮಾತ್ರ ಅವರು ಅದಕ್ಕನುಸಾರ ನಡೆದುಕೊಳ್ಳುತ್ತಾರೆ, ಇಲ್ಲದಿದ್ದರೆ ಸವಲತ್ತು ನೀಡಿದರೆ ಅಥವಾ ಕಠಿಣವಾಗಿರದಿದ್ದರೆ, ಅವರು ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಾರೆ ಎನ್ನುವುದು ಮತ್ತೊಮ್ಮೆ ಇದರಿಂದ ಸ್ಪಷ್ಟವಾಗಿ ಕಂಡು ಬಂದಿತು. ಸ್ವಾತಂತ್ರ್ಯದ ಪೂರ್ವದಲ್ಲಿ ಜನರಲ್ಲಿ ಶಿಸ್ತು, ಸಾಮಾಜಿಕ ಭಾವನೆಗಳಿದ್ದವು. ಸ್ವಾತಂತ್ರ್ಯದ ನಂತರ ಮಾತ್ರ ಎಲ್ಲ ಪಕ್ಷಗಳ ರಾಜಕಾರಣಿಗಳು ಜನತೆಗೆ ಶಿಸ್ತನ್ನು ಕಲಿಸದ ಕಾರಣ ಎಲ್ಲೆಡೆಯೂ ಅಶಿಸ್ತಿನ ವಾತಾವರಣ (ಗಲೀಜು) ನಿರ್ಮಾಣವಾಗಿದೆ.

ವಿನಾಯಿತಿ ನೀಡಿರುವುದರ ದುಷ್ಪರಿಣಾಮಗಳು !

ಸಂಚಾರಸಾರಿಗೆ ನಿರ್ಬಂಧದಲ್ಲಿ ವಿನಾಯಿತಿ ನೀಡಿದ ಬಳಿಕವೇ ರೋಗಿಗಳ ಸಂಖ್ಯೆಯಲ್ಲಿ ವೇಗವಾಗಿ ಹೆಚ್ಚಳವಾಗುತ್ತಿದೆ. ಈಗ ಈ ನಿರ್ಬಂಧದಲ್ಲಿ ಕೆಲವು ಪ್ರಮಾಣದಲ್ಲಿ ವಿನಾಯಿತಿಗಳನ್ನು ನೀಡಲೇ ಬೇಕಾದ ಅನಿವಾರ್ಯತೆ ಸರಕಾರಕ್ಕೆ ಇತ್ತು. ಸಂಪೂರ್ಣ ಸಂಚಾರ ನಿರ್ಬಂಧದಿಂದ ಕೆಲವು ಪ್ರಮಾಣದಲ್ಲಿ ಜನರಿಗೆ ತೊಂದರೆಯೂ ಆಗಿದೆ. ಸಾಮಗ್ರಿಗಳ ಉತ್ಪಾದನೆ ಸ್ಥಗಿತಗೊಂಡು, ದೇಶದ ಆರ್ಥಿಕ ಉತ್ಪಾದನೆಯ ಮೇಲೆಯೂ ದುಷ್ಪರಿಣಾಮ ಬೀರಿದೆ. ಜಾಗತಿಕ ಮಟ್ಟದಲ್ಲಿ ಇದರ ಪರಿಣಾಮವಾಗಿದೆ. ಇದರಿಂದ ಹೊರಬರಲು ವಿನಾಯಿತಿಗಳನ್ನು ನೀಡುವುದು ಆವಶ್ಯಕವಾಗಿತ್ತು ಎನ್ನುವುದೂ ಅಷ್ಟೇ ಸತ್ಯವಾಗಿದೆ; ಆದರೆ ವಿನಾಯಿತಿ ನೀಡುವಾಗ ಯಾವ ಮಟ್ಟದಲ್ಲಿ ನಾಗರಿಕರು ಜವಾಬ್ದಾರಿಯುತ ನಾಗರಿಕರ ಪಾತ್ರವನ್ನು ವಹಿಸುವ ಆವಶ್ಯಕತೆಯಿತ್ತೋ ಹಾಗೆ ಆಗಲಿಲ್ಲ, ಎನ್ನುವುದು ವಸ್ತುಸ್ಥಿತಿಯಾಗಿದೆ. ಈ ಕಾರಣದಿಂದಲೇ ಭಾರ್ಗವ ಇವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ‘ಕೊರೋನಾಗೆ ಹೆದರುವ ಅವಶ್ಯಕತೆಯಿಲ್ಲ, ಎನ್ನುವುದು ಒಂದರ್ಥದಲ್ಲಿ ಸರಿಯಾಗಿದೆ; ಆದರೆ ಅದರರ್ಥ ‘ಬೇಜವಾಬ್ದಾರಿಯಿಂದ ವರ್ತಿಸುವುದು ಎಂದಲ್ಲ. ‘ಸಾಮಾಜಿಕ ಅಂತರವನ್ನು ಪಾಲಿಸಬೇಕು, ಮಾಸ್ಕ್ ಧರಿಸಬೇಕು, ಎನ್ನುವ ಪ್ರಾಥಮಿಕ ನಿಯಮಗಳ ಪಾಲನೆಯನ್ನೂ ಜನರು ಮಾಡದಿದ್ದರೆ ಕೊರೋನಾವನ್ನು ಹತೋಟಿಗೆ ತರಲು ಸಾಧ್ಯವಿದೆಯೇ ?

ಅನೇಕ ನಾಗರಿಕರು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ; ಆದರೆ ಯಾರು ಪಾಲಿಸುತ್ತಿಲ್ಲವೋ ಅವರಿಂದ ಈ ನಾಗರಿಕರಿಗೆ ಅಪಾಯವುಂಟಾಗುತ್ತಿದೆ ಎನ್ನುವುದನ್ನು ಗಮನಿಸಬೇಕಾದ ಅವಶ್ಯಕತೆಯಿದೆ. ಪ್ರಾರಂಭಿಕ ಹಂತದಲ್ಲಿ ಯುರೋಪ್ ಮತ್ತು ಅಮೇರಿಕಾದ ರೋಗಿಗಳ ಸಂಖ್ಯೆಯಲ್ಲಿ ಆಗುತ್ತಿದ್ದ ಹೆಚ್ಚಳದ ತುಲನೆಯಲ್ಲಿ ಈಗ  ಹೆಚ್ಚಳವಾಗುತ್ತಿಲ್ಲ. ಅದನ್ನು ನೋಡಿದರೆ ಭಾರತದಲ್ಲಿ ಅದರ ವಿರುದ್ಧವಾಗಿದೆ. ಪ್ರಾರಂಭಿಕ ಹಂತದಲ್ಲಿ ಭಾರತದಲ್ಲಿ ಅತ್ಯಲ್ಪ ಸಂಖ್ಯೆಯಿತ್ತು; ಆದರೆ ಈಗ ಅದು ಯುರೋಪ್ ಮತ್ತು ಅಮೇರಿಕಾಗಳ ಆ ಸಮಯದ ಹಂತಕ್ಕಿಂತಲೂ ಮುಂದಿದೆ ಎನ್ನುವುದನ್ನು ಭಾರತೀಯರು ಗಮನಿಸಬೇಕಾಗಿದೆ.

ದೇಶಭಕ್ತಿಯನ್ನು ತೋರಿಸಿರಿ !

ಕೊರೋನಾ ರೋಗಿಗಳ ಹೆಚ್ಚುತ್ತಿರುವ ಸಂಖ್ಯೆಯಿಂದ ಸರ್ಕಾರಿ ಅಧಿಕಾರಿಗಳು ಮತ್ತು ಸರಕಾರದ ಮೇಲೆ ಹೆಚ್ಚು ಒತ್ತಡ ನಿರ್ಮಾಣವಾಗುತ್ತಿದೆ. ಪ್ರತಿಯೊಬ್ಬ ನಾಗರಿಕನ ಪರೀಕ್ಷಣೆಗೆ ತಗಲುವ ವೆಚ್ಚ, ತದನಂತರ ಆ ವ್ಯಕ್ತಿಯು ಕೊರೋನಾಬಾಧಿತನಾಗಿರುವುದು ಕಂಡು ಬಂದರೆ, ಅವರನ್ನು ಆಸ್ಪತ್ರೆಯಲ್ಲಿ ಇರಿಸುವ ವೆಚ್ಚ, ಅವರಿಗಾಗಿ ಸ್ಥಳವನ್ನು ಒದಗಿಸುವುದು, ಮುಂದಿನ ೧೪ ದಿನಗಳ ವರೆಗೆ ಅವರ ಮೇಲೆ ಶುಶ್ರೂಷೆ ಮಾಡಲು ವೈದ್ಯಕೀಯ ವ್ಯವಸ್ಥೆ ಎಂದರೆ ಡಾಕ್ಟರ್, ನರ್ಸ್, ಇತರ ನೌಕರರು ಇವರಿಗೆ ಹಗಲೂ ರಾತ್ರಿ ಪಿಪಿಇ ಕಿಟ್ ಧರಿಸಿ ಕೆಲಸ ಮಾಡಬೇಕಾದ ಅನಿವಾರ್ಯತೆ, ಅದರಲ್ಲಿಯೂ ರೋಗಿಗಳ ಸ್ಥಿತಿ ಚಿಂತಾಜನಕವಾಗಿದ್ದರೆ ಅವರಿಗಾಗಿ ಆಕ್ಸಿಜನ್ ಮತ್ತು ವೆಂಟಿಲೇಟರ್‌ಗಳ ವ್ಯವಸ್ಥೆ ಮಾಡುವುದು ಇತ್ಯಾದಿ ಎಲ್ಲ ವಿಷಯಗಳ ನಿಯೋಜನೆ ಮಾಡಬೇಕಾಗುತ್ತದೆ. ಅದರಲ್ಲಿಯೂ ಸಂಖ್ಯೆ ಹೆಚ್ಚುತ್ತಿದ್ದರೆ, ಕೈಗಾರಿಕೆ, ಉದ್ದಿಮೆಗಳು ಮೊದಲಿನಂತೆ ಪ್ರಾರಂಭವಾಗಲು ಸಾಧ್ಯವಾಗುವುದಿಲ್ಲ. ಶಾಲೆ, ವಿಶ್ವವಿದ್ಯಾಲಯಗಳನ್ನು ಕೂಡ ತೆರೆಯಲು ಸಾಧ್ಯವಾಗುವುದಿಲ್ಲ ಇತ್ಯಾದಿ ಅನೇಕ ಸಮಸ್ಯೆಗಳಿವೆ. ಇವುಗಳನ್ನು ನಾಗರಿಕರು ಗಮನಕ್ಕೆ ತೆಗೆದುಕೊಳ್ಳುವ ಅವಶ್ಯಕತೆಯಿದೆ. ‘ಭಾರತಮಾತಾ ಕಿ ಜಯ್ ಎಂದು ಹೇಳುವುದರಿಂದ ನಾವು ‘ದೇಶಭಕ್ತರಾಗಿದ್ದೇವೆ, ಎಂದು ಹೇಳಿದರೂ, ದೇಶದ ಸಮಷ್ಟಿಯ ವಿಚಾರವನ್ನು ನಾವು ಎಷ್ಟು ಮಾಡುತ್ತೇವೆ ಎನ್ನುವುದು ಅದಕ್ಕಿಂತ ಮಹತ್ವದ್ದಾಗಿದೆ. ದೇಶದ ಬಗ್ಗೆ ನಾವು ಎಷ್ಟು ಜಾಗರೂಕ ಮತ್ತು ಗಂಭೀರವಾಗಿದ್ದೇವೆ ಎನ್ನುವುದನ್ನು ಗಮನಿಸಬೇಕು. ಇಲ್ಲಿಯವರೆಗೆ ಸರಕಾರ ಮತ್ತು ಆಡಳಿತ ವರ್ಗದವರು ಇದನ್ನು ಜನರಿಗೆ ಕಲಿಸುವುದು ಆವಶ್ಯಕವಾಗಿತ್ತು, ಅದನ್ನು ಕಲಿಸದಿದ್ದ ಕಾರಣ ಅವರಲ್ಲಿ ಗಂಭೀರ್ಯ ಬಂದಿಲ್ಲ. ಈಗ ಇದರ ವಿಚಾರವನ್ನು ಮಾಡಿ ಜನರಿಗೆ ನಿಯಮ ಪಾಲನೆ ಕಡ್ಡಾಯಗಳಿಸುವ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಕೊರೋನಾದಿಂದ ಸಂಪೂರ್ಣವಾಗಿ ಸಂಚಾರ ನಿರ್ಬಂಧವನ್ನು ಹಿಂಪಡೆಯಲು ಅಸಾಧ್ಯವಾಗಬಹುದು ಮತ್ತು ಇದರ ಹಾನಿಯನ್ನು ದೇಶ  ಹಾಗೂ ಆ ಮೂಲಕ ಜನರು ಅನುಭವಿಸಬೇಕಾಗುವುದು.