ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!

ಬ್ರೆಜಿಲ್‌ ಪತ್ರಕರ್ತ ಮತ್ತು ಭೂ-ರಾಜಕೀಯ ವಿಶ್ಲೇಷಕ ಪೆಪೆ ಎಸ್ಕೋಬಾರ್ ಅವರ ಆಘಾತಕಾರಿ ಹೇಳಿಕೆ

ಬ್ರೆಸಿಲಿಯಾ (ಬ್ರೆಜಿಲ್) – ಬ್ರೆಜಿಲ್‌ ನ ಪ್ರಸಿದ್ಧ ಪತ್ರಕರ್ತ ಮತ್ತು ಭೂ-ರಾಜಕೀಯ ವಿಶ್ಲೇಷಕ ಪೆಪೆ ಎಸ್ಕೋಬಾರ್ ಅವರು ಅತ್ಯಂತ ಆಘಾತಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಇಸ್ರೇಲ್‌ ನ ರಹಸ್ಯ ಗುಪ್ತಚರ ಸಂಸ್ಥೆಯಾದ ‘ಮೊಸಾದ್’, ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರ ಹತ್ಯೆ ಮಾಡಲು ಸಂಚು ರೂಪಿಸಿತ್ತು ಎಂದು ಅವರು ಹೇಳಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗಾಗಿ ಪಾಕಿಸ್ತಾನದ ನಿಯೋಗವು ಸ್ವಿಟ್ಜರ್ಲೆಂಡ್‌ ಗೆ ತೆರಳಿದಾಗ ಹತ್ಯೆ ಮಾಡಲು ಯೋಜಿಸಲಾಗಿತ್ತು ಎಂದು ಎಸ್ಕೋಬಾರ್ ತಿಳಿಸಿದ್ದಾರೆ. ಪೆಪೆ ಅವರ ಈ ಹೇಳಿಕೆಯಿಂದಾಗಿ ಪಾಕಿಸ್ತಾನ ಸೇರಿದಂತೆ ಇಡೀ ವಿಶ್ವದಲ್ಲೇ ತೀವ್ರ ಸಂಚಲನ ಮೂಡಿದೆ.

ಪೆಪೆ ಎಸ್ಕೋಬಾರ್ ಅವರ ಹೇಳಿಕೆ ಏನು?

ಪೆಪೆ ಎಸ್ಕೋಬಾರ್ ಅವರು ಇತ್ತೀಚೆಗೆ ಆಸ್ಟ್ರೇಲಿಯಾದ ಉದ್ಯಮಿ ಮತ್ತು ರಾಜಕೀಯ ವಿಶ್ಲೇಷಕ ಮಾರಿಯೋ ನಾಫಲ್ ಅವರೊಂದಿಗೆ ‘ಎಕ್ಸ್’ ಮಾಧ್ಯಮದ ಮೂಲಕ ಸಂವಾದ ನಡೆಸಿದರು. ಆ ವೇಳೆ ಅವರು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಆದೇಶದ ಮೇರೆಗೆ ‘ಮೊಸಾದ್’ ಸಂಸ್ಥೆಯು ಜಿನೀವಾದಲ್ಲಿ ಅಸಿಮ್ ಮುನೀರ್ ಮತ್ತು ಅವರ ನಿಯೋಗದ ಸದಸ್ಯರನ್ನು ಹತ್ಯೆ ಮಾಡಲು ಸಂಚು ರೂಪಿಸುತ್ತಿದೆ ಎಂಬ ವಿಶ್ವಾಸಾರ್ಹ ಮಾಹಿತಿ ಪಾಕಿಸ್ತಾನದ ಮಿಲಿಟರಿ ಗುಪ್ತಚರ ಇಲಾಖೆಗೆ ಲಭ್ಯವಾಗಿತ್ತು ಎಂದು ಬಹಿರಂಗಪಡಿಸಿದ್ದಾರೆ. ಇರಾನ್ ಮತ್ತು ಅಮೆರಿಕ ನಡುವಿನ ಶಾಂತಿ ಒಪ್ಪಂದದ ಪ್ರಕ್ರಿಯೆಯಿಂದ ಇಸ್ರೇಲ್ ಅನ್ನು ಹೊರಗಿಡಲಾಗಿತ್ತು. ಈ ಕಾರಣದಿಂದಾಗಿ ಇಸ್ರೇಲ್ ತೀವ್ರ ಅಸಮಾಧಾನಗೊಂಡಿತ್ತು. ಅಷ್ಟೇ ಅಲ್ಲದೆ, ಲೆಬನಾನ್‌ ನಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಗಳಿಂದಾಗಿ ಈ ಶಾಂತಿ ಒಪ್ಪಂದ ಮುರಿದುಬೀಳುವ ಅಪಾಯವೂ ಎದುರಾಗಿತ್ತು. ಮೊಸಾದ್‌ ನ ಈ ಅಪಾಯಕಾರಿ ಸಂಚಿನ ಸುಳಿವು ಸಿಗುತ್ತಿದ್ದಂತೆ, ಪಾಕಿಸ್ತಾನವು ಒಮಾನ್ ದೇಶದ ಮುಖಾಂತರ ಇಸ್ರೇಲ್‌ ಗೆ ನೇರ ಮತ್ತು ಕಡಕ್ ಸಂದೇಶ ರವಾನಿಸಿತ್ತು. “ನಮ್ಮ ನಿಯೋಗದ ಮೇಲೆ ದಾಳಿ ನಡೆದರೆ, ನಾವು ನಿಮ್ಮನ್ನು ಜಗತ್ತಿನ ಭೂಪಟದಿಂದಲೇ ಅಳಿಸಿ ಹಾಕುತ್ತೇವೆ” ಎಂದು ಪಾಕಿಸ್ತಾನವು ಇಸ್ರೇಲ್‌ ಗೆ ನೇರ ಎಚ್ಚರಿಕೆ ನೀಡಿತ್ತು ಎಂದು ಪೆಪೆ ಹೇಳಿಕೆ ನೀಡಿದ್ದಾರೆ.

ಸಾರ್ವಜನಿಕವಾಗಿ ಕಾಣಿಸುವ ಪರಿಸ್ಥಿತಿಗಿಂತ ತೆರೆಮರೆಯ ವಾಸ್ತವ ಸ್ಥಿತಿ ತೀರಾ ಭಿನ್ನವಾಗಿದೆ ಎಂದು ಪೆಪೆ ಎಸ್ಕೋಬಾರ್ ಹೇಳಿದ್ದಾರೆ.

ಆದಾಗ್ಯೂ, ಈ ಹತ್ಯೆಯ ಸಂಚಿನ ಕುರಿತು ಇಸ್ರೇಲ್ ಅಥವಾ ಪಾಕಿಸ್ತಾನದ ಯಾವುದೇ ಅಧಿಕೃತ ಸರಕಾರಿ ಅಧಿಕಾರಿಗಳು ಇದುವರೆಗೆ ಯಾವುದೇ ಸ್ಪಷ್ಟನೆ ಅಥವಾ ಪುಷ್ಟಿ ನೀಡಿಲ್ಲ. ಇದರೊಂದಿಗೆ ಸ್ವಿಟ್ಜರ್ಲೆಂಡ್, ಅಮೆರಿಕ ಮತ್ತು ಪಾಕಿಸ್ತಾನದ ಭದ್ರತಾ ಸಂಸ್ಥೆಗಳೂ ಕೂಡ ಈ ಸಮ್ಮೇಳನದ ಅವಧಿಯಲ್ಲಿ ಇಂತಹ ಯಾವುದೇ ಭದ್ರತಾ ಲೋಪ ಅಥವಾ ಬೆದರಿಕೆಯ ಕುರಿತು ಮುನ್ಸೂಚನೆ ನೀಡಿರಲಿಲ್ಲ. ಆದ್ದರಿಂದ, ಅಧಿಕೃತ ಮಾಹಿತಿ ಹೊರಬರುವವರೆಗೆ ಈ ದಾವೆಗಳನ್ನು ಅತ್ಯಂತ ಜಾಗರೂಕತೆಯಿಂದ ಪರಿಶೀಲಿಸಬೇಕಾಗಿದೆ ಎಂದು ರಾಜತಾಂತ್ರಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.