ಶ್ರೀ ವಿಠ್ಠಲನ ಮೂರ್ತಿಗೆ ಹಾನಿಯಾದರೆ ಮಂದಿರ ಸಮಿತಿ ಮತ್ತು ಪುರಾತತ್ವ ಇಲಾಖೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.

ಪಂಢರಪುರ: ಶ್ರೀ ವಿಠ್ಠಲನ ಮೂರ್ತಿಗೆ ರಾಸಾಯನಿಕ ಲೇಪನ; ಮಂದಿರ ಮಹಾಸಂಘ ಮತ್ತು ವಾರಕರಿ ಸಂಘಟನೆಗಳ ಎಚ್ಚರಿಕೆ!

ಎಡದಿಂದ ಶ್ರೀ. ವಿನೋದ ರಸಾಳ್, ಶ್ರೀ. ಚಂದ್ರಕಾಂತ್ ರಮಣಶೆಟ್ಟಿ, ಮಾತನಾಡುತ್ತಿರುವ ಹ.ಭ.ಪ. ರಾಮಕೃಷ್ಣ ಹನುಮಂತ್ ಮಹಾರಾಜ್ ವೀರ್, ಶ್ರೀ. ಸುನೀಲ್ ಘನವಟ್, ಶ್ರೀ. ಪ್ರಸಾದ್ ಪಂಡಿತ್ ಮತ್ತು ಶ್ರೀ. ರಾಜನ್ ಬುಣಗೆ

ಪಂಢರಪುರ – ಪಂಢರಪುರದಲ್ಲಿರುವ ಕೋಟ್ಯಂತರ ಹಿಂದೂಗಳ ಆರಾಧ್ಯ ದೈವವಾದ ‘ಸ್ವಯಂಭೂ’ ಶ್ರೀ ವಿಠ್ಠಲ-ರುಕ್ಮಿಣಿ ಮೂರ್ತಿಯ ಮೇಲೆ ಪುರಾತತ್ವ ಇಲಾಖೆಯು ಜೂನ್ 23 ಮತ್ತು 24 ರಂದು ನಡೆಸಲು ಯೋಜಿಸಿರುವ ರಾಸಾಯನಿಕ ವಜ್ರಲೇಪನ ಪ್ರಕ್ರಿಯೆಯನ್ನು (ಎಪಾಕ್ಸಿ / ಸಿಲಿಕಾನ್) ವಾರಕರಿ ಸಂಪ್ರದಾಯ ಮತ್ತು ಮಹಾರಾಷ್ಟ್ರ ಮಂದಿರ ಮಹಾಸಂಘವು ತೀವ್ರವಾಗಿ ವಿರೋಧಿಸಿದೆ.

‘ಕೊರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಮಾಡಿದ ಲೇಪನವು ಮುಂದಿನ 10 ವರ್ಷಗಳವರೆಗೆ ಬಾಳಿಕೆ ಬರಲಿದೆ’ ಎಂದು ಆಡಳಿತ ಮಂಡಳಿ ಹೇಳಿಕೊಂಡಿತ್ತು; ಆದರೆ ಕೇವಲ 4-5 ವರ್ಷಗಳಲ್ಲಿ ಮೂರ್ತಿಗೆ ಮತ್ತೆ ಲೇಪನದ ಅಗತ್ಯವಿರುವುದು ಈ ರಾಸಾಯನಿಕ ಪ್ರಕ್ರಿಯೆಯ ವೈಫಲ್ಯವನ್ನು ಸಾಬೀತುಪಡಿಸುತ್ತದೆ. 28 ಯುಗಗಳಿಂದ ಇಟ್ಟಿಗೆಯ ಮೇಲೆ ಸುರಕ್ಷಿತವಾಗಿ ನಿಂತಿರುವ ಪಾಂಡುರಂಗನ ಮೂರ್ತಿಯ ಪಾದದಲ್ಲಿ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಹೊಂಡ ಬಿದ್ದಿದ್ದು ಹೇಗೆ? ಮತ್ತು ಶ್ರೀ ರುಕ್ಮಿಣಿ ದೇವಿಯ ಪಾದಗಳು ಏಕೆ ಹಾಳಾದವು?, ಎಂಬ ಯಾವುದೇ ವೈಜ್ಞಾನಿಕ ಉತ್ತರವನ್ನು ಮಂದಿರ ಸಮಿತಿ ಅಥವಾ ಪುರಾತತ್ವ ಇಲಾಖೆಗೆ ಇದುವರೆಗೆ ನೀಡಲು ಸಾಧ್ಯವಾಗಿಲ್ಲ. ಕೃತಕ ರಾಸಾಯನಿಕಗಳಿಂದಾಗಿ ಶಿಲೆಯ ನೈಸರ್ಗಿಕ ಶ್ವಾಸೋಚ್ಛ್ವಾಸವು ತಡೆಹಿಡಿಯಲ್ಪಟ್ಟು, ಮೂರ್ತಿಯು ಒಳಗಿನಿಂದ ಒಡೆಯುವ (ಬಾಳಿಕೆ ಕಳೆದುಕೊಳ್ಳುವ) ಗಂಭೀರ ಅಪಾಯವಿದೆ.

ಆದ್ದರಿಂದ, ವಾರಕರಿ ಸಂತ-ಮಹಂತರು ಮತ್ತು ಮೂರ್ತಿಶಾಸ್ತ್ರಜ್ಞರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಆಡಳಿತ ಮಂಡಳಿಯು ಏಕಪಕ್ಷೀಯವಾಗಿ ಮುನ್ನಡೆದರೆ ಇಡೀ ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಆಕ್ರೋಶ ಉಂಟಾಗಲಿದೆ. ಆದಾಗ್ಯೂ ಮೂರ್ತಿಯ ಮೇಲೆ ರಾಸಾಯನಿಕ ಲೇಪನ ಪ್ರಕ್ರಿಯೆಯನ್ನು ಬಲವಂತವಾಗಿ ಹೇರಲು ಪ್ರಯತ್ನಿಸಿದರೆ ನಾವು ‘ಶ್ರೀ ವಿಠ್ಠಲ-ರುಕ್ಮಿಣಿ ಮಂದಿರ ಸಮಿತಿ’ ಮತ್ತು ಪುರಾತತ್ವ ಇಲಾಖೆಯ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುತ್ತೇವೆ ಎಂದು ಮಂದಿರ ಮಹಾಸಂಘದ ರಾಷ್ಟ್ರೀಯ ಸಂಘಟಕ ಶ್ರೀ. ಸುನೀಲ್ ಘನವಟ್ ಅವರು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಈ ಕುರಿತ ಮನವಿಯನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಜಿಲ್ಲಾಧಿಕಾರಿ ಮತ್ತು ಮಂದಿರ ಸಮಿತಿಗೆ ಸಲ್ಲಿಸಲಾಗಿದೆ.

ಈ ಸಂದರ್ಭದಲ್ಲಿ ‘ವಾರಕರಿ ಪೈಕ್ ಸಂಘ’ದ ಹ.ಭ.ಪ. ರಾಮಕೃಷ್ಣ ಹನುಮಂತ್ ಮಹಾರಾಜ್ ವೀರ್, ‘ಪ್ರಜ್ಞಾಪುರಿ ಜ್ಞಾನಪೀಠ ಅಕ್ಕಲಕೋಟೆ’ಯ ಪೀಠಾಸೀನ ಧರ್ಮಾಧಿಕಾರಿ ಶ್ರೀ ಪ್ರಸಾದ್ ಪಂಡಿತ್, ‘ಹಿಂದೂ ರಾಷ್ಟ್ರ ಸಮನ್ವಯ ಸಮಿತಿ’ಯ ಜಿಲ್ಲಾ ಸಂಯೋಜಕ ಶ್ರೀ ಚಂದ್ರಕಾಂತ್ ರಮಣಶೆಟ್ಟಿ, ಮಹಾರಾಷ್ಟ್ರ ಮಂದಿರ ಮಹಾಸಂಘದ ಶ್ರೀ. ವಿನೋದ ರಸಾಳ್ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ರಾಜನ್ ಬುಣಗೆ ಉಪಸ್ಥಿತರಿದ್ದರು.

ಸಂಪಾದಕೀಯ ನಿಲುವು

ದೇವತೆಗಳ ಮೂರ್ತಿಗಳಿಗೆ ಸಂಬಂಧಿಸಿದ ನಿರ್ಧಾರವನ್ನು ಧರ್ಮಾಚಾರ್ಯರನ್ನು (ಧರ್ಮಗುರುಗಳನ್ನು) ಕೇಳದೆ ಆಡಳಿತ ಮಂಡಳಿ ಯಾಕೆ ತೆಗೆದುಕೊಳ್ಳುತ್ತದೆ? ಇತರ ಧರ್ಮದವರ ಶ್ರದ್ಧಾಕೇಂದ್ರಗಳ ವಿಷಯದಲ್ಲಿ ಇಂತಹ ಧೋರಣೆ ತೋರುವ ಧೈರ್ಯ ಇವರಿಗಿರುತ್ತಿತ್ತೇ?