ಕಳೆದ ೪ ತಿಂಗಳಲ್ಲಿ ೧೦೦ ಹತ್ಯೆ, ೨೮ ಅತ್ಯಾಚಾರ ಮತ್ತು ೯೫ ದೇವಸ್ಥಾನಗಳ ಧ್ವಂಸ !

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಅತ್ಯಾಚಾರ ಮುಂದುವರಿದಿದೆ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಹಿಂದೂ ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ಹಿಂಸಾಚಾರದ ಕುರಿತು ‘ಹ್ಯೂಮನ್ ರೈಟ್ಸ್ ಕಾಂಗ್ರೆಸ್ ಫಾರ್ ಬಾಂಗ್ಲಾದೇಶ ಮೈನಾರಿಟೀಸ್’ ರಾಷ್ಟ್ರೀಯ ವರದಿಯನ್ನು ಪ್ರಕಟಿಸಿದೆ. ಇದರಲ್ಲಿ ೨೦೨೬ ರ ಮೊದಲ ೪ ತಿಂಗಳಲ್ಲಿ (ಜನವರಿಯಿಂದ ಏಪ್ರಿಲ್) ಅಲ್ಪಸಂಖ್ಯಾತರ ವಿರುದ್ಧದ ಕಿರುಕುಳ ಮತ್ತು ಹಿಂಸಾಚಾರದ ೫೦೫ ನೋವಿನ ಘಟನೆಗಳ ದಾಖಲಾಗಿವೆ. ೧೦೦ ಹಿಂದೂಗಳ ಹತ್ಯೆ ಮತ್ತು ಅನುಮಾನಾಸ್ಪದ ಸಾವಿನ ಘಟನೆಗಳು ನಡೆದಿವೆ, ಅವು ೪೭ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆದಿವೆ. ಇದಲ್ಲದೆ, ಅಪಹರಣ ಮತ್ತು ಕ್ರೂರ ಥಳಿತದ ೧೪೪ ಘಟನೆಗಳು ೪೯ ಜಿಲ್ಲೆಗಳಲ್ಲಿ ದಾಖಲಾಗಿವೆ. ಇದರಲ್ಲಿ ೨೮ ಅತ್ಯಾಚಾರಗಳು ಸೇರಿವೆ, ಹಾಗೆಯೇ ೯೫ ದೇವಸ್ಥಾನಗಳನ್ನು ಧ್ವಂಸ ಮಾಡಿದ್ದಾರೆ. ಈ ಅಂಕಿ-ಅಂಶಗಳು ಕೇವಲ ಪ್ರತ್ಯೇಕವಾಗಿ ಗುರುತು ಹಿಡಿಯಲಾದ ಮತ್ತು ದೃಢೀಕರಿಸಲಾದ ಘಟನೆಗಳದ್ದಾಗಿವೆ. ವಾಸ್ತವದಲ್ಲಿ ಈ ಸಂಖ್ಯೆಯು ಇದಕ್ಕಿಂತ ಎಷ್ಟೋ ಅಧಿಕವಾಗಿರಬಹುದು; ಏಕೆಂದರೆ ಅನೇಕ ಜನರು ಭಯ ಮತ್ತು ಸಾಮಾಜಿಕ ಒತ್ತಡದಿಂದಾಗಿ ಪೊಲೀಸರಿಗೆ ದೂರು ನೀಡುವುದಿಲ್ಲ.

ಬಾಂಗ್ಲಾದೇಶದಲ್ಲಿ ಅಧಿಕಾರ ಬದಲಾಗಿದ್ದರೂ ಹಿಂದೂ ಮತ್ತು ಇತರ ದುರ್ಬಲ ಸಮುದಾಯಗಳ ಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ ಮತ್ತು ಅವರು ಸತತವಾಗಿ ಹಿಂಸಕ ಆಕ್ರಮಣ, ಹತ್ಯೆ ಮತ್ತು ದರೋಡೆಗೆ ಬಲಿಯಾಗುತ್ತಿದ್ದಾರೆ ಎಂದು ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಈ ವರದಿಯು ಬಾಂಗ್ಲಾದೇಶದ ಸದ್ಯದ ಪರಿಸ್ಥಿತಿಯ ಅತ್ಯಂತ ದೊಡ್ಡ ಮತ್ತು ಬಲವಾದ ದಸ್ತಾವೇಜಾಗಿದೆ.

ವರದಿಯಲ್ಲಿನ ಪ್ರಮುಖ ಅಂಶಗಳು

ಸಂಪೂರ್ಣ ಬಾಂಗ್ಲಾದೇಶದಲ್ಲಿ ದ್ವೇಷದ ಜಾಲ ಹರಡಿದೆ !

ಸಂಘಟನೆಯು, ಅಲ್ಪಸಂಖ್ಯಾತರ ವಿರುದ್ಧದ ೫೦೫ ಘಟನೆಗಳು ಕೇವಲ ಒಂದು ಚಿಕ್ಕ ಭಾಗ ಅಥವಾ ನಗರಕ್ಕೆ ಸೀಮಿತವಾಗಿಲ್ಲ. ಇದು ಸಂಪೂರ್ಣವಾಗಿ ಒಂದು ಸುನಿಯೋಜಿತ ಸಂಚು ಮತ್ತು ದೇಶಾದ್ಯಂತ ಹರಡಿರುವ ದ್ವೇಷದ ಪರಿಣಾಮವಾಗಿದೆ. ಈ ಹಿಂಸಾಚಾರವು ಬಾಂಗ್ಲಾದೇಶದ ಎಲ್ಲ ೮ ಆಡಳಿತ ವಿಭಾಗಗಳಲ್ಲಿನ ೬೪ ಜಿಲ್ಲೆಗಳ ಪೈಕಿ ೬೨ ಜಿಲ್ಲೆಗಳಲ್ಲಿ ಹರಡಿದೆ. ಅಂದರೆ ದೇಶದಲ್ಲಿ ಅಲ್ಪಸಂಖ್ಯಾತ ಸಮಾಜವು ತಮ್ಮನ್ನು ತಾವು ಸುರಕ್ಷಿತವೆಂದು ಭಾವಿಸುವಂತಹ ಮೂಲೆ ವಿರಳವಾಗಿ ಉಳಿದಿದೆ. ಇದರಲ್ಲಿ ಗ್ರಾಮೀಣ ಭಾಗದಿಂದ ಹಿಡಿದು ದೊಡ್ಡ ನಗರಗಳವರೆಗೂ ಸೇರಿದೆ, ಅಲ್ಲಿ ವಾಸಿಸುವ ಹಿಂದೂ ಕುಟುಂಬಗಳು ಪ್ರತಿಯೊಂದು ಕ್ಷಣವೂ ಭಯದ ನೆರಳಿನಲ್ಲಿ ಬದುಕುತ್ತಿವೆ, ಎಂದು ಹೇಳಿದೆ.

ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಭೂಮಿಗಳ ಮೇಲೆ ಅಕ್ರಮ ನಿಯಂತ್ರಣ

ಈ ಹಿಂಸಾಚಾರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರು ಮತ್ತು ಹುಡುಗಿಯರನ್ನು ಅತಿ ಹೆಚ್ಚು ಗುರಿಯಾಗಿಸುತ್ತಿದ್ದಾರೆ. ವರದಿಯಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಹಿಂಸಾಚಾರ, ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರಗಳ ೨೮ ಭಯಾನಕ ಘಟನೆಗಳ ಉಲ್ಲೇಖವಿದೆ, ಅವು ೨೩ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆದಿವೆ. ಹಿಂದೂ ಮತ್ತು ಸ್ವದೇಶಿ (ಆದಿವಾಸಿ) ಸಮುದಾಯಗಳ ಆಸ್ತಿಪಾಸ್ತಿಗೆ ಹಾನಿ ಮಾಡುವುದು, ಅವರ ಪೂರ್ವಜರ ಭೂಮಿಗಳ ಮೇಲೆ ಬಲವಂತವಾಗಿ ನಿಯಂತ್ರಣ ಸಾಧಿಸುವುದು, ಮನೆಗಳಿಗೆ ಬೆಂಕಿ ಹಚ್ಚುವುದು ಮತ್ತು ಲೂಟಿಯ ೧೩೨ ದೊಡ್ಡ ಘಟನೆಗಳು ಬೆಳಕಿಗೆ ಬಂದಿವೆ. ಹಣ ಮತ್ತು ಬಲವನ್ನು ಬಳಸಿ ಆರ್ಥಿಕವಾಗಿ ದುರ್ಬಲ ಅಲ್ಪಸಂಖ್ಯಾತ ಕುಟುಂಬಗಳನ್ನು ನಿರ್ಗತಿಕರನ್ನಾಗಿ ಮಾಡುತ್ತಿದ್ದಾರೆ, ಇದರಿಂದ ಅವರು ದೇಶ ಬಿಡಲು ಮಣಿಯಬೇಕು.

‘ಹ್ಯೂಮನ್ ರೈಟ್ಸ್ ಕಾಂಗ್ರೆಸ್ ಫಾರ್ ಬಾಂಗ್ಲಾದೇಶ ಮೈನಾರಿಟೀಸ್’ನ ವರದಿ –

ಈ ಅಂಕಿ-ಅಂಶಗಳು ಕೇವಲ ಯಾರ ಗುರುತನ್ನು ಸ್ವತಂತ್ರವಾಗಿ ಪತ್ತೆಹಚ್ಚಲಾಗಿದೆಯೋ ಮತ್ತು ದೃಢೀಕರಿಸಲಾಗಿದೆಯೋ ಅವರದ್ದೇ ಆಗಿವೆ. ವಾಸ್ತವದಲ್ಲಿ ಈ ಸಂಖ್ಯೆಯು ಇದಕ್ಕಿಂತ ಎಷ್ಟೋ ಅಧಿಕವಾಗಿರಬಹುದು; ಏಕೆಂದರೆ ಅನೇಕ ಜನರು ಭಯ ಮತ್ತು ಸಾಮಾಜಿಕ ಒತ್ತಡದಿಂದಾಗಿ ಪೊಲೀಸರಲ್ಲಿ ದೂರು ದಾಖಲಿಸುವುದಿಲ್ಲ.

೯೫ ದೇವಸ್ಥಾನಗಳ ಮೇಲೆ ಆಕ್ರಮಣ ಮತ್ತು ಧರ್ಮನಿಂದನೆಯ ಸುಳ್ಳು ಆರೋಪ

ಬಾಂಗ್ಲಾದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಸಂಪೂರ್ಣವಾಗಿ ಅಪಾಯದಲ್ಲಿದೆ ಎಂಬುದು ಕಂಡುಬರುತ್ತಿದೆ. ಕೇವಲ ೪ ತಿಂಗಳಲ್ಲಿ ಹಿಂದೂಗಳ ದೇವಸ್ಥಾನಗಳು ಮತ್ತು ಧಾರ್ಮಿಕ ಸ್ಥಳಗಳ ಮೇಲಿನ ಆಕ್ರಮಣಗಳು ಹಾಗೂ ಧ್ವಂಸಗೊಳಿಸಿದ ೯೫ ಘಟನೆಗಳು ದಾಖಲಾಗಿವೆ. ಗುಂಪು ಬಹಿರಂಗವಾಗಿ ದೇವಸ್ಥಾನಗಳನ್ನು ಗುರಿಯಾಗಿಸುತ್ತಿದೆ ಮತ್ತು ಪವಿತ್ರ ಮೂರ್ತಿಗಳನ್ನು ವಿಡಂಬನೆ ಮಾಡುತ್ತಿದೆ.

ಇದಲ್ಲದೆ ಅಲ್ಪಸಂಖ್ಯಾತ ಸಮುದಾಯದ ಜನರನ್ನು ಸಿಲುಕಿಸಲು ‘ಧರ್ಮನಿಂದನೆ’ ಎಂಬ ಅಸ್ತ್ರವನ್ನು ಬಳಸುತ್ತಿದ್ದಾರೆ. ಒಟ್ಟು ೬ ಇಂತಹ ಪ್ರಕರಣಗಳು ದಾಖಲಾಗಿವೆ, ಅಲ್ಲಿ ಜನರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಗುಂಪನ್ನು ಪ್ರಚೋದಿಸಿ ಅವರ ವಿರುದ್ಧ ಹಿಂಸಾಚಾರ ಮಾಡಲಾಗಿದೆ.

ಸರಕಾರ ಬದಲಾಯಿತು; ಆದರೆ ಹಿಂದೂಗಳ ದುಃಖ ಬದಲಾಗಲಿಲ್ಲ !

ಬಾಂಗ್ಲಾದೇಶದಲ್ಲಿನ ಅಧಿಕಾರ ಬದಲಾವಣೆಯಿಂದ ಅಲ್ಪಸಂಖ್ಯಾತರ ಭದ್ರತೆಯ ಮೇಲೆ ಯಾವುದೇ ಪರಿಣಾಮವಾಗಿಲ್ಲ. ೨೦೨೫ ರಲ್ಲಿ ಮಹಮ್ಮದ ಯೂನುಸರ ನೇತೃತ್ವದಲ್ಲಿನ ಹಂಗಾಮಿ ಸರಕಾರದ ೧೮ ತಿಂಗಳ ಕಾರ್ಯಕಾಲದಲ್ಲಿಯೂ ಹಿಂದೂಗಳ ಮೇಲೆ ಭೀಕರ ಅತ್ಯಾಚಾರಗಳಾಗಿದ್ದವು, ಅದು ಸಂಪೂರ್ಣ ಜಗತ್ತನ್ನೇ ನಡುಗಿಸಿತ್ತು. ಆ ಸಮಯದಲ್ಲಿ ಹಿಂದೂಗಳ ವಿರುದ್ಧ ಬರೋಬ್ಬರಿ ಮೂರುವರೆ ಸಾವಿರ ಆಕ್ರಮಣ-ಅತ್ಯಾಚಾರಗಳ ಘಟನೆಗಳು ನಡೆದಿದ್ದವು. ಆಮೇಲೆ ಫೆಬ್ರವರಿ ೨೦೨೬ ರಲ್ಲಿ ಯಾವಾಗ ಹೊಸದಾಗಿ ಆಯ್ಕೆಯಾದ ಸರಕಾರವು ಅಧಿಕಾರಕ್ಕೆ ಬಂದಿತೋ, ಆಗ ಪರಿಸ್ಥಿತಿ ಸುಧಾರಿಸುತ್ತದೆ ಎಂಬ ನಿರೀಕ್ಷೆಯಿತ್ತು; ಆದರೆ ‘ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ’ ಸರಕಾರದ ಕಾಲದಲ್ಲಿಯೂ ಈ ಹಿಂಸಾಚಾರ ಅದೇ ವೇಗದಲ್ಲಿ ನಡೆಯುತ್ತಿದೆ. ಇದರಿಂದ, ಈ ಸಂಕಟವು ಯಾವುದೇ ಒಂದು ರಾಜಕೀಯ ಪಕ್ಷದ್ದಾಗಿರದೇ ಅಲ್ಲಿನ ವ್ಯವಸ್ಥೆಯ ವೈಫಲ್ಯದ ಲಕ್ಷಣವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಆಡಳಿತದ ಮೌನ ವಹಿಸುವ ಭೂಮಿಕೆ ಮತ್ತು ಕಾನೂನಿನ ಅಣಕ

ವರದಿಯಲ್ಲಿ ಬಾಂಗ್ಲಾದೇಶದ ಕಾನೂನು-ಸುವ್ಯವಸ್ಥೆ ಮತ್ತು ಪೊಲೀಸ್ ಆಡಳಿತದ ಮೇಲೆ ಅತ್ಯಂತ ಗಂಭೀರ ಪ್ರಶ್ನೆಗಳನ್ನು ಎತ್ತಲಾಗಿದೆ. ಸಂತ್ರಸ್ತ ಕುಟುಂಬಗಳು, ಯಾವಾಗೆಲ್ಲಾ ತಮ್ಮ ಮೇಲೆ ಆಕ್ರಮಣವಾಗುತ್ತದೆಯೋ, ಆಗ ಪೊಲೀಸರು ಬಹಳ ತಡವಾಗಿ ತಲುಪುತ್ತಾರೆ ಅಥವಾ ಪ್ರಕರಣದ ತನಿಖೆಯನ್ನು ದುರ್ಬಲಗೊಳಿಸುತ್ತಾರೆ ಎಂದು ಆರೋಪಿಸುತ್ತವೆ. ಅಪರಾಧಿಗಳಿಗೆ ಶಿಕ್ಷೆಯಾಗದಿರುವುದರಿಂದ ಅವರ ಧೈರ್ಯ ಹೆಚ್ಚಾಗಿದೆ. ಸಂತ್ರಸ್ತರು ಮತ್ತು ಸಾಕ್ಷಿದಾರರಿಗೆ ಬೆದರಿಸುತ್ತಾರೆ, ಇದರಿಂದ ಅವರು ನ್ಯಾಯಾಲಯದ ಮೆಟ್ಟಿಲೇರಬಾರದು. ಇಂತಹ ಸಾಂಸ್ಥಿಕ ವೈಫಲ್ಯದಿಂದ ಅಲ್ಪಸಂಖ್ಯಾತ ಸಮಾಜವು ಸಂಪೂರ್ಣವಾಗಿ ಕುಸಿದಿದ್ದು, ಅದು ತೀವ್ರ ಮಾನಸಿಕ ಒತ್ತಡದಲ್ಲಿ ಬದುಕುತ್ತಿದೆ.

ಇತರ ಸಂಘಟನೆಗಳ ವರದಿಗಳೂ ಸಾಕ್ಷ್ಯ ನೀಡುತ್ತಿವೆ

‘ಹ್ಯೂಮನ್ ರೈಟ್ಸ್ ಕಾಂಗ್ರೆಸ್ ಫಾರ್ ಬಾಂಗ್ಲಾದೇಶ ಮೈನಾರಿಟೀಸ್’ ಹೊರತುಪಡಿಸಿ ಬಾಂಗ್ಲಾದೇಶದಲ್ಲಿನ ಇತರ ಮಾನವಾಧಿಕಾರ ಸಂಘಟನೆಗಳೂ ಈ ದಾವೆಗಳನ್ನು ದೃಢೀಕರಿಸುತ್ತಿವೆ. ಇದಕ್ಕೂ ಮುನ್ನ ‘ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಏಕತಾ ಪರಿಷತ್ತು’ ಸಹ ಒಂದು ವರದಿಯನ್ನು ಪ್ರಕಟಿಸಿತ್ತು, ಇದರಲ್ಲಿ ಜನವರಿಯಿಂದ ಮಾರ್ಚ್ ಅವಧಿಯಲ್ಲಿನ ೧೩೩ ಧಾರ್ಮಿಕ ಅತ್ಯಾಚಾರಗಳ ಘಟನೆಗಳ ಉಲ್ಲೇಖವಿತ್ತು. ಆ ವರದಿಯಲ್ಲಿ ೨೫ ಹತ್ಯೆಗಳು, ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ೩೫ ದೇವಸ್ಥಾನಗಳ ಲೂಟಿಯ ಮಾಹಿತಿಯಿತ್ತು.

ಒಂದುವೇಳೆ ಬಾಂಗ್ಲಾದೇಶ ಸರಕಾರವು ತಕ್ಷಣ ಕಠಿಣ ಹೆಜ್ಜೆಗಳನ್ನು ಇಡದಿದ್ದರೆ ಮತ್ತು ದೋಷಿಗಳಿಗೆ ಶಿಕ್ಷೆ ನೀಡದಿದ್ದರೆ, ಮುಂಬರುವ ದಿನಗಳಲ್ಲಿ ಅಲ್ಪಸಂಖ್ಯಾತ ಜನಸಂಖ್ಯೆಯು ಅಲ್ಲಿ ಉಳಿಯುವುದು ಅಸಾಧ್ಯವಾಗುವುದು, ಎಂಬ ಒಂದೇ ನಿಷ್ಕರ್ಷ ಈ ಎಲ್ಲ ವರದಿಗಳಿಂದ ಹೊರಬರುತ್ತದೆ.

ಸಂಪಾದಕೀಯ ನಿಲುವು

  • ಬಾಂಗ್ಲಾದೇಶದಲ್ಲಿ ಯಾವುದೇ ಸರಕಾರವಿದ್ದರೂ, ಅಲ್ಲಿನ ಹಿಂದೂಗಳ ವಂಶಸಂಹಾರ ನಿಲ್ಲುವುದಿಲ್ಲ; ಏಕೆಂದರೆ ಮುಸಲ್ಮಾನರು ‘ಮುಸಲ್ಮಾನ’ರಾಗಿರುತ್ತಾರೆ; ಅವರು ಯಾವುದೇ ಪಕ್ಷದಲ್ಲಿದ್ದರೂ, ಅವರಲ್ಲಿನ ಹಿಂದೂದ್ವೇಷ ಮುಗಿಯಲು ಸಾಧ್ಯವಿಲ್ಲ !
  • ಈ ಸಂದರ್ಭದಲ್ಲಿ ಹಿಂದೂಬಾಹುಳ್ಯದ ಭಾರತ ಮತ್ತು ಭಾರತದಲ್ಲಿನ ಹಿಂದೂಗಳ ಸಂಘಟನೆಗಳು ಹಾಗೂ ೧೦೦ ಕೋಟಿ ಹಿಂದೂಗಳು ನಿಷ್ಕ್ರಿಯರಾಗಿರುವುದು, ಇದು ಅವರಿಗೆ ನಾಚಿಕೆಗೇಡಿನದ್ದಾಗಿದೆ !