ಅಕ್ಷಯ ತದಿಗೆಯ ಶುಭ ಮುಹೂರ್ತದ ಮಹತ್ವ !

೧. ಅಕ್ಷಯ ತದಿಗೆ ಒಂದು ಶುಭ ಮುಹೂರ್ತ ಹೇಗೆ ?

ಅಕ್ಷಯ ತದಿಗೆಯನ್ನು ಮೂರುವರೆ ಮುಹೂರ್ತಗಳಲ್ಲಿ ಒಂದು ಶುಭ ಮುಹೂರ್ತ ಎಂದು ಹೇಳಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ ವರ್ಷದಲ್ಲಿ ಒಟ್ಟು ಮೂರೂವರೆ ಶುಭ ಮುಹೂರ್ತಗಳಿರುತ್ತವೆ. ದಸರಾ, ಯುಗಾದಿ, ಅಕ್ಷಯ ತದಿಗೆ ಈ ಮೂರು ಪೂರ್ಣ ಮೂಹೂರ್ತಗಳಾಗಿವೆ, ಅದೇ ದೀಪಾವಳಿಯ ಪಾಡ್ಯ ಎಂದರೆ ಕಾರ್ತಿಕ ಶುಕ್ಲ ಪಾಡ್ಯವು ಅರ್ಧ ಮುಹೂರ್ತ ಆಗಿದೆ. ಯಾವುದೇ ಶುಭ ಕಾರ್ಯ ಅಥವಾ ಹೊಸ ಕೆಲಸವನ್ನು ಆರಂಭಿಸಲು ಈ ದಿನ ಅತ್ಯಂತ ಪ್ರಶಸ್ತವಾಗಿದೆ. ಈ ಮುಹೂರ್ತವು ಪೂರ್ಣ ಶುದ್ಧವಾಗಿರುವುದರಿಂದ ಈ ದಿನದಂದು ಇತರ ದಿನಗಳಂತೆ ಯಾವುದೇ ಶುಭಕಾರ್ಯವನ್ನು ಆರಂಭಿಸಲು ದಿನಶುದ್ಧಿ ನೋಡುವ ಆವಶ್ಯಕತೆ ಇರುವುದಿಲ್ಲ. ಅಕ್ಷಯ ತದಿಗೆಯ ದಿನದಂದು ಪಂಚಾಂಗದ ಪ್ರಕಾರ ವೈಶಾಖ ಶುಕ್ಲ ತದಿಗೆ ಇರುತ್ತದೆ. ಅಕ್ಷಯ ತದಿಗೆ  ದಿನದಂದು ನರ-ನಾರಾಯಣ ಈ ಜೋಡಿದೇವತೆಯ ಜಯಂತಿ, ಪರಶುರಾಮ ಜಯಂತಿ, ಬಸವೇಶ್ವರ ಜಯಂತಿ ಮತ್ತು ಹಯಗ್ರೀವ ಜಯಂತಿ ಇರುತ್ತದೆ. ಅಕ್ಷಯ ತದಿಗೆ ವಿಷ್ಣುವಿನ ಅವತಾರವಾದ ಪರಶುರಾಮನ ಜನ್ಮತಿಥಿಯೂ ಹೌದು.

೨. ಶುಭ ಕಾರ್ಯದ ಫಲವು ‘ಅಕ್ಷಯ’ವಾಗಿ ದೊರೆಯುತ್ತದೆ !

ಈ ದಿನದಂದು ಆರಂಭಿಸುವ ಯಾವುದೇ ಶುಭಕಾರ್ಯದ ಫಲವು ‘ಅಕ್ಷಯ’ (ಎಂದಿಗೂ ಮುಗಿಯದ ಅಥವಾ ನಾಶವಾಗದ) ಆಗಿರುತ್ತದೆ ಎಂಬ ನಂಬಿಕೆಯಿದೆ. ಅಕ್ಷಯ ತದಿಗೆಯಂದು ಬ್ರಹ್ಮ ಮತ್ತು ಶ್ರೀವಿಷ್ಣುವಿನ ಮಿಶ್ರ ಲಹರಿಗಳು ಉಚ್ಚ ದೇವತೆಗಳ ಲೋಕಗಳಿಂದ ಅಂದರೆ ಸಗುಣ ಲೋಕದಿಂದ ಭೂಮಿಗೆ ಬರುತ್ತವೆ. ಇದರಿಂದ ಭೂಮಿಯ ಸಾತ್ತ್ವಿಕತೆಯು ಶೇ. ೧೦ ರಷ್ಟು ಹೆಚ್ಚಾಗುತ್ತದೆ ಎಂಬ ಪರಿಕಲ್ಪನೆಯಿದೆ. ಈ ದಿನ ದೇವತೆಗಳ ಬಗ್ಗೆ ಕೃತಜ್ಞತಾಭಾವದಿಂದ ಉಪಾಸನೆ ಮಾಡುವುದರಿಂದ ಸುಖ, ಸಮೃದ್ಧಿ ಮತ್ತು ದೇವರ ಕೃಪಾದೃಷ್ಟಿ ಎಂದಿಗೂ ಕ್ಷಯವಾಗುವುದಿಲ್ಲ, ಎಂದು ನಂಬಲಾಗಿದೆ.

೩. ಅಕ್ಷಯ ತದಿಗೆಯ ದಿನ ಏನು ಮಾಡಬೇಕು ?

ಅ. ಸಮೀಪದ ನದಿ, ಸಾಧ್ಯ ಆದರೆ ಗಂಗೆ ಅಥವಾ ಸಮುದ್ರದಲ್ಲಿ ಸ್ನಾನ ಮಾಡ ಬೇಕು.

ಆ. ಬೆಳಗ್ಗೆ ಬೀಸಣಿಗೆ, ಅಕ್ಕಿ, ಉಪ್ಪು, ತುಪ್ಪ, ಸಕ್ಕರೆ, ಹುಣಸೆ, ಹಣ್ಣು ಮತ್ತು ವಸ್ತ್ರಗಳನ್ನು ದಾನ ಮಾಡಿ ಬ್ರಾಹ್ಮಣರಿಗೆ ದಕ್ಷಿಣೆ ನೀಡಬೇಕು. ಬ್ರಾಹ್ಮಣ ಭೋಜನ ಮಾಡಿಸಬೇಕು.

ಇ. ಈ ದಿನ ಜವೆಗೋಧಿಯ ಮಹತ್ವವಿದ್ದು, ಅದನ್ನು ಅವಶ್ಯವಾಗಿ ಸೇವಿಸಬೇಕು.

ಈ. ಹೊಸ ಬಟ್ಟೆ, ಶಸ್ತ್ರ ಅಥವಾ ಆಭರಣಗಳನ್ನು ಖರೀದಿಸಬೇಕು.

ಉ. ಇದು ಮೂರುವರೆ ಮುಹೂರ್ತಗಳಲ್ಲಿ ಒಂದಾಗಿರುವುದರಿಂದ, ಈ ದಿನ ಹೊಸ ಮನೆ ಗೃಹಪ್ರವೇಶ, ಹೊಸ ವಸ್ತುಗಳ ಖರೀದಿ ಮತ್ತು ದೊಡ್ಡ ಆರ್ಥಿಕ ವ್ಯವಹಾರಗಳಂತಹ ಶುಭ ಕಾರ್ಯಗಳನ್ನು ಮಾಡಲಾಗುತ್ತದೆ.

– ಜ್ಯೋತಿಷಿ ರಾಹುಲ ನಾರಾಯಣರಾವ್‌ ಪುರಾಣಿಕ ಮತ್ತು ಜ್ಯೋತಿಷಿ ಆಕಾಶ ನಾರಾಯಣರಾವ್‌ ಪುರಾಣಿಕ್, ಜಾಲನಾ.