ಜನರ ದಾರಿ ತಪ್ಪಿಸುತ್ತಿರುವ ಪಾಕಿಸ್ತಾನದ ಅಸಲಿಯತ್ತು ಬಯಲು Pakistan: Terrorist Hafiz Saeed Roams Freely

ಪಾಕಿಸ್ತಾನ: ಬಹಿರಂಗವಾಗಿ ತಿರುಗಾಡುತ್ತಿರುವ ಉಗ್ರ ಹಫೀಜ್ ಸಯೀದ್!

ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನದ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿರುವ ‘ಲಷ್ಕರ್-ಎ-ತೊಯ್ಬಾ’ ಮುಖ್ಯಸ್ಥ, ಭಯೋತ್ಪಾದಕ ಹಫೀಜ್ ಸಯೀದ್ ಬಹಿರಂಗವಾಗಿ ತಿರುಗಾಡುತ್ತಿರುವುದು ಬೆಳಕಿಗೆ ಬಂದಿದೆ. ಸಯೀದ್ ಜೈಲಿನಲ್ಲಿದ್ದಾನೆ ಅಥವಾ ಗೃಹಬಂಧನದಲ್ಲಿದ್ದಾನೆ ಎಂಬ ಪಾಕಿಸ್ತಾನ ಸರಕಾರದ ವಾದವು ಒಂದು ವಿಡಿಯೋದಿಂದಾಗಿ ಸುಳ್ಳೆಂದು ಸಾಬೀತಾಗಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಿಂದ ಹೊರಬಂದಿರುವ ಈ ವಿಡಿಯೋದಲ್ಲಿ, ಹಫೀಜ್ ಸಯೀದ್ ಸಭೆಗಳಲ್ಲಿ ಭಾಗವಹಿಸುತ್ತಿರುವುದು ಮತ್ತು ತನ್ನ ಸಂಘಟನೆಯ ಕಮಾಂಡರ್‌ಗಳನ್ನು ನಗುನಗುತ್ತಾ ಭೇಟಿಯಾಗುತ್ತಿರುವುದು ಕಂಡುಬಂದಿದೆ. ವಿಶ್ವಸಂಸ್ಥೆಯಿಂದ ಘೋಷಿತ ಭಯೋತ್ಪಾದಕ ಮತ್ತು ಭಾರತದ ಅನೇಕ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿರುವ ಸಯೀದ್ ಈ ರೀತಿ ಪಾಕಿಸ್ತಾನದಲ್ಲಿ ರಾಜಾರೋಷವಾಗಿ ತಿರುಗಾಡುತ್ತಿರುವುದು, ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ಕ್ರಮಗಳ ಬಗ್ಗೆ ಪ್ರಶ್ನೆಗಳನ್ನೆತ್ತಿದೆ.

ಪಂಜಾಬ್‌ನಲ್ಲಿ ಸಕ್ರಿಯನಾಗಿರುವ ಬಗ್ಗೆ ಮಾಹಿತಿ

‘ಸೋಸಿಂಟ್ ಟಿವಿ’ (Sosint TV) ಎಂಬ ಸುದ್ದಿ ವಾಹಿನಿಯು ಸಯೀದ್‌ನ ವಿಡಿಯೋವನ್ನು ಪ್ರಸಾರ ಮಾಡಿದ್ದು, ಕಳೆದ ವರ್ಷ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಆತ ಪಂಜಾಬ್‌ನ ಒಕಾರಾದಲ್ಲಿದ್ದ ಎಂದು ಹೇಳಲಾಗಿದೆ. ಆತ ಲಷ್ಕರ್-ಎ-ತೊಯ್ಬಾ ಉಪಮುಖ್ಯಸ್ಥ ಸೈಫುಲ್ಲಾ ಕಸೂರಿ ಮತ್ತು ನೇಮಕಾತಿ ಕಮಾಂಡರ್ ನಸ್ರ್ ಜಾವೇದ್ ರನ್ನು ಭೇಟಿಯಾಗಿದ್ದನು. ವಿಚಿತ್ರವೆಂದರೆ, ಪೊಲೀಸ್ ಸಮವಸ್ತ್ರ ಧರಿಸಿದ ವ್ಯಕ್ತಿಗಳು ಹಫೀಜ್ ಗೆ ಭದ್ರತೆ ನೀಡುತ್ತಿರುವುದು ಈ ವಿಡಿಯೋದಲ್ಲಿ ಕಂಡುಬಂದಿದೆ.

ಅನೇಕ ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ ಎಂಬ ಸರಕಾರಿ ದಾವೆ

ಪಾಕಿಸ್ತಾನ ಸರಕಾರದ ಪ್ರಕಾರ, ಹಫೀಜ್ ಸಯೀದ್ 2019 ರಿಂದ ಜೈಲಿನಲ್ಲಿದ್ದಾನೆ. ಭಯೋತ್ಪಾದನೆಗೆ ಸಂಬಂಧಿಸಿದ ವಿವಿಧ ಪ್ರಕರಣಗಳಲ್ಲಿ ಆತನಿಗೆ 50 ವರ್ಷಗಳಿಗಿಂತಲೂ ಹೆಚ್ಚು ಕಾಲ ಶಿಕ್ಷೆ ವಿಧಿಸಲಾಗಿದೆ. ಸಯೀದ್ ಪಂಜಾಬ್‌ನ ಜೈಲೊಂದರಲ್ಲಿ ಬಂಧಿಯಾಗಿದ್ದಾನೆಂದು ಪಾಕಿಸ್ತಾನವು ವಿಶ್ವಸಂಸ್ಥೆ ಮತ್ತು ಅಂತರಾಷ್ಟ್ರೀಯ ಸಮುದಾಯಕ್ಕೆ ತಿಳಿಸುತ್ತಿದೆ. ವಿಶ್ವಸಂಸ್ಥೆಯು ಇದನ್ನು ನಂಬಿದ್ದರೂ, ಇತ್ತೀಚಿನ ದಿನಗಳಲ್ಲಿ ಸತತವಾಗಿ ಹೊರಬರುತ್ತಿರುವ ವಿಡಿಯೋಗಳು ಆತ ಮುಕ್ತನಾಗಿರುವುದನ್ನು ತೋರಿಸುತ್ತಿವೆ.

ಜೈಲಿನಲ್ಲಿದ್ದರೂ ರಾಜಕೀಯ ಚಟುವಟಿಕೆಗಳು

ಅಧಿಕೃತವಾಗಿ ಹಫೀಜ್ ಸಯೀದ್ ಲಾಹೋರ್‌ನ ಕೋಟ್ ಲಖಪತ್ ಕೇಂದ್ರ ಕಾರಾಗೃಹದಲ್ಲಿದ್ದಾನೆಂದು ಹೇಳಲಾಗುತ್ತದೆ. ಆದರೆ ಆತ ಕೇವಲ ಭಯೋತ್ಪಾದಕ ಚಟುವಟಿಕೆಗಳನ್ನಷ್ಟೇ ಅಲ್ಲದೆ, ತನ್ನ ರಾಜಕೀಯ ಪಕ್ಷವನ್ನೂ ನಡೆಸುತ್ತಿದ್ದಾನೆಂಬ ಆರೋಪವಿದೆ. ಆತ ರಾಜಕೀಯ ಪಕ್ಷವನ್ನು ಸ್ಥಾಪಿಸಿ 2018ರ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲೂ ಸ್ಪರ್ಧಿಸಿದ್ದನು. ಪ್ರಸ್ತುತ ಆತನ ಪಕ್ಷ ಸಕ್ರಿಯವಾಗಿದ್ದು, ಆತನ ಕುಟುಂಬದ ಸದಸ್ಯರು ಚುನಾವಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.

ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್

ಹಫೀಜ್ ಸಯೀದ್ ಭಾರತದ ‘ಮೋಸ್ಟ್ ವಾಂಟೆಡ್’ ಭಯೋತ್ಪಾದಕರ ಪಟ್ಟಿಯಲ್ಲಿದ್ದಾನೆ. ಆತ ಮುಂಬಯಿ ದಾಳಿಯ ಪ್ರಮುಖ ಸಂಚು ರೂಪಿಸಿದ್ದನು. ಪುಲ್ವಾಮಾ ದಾಳಿ ಸೇರಿದಂತೆ ಭಾರತದ ವಿರುದ್ಧದ ಅನೇಕ ಭಯೋತ್ಪಾದಕ ಕೃತ್ಯಗಳಲ್ಲಿ ಆತನ ಕೈವಾಡವಿದೆ. ಭಾರತವು ಹಲವು ಬಾರಿ ಹಫೀಜ್ ಸಯೀದ್‌ನನ್ನು ಹಸ್ತಾಂತರಿಸುವಂತೆ ಪಾಕಿಸ್ತಾನವನ್ನು ಒತ್ತಾಯಿಸಿದೆ, ಆದರೆ ಪಾಕಿಸ್ತಾನವು ಪ್ರತಿ ಬಾರಿಯೂ ತಿರಸ್ಕರಿಸಿದೆ.

ಸಂಪಾದಕೀಯ ನಿಲುವು

ವಿಶ್ವಸಂಸ್ಥೆಯು ಈಗಲಾದರೂ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳುವುದೇ? ಪಾಕ್ ಅನ್ನು ‘ಭಯೋತ್ಪಾದಕ ರಾಷ್ಟ್ರ’ ಎಂದು ಘೋಷಿಸುತ್ತದೆಯೇ ಅಥವಾ ಈ ಘಟನೆಯನ್ನು ನಿರ್ಲಕ್ಷಿಸಿ ಪಾಕಿಸ್ತಾನವನ್ನು ಬೆಂಬಲಿಸುತ್ತದೆಯೇ?