SRSmahotsav Delhi 2025 : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ದೆಹಲಿಯ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕೆ ಆಮಂತ್ರಣ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಆಮಂತ್ರಣ ನೀಡುತ್ತಿರುವಾಗ ಎಡಗಡೆಯಿಂದ ವಿಶ್ವನಾಥ ಕುಲಕರ್ಣಿ, ಶಾಸಕ ಡಾ. ಆರ್.ಕೆ. ಪಟೇಲ ಮತ್ತು ಸದ್ಗುರು ನೀಲೇಶ ಸಿಂಗಬಾಳ.

ನವದೆಹಲಿ – ದೆಹಲಿಯಲ್ಲಿ ಡಿಸೆಂಬರ್ 13 ಮತ್ತು 14 ರಂದು ನಡೆಯಲಿರುವ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ಕಾರ್ಯಕ್ರಮಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ನವೆಂಬರ್ 23 ರಂದು ಆಮಂತ್ರಣ ನೀಡಲಾಯಿತು. ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕರಾದ ಸದ್ಗುರು ನೀಲೇಶ ಸಿಂಗಬಾಳ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿ ಮಾಡಿ ಮಹೋತ್ಸವಕ್ಕೆ ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ಜೌನಪುರದ ಶಾಸಕ ಡಾ. ಆರ್.ಕೆ. ಪಟೇಲ, ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳ ಸಂಯೋಜಕರಾದ ಶ್ರೀ. ವಿಶ್ವನಾಥ ಕುಲಕರ್ಣಿ ಉಪಸ್ಥಿತರಿದ್ದರು. ಈ ಮಹೋತ್ಸವದಲ್ಲಿ ಭಾಗವಹಿಸಲು ಪ್ರಯತ್ನಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ ಅವರಿಗೆ ಹಿಂದೂ ಜನಜಾಗೃತಿ ಸಮಿತಿ ಪ್ರಾಯೋಜಿತ ‘ಮತಾಂತರದ ತಂತ್ರಗಳಿಂದ ಎಚ್ಚರ’, ‘ಲವ್ ಜಿಹಾದ್’, ‘ಧರ್ಮದ ಆಚರಣೆ ಮತ್ತು ರಕ್ಷಣೆ’, ‘ಮತಾಂತರ ಮತ್ತು ಮತಾಂತರಗೊಂಡವರ ಶುದ್ಧೀಕರಣ’ ಎಂಬ ಹಿಂದಿ ಭಾಷೆಯ ಗ್ರಂಥಗಳನ್ನು ಉಡುಗೊರೆಯಾಗಿ ನೀಡಲಾಯಿತು. ಗ್ರಂಥಗಳನ್ನು ನೋಡಿದ ಮುಖ್ಯಮಂತ್ರಿಗಳು, ‘ಧರ್ಮಪ್ರಚಾರಕ್ಕಾಗಿ ಉತ್ತಮ ಪ್ರಯತ್ನಗಳನ್ನು ಮಾಡುತ್ತಿದ್ದೀರಿ’ ಎಂದು ಸಮಿತಿಯ ಕಾರ್ಯವನ್ನು ಶ್ಲಾಘಿಸಿದರು. ಈ ವೇಳೆ ಸದ್ಗುರು ನೀಲೇಶ ಸಿಂಗಬಾಳ ಅವರು ಯೋಗಿ ಆದಿತ್ಯನಾಥ ಅವರನ್ನು ಗೋವಾದಲ್ಲಿರುವ ಸನಾತನ ಆಶ್ರಮಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು.

ಸನಾತನದ ಪಂಚಾಂಗಕ್ಕೆ ಮೆಚ್ಚುಗೆ !

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ 2026 ರ ‘ಸನಾತನ ಪಂಚಾಂಗ’ ವನ್ನು ಉಡುಗೊರೆಯಾಗಿ ನೀಡಲಾಯಿತು. ‘ಸನಾತನ ಪಂಚಾಂಗ’ವನ್ನು ನೋಡಿದ ಯೋಗಿ ಅವರು ಪಂಚಾಂಗವನ್ನು ಶ್ಲಾಘಿಸಿದರು.

ಹಿಂದೂತ್ವವಾದಿ ಸಂಘಟನೆಗಳು ಸಾಮಾನ್ಯ ವರ್ಗದವರೆಗೆ ಹೋಗಿ ಧರ್ಮಪ್ರಸಾರ ಮಾಡುವುದು ಅವಶ್ಯಕ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಉತ್ತರ ಪ್ರದೇಶ

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಾತನಾಡುತ್ತಾ, ‘‘ ಹಿಂದೂಗಳ ಮತಾಂತರ ಮತ್ತು ಲವ್ ಜಿಹಾದ್ ಘಟನೆಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ. ಹಿಂದೂ ಧರ್ಮದ ಮೇಲಿನ ಈ ಆಘಾತಗಳನ್ನು ತಡೆಯುವುದು ಅವಶ್ಯಕವಾಗಿದೆ. ಇದಕ್ಕಾಗಿ, ಹಿಂದೂತ್ವವಾದಿ ಸಂಘಟನೆಗಳು ಸಮಾಜದ ಸಾಮಾನ್ಯ ವರ್ಗದವರೆಗೆ ಹೋಗಿ ಧರ್ಮದ ಪ್ರಚಾರ ಮಾಡುವುದು ಅವಶ್ಯಕವಾಗಿದೆ. ಹಿಂದೂಗಳನ್ನು ಸಂಘಟಿಸುವುದು ಅನಿವಾರ್ಯವಾಗಿದೆ’’ ಎಂದು ಹೇಳಿದರು.