ತಿರುಪತಿ ಪ್ರಸಾದಕ್ಕಾಗಿ 5 ವರ್ಷಗಳಲ್ಲಿ 68 ಲಕ್ಷ ಕೆಜಿ ನಕಲಿ ತುಪ್ಪ ಪೂರೈಕೆ!

ತಿರುಪತಿ ದೇವಸ್ಥಾನದ ಪ್ರಸಾದದ ಲಡ್ಡುವಿನಲ್ಲಿ ಕಲಬೆರಕೆ ಪ್ರಕರಣ

ತಿರುಪತಿ (ಆಂಧ್ರಪ್ರದೇಶ) – ತಿರುಮಲ ತಿರುಪತಿ ದೇವಸ್ಥಾನದಲ್ಲಿ ಲಡ್ಡು ಪ್ರಸಾದ ತಯಾರಿಸಲು ಪೂರೈಸಿದ ತುಪ್ಪದಲ್ಲಿನ ಕಲಬೆರಕೆ ಪ್ರಕರಣದ ತನಿಖಾ ವರದಿಯನ್ನು ಕೇಂದ್ರ ತನಿಖಾ ದಳವು (ಸಿಬಿಐ – ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ನ್ಯಾಯಾಲಯಕ್ಕೆ ಸಲ್ಲಿಸಿದೆ. ಕೇಂದ್ರ ತನಿಖಾ ದಳದ ವಿಶೇಷ ತನಿಖಾ ತಂಡದ ವಿಚಾರಣೆಯಲ್ಲಿ, ಉತ್ತರಾಖಂಡದ ಒಂದು ಡೇರಿ (ಹಾಲು ಉತ್ಪಾದನಾ ಸಂಸ್ಥೆ) ಯು 2019 ರಿಂದ 2024 ರವರೆಗಿನ 5 ವರ್ಷಗಳ ಅವಧಿಯಲ್ಲಿ 68 ಲಕ್ಷ ಕೆ.ಜಿ. ನಕಲಿ ತುಪ್ಪವನ್ನು ದೇವಸ್ಥಾನಕ್ಕೆ ಪೂರೈಸಿದ್ದು, ಅದರ ಮೌಲ್ಯ 275 ಕೋಟಿ ರೂಪಾಯಿ ಗಳಿಗೂ ಹೆಚ್ಚು ಎಂದು ತಿಳಿದುಬಂದಿದೆ.

1. ರಾಸಾಯನಿಕಗಳ ಪೂರೈಕೆದಾರ ಅಜಯ ಕುಮಾರ ಸುಗಂಧನನ್ನು ಬಂಧಿಸಿದ ನಂತರ, ವಿಶೇಷ ತನಿಖಾ ತಂಡವು ನೆಲ್ಲೂರು ನ್ಯಾಯಾಲಯಕ್ಕೆ ಸಲ್ಲಿಸಿದ ‘ರಿಮಾಂಡ್ ವರದಿ’ಯಲ್ಲಿ ಈ ಗಂಭೀರ ಅಂಶಗಳು ಬಹಿರಂಗಗೊಂಡಿವೆ.

2. ಪೊಮಿಲ್ ಜೈನ್ ಮತ್ತು ವಿಪಿನ್ ಜೈನ್ ಅವರು ಉತ್ತರಾಖಂಡದ ಭಗವಾನಪುರದಲ್ಲಿರುವ ‘ಭೋಲೆ ಬಾಬಾ ಆರ್ಗ್ಯಾನಿಕ್ ಡೇರಿ’ಯ ಮುಖ್ಯಸ್ಥರಾಗಿದ್ದಾರೆ. ಸಿಬಿಐ ತನಿಖೆಯಲ್ಲಿ ಭೋಲೆ ಬಾಬಾ ಡೇರಿಯು 2019 ರಿಂದ 2024 ರವರೆಗೆ ಎಲ್ಲಿಂದಲೂ ಹಾಲು ಅಥವಾ ತುಪ್ಪವನ್ನು ಖರೀದಿಸಿಲ್ಲ ಎಂಬುದು ಸಾಬೀತಾಗಿದೆ, ಆದರೂ ಅವರು ನಕಲಿ ಉತ್ಪಾದನೆ ಮಾಡಿ ತಿರುಪತಿ ದೇವಸ್ಥಾನಕ್ಕೆ ಬರೋಬ್ಬರಿ 68 ಲಕ್ಷ ಕೆಜಿ ಕಲಬೆರಕೆ ತುಪ್ಪವನ್ನು ಪೂರೈಸಿದ್ದಾರೆ.

3. ‘ಟಿಟಿಡಿ’ಯು 2022 ರಲ್ಲಿ ಭೋಲೆ ಬಾಬಾ ಡೇರಿಯನ್ನು ‘ಕಪ್ಪುಪಟ್ಟಿಗೆ’ ಸೇರಿಸಿದ್ದರೂ, ಅವರು ‘ವೈಷ್ಣವಿ ಡೇರಿ’, ‘ಮಲ್ ಗಂಗಾ’ ಮತ್ತು ‘ಎ.ಆರ್. ಡೇರಿ ಫುಡ್ಸ್’ ನಂತಹ ಇತರ ಸಂಸ್ಥೆಗಳ ಮೂಲಕ ಈ ಹಗರಣವನ್ನು ಮುಂದುವರೆಸಿದ್ದರು.

4. ಸಿಬಿಐ ಮತ್ತು ವಿಶೇಷ ತನಿಖಾ ತಂಡವು ಪ್ರಸ್ತುತ ಈ ಹಗರಣದಲ್ಲಿ ಭಾಗಿಯಾಗಿರುವ ಎಲ್ಲ ಸಂಸ್ಥೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುತ್ತಿದೆ.

ಸಂಪಾದಕೀಯ ನಿಲುವು

ಇದಕ್ಕೆ ಹೊಣೆಗಾರರಾದವರಿಗೆ ಗಲ್ಲು ಶಿಕ್ಷೆಯೇ ಆಗಬೇಕು!