1985 ರಲ್ಲಿ ಏರ್ ಇಂಡಿಯಾದ ‘ಕನಿಷ್ಕ’ ವಿಮಾನದಲ್ಲಿ ಖಲಿಸ್ತಾನಿ ಭಯೋತ್ಪಾದಕರು ಸ್ಫೋಟ ನಡೆಸಿದ್ದರು! ಭಾರತೀಯ ಮೂಲದ 329 ಪ್ರಯಾಣಿಕರು ಸಾವನ್ನಪ್ಪಿದ್ದರು ! : Kanishka Blast

41 ವರ್ಷಗಳ ನಂತರ ಒಪ್ಪಿಕೊಂಡ ಕೆನಡಾ !

ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ

ಒಟಾವಾ (ಕೆನಡಾ) – ಏರ್ ಇಂಡಿಯಾದ ‘ಫ್ಲೈಟ್ 182 ಕನಿಷ್ಕ’ ವಿಮಾನದಲ್ಲಿ ಜೂನ್ 23, 1985 ರಂದು ನಡೆದ ಬಾಂಬ್ ಸ್ಫೋಟದ ಹಿಂದೆ ಖಲಿಸ್ತಾನಿ ಭಯೋತ್ಪಾದಕರ ಕೈವಾಡವಿತ್ತು ಎಂದು ಕೆನಡಾ ಸರಕಾರ ಈಗ ಅಧಿಕೃತವಾಗಿ ಒಪ್ಪಿಕೊಂಡಿದೆ. ಘಟನೆ ನಡೆದು 41 ವರ್ಷಗಳ ನಂತರ ಕೆನಡಾ ಈ ಸತ್ಯವನ್ನು ಒಪ್ಪಿಕೊಂಡಿದೆ. ಈ ವಿಮಾನವು ಕೆನಡಾದ ಮಾಂಟ್ರಿಯಲ್‌ ನಿಂದ ಲಂಡನ್ ಮಾರ್ಗವಾಗಿ ನವದೆಹಲಿಗೆ ಬರುತ್ತಿತ್ತು. ಲಂಡನ್‌ ನ ಹೀಥ್ರೂ ವಿಮಾನ ನಿಲ್ದಾಣವನ್ನು ತಲುಪಲು 45 ನಿಮಿಷಗಳ ಮೊದಲು, ಐರ್ಲೆಂಡ್ ಕರಾವಳಿಯ ಬಳಿ ಅಟ್ಲಾಂಟಿಕ್ ಮಹಾಸಾಗರದ ಮೇಲೆ ವಿಮಾನದಲ್ಲಿ ಭೀಕರ ಸ್ಫೋಟ ಸಂಭವಿಸಿ ವಿಮಾನವು ಸಮುದ್ರದಲ್ಲಿ ಪತನಗೊಂಡಿತು. ಇದರಿಂದ ವಿಮಾನದಲ್ಲಿದ್ದ ಎಲ್ಲಾ 329 ಪ್ರಯಾಣಿಕರು ಸಾವನ್ನಪ್ಪಿದರು. ಇವರಲ್ಲಿ 268 ಮಂದಿ ಕೆನಡಾದ ನಾಗರಿಕರಾಗಿದ್ದರು ಅವರಲ್ಲಿ ಬಹುಪಾಲು ಭಾರತೀಯ ಮೂಲದವರು, 24 ಮಂದಿ ಭಾರತೀಯ ನಾಗರಿಕರಾಗಿದ್ದರು ಮತ್ತು ಉಳಿದವರು ಇತರ ದೇಶಗಳಿಗೆ ಸೇರಿದವರಾಗಿದ್ದರು.

ಕೆನಡಾದ ಗುಪ್ತಚರ ಸಂಸ್ಥೆ ‘ಕೆನಡಿಯನ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಸರ್ವಿಸ್’ ಈ ಘಟನೆಯನ್ನು ‘ಘೋರ ಭಯೋತ್ಪಾದಕ ಕೃತ್ಯ’ ಎಂದು ಕರೆದಿದೆ. ಈ ಘಟನೆ ನಡೆದು ಜೂನ್ 23 ಕ್ಕೆ 41 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಸಂಸ್ಥೆಯು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ‘ಇಂದಿನ ದಿನದಂದು ನಾವು ಏರ್ ಇಂಡಿಯಾ ಫ್ಲೈಟ್ 182 ರಲ್ಲಿದ್ದ ಆ 329 ಜನರನ್ನು ಸ್ಮರಿಸುತ್ತೇವೆ, ಅವರು ಒಂದು ಘೋರ ಭಯೋತ್ಪಾದಕ ದಾಳಿಯಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡರು’ ಎಂದು ಬರೆದಿದೆ.

ಕೆನಡಾದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಭಯೋತ್ಪಾದಕ ದಾಳಿ! – ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ

ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರು, ಇದು ಇಂದಿಗೂ ಕೆನಡಾದ ಇತಿಹಾಸದಲ್ಲಿ ನಡೆದ ಅತ್ಯಂತ ದೊಡ್ಡ ಭಯೋತ್ಪಾದಕ ದಾಳಿಯಾಗಿದೆ. ಕೆನಡಾ ಪ್ರತಿಯೊಂದು ಹಿಂಸಾತ್ಮಕ ಭಯೋತ್ಪಾದನೆಯ ವಿರುದ್ಧ ದೃಢವಾಗಿ ನಿಲ್ಲುತ್ತದೆ ಎಂದು ಹೇಳಿದ್ದಾರೆ.

ಆಪರೇಷನ್ ಬ್ಲೂ ಸ್ಟಾರ್’ ಸೇಡು ತೀರಿಸಿಕೊಳ್ಳಲು ವಿಮಾನವನ್ನು ಗುರಿಯಾಗಿಸಲಾಗಿತ್ತು !

ಕೆನಡಾದ ತನಿಖಾ ಸಂಸ್ಥೆಗಳು, ಈ ದಾಳಿಯನ್ನು 1984 ರಲ್ಲಿ ಅಮೃತಸರದಲ್ಲಿ ಅಡಗಿದ್ದ ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ನಡೆದ ‘ಆಪರೇಷನ್ ಬ್ಲೂ ಸ್ಟಾರ್’ಗೆ ಪ್ರತೀಕಾರವಾಗಿ ಮಾಡಲಾಗಿತ್ತು ಎಂಬ ತೀರ್ಮಾನಕ್ಕೆ ಬಂದಿದ್ದವು. ಇದೇ ಸೇಡಿನಿಂದಾಗಿ ಖಲಿಸ್ತಾನಿ ಬೆಂಬಲಿಗರು ಏರ್ ಇಂಡಿಯಾ ವಿಮಾನವನ್ನು ಗುರಿಯಾಗಿಸಿಕೊಂಡಿದ್ದರು.

ಕೆನಡಾ 41 ವರ್ಷಗಳ ಕಾಲ ಖಲಿಸ್ತಾನಿಗಳನ್ನು ಬೆಂಬಲಿಸಿತ್ತು!

ಈ ದಾಳಿಯ ಸಂಚನ್ನು ಕೆನಡಾದಲ್ಲಿ ಸಕ್ರಿಯರಾಗಿದ್ದ ಖಲಿಸ್ತಾನಿ ಭಯೋತ್ಪಾದಕರು ರೂಪಿಸಿದ್ದರು ಎಂದು ಭಾರತ ಮೊದಲಿನಿಂದಲೂ ಹೇಳುತ್ತಾ ಬಂದಿತ್ತು; ಆದರೆ ಕೆನಡಾ ಸರಕಾರ ‘ಖಲಿಸ್ತಾನಿ’ ಎಂಬ ಪದವನ್ನು ಬಳಸುವುದನ್ನು ತಪ್ಪಿಸುತ್ತಿತ್ತು. 2010 ರಲ್ಲಿ ಕೆನಡಾದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಜಾನ್ ಮೇಜರ್ ನೇತೃತ್ವದಲ್ಲಿ ನಡೆದ ಸಾರ್ವಜನಿಕ ತನಿಖೆಯಲ್ಲಿ, ಕೆನಡಾದ ಭದ್ರತಾ ಸಂಸ್ಥೆಗಳ ಹಲವಾರು ಗಂಭೀರ ಲೋಪದೋಷಗಳಿಂದಾಗಿ ಈ ಪ್ರಕರಣದ ತನಿಖೆ ದುರ್ಬಲಗೊಂಡಿತು ಎಂದು ಹೇಳಲಾಗಿತ್ತು. ಅತ್ಯಂತ ದೊಡ್ಡ ತಪ್ಪು ಎಂದರೆ, ‘ಕೆನಡಿಯನ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಸರ್ವಿಸ್’ ಸಂಸ್ಥೆಯು ‘ಬಬ್ಬರ್ ಖಾಲ್ಸಾ’ ಸಂಘಟನೆಯ ನಾಯಕ ತಲ್ವಿಂದರ್ ಸಿಂಗ್ ಪರ್ಮಾರ್ ಮೇಲೆ ನಿಗಾ ಇಟ್ಟಿತ್ತು; ಆದರೆ ನಂತರ ಅವನ ನೂರಾರು ಗಂಟೆಗಳ ದೂರವಾಣಿ ಕರೆಗಳ ಧ್ವನಿಮುದ್ರಣಗಳನ್ನು (ರೆಕಾರ್ಡಿಂಗ್ಸ್) ನಾಶಪಡಿಸಲಾಯಿತು. ಇದರಿಂದಾಗಿ ಪ್ರಮುಖ ಪುರಾವೆಗಳು ನಾಶವಾಗಿ ಮೊಕದ್ದಮೆ ದುರ್ಬಲಗೊಂಡಿತು. ಈ ಸಂಸ್ಥೆ ಮತ್ತು ಪೊಲೀಸ್ ಇಲಾಖೆಯ ನಡುವೆ ಮಾಹಿತಿ ವಿನಿಮಯದ ಕುರಿತು ಭಿನ್ನಾಭಿಪ್ರಾಯಗಳಿದ್ದವು, ಇದು ತನಿಖೆಯ ಮೇಲೆ ಪರಿಣಾಮ ಬೀರಿತು. ಮೂಲತಃ ಈ ದಾಳಿಯನ್ನು ಕೆನಡಾದ ರಾಷ್ಟ್ರೀಯ ಭದ್ರತೆಯ ವಿಷಯವೆಂದು ಅಷ್ಟೊಂದು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಹಾಗೆಯೇ ಮುಖ್ಯ ಸಾಕ್ಷಿಗಳಿಗೆ ಬೆದರಿಕೆಗಳು ಬಂದವು ಮತ್ತು ಕೆಲವರ ಹತ್ಯೆಯೂ ನಡೆಯಿತು. ಪುರಾವೆಗಳು ದುರ್ಬಲವಾಗಿದ್ದರಿಂದ 2005 ರಲ್ಲಿ ನ್ಯಾಯಾಲಯವು ಪ್ರಮುಖ ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಿತು. 2010 ರಲ್ಲಿ ಆಗಿನ ಪ್ರಧಾನಿ ಸ್ಟೀಫನ್ ಹಾರ್ಪರ್ ಅವರು ಸಂತ್ರಸ್ತ ಕುಟುಂಬಗಳ ಕ್ಷಮೆಯಾಚಿಸಿದರು ಮತ್ತು ಸರಕಾರ ಈ ಪ್ರಕರಣವನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ಒಪ್ಪಿಕೊಂಡರು. ಹೀಗಿದ್ದರೂ ಸಹ, ಹಲವು ವರ್ಷಗಳವರೆಗೆ ಕೆನಡಾದ ಸರಕಾರಿ ಸಂಸ್ಥೆಗಳು ‘ಖಲಿಸ್ತಾನಿ ಭಯೋತ್ಪಾದಕ’ ಎಂಬ ಪದವನ್ನು ಬಳಸಿರಲಿಲ್ಲ.

ಸಂಪಾದಕೀಯ ನಿಲುವು

ಕೇವಲ ಇದನ್ನು ಒಪ್ಪಿಕೊಳ್ಳುವ ಮೂಲಕ ಕೆನಡಾ ಖಲಿಸ್ತಾನಿ ಭಯೋತ್ಪಾದಕರಿಂದ ತನ್ನನ್ನು ತಾನು ಬೇರೆ ಮಾಡಲು ಸಾಧ್ಯವಿಲ್ಲ. ಅದು ತನ್ನ ದೇಶದಲ್ಲಿರುವ ಪ್ರತಿಯೊಬ್ಬ ಖಲಿಸ್ತಾನಿ ಬೆಂಬಲಿಗನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸಿಖ್ ಫಾರ್ ಜಸ್ಟಿಸ್ ನ ಭಯೋತ್ಪಾದಕ ಮುಖಂಡ ಗುರುಪತ್ವಂತ್ ಸಿಂಗ್ ಪನ್ನೂ ನನ್ನು ಬಂಧಿಸಿ ಭಾರತಕ್ಕೆ ಒಪ್ಪಿಸಬೇಕು, ಆಗ ಮಾತ್ರ ಕೆನಡಾದ ನಿಲುವು ನಿಜವಾದುದು ಎಂದು ನಂಬಲು ಸಾಧ್ಯ !