‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ

ಕಾಣಕೋಣದ ಶ್ರೀ ಪರ್ತಗಾಳಿ ಮಠದಲ್ಲಿ ‘ಜೀವೋತ್ತಮ ವಿದ್ಯಾಪೀಠಂ’ ಎಂಬ ಹೊಸ ವೈದಿಕ ವಿದ್ಯಾಲಯದ ಶೂಭಾರಂಭ

ವಿದ್ಯಾರ್ಥಿ ಹಾಗೂ ಶಿಕ್ಷಕರೊಂದಿಗೆ (1) ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೆರ ಸ್ವಾಮಿಜಿ

ಕಾಣಕೋಣ, ಜೂನ್ 24 (ವಾರ್ತೆ.) – ‘‘ಜೀವೋತ್ತಮ ವಿದ್ಯಾಪೀಠಂ’’ ಎಂಬುದು ಶ್ರೀಮದ್ ಮಧ್ವ ಸಿದ್ಧಾಂತದ ಆಧಾರಿತ ವೈದಿಕ ಶಿಕ್ಷಣದ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ ಮತ್ತು ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಕಾಣಕೋಣದ ಶ್ರೀ ಪರ್ತಗಾಳಿ ಮಠದ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರು ನುಡಿದರು. ದಕ್ಷಿಣ ಅಯೋಧ್ಯೆ ಎಂದು ಕರೆಯಲ್ಪಡುವ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ಜೂನ್ 24ರಂದು ನಿಜ ಜ್ಯೇಷ್ಠ ಶುಕ್ಲ ದಶಮಿಯ ಶುಭ ಮುಹೂರ್ತದಲ್ಲಿ ‘ಜೀವೋತ್ತಮ ವಿದ್ಯಾಪೀಠಂ’ ಎಂಬ ಹೊಸ ವೈದಿಕ ಶಿಕ್ಷಣ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ. ಇದರ ಉದ್ಘಾಟನಾ ಸಮಾರಂಭದಲ್ಲಿ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರು ಮಾರ್ಗದರ್ಶನ ನೀಡುತ್ತಿದ್ದರು.

ಅವರು ಮಾತು ಮುಂದುವರೆಸುತ್ತಾ, ‘‘ಈ ವಿದ್ಯಾಪೀಠದ 5 ವರ್ಷಗಳ ಪಠ್ಯಕ್ರಮದಲ್ಲಿ ಸಂಸ್ಕೃತ, ವೇದ, ಕರ್ಮಾಂಗ ಮತ್ತು ಜ್ಯೋತಿಷ್ಯ ವಿಷಯಗಳನ್ನು ಒಳಗೊಂಡಿದ್ದರೆ, 10 ವರ್ಷಗಳ ಪಠ್ಯಕ್ರಮದಲ್ಲಿ ಸಂಸ್ಕೃತ, ವೇದ, ಕರ್ಮಾಂಗ, ಜ್ಯೋತಿಷ್ಯ, ನ್ಯಾಯ, ವ್ಯಾಕರಣ ಮತ್ತು ವೇದಾಂತ ವಿಷಯಗಳ ಆಳವಾದ ಶಿಕ್ಷಣವನ್ನು ನೀಡಲಾಗುತ್ತದೆ. ಈ ವಿದ್ಯಾಪೀಠವು ಕೇವಲ ಶೈಕ್ಷಣಿಕ ಸಂಸ್ಥೆಯಲ್ಲ, ಬದಲಾಗಿ ವೈದಿಕ ಸಂಪ್ರದಾಯ, ಮಧ್ವ ತತ್ವಶಾಸ್ತ್ರ ಮತ್ತು ಗುರು-ಪರಂಪರೆಯ ಅಮೂಲ್ಯ ಆಸ್ತಿಯನ್ನು ಭವಿಷ್ಯದ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಇಟ್ಟಿರುವ ಒಂದು ಪ್ರಮುಖ ಹೆಜ್ಜೆಯಾಗಿದೆ,’’ ಎಂದು ಹೇಳಿದರು. ‘ಜೀವೋತ್ತಮ ವಿದ್ಯಾಪೀಠಂ’ನ ಸಂಸ್ಕೃತ ವಿಭಾಗಕ್ಕೆ ಶ್ರೀ ಗಣೇಶ ಭಟ್ (ಗೋಕರ್ಣ) ಮತ್ತು ಶ್ರೀ ರಾಘೋತ್ತಮ ಆಚಾರ್ಯ (ಬೆಂಗಳೂರು) ಅವರನ್ನು ನೇಮಕ ಮಾಡಲಾಗಿದೆ. ವೇದ ವಿಭಾಗಕ್ಕೆ ಶ್ರೀ ಅಥರ್ವ ಭಾಂಡೇಕರ್ ಅವರನ್ನು, ಮತ್ತು ಜ್ಯೋತಿಷ್ಯ ಹಾಗೂ ಕರ್ಮಾಂಗ ವಿಭಾಗದ ಮುಖ್ಯಸ್ಥರಾಗಿ ಮತ್ತು ಪ್ರಾಂಶುಪಾಲರಾಗಿ ಇಡಗುಂಜಿ, ಹೊನ್ನಾವರದ ಶ್ರೀ ಲಕ್ಷ್ಮೀಕಾಂತ ಭಟ್ ಅವರನ್ನು ನೇಮಿಸಲಾಗಿದೆ. ಶ್ರೀಮದ್ ಮಧ್ವ ಸಿದ್ಧಾಂತವನ್ನು ಪ್ರಚಾರ ಮಾಡುವ ಮತ್ತು ಸಾರಸ್ವತ ಸಮಾಜದ ಸೇವೆಗಾಗಿ ಕಾರ್ಯನಿರ್ವಹಿಸುವ ವಿದ್ವಾಂಸರನ್ನು ರೂಪಿಸುವುದು ಈ ಸಂಸ್ಥೆಯ ಉದ್ದೇಶವಾಗಿದೆ. ಕಾರ್ಯಕ್ರಮದಲ್ಲಿ ಶ್ರೀಹರಿ, ಗುರು ಮತ್ತು ದೇವಿ ಸರಸ್ವತಿಯವರ ಪೂಜೆಯ ನಂತರ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ಮತ್ತು ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು. ಇದರೊಂದಿಗೆ ‘ಜೀವೋತ್ತಮ ವಿದ್ಯಾಪೀಠಂ’ನ ಶೈಕ್ಷಣಿಕ ಕಾರ್ಯಗಳಿಗೆ ಅಧಿಕೃತ ಚಾಲನೆ ದೊರೆಯಿತು. ಈ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ವಿಜೇತ ಮೋಹನದಾಸ್ ಪೈ, ಆರ್.ಎಸ್. ಶಾನ್‌ಭಾಗ (ಬೆಂಗಳೂರು), ಮಠದ ಕೇಂದ್ರ ಸಮಿತಿಯ ಅಧ್ಯಕ್ಷ ಶ್ರೀನಿವಾಸ ದೆಂಪೊ, ಉಪಾಧ್ಯಕ್ಷ ರಾಮಚಂದ್ರ ಆರ್. ಕಾಮತ್, ಪರ್ತಗಾಳಿ ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ಅನಿಲ್ ಪೈ, ಇತರ ಪದಾಧಿಕಾರಿಗಳು ಮತ್ತು ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.