ಕೇರಳದ ಪ್ರಸಿದ್ಧ ಗುರುವಾಯೂರು ದೇವಸ್ಥಾನದ ಚಿನ್ನ-ಬೆಳ್ಳಿ ವಸ್ತುಗಳಲ್ಲಿ ಹಗರಣ ! – ಲೆಕ್ಕಪರಿಶೋಧನಾ ವರದಿಯಿಂದ ಬಹಿರಂಗ : Kerala Guruvayur Temple

ಗುರುವಾಯೂರ್ ದೇವಾಲಯ

ತಿರುವನಂತಪುರಂ (ಕೇರಳ) – ಕೇರಳ ರಾಜ್ಯದ ಲೆಕ್ಕಪರಿಶೋಧನಾ ಇಲಾಖೆಯು 2019-20 ಮತ್ತು 2020-21ರ ವರದಿಗಳಲ್ಲಿ, ಗುರುವಾಯೂರು ದೇವಸ್ಥಾನದ ಚಿನ್ನ, ಬೆಳ್ಳಿ ಮತ್ತು ಇತರ ಅಮೂಲ್ಯ ವಸ್ತುಗಳ ನಿರ್ವಹಣೆಯಲ್ಲಿ ಗಂಭೀರ ಅವ್ಯವಹಾರಗಳು ಮತ್ತು ಸೂಕ್ತವಲ್ಲದ ಪ್ರಕ್ರಿಯೆಗಳು ಕಂಡುಬಂದಿವೆ ಎಂದು ಹೇಳಿದೆ.

ವಿಧಿಗಳಿಗಾಗಿ ಬಳಸಿದ ವಸ್ತುಗಳನ್ನು ಹಿಂದಿರುಗಿಸಿದಾಗ ಕಡಿಮೆ ತೂಕದವು ಎಂದು ಕಂಡುಬಂದಿದೆ!

ದೇವಸ್ಥಾನದಲ್ಲಿ ದೈನಂದಿನ ವಿಧಿಗಳಿಗಾಗಿ ಬಳಸಲಾಗುವ ಚಿನ್ನ-ಬೆಳ್ಳಿಯ ಪಾತ್ರೆಗಳ ದೊಡ್ಡ ಪ್ರಮಾಣದ ದುರುಪಯೋಗವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ದಾಖಲೆಗಳನ್ನು ಇರಿಸಿರುವ ಡಬಲ್-ಲಾಕ್ ರಿಜಿಸ್ಟರ್ ಅನ್ನು ಪರಿಶೀಲಿಸಿದಾಗ, ಬಳಕೆಯ ನಂತರ ದೇವಸ್ಥಾನದ ವ್ಯವಸ್ಥಾಪಕರಾದ ಗುರುವಾಯೂರು ದೇವಸ್ವಂಗೆ ಹಿಂದಿರುಗಿಸಿದ ವಸ್ತುಗಳು ಹೆಚ್ಚಾಗಿ ಕಡಿಮೆ ತೂಕದವು ಆಗಿರುತ್ತಿದ್ದವು. ಕೆಲವೊಮ್ಮೆ ಚಿನ್ನದ ವಸ್ತುಗಳ ಬದಲಿಗೆ ಬೆಳ್ಳಿಯ ವಸ್ತುಗಳನ್ನು ಹಿಂದಿರುಗಿಸಲಾಗುತ್ತಿತ್ತು. ಚಿನ್ನದ ಕಿರೀಟದ ಬದಲಿಗೆ ಬೆಳ್ಳಿಯ ಕಿರೀಟವನ್ನು ಹಿಂದಿರುಗಿಸಲಾಗಿತ್ತು. 10 ತಿಂಗಳಲ್ಲಿ ಒಂದು ಬೆಳ್ಳಿಯ ಪಾತ್ರೆಯ ತೂಕವು 1 ಕೆಜಿ 19 ಗ್ರಾಂನಷ್ಟು ಕಡಿಮೆಯಾಗಿತ್ತು. ಒಂದು ಬೆಳ್ಳಿಯ ದೀಪದ ತೂಕವು ಹಲವು ಗ್ರಾಮ್ ಗಳಷ್ಟು ಕಡಿಮೆಯಾಗಿತ್ತು. 2 ಕೆಜಿ 65 ಗ್ರಾಮ್ ಬೆಳ್ಳಿಯ ಪಾತ್ರೆಯ ತೂಕ ಕೇವಲ 750 ಗ್ರಾಮ್ ಆಗಿತ್ತು.

530 ಕೆಜಿಗಿಂತ ಅಧಿಕ ತೂಕದ ಆನೆದಂತ ಮಾಯ

ಗುರುವಾಯೂರು ದೇವಸ್ವಂನ ಪುನ್ನಾತ್ತೂರು ಕೋಟ್ಟಾ ಅಭಯಾರಣ್ಯದಲ್ಲಿನ ಆನೆದಂತಗಳ ನಿರ್ವಹಣೆಯಲ್ಲಿ ಅತಿ ದೊಡ್ಡ ಲೋಪ ಕಂಡುಬಂದಿದೆ. ಪುನ್ನಾತ್ತೂರು ಕೋಟ್ಟಾದಿಂದ ಸಂಗ್ರಹಿಸಲಾದ 530 ಕೆಜಿಗಿಂತ ಹೆಚ್ಚು ತೂಕದ ಆನೆದಂತಗಳು ಮಾಯವಾಗಿವೆ. 2019-20ರ ಲೆಕ್ಕಪರಿಶೋಧನೆಯಲ್ಲಿ, ಆ ವರ್ಷ ದೇವಸ್ಥಾನದ ಆನೆಗಳಿಂದ 522 ಕೆಜಿ 86 ಗ್ರಾಮ್ ಆನೆದಂತಗಳನ್ನು ಸಂಗ್ರಹಿಸಲಾಗಿತ್ತು, ಅದರಲ್ಲಿ ಒಂದನ್ನೂ ಕಾನೂನು ಪ್ರಕಾರ ಅರಣ್ಯ ಇಲಾಖೆಗೆ ನೀಡಲಾಗಿಲ್ಲ ಎಂದು ಕಂಡುಬಂದಿದೆ. ಏಪ್ರಿಲ್‌ನಿಂದ ನವೆಂಬರ್ 2019ರ ಅವಧಿಯಲ್ಲಿ ವಿವಿಧ ತೂಕದ ಆನೆದಂತಗಳನ್ನು ಒಂದೋ ತೆಗೆದುಹಾಕಲಾಗಿದೆ ಅಥವಾ ದಾಖಲೆಗಳಿಲ್ಲದೆ ಗುರುವಾಯೂರು ದೇವಸ್ವಂನ ನಿಯಂತ್ರಣದಲ್ಲಿ ಇರಿಸಲಾಗಿದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಪತ್ರದ ಪ್ರಕಾರ, ದೇವಸ್ವಂಗೆ 10 ದಿನಗಳಲ್ಲಿ ತಮ್ಮ ನಿಯಂತ್ರಣದಲ್ಲಿರುವ ಆನೆದಂತಗಳ ಬಗ್ಗೆ ವರದಿ ನೀಡಲು ನಿರ್ದೇಶಿಸಲಾಗಿತ್ತು; ಆದರೆ ಮಂಡಳಿಯು ಯಾವುದೇ ಮಾಹಿತಿ ನೀಡಲಿಲ್ಲ ಮತ್ತು ಆನೆದಂತ ಅಥವಾ ಅದರ ತುಂಡುಗಳನ್ನು ಅರಣ್ಯ ಇಲಾಖೆಗೆ ನೀಡಲಿಲ್ಲ.

ಪ್ರಕರಣ ನ್ಯಾಯಾಲಯದಲ್ಲಿದ್ದು, ದೇವಸ್ವಂ ತನ್ನ ಹೇಳಿಕೆ ನೀಡಿದೆ! – ಗುರುವಾಯೂರು ದೇವಸ್ವಂ

ವರದಿಯಲ್ಲಿ ಕಂಡುಬಂದಿರುವ ಅವ್ಯವಹಾರಗಳ ಕುರಿತು ಗುರುವಾಯೂರು ದೇವಸ್ವಂ ಅಧ್ಯಕ್ಷ ವಿ.ಕೆ. ವಿಜಯನ್ ಅವರು ಮಾತನಾಡಿ, ಈ ಪ್ರಕರಣವು ಪ್ರಸ್ತುತ ಮಂಡಳಿಯ ಅಧಿಕಾರಾವಧಿಯ ಹಿಂದಿನದಾಗಿದೆ. ಇದನ್ನು ಈಗಾಗಲೇ ನ್ಯಾಯಾಲಯಕ್ಕೆ ಕೊಂಡೊಯ್ಯಲಾಗಿದ್ದು, ಅಲ್ಲಿ ದೇವಸ್ವಂ ತನ್ನ ಹೇಳಿಕೆಗಳನ್ನು ನೀಡಿದೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ದೇವಸ್ಥಾನಗಳ ಸರಕಾರೀಕರಣದಿಂದ ಇನ್ನೆಷ್ಟು ದುಷ್ಪರಿಣಾಮಗಳು ಬೆಳಕಿಗೆ ಬಂದ ನಂತರ ಅವು ಭಕ್ತರ ನಿಯಂತ್ರಣಕ್ಕೆ ನೀಡಲಾಗುತ್ತದೆ? ಇದನ್ನು ವಿರೋಧಿಸಿ ಜನರೂ ಏಕೆ ಸಿಡಿದೆದ್ದೇಳುತ್ತಿಲ್ಲ?