‘ಎನ್‌.ಸಿ.ಇ.ಆರ್‌.ಟಿ.’ ಪುಸ್ತಕದಲ್ಲಿ ವಿಭಜನೆಯ ಭೀಕರತೆಯ ಅಧ್ಯಾಯ ಸೇರ್ಪಡೆ!

ವಿಭಜನೆಗೆ ಕಾಂಗ್ರೆಸ್, ಜಿನ್ನಾ ಮತ್ತು ಮೌಂಟ್ ಬ್ಯಾಟನ್ ಕಾರಣ ಎಂದು ಉಲ್ಲೇಖ

(‘ಎನ್‌.ಸಿ.ಇ.ಆರ್‌.ಟಿ.’ ಅಂದರೆ ‘ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಆ್ಯಂಡ್ ಟ್ರೈನಿಂಗ್’ – ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ)

ನವದೆಹಲಿ – ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು ೬ ರಿಂದ ೮ ಮತ್ತು ೯ ರಿಂದ ೧೨ನೇ ತರಗತಿಗಾಗಿ ಎರಡು ಹೊಸ ಅಧ್ಯಾಯಗಳನ್ನು ಸೇರಿಸಿದೆ. ಈ ಎರಡೂ ಅಧ್ಯಾಯಗಳು ದೇಶದ ವಿಭಜನೆಯ ಭೀಕರತೆಯನ್ನು ವಿವರಿಸುತ್ತವೆ. ಮಹಮ್ಮದ್ ಅಲಿ ಜಿನ್ನಾ ವಿಭಜನೆಗೆ ಬೇಡಿಕೆ ಇಟ್ಟರು, ಕಾಂಗ್ರೆಸ್ ಅದನ್ನು ಒಪ್ಪಿಕೊಂಡಿತು ಮತ್ತು ವೈಸ್‌ರಾಯ್ ಮೌಂಟ್ ಬ್ಯಾಟನ್ ಅದನ್ನು ಕಾರ್ಯಗತಗೊಳಿಸಿದರು ಎಂದು ಈ ಅಧ್ಯಾಯಗಳಲ್ಲಿ ಹೇಳಲಾಗಿದೆ. ಈ ಮಾಹಿತಿಯನ್ನು ‘ವಿಭಜನೆಯ ಅಪರಾಧಿಗಳು’ ಎಂಬ ಶೀರ್ಷಿಕೆಯಡಿಯಲ್ಲಿ ಸೇರಿಸಲಾಗಿದೆ.

ಈ ಅಧ್ಯಾಯಗಳು ಪಠ್ಯಕ್ರಮದ ಭಾಗವಲ್ಲ, ಬದಲಿಗೆ ಪೂರಕ ಸಾಮಗ್ರಿಗಳಾಗಿವೆ, ಇವುಗಳನ್ನು ವಿದ್ಯಾರ್ಥಿಗಳಿಗೆ ನಿರ್ದಿಷ್ಟ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಲು ಸಿದ್ಧಪಡಿಸಲಾಗಿದೆ. ಇವುಗಳನ್ನು ಕರಪತ್ರಗಳು, ಚರ್ಚೆಗಳು ಮತ್ತು ವಾದಗಳ ಮೂಲಕ ವಿದ್ಯಾರ್ಥಿಗಳಿಗೆ ಕಲಿಸಲಾಗುವುದು. ಇತ್ತೀಚೆಗೆ ‘ಆಪರೇಷನ್ ಸಿಂದೂರ್’ ಎಂಬ ವಿಶೇಷ ಅಧ್ಯಾಯವನ್ನೂ ಸಹ ಸೇರಿಸಲಾಗಿತ್ತು.

ವಿಭಜನೆಯನ್ನು ಒಪ್ಪಿಕೊಳ್ಳಬೇಕು ಅಥವಾ ಅರಾಜಕತೆಯನ್ನು ಎದುರಿಸಬೇಕು! – ನೆಹರೂ

ಈ ಅಧ್ಯಾಯದಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಭಾಷಣದ ಒಂದು ಆಯ್ದ ಭಾಗವನ್ನು ಸೇರಿಸಲಾಗಿದೆ. ಇದರಲ್ಲಿ, ನೆಹರೂ, ‘ನಾವು ಒಂದು ಹಂತಕ್ಕೆ ತಲುಪಿದ್ದೇವೆ, ಇಲ್ಲಿ ನಾವು ವಿಭಜನೆಯನ್ನು ಒಪ್ಪಿಕೊಳ್ಳಬೇಕು ಅಥವಾ ನಿರಂತರ ಸಂಘರ್ಷ ಮತ್ತು ಅರಾಜಕತೆಯನ್ನು ಎದುರಿಸಬೇಕು’ ಎಂದು ಹೇಳಿದ್ದರು. (ನೆಹರೂ ಅವರು ವಿಭಜನೆಯನ್ನು ಮಾಡಿದರು; ಆದರೆ ದೇಶದಲ್ಲಿ ನಿರಂತರ ಸಂಘರ್ಷ ಮತ್ತು ಅರಾಜಕತೆ ಎರಡೂ ಆಗಿನಿಂದ ಇಂದಿನವರೆಗೂ ಮುಂದುವರೆದಿವೆ ಮತ್ತು ಮುಂದೆಯೂ ಮುಂದುವರಿಯಲಿವೆ. ಅಂದರೆ, ವಿಭಜನೆಯಿಂದ ಭಾರತಕ್ಕೆ ಯಾವುದೇ ಪ್ರಯೋಜನವಾಗಲಿಲ್ಲ, ಬದಲಿಗೆ ದೇಶಕ್ಕೆ ಹಾನಿಯಾಯಿತು ಮತ್ತು ಈಗಲೂ ಆಗುತ್ತಿದೆ. ಇದು ಕಾಂಗ್ರೆಸ್ ಮತ್ತು ಗಾಂಧಿ-ನೆಹರೂರವರ ಪಾಪವಾಗಿದೆ ! – ಸಂಪಾದಕರು).

ವಿಭಜನೆಯ ದುಷ್ಪರಿಣಾಮಗಳ ಉಲ್ಲೇಖ

ಈ ಅಧ್ಯಾಯದಲ್ಲಿ, ೧೯೪೭ ರಿಂದ ೧೯೫೦ರ ಅವಧಿಯಲ್ಲಿ ವಿಭಜನೆಯು ಭಾರತದ ಐಕ್ಯತೆಯನ್ನು ಛಿದ್ರಗೊಳಿಸಿತು, ಶತ್ರುತ್ವದ ಗಡಿಗಳನ್ನು ಸೃಷ್ಟಿಸಿತು, ಸಾಮೂಹಿಕ ಹತ್ಯಾಕಾಂಡ ಮತ್ತು ಸ್ಥಳಾಂತರಕ್ಕೆ ಕಾರಣವಾಯಿತು, ಧಾರ್ಮಿಕ ಅಪನಂಬಿಕೆಯನ್ನು ಹೆಚ್ಚಿಸಿತು, ಪಂಜಾಬ್ ಮತ್ತು ಬಂಗಾಳದ ಆರ್ಥಿಕತೆಗಳನ್ನು ನಾಶಪಡಿಸಿತು, ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಸಾಮಾಜಿಕ, ಆರ್ಥಿಕ ಹಾಗೂ ಜನಸಂಖ್ಯಾ ಕುಸಿತದ ಹಾದಿಯಲ್ಲಿ ಇರಿಸಿತು, ಇದು ನಂತರ ಭಯೋತ್ಪಾದನೆಯಿಂದ ಇನ್ನಷ್ಟು ಹದಗೆಟ್ಟಿಸಿತು ಎಂದು ಉಲ್ಲೇಖಿಸಲಾಗಿದೆ.

ವಿಭಜನೆಯ ನೋವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ! – ಪ್ರಧಾನಿ ಮೋದಿ

ವಿಶೇಷ ಅಧ್ಯಾಯದ ಮುನ್ನುಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿಭಜನೆಯ ಕುರಿತಾದ ಆಲೋಚನೆಗಳನ್ನು ಸಹ ಪ್ರಸ್ತುತಪಡಿಸಲಾಗಿದೆ. ಇದರಲ್ಲಿ, ಮೋದಿ, ‘ವಿಭಜನೆಯ ನೋವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಜನರ ಮೂರ್ಖತನ ಮತ್ತು ದ್ವೇಷಪೂರಿತ ಹಿಂಸೆಯಿಂದಾಗಿ ನಮ್ಮ ಲಕ್ಷಾಂತರ ಸಹೋದರ-ಸಹೋದರಿಯರು ಸ್ಥಳಾಂತರಗೊಂಡರು ಮತ್ತು ಅನೇಕರು ಪ್ರಾಣ ಕಳೆದುಕೊಂಡರು. ಹೋರಾಟ ಮತ್ತು ಬಲಿದಾನದ ಸ್ಮರಣಾರ್ಥ, ಭಾರತೀಯರು ಆಗಸ್ಟ್ ೧೪ ಅನ್ನು ‘ವಿಭಜನೆಯ ಭೀಕರತೆಯ ಸ್ಮರಣ ದಿನ’ ಎಂದು ಆಚರಿಸುತ್ತಾರೆ’ ಎಂದು ಹೇಳಿದರು.