ಶ್ರೀ ಗುರುಗಳು ನೀಡಿದ ಆಜ್ಞೆಯನ್ನು ಶಿರಸಾ ವಹಿಸುವ ಮತ್ತು ಸಮರ್ಪಿತ ಭಾವವಿರುವ ಶಿಷ್ಯರಾದ ಆರ್ಯ ಸಮಾಜದ ಸಂಸ್ಥಾಪಕ ಋಷಿ ದಯಾನಂದ ಸರಸ್ವತಿಯವರು !

೧. ಶ್ರೀ ಗುರುಗಳು ಶಿಷ್ಯ ದಯಾನಂದನಿಗೆ ಹಿಂದಿನ ದಿನ ಕಲಿಸಿದ ಪಾಠದ ಬಗ್ಗೆ ಕೇಳುವುದು ಮತ್ತು ಶಿಷ್ಯ ದಯಾನಂದನಿಗೆ ಅದನ್ನು ಹೇಳಲು ಸಾಧ್ಯವಾಗದಿರುವುದು : ಒಮ್ಮೆ ದಂಡೀಸ್ವಾಮಿ ಶ್ರೀ ವಿರಜಾನಂದಜಿಯವರು ತಮ್ಮ ಶಿಷ್ಯ ದಯಾನಂದನಿಗೆ ಹಿಂದಿನ ದಿನ ಕಲಿಸಿದ ಪಾಠದ ಬಗ್ಗೆ ಕೇಳಿದರು; ಆದರೆ ಆತ ಏನನ್ನೂ ಮಾತನಾಡದೆ ಶಾಂತವಾಗಿದ್ದನು. ಆಗ ಅವರಲ್ಲಿ ಮುಂದಿನ ಸಂಭಾಷಣೆಯಾಯಿತು.

ಗುರೂಜಿ : ದಯಾನಂದ, ನೀನು ನಿನ್ನೆಯ ಪಾಠವನ್ನು ಏಕೆ ಹೇಳುತ್ತಿಲ್ಲ ?
ಬಾಲಕ ದಯಾನಂದ (ಮೆಲುಧ್ವನಿಯಲ್ಲಿ) : ಗುರೂಜಿ, ದಯವಿಟ್ಟು ನನ್ನನ್ನು ಕ್ಷಮಿಸಿ. ನಿನ್ನೆಯ ಪಾಠ ನನಗೆ ನೆನಪಿಲ್ಲ.
ಗುರೂಜಿ : ದಯಾನಂದ, ನಿನ್ನೆ ಪಾಠ ಕಲಿಸುವಾಗ ಖಂಡಿತ ವಾಗಿಯೂ ನಿನ್ನ ಮನಸ್ಸು ಬೇರೆಡೆಗೆ ಹೋಗಿರಬೇಕು; ಆದ್ದರಿಂದ ಅದು ನಿನಗೆ ಸರಿಯಾಗಿ ಅರ್ಥವಾಗಲಿಲ್ಲ. ನಾವು ಯಾವ ವಿಷಯ ವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಕಲಿಯುತ್ತೇವೆಯೋ, ಅದು ನಮಗೆ ಬೇಗನೆ ನೆನಪಿನಲ್ಲಿ ಉಳಿಯಲ್ಲ ಮತ್ತು ನಾವು ಅದನ್ನು ಮರೆತುಬಿಡುತ್ತೇವೆ. ನಾವು ಯಾವ ಕಾರ್ಯವನ್ನು ಮಾಡುತ್ತೇವೆಯೋ, ಅದರಲ್ಲಿ ನಮ್ಮ ಪೂರ್ಣ ಗಮನ ಇರಬೇಕು.

೨. ಶ್ರೀ ಗುರುಗಳು ಪಾಠ ನೆನಪಾಗುವ ತನಕ ಮುಂದಿನ ಶಿಕ್ಷಣ ನಿಲ್ಲಿಸುವ ಶಿಕ್ಷೆ ನೀಡುವುದು ಮತ್ತು ದಯಾನಂದನು ಪಾಠ ಮತ್ತೆ ನೆನಪಾಗುವ ತನಕ ಅನ್ನ-ನೀರು ಮತ್ತು ನಿದ್ದೆ ತ್ಯಜಿಸುವ ಪ್ರಾಯಶ್ಚಿತ್ತ ತೆಗೆದುಕೊಳ್ಳುವುದು

ದಯಾನಂದ : ಹೌದು ಗುರೂಜಿ, ನಿನ್ನೆ ನನ್ನಿಂದ ಈ ತಪ್ಪಾಗಿತ್ತು. ಇದಕ್ಕಾಗಿ ನೀವು ನನಗೆ ಶಿಕ್ಷೆ ನೀಡಿ. ನಾನು ಭವಿಷ್ಯದಲ್ಲಿ ಇಂತಹ ಅಜಾಗರೂಕತೆಯನ್ನು ಎಂದಿಗೂ ಮಾಡುವುದಿಲ್ಲ.
ಗುರೂಜಿ : ‘ನೀನು ಮರೆತ ಪಾಠವು ನಿನಗೆ ನೆನಪಾಗುವ ತನಕ ನಿನ್ನ ಮುಂದಿನ ಶಿಕ್ಷಣ ನಿಲ್ಲಿಸಲಾಗುತ್ತದೆ’, ಇದೇ ನಿನ್ನ ಈ ತಪ್ಪಿಗೆ ಶಿಕ್ಷೆ.
ದಯಾನಂದ: ಈ ಮರೆತ ಪಾಠ ನನಗೆ ಮತ್ತೆ ನೆನಪಾಗುವ ತನಕ ನಾನು ಅನ್ನ-ನೀರು ಸ್ವೀಕರಿಸುವುದಿಲ್ಲ ಮತ್ತು ನಿದ್ದೆ ಮಾಡುವುದಿಲ್ಲ. ನಾನು ಆ ಪಾಠವನ್ನು ನೆನಪಿಸಿಕೊಳ್ಳದೇ ನಿಮ್ಮ ಚರಣಗಳ ದರ್ಶನವನ್ನೂ ಪಡೆಯುವುದಿಲ್ಲ.

೩. ದಯಾನಂದನ ಶ್ರೀ ಗುರುಗಳ ಮೇಲಿನ ಸಮರ್ಪಣಾಭಾವ !

೩ ಅ. ದಯಾನಂದನು ಧ್ಯಾನದಲ್ಲಿ ಶ್ರೀ ಗುರುಗಳನ್ನು ಸ್ಮರಿಸಿ ಹಿಂದಿನ ದಿನ ಶ್ರೀ ಗುರುಗಳು ಕಲಿಸಿದ ಪಾಠದ ಚಿಂತನೆ ಮಾಡುವುದು : ಈ ಕಠಿಣ ಪ್ರತಿಜ್ಞೆ ಮಾಡಿ ದಯಾನಂದನು ಅಲ್ಲಿಂದ ಹೊರಟನು. ಆಗ ದಂಡೀಸ್ವಾಮಿಗಳ ಹೃದಯದಲ್ಲಿ ಅವರ ಪ್ರೀತಿಯ ಶಿಷ್ಯನ ಬಗ್ಗೆ ಅಪಾರ ಕರುಣೆಯ ಸಾಗರ ಉಕ್ಕಿ ಹರಿಯುತ್ತಿತ್ತು. ಗುರೂಜಿ ಗಳ ಬೀಳ್ಕೊಡುಗೆ ಪಡೆದು ದಯಾನಂದನು ಒಂದು ಮರದ ಕೆಳಗೆ ಹೋಗಿ ಕುಳಿತನು. ಆತ ಕಣ್ಣುಗಳನ್ನು ಮುಚ್ಚಿ ಪಾಠದ ಕಡೆಗೆ ಮನಸ್ಸು ಏಕಾಗ್ರಗೊಳಿಸಿದ.
೩ ಆ. ಧ್ಯಾನಾವಸ್ಥೆಯಲ್ಲಿ ದಯಾನಂದನಿಗೆ ಶ್ರೀ ಗುರುಗಳ ಧ್ವನಿ ಸ್ಪಷ್ಟವಾಗಿ ಕೇಳಿಸಿ ಸಂಪೂರ್ಣ ಪಾಠದ ಸ್ಮರಣೆಯಾಗುವುದು : ಆತ ವಿಚಾರ ಮಾಡಲು ಆರಂಭಿಸಿದ, ‘ನಿನ್ನೆ ನಾನು ಸ್ನಾನದ ನಂತರ ಗುರೂಜಿಯವರ ಸ್ನಾನಕ್ಕಾಗಿ ನೀರು ತಂದಿದ್ದೆ. ನಂತರ ನಾನು ಗುರುದೇವರಿಗೆ ಸಾಷ್ಟಾಂಗ ನಮಸ್ಕರಿಸಿ ಅವರ ಶುಭಾಶೀರ್ವಾದ ಪಡೆದಿದ್ದೆ. ಆಗ ಗುರೂಜಿಯವರು ನನಗೆ ಹಿಂದಿನ ದಿನದ ಪಾಠ ಕೇಳಿದ್ದರು.’ ಧ್ಯಾನದಲ್ಲಿ ದಯಾನಂದನು ಹಿಂದಿನ ದಿನದ ಈ ಸ್ಥಿತಿಗೆ ತಲುಪಿದ ತಕ್ಷಣ ಅವನಿಗೆ ಅನಿಸಿತು, ‘ಗುರೂಜಿಯವರು ಸಾಕ್ಷಾತ್‌ ತಮ್ಮ ಆಸನದಲ್ಲಿ ವಿರಾಜಮಾನರಾಗಿದ್ದು ನಿನ್ನೆಯ ಪಾಠವನ್ನು ಕಲಿಸುತ್ತಿದ್ದಾರೆ.’ ಅವನಿಗೆ ಗುರುದೇವರ ಧ್ವನಿ ಸ್ಪಷ್ಟವಾಗಿ ಕೇಳ ತೊಡಗಿ ನಿನ್ನೆಯ ಪೂರ್ಣ ಪಾಠ ಅವನ ಕಣ್ಣೆದುರಿಗೆ ಸಾಗಿತು. ಪಾಠ ಮುಗಿದ ಮೇಲೆ ದಯಾನಂದನು ಸ್ನಾನ ಮಾಡಿ ಗುರುದರ್ಶನಕ್ಕಾಗಿ ಹೋದ. ಆಗ ಗುರೂಜಿಗಳು ಅವನಿಗೆ ಕೇಳಿದರು, ‘ಹೇಳು ದಯಾನಂದ, ನಿನಗೆ ನಿನ್ನೆಯ ಪಾಠ ನೆನಪಾಯಿತೇ ?’ ದಯಾನಂದನು ಕೃತಜ್ಞತೆಯ ಧ್ವನಿಯಲ್ಲಿ ಹೇಳಿದನು, ‘ಗುರುದೇವ, ನಿಮ್ಮ ಕೃಪೆಯಿಂದ ನನಗೆ ಎಲ್ಲವೂ ನೆನಪಾಯಿತು.’ ಗುರೂಜಿಯವರು ಪ್ರಸನ್ನರಾಗಿ ತಮ್ಮ ಪ್ರೀತಿಯ ಶಿಷ್ಯನನ್ನು ಹೃದಯಕ್ಕೆ ತಬ್ಬಿಕೊಂಡರು. ಗುರುಗಳ ಬಗ್ಗೆ ಇಂತಹ ಸಮರ್ಪಣಾಭಾವ ಹೊಂದಿದ್ದ ಇದೇ ಬಾಲಕನು ಮುಂದೆ ಆರ್ಯ ಸಮಾಜದ ಸಂಸ್ಥಾಪಕ ‘ಋಷಿ ದಯಾನಂದ ಸರಸ್ವತಿ’ ಎಂಬ ಹೆಸರಿನಿಂದ ಸುಪ್ರಸಿದ್ಧನಾದನು.

(ಸೌಜನ್ಯ : ಮಾಸಿಕ ‘ಲೋಕ ಕಲ್ಯಾಣ ಸೇತು’, ಜೂನ್‌ ೨೦೧೭)

ಋಷಿ ದಯಾನಂದ ಸರಸ್ವತಿ