ನಾವು ಭಯೋತ್ಪಾದನೆಯ ವಿರುದ್ಧ ಭಾರತದೊಂದಿಗೆ ನಿಲ್ಲುತ್ತೇವೆ! – Italian Hindu Union Backs India

ಇಟಲಿಯ ‘ಇಟಾಲಿಯನ್ ಹಿಂದೂ ಯೂನಿಯನ್’ ಸಂಘಟನೆಯ ಘೋಷಣೆ

ಇಟಾಲಿಯನ್ ಹಿಂದೂ ಒಕ್ಕೂಟದ ಅಧ್ಯಕ್ಷೆ ಫ್ರಾಂಕೋ ಡಿ ಮರಿಯಾ ಜಯೇಂದ್ರನಾಥ್ (ಫೋಟೋ ಕೃಪೆ: ANI)

ರೋಮ್ (ಇಟಲಿ) – ಭಾರತದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ನಾವು ಖಂಡಿಸುತ್ತೇವೆ. ನಾವು ಭಯೋತ್ಪಾದನೆಯ ವಿರುದ್ಧ ಭಾರತದೊಂದಿಗೆ ನಿಲ್ಲುತ್ತೇವೆ. ‘ಆಪರೇಷನ್ ಸಿಂದೂರ್’ ಬಗ್ಗೆ ನಾವು ಮೆಚ್ಚುಗೆ ವ್ಯಕ್ತಪಡಿಸುತ್ತೇವೆ. ಭಯೋತ್ಪಾದನೆಯ ವಿರುದ್ಧ ಹೋರಾಡುವುದು ಮತ್ತು ತಮ್ಮ ನಾಗರಿಕರನ್ನು ಸುರಕ್ಷಿತವಾಗಿಡುವುದು ಪ್ರತಿಯೊಂದು ದೇಶದ ಸರಕಾರ ಮತ್ತು ಸೇನೆಯ ಕರ್ತವ್ಯವಾಗಿದೆ ಎಂದು ಇಟಲಿಯ ‘ಇಟಾಲಿಯನ್ ಹಿಂದೂ ಯೂನಿಯನ್’ನ ಅಧ್ಯಕ್ಷ ಫ್ರಾಂಕೋ ಡಿ ಮರಿಯಾ ಜಯೇಂದ್ರನಾಥ್ ಅವರು ಎ.ಎನ್.ಐ. (ಏಷ್ಯನ್ ನ್ಯೂಸ್ ಇಂಟರನ್ಯಾಷನಲ್) ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದರು. ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ನೀಡಲು ಭಾರತದ ನಿಯೋಗವೊಂದು ರೋಮ್‌ ತಲುಪಿದೆ. ಇದನ್ನು ಇಟಾಲಿಯನ್ ಹಿಂದೂ ಯೂನಿಯನ್ ಸ್ವಾಗತಿಸಿತು. ಈ ವೇಳೆ ಜಯೇಂದ್ರನಾಥ್ ಅವರು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಿದ್ದರು.

ಹಿಂದೂ ಧರ್ಮಕ್ಕೆ ಮಾನ್ಯತೆ ದೊರೆತ ಯುರೋಪಿನ ಏಕೈಕ ದೇಶ ಇಟಲಿ!

ಜಯೇಂದ್ರನಾಥ ಅವರು ಮಾತು ಮುಂದುವರೆಸಿ, ಇಟಲಿಯಲ್ಲಿ ಹಿಂದೂ ಧರ್ಮವು ಮಾನ್ಯತೆ ಪಡೆದ ಧರ್ಮವಾಗಿದೆ. ಇಟಲಿಯಲ್ಲಿರುವ 2 ಲಕ್ಷಕ್ಕೂ ಹೆಚ್ಚು ಹಿಂದೂಗಳಾದ ನಾವು ಇಟಲಿಯ ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಈ ಒಪ್ಪಂದದಿಂದಾಗಿ, ನಾವು ದೇಶದಲ್ಲಿ ನಮ್ಮ ಧಾರ್ಮಿಕ ಆಚರಣೆಗಳನ್ನು ನಡೆಸಬಹುದು. ನಮ್ಮ ಧರ್ಮಕ್ಕೆ ಆರ್ಥಿಕವಾಗಿ ಸಹಾಯ ಮಾಡಬಹುದು. ಇತರ ಧರ್ಮದ ಜನರು ತಮ್ಮ ಧರ್ಮಕ್ಕಾಗಿ ದಾನ ಮಾಡುವುದು ಅಥವಾ ತೆರಿಗೆಗಳನ್ನು ಪಾವತಿಸುವಂತೆ, ನಾವು ಸಹ ನಮ್ಮ ಧರ್ಮಕ್ಕೆ ಕೊಡುಗೆ ನೀಡಬಹುದು. ಈ ರೀತಿಯಲ್ಲಿ ಹಿಂದೂ ಧರ್ಮಕ್ಕೆ ಗುರುತಿಸುವಿಕೆ ಮತ್ತು ಮಾನ್ಯತೆ ದೊರೆತ ಯುರೋಪಿನ ಏಕೈಕ ದೇಶ ಇಟಲಿಯಾಗಿದೆ ಎಂದು ಹೇಳಿದರು.