Pakistan PM Statement : ಪ್ರಧಾನಮಂತ್ರಿ ಶಹಬಾಜ್ ಷರೀಫ್ ‘ಭಾರತದ ಪಿತೂರಿಯನ್ನು ವಿಫಲಗೊಳಿಸಿದ್ದಾರಂತೆ

ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) ದೊರೆತ ಸಾಲದ ಕುರಿತು ಪ್ರತಿಕ್ರಿಯೆ ನೀಡಿದ ಪಾಕಿಸ್ತಾನದ ಪ್ರಧಾನಮಂತ್ರಿ ಶಹಬಾಜ್ ಷರೀಫ್ ಅವರು, ಭಾರತವು ಪಾಕಿಸ್ತಾನಕ್ಕೆ ಈ ಸಾಲವು ದೊರೆಯಬಾರದೆಂದು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿತ್ತು; ಆದರೆ ನಾವು ಅವರ ಪಿತೂರಿಯನ್ನು ವಿಫಲಗೊಳಿಸಿದ್ದೇವೆ. ಅಲ್ಲದೆ, IMF ಸಹ ಭಾರತದ ಸುಳ್ಳು ಪ್ರಚಾರವನ್ನು ತಿರಸ್ಕರಿಸಿದೆ. ಈಗ IMF ಪಾಕಿಸ್ತಾನದ ಆರ್ಥಿಕತೆಯನ್ನು ಸ್ಥಿರಗೊಳಿಸಲು ಮತ್ತು ಸುಧಾರಿಸಲು ಸಹಾಯ ಮಾಡುತ್ತದೆ.

ಭಾರತ-ಪಾಕಿಸ್ತಾನ ಸಂಘರ್ಷ ಹೆಚ್ಚಿಸುವುದನ್ನು ತಪ್ಪಿಸಬೇಕು! – ಚೀನಾದ ಕರೆ

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಅವರು ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಪರಿಸ್ಥಿತಿಯ ಕುರಿತು ಪ್ರತಿಕ್ರಿಯಿಸುತ್ತಾ, ಚೀನಾವು ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದರು. ಎರಡು ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ದೇಶಗಳ ನಡುವಿನ ಉದ್ವಿಗ್ನತೆಯನ್ನು ನಿಲ್ಲಿಸುವುದು ಅವಶ್ಯಕವಾಗಿದೆ.

ಭಾರತ ಮತ್ತು ಪಾಕಿಸ್ತಾನ ಸಂಯಮ ಕಾಪಾಡಬೇಕು! – ‘ಜಿ-7’ ರಾಷ್ಟ್ರಗಳು

ಭಾರತ ಮತ್ತು ಪಾಕಿಸ್ತಾನ ಸಂಯಮ ಕಾಪಾಡಬೇಕೆಂದು ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್, ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಜಿ-7 ಗುಂಪಿನ ವಿದೇಶಾಂಗ ಮಂತ್ರಿಗಳು ಕರೆ ನೀಡಿದ್ದಾರೆ. ಅವರು, ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ; ಆದರೆ ಸೈನಿಕ ಉದ್ವಿಗ್ನತೆ ಮತ್ತಷ್ಟು ಹೆಚ್ಚಾದರೆ ಈ ಪ್ರದೇಶದ ಸ್ಥಿರತೆಗೆ ಗಂಭೀರ ಅಪಾಯ ಉಂಟಾಗುತ್ತದೆ. ಎರಡೂ ದೇಶಗಳು ತಕ್ಷಣವೇ ಉದ್ವಿಗ್ನತೆಯನ್ನು ಕಡಿಮೆ ಮಾಡಬೇಕು ಮತ್ತು ನೇರ ಮಾತುಕತೆಯ ಮೂಲಕ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕು. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ತ್ವರಿತ ಮತ್ತು ಶಾಶ್ವತ ರಾಜತಾಂತ್ರಿಕ ಪರಿಹಾರಕ್ಕೆ ನಮ್ಮ ಬೆಂಬಲವನ್ನು ನಾವು ಪುನರುಚ್ಚರಿಸುತ್ತೇವೆ, ಎಂದು ಹೇಳಿದರು.

ಭಾರತದ ದಾಳಿಯಲ್ಲಿ ಹತರಾದ ಕೆಲವು ಭಯೋತ್ಪಾದಕರ ಹೆಸರುಗಳು ಬಹಿರಂಗ

ಭಾರತವು ಮೇ ೭ ರ ರಾತ್ರಿ ಪಾಕಿಸ್ತಾನದ ಭಯೋತ್ಪಾದಕರ ೯ ನೆಲೆಗಳ ಮೇಲೆ ನಡೆಸಿದ ದಾಳಿಯಲ್ಲಿ ಹತರಾದ ಭಯೋತ್ಪಾದಕರ ಹೆಸರುಗಳು ಈಗ ಬಹಿರಂಗವಾಗಿವೆ. ಇದರಲ್ಲಿ ಜೈಶ್-ಎ-ಮೊಹಮ್ಮದ್‌ನ ಮುಖ್ಯಸ್ಥ ಮಸೂದ್ ಅಜರ್‌ನ ಸಹೋದರ ಅಬ್ದುಲ್ ರೌಫ್ ಅಜರ್‌ನಲ್ಲದೆ, ಲಷ್ಕರ್-ಎ-ತೊಯ್ಬಾದ ಕಮಾಂಡರ್ ಅಬು ಜುಂದಾಲ್ ಮತ್ತು ಜೈಶ್‌ನ ಹಾಫಿಜ್ ಮೊಹಮ್ಮದ್ ಜಮೀಲ್ ಸೇರಿದ್ದಾರೆ. ಇದರ ಹೊರತಾಗಿ ಮುದಸ್ಸರ್ ಖಾದಿಯಾನ್ ಖಾಸ್, ಮೊಹಮ್ಮದ್ ಯೂಸುಫ್ ಅಜರ್, ಖಾಲಿದ್ (ಅಬು ಆಕಾಶ) ಮತ್ತು ಮೊಹಮ್ಮದ್ ಹಸನ್ ಖಾನ್ ಸೇರಿದ್ದಾರೆ.

ಯಾವುದೇ ಭಯೋತ್ಪಾದಕ ದಾಳಿಯನ್ನು ಯುದ್ಧವೆಂದು ಪರಿಗಣಿಸಲಾಗುವುದು! – ಭಾರತದ ನಿರ್ಧಾರ

ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಭವಿಷ್ಯದಲ್ಲಿ ನಡೆಯುವ ಯಾವುದೇ ಭಯೋತ್ಪಾದಕ ಕೃತ್ಯವನ್ನು ಭಾರತದ ವಿರುದ್ಧದ ಯುದ್ಧವೆಂದು ಪರಿಗಣಿಸಲಾಗುವುದು ಮತ್ತು ಅದಕ್ಕೆ ಅನುಗುಣವಾಗಿ ಪ್ರತಿಕ್ರಿಯಿಸಲಾಗುವುದು ಎಂದು ಭಾರತ ನಿರ್ಧರಿಸಿದೆ.”