India Attacks Pakistan : ‘ಆಪರೇಷನ್ ಸಿಂಧೂರ್’: ಪಾಕಿಸ್ತಾನದೊಳಗೆ ನುಗ್ಗಿ ಸದೆಬಡಿದ ಭಾರತ !

  • 50ಕ್ಕೂ ಹೆಚ್ಚಿನ ಡ್ರೋನ್‌ಗಳ ನಾಶ

  • 3 ಯುದ್ಧ ವಿಮಾನಗಳ ಧ್ವಂಸ

  • 10 ನಗರಗಳ ಸೇನಾ ನೆಲೆಗಳನ್ನು ಗುರಿ

  • ಕರಾಚಿ ಬಂದರಿನ ನೌಕಾ ನೆಲೆ ಧ್ವಂಸ

  • ಬಂಕರ್‌ನಲ್ಲಿ ಅಡಗಿಕೊಂಡ ಪಾಕಿಸ್ತಾನ ಪ್ರಧಾನಿ

ನವದೆಹಲಿ – ಮೇ 7 ರ ರಾತ್ರಿ ಪಾಕಿಸ್ತಾನವು ಭಾರತದ 15 ಸೇನಾ ನೆಲೆಗಳನ್ನು ಗುರಿಯಾಗಿಸಿ ಹಾರಿಸಿದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಭಾರತದ ವಾಯು ರಕ್ಷಣಾ ವ್ಯವಸ್ಥೆ ‘ಎಸ್-400’ ಆಕಾಶದಲ್ಲೇ ನಾಶಪಡಿಸಿತು. ಅಲ್ಲದೆ, ಮೇ 8 ರ ಬೆಳಿಗ್ಗೆ ಪಾಕಿಸ್ತಾನದ ಕೆಲವು ನಗರಗಳಲ್ಲಿ ಅದರ ‘HQ-9’ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಲಾಯಿತು. ಇದರಿಂದ ಕೆರಳಿದ ಪಾಕಿಸ್ತಾನವು ಮೇ 8 ರ ರಾತ್ರಿ 8 ಗಂಟೆಯ ನಂತರ ಭಾರತದ ಜಮ್ಮು, ಪಂಜಾಬ್ ಮತ್ತು ರಾಜಸ್ಥಾನದ ಮೇಲೆ ಡ್ರೋನ್‌ಗಳು, ಕ್ಷಿಪಣಿಗಳು ಮತ್ತು ಯುದ್ಧ ವಿಮಾನಗಳ ಮೂಲಕ ದಾಳಿ ಮಾಡಿತು; ಆದರೆ ಈ ಬಾರಿಯೂ ಭಾರತದ ವಿವಿಧ ವಾಯು ರಕ್ಷಣಾ ವ್ಯವಸ್ಥೆಗಳಿಂದ ಅವುಗಳನ್ನು ಆಕಾಶದಲ್ಲೇ ನಾಶಪಡಿಸಲಾಯಿತು. ಇದರಲ್ಲಿ 50 ಕ್ಕೂ ಹೆಚ್ಚು ಡ್ರೋನ್‌ಗಳು, 8 ಕ್ಕೂ ಹೆಚ್ಚು ಕ್ಷಿಪಣಿಗಳು ಮತ್ತು 3 ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ. ಇದರಲ್ಲಿ ಅಮೆರಿಕ ನಿರ್ಮಿತ ಒಂದು ‘ಎಫ್-16’ ಯುದ್ಧ ವಿಮಾನ ಮತ್ತು ಚೀನಾ ನಿರ್ಮಿತ 2 ‘ಜೆಎಫ್-17’ ಯುದ್ಧ ವಿಮಾನಗಳು ಸೇರಿವೆ. ಪಾಕಿಸ್ತಾನದ ಈ ದಾಳಿಗಳನ್ನು ವಿಫಲಗೊಳಿಸಿದ ನಂತರ, ಭಾರತವು ಪ್ರತೀಕಾರವಾಗಿ ಪಾಕಿಸ್ತಾನದ ಮೇಲೆ ದಾಳಿ ಮಾಡಿತು. ಭಾರತವು ಗಡಿಯನ್ನು ದಾಟದೆ ಈ ದಾಳಿಗಳನ್ನು ನಡೆಸಿತು.

ಈ ಕಾರ್ಯಾಚರಣೆಯಲ್ಲಿ ಡ್ರೋನ್ ವಿಮಾನಗಳು ಮತ್ತು ಕ್ಷಿಪಣಿಗಳನ್ನು ಬಳಸಲಾಯಿತು. ಇದೇ ಸಮಯದಲ್ಲಿ, ಭಾರತೀಯ ನೌಕಾಪಡೆಯು ಕರಾಚಿ ಬಂದರಿನ ಮೇಲೆ ದಾಳಿ ಮಾಡಿ ಪಾಕಿಸ್ತಾನದ ಬೆನ್ನೆಲುಬು ಮುರಿಯಿತು. ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರು ಸುರಕ್ಷಿತ ಬಂಕರ್‌ಗೆ ಹೋಗಿ ಅಡಗಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನವು ಭಾರತದ ಮೇಲೆ ನಡೆಸಿದ ದಾಳಿಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಭಾರತವು ಪಾಕಿಸ್ತಾನದ ಮೇಲೆ ನಡೆಸಿದ ದಾಳಿಯಲ್ಲಿ ಎಷ್ಟು ಜೀವ ಅಥವಾ ಆಸ್ತಿಪಾಸ್ತಿ ಹಾನಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಮತ್ತೊಂದೆಡೆ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ವಿರುದ್ಧ ಸೈನ್ಯದಲ್ಲಿ ದಂಗೆ ಎದ್ದು ಅವರನ್ನು ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಇನ್ನೂ ದೃಢೀಕರಣ ಸಿಕ್ಕಿಲ್ಲ.

ಭಾರತದ ವಾಯು ರಕ್ಷಣಾ ವ್ಯವಸ್ಥೆ ‘S-400’

ಪಾಕಿಸ್ತಾನವು ಗುರಿಯಾಗಿಸಲು ಪ್ರಯತ್ನಿಸಿದ ಭಾರತೀಯ ಸ್ಥಳಗಳು

  • ಜಮ್ಮು ಮತ್ತು ಕಾಶ್ಮೀರ: ಅವಂತಿಪುರ, ಶ್ರೀನಗರ, ಜಮ್ಮು, ಸತ್ವರಿ, ಸಾಂಬಾ, ಆರ್.ಎಸ್. ಪುರ, ಅರ್ನಿಯಾ
  • ಪಂಜಾಬ್: ಪಠಾಣ್‌ಕೋಟ್, ಅಮೃತಸರ, ಕಪುರ್ತಲಾ, ಜಲಂಧರ್, ಲೂಧಿಯಾನ, ಆದಂಪುರ,ಭಟಿಂಡಾ,ಚಂಡೀಗಢ
  • ಗುಜರಾತ್: ಪಾಲೋಡಿಯಾ
  • ರಾಜಸ್ಥಾನ: ಉತ್ತರಲೈ, ಭುಜ್

ಭಾರತವು ದಾಳಿ ಮಾಡಿದ ಪಾಕಿಸ್ತಾನದ ನಗರಗಳು

  • ಇಸ್ಲಾಮಾಬಾದ್
  • ಲಾಹೋರ್
  • ಕರಾಚಿ
  • ರಾವಲ್ಪಿಂಡಿ
  • ಮುಜಫ್ಫರಾಬಾದ
  • ಸಿಯಾಲ್ಕೋಟ್
  • ಬಹಾವಲ್ಪುರ

ಪಾಕಿಸ್ತಾನದಿಂದ ಭಾರತದ ಸೇನಾ ನೆಲೆಗಳನ್ನು ಗುರಿಯಾಗಿಸುವ ಪ್ರಯತ್ನ

ಪಾಕಿಸ್ತಾನವು ಮುಖ್ಯವಾಗಿ ಜಮ್ಮು ವಿಮಾನ ನಿಲ್ದಾಣ, ಅಲ್ಲಿನ ವಾಯುಪಡೆಯ ನೆಲೆ ಹಾಗೂ ಪಠಾಣ್‌ಕೋಟ್ ಮತ್ತು ಜೈಸಲ್ಮೇರ್‌ನ ನೆಲೆಗಳನ್ನು ಗುರಿಯಾಗಿಸಿತ್ತು. ಜಮ್ಮುವಿನ ಸತ್ವರಿ, ಸಾಂಬಾ, ಆರ್.ಎಸ್. ಪುರ ಮತ್ತು ಅರ್ನಿಯಾ ಪ್ರದೇಶಗಳನ್ನು ಗುರಿಯಾಗಿಸಲಾಯಿತು. ಇಲ್ಲಿ ಮೇ 9 ರ ಬೆಳಿಗ್ಗೆಯೂ ಪಾಕಿಸ್ತಾನದಿಂದ ಗುಂಡಿನ ದಾಳಿ ಮತ್ತು ಮೊರ್ಟರ್‌ಗಳ ದಾಳಿ ಮುಂದುವರೆದಿತ್ತು. ಇದಕ್ಕೆ ಭಾರತೀಯ ಸೈನ್ಯವು ತಕ್ಕ ಪ್ರತ್ಯುತ್ತರ ನೀಡುತ್ತಿತ್ತು. ಇದರಲ್ಲಿ ಪಾಕಿಸ್ತಾನದ ಸೈನ್ಯದ ಕೆಲವು ನೆಲೆಗಳನ್ನು ಧ್ವಂಸಗೊಳಿಸಲಾಗಿದೆ ಎಂಬ ವರದಿಗಳಿವೆ. ಪಾಕಿಸ್ತಾನದಿಂದ ದಾಳಿ ನಡೆದ ನಂತರ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಗುಜರಾತ್ ರಾಜ್ಯಗಳ ಗಡಿ ಭಾಗದ ನಗರಗಳಲ್ಲಿ ‘ಬ್ಲ್ಯಾಕ್‌ಔಟ್’ ಮಾಡಲಾಗಿತ್ತು. ಭಾರತವು ಆಕಾಶದಲ್ಲೇ ನಾಶಪಡಿಸಿದ ಪಾಕಿಸ್ತಾನದ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಅವಶೇಷಗಳು ಈ ರಾಜ್ಯಗಳ ಗಡಿ ಭಾಗಗಳಲ್ಲಿ ಬಿದ್ದವು. ಬೆಳಿಗ್ಗೆ ಪೊಲೀಸರು ಮತ್ತು ಸೈನ್ಯದಿಂದ ಅವುಗಳನ್ನು ವಶಪಡಿಸಿಕೊಳ್ಳಲಾಯಿತು.

ಸಂಬಾ ವಲಯದಲ್ಲಿ ನುಸುಳಲು ಯತ್ನಿಸಿದ 7 ಭಯೋತ್ಪಾದಕರು ಹತ

ಜಮ್ಮುವಿನ ಸಾಂಬಾ ವಲಯದಿಂದ ಮೇ 8 ರ ರಾತ್ರಿ ಭಾರತಕ್ಕೆ ನುಸುಳಲು ಯತ್ನಿಸಿದ ಜೈಶ್-ಎ-ಮೊಹಮ್ಮದ್ ಜಿಹಾದಿ ಭಯೋತ್ಪಾದಕ ಸಂಘಟನೆಯ 7 ಭಯೋತ್ಪಾದಕರನ್ನು ಗಡಿ ಭದ್ರತಾ ಪಡೆ ಹತ್ಯೆ ಮಾಡಿತು. ಈ ಸಂದರ್ಭದಲ್ಲಿ, ಗಡಿ ಭದ್ರತಾ ಪಡೆ ಪಾಕಿಸ್ತಾನದ ಸೈನ್ಯದ ಗಡಿ ಚೌಕಿಗೆ ಭಾರಿ ಹಾನಿ ಉಂಟುಮಾಡಿತು. ಈ ಚೌಕಿಯಿಂದ ಭಯೋತ್ಪಾದಕರು ನುಸುಳಲು ಅನುಕೂಲವಾಗುವಂತೆ ಗುಂಡಿನ ದಾಳಿ ನಡೆಸಲಾಗುತ್ತಿತ್ತು.

  • ‘ನಾವು ಏನೂ ಮಾಡಿಲ್ಲ!’ – ಪಾಕಿಸ್ತಾನದ ಅಳಲು

  • ಭಾರತೀಯ ಸೇನೆಯಿಂದ ಸಾಕ್ಷ್ಯಗಳನ್ನು ನೀಡಿ ಪಾಕಿಸ್ತಾನಕ್ಕೆ ತಿರುಗೇಟು!

ಭಾರತದ ಮೇಲಿನ ಡ್ರೋನ್ ದಾಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಪಾಕಿಸ್ತಾನ ಹೇಳಿಕೊಂಡ ನಂತರ, ಭಾರತೀಯ ಸೇನೆಯು ‘ಎಕ್ಸ್’ ನಲ್ಲಿ ಸಾಕ್ಷ್ಯಗಳನ್ನು ಪ್ರಸ್ತುತಪಡಿಸಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿತು. ಈ ಸಂದರ್ಭದಲ್ಲಿ, ಸೇನೆಯು ಪಾಕಿಸ್ತಾನದ ಡ್ರೋನ್ ಅನ್ನು ಆಕಾಶದಲ್ಲಿ ನಾಶಪಡಿಸುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದೆ. ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನದ ಸೈನ್ಯವು ಹಲವು ಕಡೆ ಕದನ ವಿರಾಮ ಉಲ್ಲಂಘಿಸಿದೆ ಎಂದು ಸೇನೆ ಹೇಳಿದೆ. ಪಾಕಿಸ್ತಾನದ ಡ್ರೋನ್ ದಾಳಿಗಳನ್ನು ಭಾರತವು ಯಶಸ್ವಿಯಾಗಿ ವಿಫಲಗೊಳಿಸಿದೆ ಮತ್ತು ಕದನ ವಿರಾಮ ಉಲ್ಲಂಘನೆಗೆ ತಕ್ಕ ಪ್ರತ್ಯುತ್ತರ ನೀಡಲಾಗಿದೆ. ಭಾರತದ ಸಾರ್ವಭೌಮತ್ವ ಮತ್ತು ಭೌಗೋಳಿಕ ಏಕತೆಯನ್ನು ರಕ್ಷಿಸಲು ಭಾರತೀಯ ಸೇನೆ ಬದ್ಧವಾಗಿದೆ. ಅದರ ಮೇಲೆ ದಾಳಿ ಮಾಡುವ ಯಾವುದೇ ದುಸ್ಸಾಹಸಕ್ಕೆ ಸಂಪೂರ್ಣ ಶಕ್ತಿಯಿಂದ ಉತ್ತರಿಸಲಾಗುವುದು ಎಂದು ಭಾರತೀಯ ಸೇನೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.

ಕರಾಚಿ ಮೇಲಿನ ದಾಳಿಯಲ್ಲಿ ವಿಮಾನವಾಹಕ ನೌಕೆ ‘ಐಎನ್ಎಸ್ ವಿಕ್ರಾಂತ್’ ನ ಭಾಗವಹಿಸುವಿಕೆ

ವಿಮಾನವಾಹಕ ನೌಕೆ ‘ಐಎನ್ಎಸ್’ ವಿಕ್ರಾಂತ್’

ಭಾರತೀಯ ನೌಕಾಪಡೆಯು ಮೇ 8 ರ ರಾತ್ರಿ ಪಾಕಿಸ್ತಾನದ ಆರ್ಥಿಕ ರಾಜಧಾನಿ ಕರಾಚಿ ಬಂದರಿನ ಮೇಲೆ ದಾಳಿ ಮಾಡಿತು. ಇದರಲ್ಲಿ ಕರಾಚಿ ಬಂದರಿಗೆ ಭಾರಿ ಹಾನಿ ಸಂಭವಿಸಿದೆ, ಮತ್ತು ಅಲ್ಲಿನ ಪಾಕಿಸ್ತಾನದ ನೌಕಾ ನೆಲೆಯನ್ನು ಧ್ವಂಸಗೊಳಿಸಲಾಗಿದೆ. 100 ಕಿ.ಮೀ ದೂರದಿಂದಲೇ ಕ್ಷಿಪಣಿಗಳನ್ನು ಹಾರಿಸಿ ಈ ಕಾರ್ಯಾಚರಣೆ ನಡೆಸಲಾಯಿತು. ಈ ದಾಳಿಯಲ್ಲಿ ಪಾಕಿಸ್ತಾನದ ಯುದ್ಧ ಸಾಮಗ್ರಿಗಳಿಗೆ ಭಾರಿ ಹಾನಿ ಸಂಭವಿಸಿದೆ. ಅಲ್ಲದೆ, ಇಂಧನ ಡಿಪೋಗೆ ಬೆಂಕಿ ಹೊತ್ತಿಕೊಂಡು ದೊಡ್ಡ ಸ್ಫೋಟಗಳು ಸಂಭವಿಸಿದವು. ಅಲ್ಲಿನ ಸಂಪರ್ಕ ವ್ಯವಸ್ಥೆ ನಾಶವಾಗಿದೆ. ಇದರಿಂದ ಕರಾಚಿ ಮತ್ತು ಇಸ್ಲಾಮಾಬಾದ್ ನಗರಗಳ ಸಂಪರ್ಕ ಕಡಿತಗೊಂಡಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.