೧. ಉತ್ಪತ್ತಿ : ಆಭರಣವೆಂದರೆ ಆಭೂಷಣ. ‘ಆಭೂಷಣ’ ಶಬ್ದಕ್ಕೆ ಸಂಬಂಧಿಸಿದ ‘ಆಭರಣ’ ಎಂಬ ಶಬ್ದವು ‘ಭೃ’ (ಭರ್) ಎಂಬ ಧಾತುವಿನಿಂದಾಗಿದೆ. ಇದರ ಅರ್ಥವು ‘ಶರೀರದ ಮೇಲೆ ಇಡುವುದು, ಇಟ್ಟುಕೊಳ್ಳುವುದು ಅಥವಾ ಏರಿಸುವುದು’ ಎಂದಾಗಿದೆ. (೧)
೨ . ಅರ್ಥ
ಅ. ಋಗ್ವೇದಕ್ಕನುಸಾರ : ಋಗ್ವೇದದಲ್ಲಿ ‘ಆಭೂಷಣ’ ಎಂಬ ಶಬ್ದವನ್ನು ‘ಶಕ್ತಿದಾತ್ರಿ (ಶಕ್ತಿದಾಯಕ) ವಸ್ತುವನ್ನು ತರುವುದು’ ಎಂಬ ಅರ್ಥದಲ್ಲಿ ಉಪಯೋಗಿಸಲಾಗಿದೆ.
ಆ. ಅಥರ್ವವೇದಕ್ಕನುಸಾರ : ಅಥರ್ವವೇದದಲ್ಲಿ ‘ಆಭೂಷಣ’ ಎಂಬ ಶಬ್ದವನ್ನು ಮಂತ್ರಸಾಮರ್ಥ್ಯ ಅಥವಾ ಮಂತ್ರಶಕ್ತಿಯಿಂದ ತುಂಬಿದ ವಸ್ತು ಎಂಬ ಅರ್ಥದಲ್ಲಿ ನೀಡಲಾಗಿದೆ.
ಇ. ಈಶ್ವರನು ಮನುಷ್ಯನಿಗೆ ನೀಡಿದ ಸ್ಥೂಲರೂಪವನ್ನು ಹೊರಗಿನಿಂದ ಅಲಂಕರಿಸುವ ಮಾಧ್ಯಮವೆಂದರೆ ಆಭರಣ.
ಈ. ‘ಆಭರಣ’ ಎಂದರೆ ಈಶ್ವರನ ತೇಜರೂಪೀ ಸಗುಣತೆಯನ್ನು ಧರಿಸುವುದು, ಆದುದರಿಂದ ‘ಆಭರಣಗಳನ್ನು ಹಾಕಿಕೊಳ್ಳುವುದು’ ಎಂದು ಹೇಳದೇ, ‘ಆಭರಣಗಳನ್ನು ಧರಿಸುವುದು’ ಎಂದು ಹೇಳುತ್ತಾರೆ. ತೇಜದ ಸಗುಣ ಕಲಾತ್ಮಕ ದರ್ಶನವೆಂದರೆ ಆಭರಣ.
ಆಭರಣಗಳ ನಿರ್ಮಿತಿ
ಮೂಲ ಬ್ರಹ್ಮನಿಂದ ಪ್ರಕಟವಾದ ಶ್ರೀವಿಷ್ಣುರೂಪೀ ಬಿಂದುವಿನಿಂದ ಅವನಿಗೆ ಆವಶ್ಯಕವಿರುವ ಶಕ್ತಿಯು, ಅಂದರೆ ಶ್ರೀ ಲಕ್ಷ್ಮೀತತ್ತ್ವವು ಕಾರ್ಯವನ್ನು ಮಾಡಲು ಪ್ರಾರಂಭಿಸಿತು. ಶ್ರೀವಿಷ್ಣುವಿನ ಅವ್ಯಕ್ತ ಇಚ್ಛಾಶಕ್ತಿಯಿಂದ ಪ್ರಕಟವಾದ ಈ ಬಿಂದುವಿನಲ್ಲಿ ವಿವಿಧ ಶಕ್ತಿಗಳು ಒಟ್ಟಾಗಿ ಶ್ರೀ ಲಕ್ಷ್ಮೀಯು ವ್ಯಕ್ತರೂಪದಲ್ಲಿ ಕಾರ್ಯವನ್ನು ಮಾಡತೊಡಗಿದಾಗ ಆಭರಣಗಳು ರೂಪುಗೊಂಡವು. ಶ್ರೀವಿಷ್ಣುವಿನ ಅವ್ಯಕ್ತಭಾವ ಮತ್ತು ಶ್ರೀ ಲಕ್ಷ್ಮೀಯ ವ್ಯಕ್ತಭಾವ ಇವುಗಳಿಂದ ಕಾರ್ಯವನ್ನು ಮಾಡುವ ಈ ವಿವಿಧ ಶಕ್ತಿಗಳ ಪ್ರತೀಕವೆಂದರೆ ಆಭರಣಗಳು.
ವ್ಯಕ್ತಿತ್ವಕ್ಕನುಸಾರ ಆಭರಣಗಳ ಆಯ್ಕೆ
ವ್ಯಕ್ತಿಯು ತನ್ನ ವ್ಯಕ್ತಿತ್ವಕ್ಕೆ ಪೂರಕವಾಗಿರುವ ಆಭರಣಗಳ ಆಯ್ಕೆಯನ್ನು ಮಾಡುತ್ತಾನೆ. ಸಾತ್ತ್ವಿಕ ವ್ಯಕ್ತಿಗಳು ಸಾತ್ತ್ವಿಕ ಆಭರಣ, ರಾಜಸಿಕ ವ್ಯಕ್ತಿಗಳು ರಾಜಸಿಕ ಆಭರಣ ಮತ್ತು ತಾಮಸಿಕ ವ್ಯಕ್ತಿಗಳು ತಾಮಸಿಕ ಆಭರಣಗಳ ಆಯ್ಕೆಯನ್ನು ಮಾಡುತ್ತಾರೆ. ಸಾತ್ತ್ವಿಕ ಆಭರಣಗಳನ್ನು ನೋಡಿದರೆ ಭಾವ, ಚೈತನ್ಯ, ಆನಂದ ಅಥವಾ ಶಾಂತಿಯ ಅನುಭೂತಿಗಳು ಬರುತ್ತವೆ. ರಾಜಸಿಕ ಆಭರಣಗಳನ್ನು ನೋಡಿದರೆ ಶಕ್ತಿಯ ಅನುಭೂತಿಯು ಬರುತ್ತದೆ ಮತ್ತು ತಾಮಸಿಕ ಆಭರಣಗಳನ್ನು ನೋಡಿದರೆ ತೊಂದರೆಯಾಗುತ್ತದೆ.
– (ಪರಾತ್ಪರ ಗುರು) ಡಾ. ಜಯಂತ ಆಠವಲೆ
(ಸನಾತನ ನಿರ್ಮಿತ ಗ್ರಂಥ ‘ಆಭರಣಗಳ ಮಹತ್ವ’)