Pakistan’s Minorities Not Safe: ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಅಸುರಕ್ಷಿತರಾಗಿದ್ದಾರೆ !

ಪಾಕಿಸ್ತಾನದ ರಕ್ಷಣಾಮಂತ್ರಿ ಖ್ವಾಜಾ ಆಸಿಫರವರ ಸ್ವೀಕೃತಿ !

ಪಾಕಿಸ್ತಾನದ ರಕ್ಷಣಾಮಂತ್ರಿ ಖ್ವಾಜಾ ಆಸಿಫ

ಇಸ್ಲಾಮಾಬಾದ (ಪಾಕಿಸ್ತಾನ) – `ಪಾಕಿಸ್ತಾನದಲ್ಲಿ ಪ್ರತಿದಿನ ಅಲ್ಪಸಂಖ್ಯಾತರ ಹತ್ಯೆ ನಡೆಯುತ್ತಿದೆ. ಪಾಕಿಸ್ತಾನದಲ್ಲಿ ಯಾವುದೇ ಧಾರ್ಮಿಕ ಅಲ್ಪಸಂಖ್ಯಾತರು ಸುರಕ್ಷಿತವಾಗಿಲ್ಲ. ಮುಸಲ್ಮಾನರ ಸಣ್ಣ ಪಂಗಡಗಳೂ ಸುರಕ್ಷಿತವಾಗಿಲ್ಲ’ ಎಂಬುದನ್ನು ಪಾಕಿಸ್ತಾನದ ರಕ್ಷಣಾಮಂತ್ರಿ ಖ್ವಾಜಾ ಆಸಿಫರವರು ಒಪ್ಪಿಕೊಂಡಿದ್ದಾರೆ. ಪ್ರಧಾನಿ ಶಹಬಾಜ ಷರೀಫರವರ ಸರಕಾರವು ಸಂಸತ್ತಿನಲ್ಲಿ ಧರ್ಮನಿಂದೆಯ (ಕುರಾನ ಮತ್ತು ಮಹಮ್ಮದ ಪೈಗಂಬರರ ಅವಮಾನ) ಆರೋಪಗಳಿಗೆ ಸಂಬಂಧಿಸಿದ ಘಟನೆಗಳಲ್ಲಿ ಗುಂಪುಗಳಿಂದ ಆಗುವ ಸಂಬಂಧಿತರ ಹತ್ಯೆಯ ಇತ್ತೀಚಿನ ಘಟನೆಗಳನ್ನು ನಿಷೇಧಿಸುವ ಠರಾವನ್ನು ಮಂಡಿಸಲು ಪ್ರಯತ್ನಿಸಿತು. ಆ ಸಂದರ್ಭದಲ್ಲಿ ಆಸಿಫರವರು ಮಾತನಾಡುತ್ತಿದ್ದರು. ‘ಬಹಳಷ್ಟು ಸಂತ್ರಸ್ತರಿಗೆ ಧರ್ಮನಿಂದೆಯ ಆರೋಪದೊಂದಿಗೆ ಯಾವುದೇ ಸಂಬಂಧವಿರುವುದಿಲ್ಲ; ಆದರೆ ವೈಯಕ್ತಿಕ ದ್ವೇಷಗಳಿಂದಾಗಿ, ಅವರನ್ನು ಗುರಿ ಮಾಡಲಾಗಿದೆ’, ಎಂದೂ ಅವರು ಆರೋಪಿಸಿದರು.

1. ಖ್ವಾಜಾ ಆಸಿಫರವರು ಮುಂದುವರಿದು, ನಾವು ನಮ್ಮ ಅಲ್ಪಸಂಖ್ಯಾತ ಸಹೋದರರ ಸಂರಕ್ಷಣೆ ಮಾಡಬೇಕು. ಅವರಿಗೂ ಈ ದೇಶದಲ್ಲಿ ಬದುಕಲು ಬಹುಸಂಖ್ಯಾತರಷ್ಟೇ ಸಮಾನ ಹಕ್ಕುಗಳಿವೆ. ಪಾಕಿಸ್ತಾನವು ಎಲ್ಲಾ ಪಾಕಿಸ್ತಾನಿ ಜನರದ್ದಾಗಿದೆ, ಅವರು ಮುಸಲ್ಮಾನ, ಕ್ರೈಸ್ತ, ಸಿಖ್ಖ ಅಥವಾ ಇತರ ಯಾವುದೇ ಧರ್ಮದವರಾಗಿರಬಹುದು. ನಮ್ಮ ಸಂವಿಧಾನವು ಅಲ್ಪಸಂಖ್ಯಾತರಿಗೆ ಸಂಪೂರ್ಣ ರಕ್ಷಣೆ ನೀಡಲು ಬದ್ಧವಾಗಿದೆ. (ಹೀಗಿರುವಾಗ ಇಲ್ಲಿಯವರೆಗಿನ ಆಡಳಿತಗಾರರು ಅದರಂತೆ ಏಕೆ ನಡೆದುಕೊಳ್ಳಲಿಲ್ಲ ಎಂಬುದನ್ನು ಆಸಿಫರವರು ಹೇಳುವರೇ ? – ಸಂಪಾದಕರು)

2. ಮಾಜಿ ಪ್ರಧಾನಿ ಇಮ್ರಾನ ಖಾನರವರ ಪಕ್ಷವಾದ ಪಾಕಿಸ್ತಾನ ತಹರೀಕ-ಎ-ಇನ್ಸಾಫ (ಪಿಟಿಐ) ಪಕ್ಷವು ತೀವ್ರವಾಗಿ ವಿರೋಧಿಸಿದ್ದರಿಂದ ಪಾಕಿಸ್ತಾನ ಸರಕಾರವು ಧರ್ಮನಿಂದೆಯ ಠರಾವನ್ನು ಮಂಡಿಸಲು ಸಾಧ್ಯವಾಗಲಿಲ್ಲ ಎಂದು ಖ್ವಾಜಾ ಆಸಿಫರವರು ಹೇಳಿದ್ದಾರೆ.

ಪಾಕಿಸ್ತಾನದ ಧರ್ಮನಿಂದೆಯ ಕಾನೂನು ವಿಶ್ವದ ಅತ್ಯಂತ ಕಠೋರ ಕಾನೂನು ಆಗಿದೆ !

ಪಾಕಿಸ್ತಾನದ ಧರ್ಮನಿಂದೆಯ ಕಾನೂನು ಜಗತ್ತಿನ ಅತ್ಯಂತ ಕಠೋರವಾದ ಕಾನೂನು ಆಗಿದ್ದು ಇದರಿಂದ ದೇಶದ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಗಂಭೀರ ಪರಿಣಾಮಗಳಾಗುತ್ತಿವೆ. ಪಾಕಿಸ್ತಾನದ ದಂಡ ಸಂಹಿತೆಯಲ್ಲಿರುವ ಈ ಕಾನೂನು ಇಸ್ಲಾಂ, ಮಹಮ್ಮದ ಪೈಗಂಬರ ಮತ್ತು ಕುರಾನನ್ನು ಅವಮಾನಿಸುವವರಿಗೆ ಮರಣದಂಡನೆಯೊಂದಿಗೆ ಕಠಿಣ ಶಿಕ್ಷೆ ನೀಡುತ್ತದೆ.

ಪಾಕಿಸ್ತಾನದ ‘ಡಾನ್’ ದಿನಪತ್ರಿಕೆಯಲ್ಲಿ ಕ್ರೈಸ್ತರು, ಸಿಖ್ಖರು ಮತ್ತು ಹಿಂದೂಗಳು ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರಿಗೆ ಧರ್ಮನಿಂದೆಯ ಕಾನೂನಿನ ಅಡಿಯಲ್ಲಿ ತಾರತಮ್ಯದಿಂದ ಆರೋಪಿಗಳು ಅಥವಾ ದೋಷಿಗಳು ಎಂದು ನಿರ್ಧರಿಸಲಾಗುತ್ತದೆ, ಎಂದು ಹೇಳಲಾಗಿದೆ. ಮುಸಲ್ಮಾನರಲ್ಲಿ ಅಲ್ಪಸಂಖ್ಯಾತ ಪಂಗಡವಾಗಿರುವ ಅಹ್ಮದೀಯ ಮುಸಲ್ಮಾನರಿಗೂ ಈ ಕಿರುಕುಳವನ್ನು ಅನುಭವಿಸಬೇಕಾಗುತ್ತಿದೆ, ಏಕೆಂದರೆ ಪಾಕಿಸ್ತಾನದ ಸಂವಿಧಾನದಲ್ಲಿ ಅವರನ್ನು ಮುಸಲ್ಮಾನರೆಂದು ಪರಿಗಣಿಸಲಾಗುವುದಿಲ್ಲ. ಮೇ 25 ರಂದು ಸರಗೋಧಾ ನಗರದಲ್ಲಿ ಓರ್ವ ಕ್ರೈಸ್ತ ವ್ಯಕ್ತಿಯನ್ನು ಥಳಿಸಿ ಆತನ ಮನೆಗೆ ಬೆಂಕಿ ಹಚ್ಚಲಾಗಿತ್ತು. ಈ ಕಿರುಕುಳವು ಕೇವಲ ಧರ್ಮನಿಂದೆಯ ಆರೋಪಕ್ಕೆ ಸೀಮಿತವಾಗಿಲ್ಲ. ಹಿಂದೂ ಮತ್ತು ಸಿಖ್ಖ ಅಲ್ಪಸಂಖ್ಯಾತರಿಗೆ, ವಿಶೇಷವಾಗಿ ಸಿಂಧ ಪ್ರದೇಶದ ಅಲ್ಪಸಂಖ್ಯಾತರಿಗೆ ಸಾಮಾಜಿಕ ತಾರತಮ್ಯವನ್ನು ಎದುರಿಸಬೇಕಾಗುತ್ತಿದೆ ಮತ್ತು ಅವರ ಹೆಣ್ಣುಮಕ್ಕಳನ್ನು ಅನೇಕ ಬಾರಿ ಅಪಹರಿಸಲಾಗುತ್ತದೆ, ಅಲ್ಲದೇ ಅವರನ್ನು ಮತಾಂತರಗೊಳಿಸಿ ಮುಸಲ್ಮಾನ ಪುರುಷರೊಂದಿಗೆ ಅವರ ವಿವಾಹ ಮಾಡಿಸಲಾಗುತ್ತದೆ.

ಸಂಪಾದಕೀಯ ನಿಲುವು

** ಪಾಕಿಸ್ತಾನದ ರಕ್ಷಣಾ ಸಚಿವರ ಈ ಹೇಳಿಕೆಯ ಕುರಿತು ಅಂತರಾಷ್ಟ್ರೀಯ ಮಾನವಾಧಿಕಾರ ಸಂಘಟನೆಗಳು, ವಿಶೇಷವಾಗಿ ಅಮೇರಿಕಾ ಮತ್ತು ಯುರೋಪಿನ ಸಂಘಟನೆಗಳು ಏಕೆ ಸುಮ್ಮನಿವೆ ? ಅವರು ಇಷ್ಟು ವರ್ಷಗಳ ವರೆಗೆ ಇಂತಹ ಪ್ರಕರಣಗಳ ವಿಷಯದಲ್ಲಿ ಏಕೆ ಕ್ರಮ ಕೈಕೊಂಡಿಲ್ಲ ?

** ‘ಭಾರತದಲ್ಲಿರುವ ಮುಸಲ್ಮಾನರು ಅಸುರಕ್ಷಿತರಾಗಿದ್ದಾರೆ’ ಎಂದು ಕೂಗಾಡುವವರನ್ನು ಬೆಂಬಲಿಸುವ ಅಂತರರಾಷ್ಟ್ರೀಯ ಮತ್ತು ಭಾರತದಲ್ಲಿನ ಸಮುದಾಯ ಈಗಲಾದರೂ ಈ ಬಗ್ಗೆ ಮಾತನಾಡುವುದೇ ?

** 1947 ರ ವಿಭಜನೆಯ ಸಮಯದಲ್ಲಿ, ಪಾಕಿಸ್ತಾನದಲ್ಲಿ ಹಿಂದೂಗಳ ಜನಸಂಖ್ಯೆಯು ಶೇ. 9 ರಷ್ಟಿತ್ತು, ಈಗ ಅದು ಶೇ. 1 ಕ್ಕಿಂತ ಕಡಿಮೆಯಿದೆ. ಈ ಬಗ್ಗೆ ಇದುವರೆಗೂ ಯಾರೂ ಏನನ್ನೂ ಹೇಳುತ್ತಿಲ್ಲ, ಇದು ಅಲ್ಲಿನ ಹಿಂದೂಗಳ ದುರ್ದೈವವೇ ಆಗಿದೆ.