ಶ್ರೀರಾಮನವಮಿಯ ನಿಮಿತ್ತ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಶುಭಸಂದೇಶ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

ಸಾಧಕರೇ, ‘ಸಮರ್ಪಣಾಭಾವ’ ಹೆಚ್ಚಿಸಿ ಶ್ರೀರಾಮಸ್ವರೂಪ ಗುರುಗಳ ಅವತಾರೀ ಕಾರ್ಯದಲ್ಲಿ ಸಮರ್ಪಿತರಾಗಿ ಅವರ ಆಜ್ಞೆ ಪಾಲಿಸಿ ತಮ್ಮನ್ನು ಉದ್ಧರಿಸಿಕೊಳ್ಳಿ  !

‘೧೭ ಏಪ್ರಿಲ್‌ ೨೦೨೪ ರಂದು ಶ್ರೀರಾಮ ನವಮಿ ಇದೆ. ಅದರ ನಿಮಿತ್ತ ಆದರ್ಶವಾದ ರಾಮ ರಾಜ್ಯದ ಸಂಸ್ಥಾಪಕನಾಗಿರುವ ಪ್ರಭು ಶ್ರೀರಾಮಚಂದ್ರನ ದೈವೀ ಗುಣಸಂಪತ್ತನ್ನು ಭಕ್ತಿಮಯವಾಗಿ ಅವಲೋಕಿಸುವಾಗ ನನಗೆ ರಾಮಾಯಣ ಕಾಲದ ಮುಂದಿನ ಪ್ರಸಂಗ ನೆನಪಾಯಿತು, ‘ರಾಮಸೇತುವೆಯ ನಿರ್ಮಾಣಕಾರ್ಯ ನಡೆಯುತ್ತಿರುವಾಗ ಪ್ರಭು ಶ್ರೀರಾಮನು ಸಮುದ್ರತೀರದಲ್ಲಿ ಶಿವಲಿಂಗವನ್ನು ಸ್ಥಾಪಿಸಿದನು. ‘ರಾವಣನನ್ನು ವಧಿಸಿ ಲಂಕೆಯಿಂದ ಸೀತೆಯನ್ನು ಕರೆತರಲು ಯಶಸ್ಸು ಸಿಗಬೇಕು’, ಎಂಬ ಉದ್ದೇಶದಿಂದ ಶ್ರೀರಾಮನು ಶಿವಶಂಕರನ ಆರಾಧನೆಯನ್ನು ಮಾಡಿದನು.

ಶ್ರೀರಾಮನ ಈ ಆರಾಧನೆಗೆ ಪ್ರಸನ್ನಗೊಂಡು ಭಗವಾನ ಶಿವ ಶಂಕರನು ಅವನ ಮುಂದೆ ಪ್ರತ್ಯಕ್ಷನಾದನು. ಈ ಕಾರ್ಯವನ್ನು ಪೂರ್ಣಗೊಳಿಸಲು ಭಗವಾನ ಶಿವನಲ್ಲಿ ಪ್ರಾರ್ಥನೆಯನ್ನು ಮಾಡುವಾಗ ಭಕ್ತವತ್ಸಲ ಪ್ರಭು ಶ್ರೀರಾಮನು ‘ಈ ಕಾರ್ಯದಲ್ಲಿ ನನಗೆ ಸಹಾಯ ಮಾಡಿದ ಎಲ್ಲ ವಾನರರಿಗೂ ಭಗವದ್ಭಕ್ತಿಯ ವರದಾನವು ಪ್ರಾಪ್ತವಾಗಬೇಕು,’ ಎಂದು ಕೇಳಿಕೊಂಡನು.

ಶ್ರೀರಾಮನ ಈ ಪ್ರಾರ್ಥನೆಯಿಂದ ವಾನರರ ಮೇಲೆ ಅವನಿಗಿರುವ ಅಪಾರ ಪ್ರೀತಿಯನ್ನು ನಾವು ಅನುಭವಿಸಬಹುದು. ನಿಜ ಹೇಳಬೇಕಾದರೆ ಚಿರಂತನ ಭಕ್ತಿಯು ವರದಾನದಿಂದ ದೊರಕುವುದಿಲ್ಲ, ಅದು ಅಂತಃಕರಣದಲ್ಲಿ ಉತ್ಪನ್ನವಾಗಲು ಚಿತ್ತಶುದ್ಧಿ ಆಗುವುದು ಆವಶ್ಯಕವಾಗಿರುತ್ತದೆ. ಈ ಚಿತ್ತಶುದ್ಧಿಯೂ ಕಠೋರ ತಪಶ್ಚರ್ಯ ಮತ್ತು ಪ್ರಯತ್ನಗಳ ಪರಾಕಾಷ್ಠೆಯಿಂದಲೇ ಸಾಧ್ಯವಾಗುತ್ತದೆ. ಹೀಗಿರುವಾಗಲೂ ಕೃಪಾಳು ಶ್ರೀರಾಮನು ವಾನರಿಗಾಗಿ ಭಕ್ತಿಯ ವರದಾನವನ್ನು ಬೇಡುವುದರ ಹಿಂದೆ ಈ ಕಾರಣಗಳಿದ್ದವು.

೧. ವಾನರರು ಶ್ರೀರಾಮನ ಕಾರ್ಯದಲ್ಲಿ ತಮ್ಮನ್ನು ಸಂಪೂರ್ಣ ಸಮರ್ಪಿಸಿಕೊಂಡು ಶ್ರಮಪಟ್ಟು ಶ್ರೀರಾಮನ ಸೇವೆ ಮಾಡಿದ್ದರು.

೨. ವಾನರರು ತಮ್ಮ ಬಗ್ಗೆ ವಿಚಾರವನ್ನು ಮಾಡದೇ ಶ್ರೀರಾಮನ ಪ್ರತಿಯೊಂದು ಆಜ್ಞೆಯನ್ನು ಪೂರ್ಣ ಶ್ರದ್ಧೆಯಿಂದ ಪಾಲಿಸಿದರು.

ಶ್ರೀರಾಮಪ್ರಭುವಿನ ಕಾರ್ಯದಲ್ಲಿ ಸಂಪೂರ್ಣ ಸಮರ್ಪಿತರಾದ ವಾನರರ ಈ ಉದಾಹರಣೆಯಿಂದ ನನಗೆ ಮುಂದಿನ ವಿಷಯ ಕಲಿಯಲು ಸಿಕ್ಕಿತು, ‘ನಾವು ಭಗವಂತನ ಕಾರ್ಯದಲ್ಲಿ ನಮ್ಮನ್ನು ಸಮರ್ಪಿಸಿದರೆ ಭಗವಂತನಲ್ಲಿಯೇ ನಮ್ಮ ಸರ್ವತೋಮುಖ ಉತ್ಕರ್ಷದ ತಳಮಳ ಉಂಟಾಗಿ ಅವನೇ ಎಲ್ಲ ರೀತಿಯ ಭಾರವನ್ನು ಹೊತ್ತು ನಮ್ಮನ್ನು ರಕ್ಷಿಸುತ್ತಾನೆ. ಅಲ್ಲದೇ ಅವನು ಭಕ್ತಿಯಂತಹ ಅಮೂಲ್ಯ ವಿಷಯವನ್ನು ಭಕ್ತರಿಗೆ ಸಹಜವಾಗಿ ಪ್ರದಾನಿಸುತ್ತಾನೆ.’

ಶ್ರೀರಾಮಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಅವತಾರೀ ಕಾರ್ಯದಲ್ಲಿ ನಮ್ಮನ್ನು ನಾವು ಸಮರ್ಪಿಸಿಕೊಂಡರೆ ಅವರು ನಮ್ಮ ಚಿತ್ತ ಶುದ್ಧಿ ಮತ್ತು ಭಕ್ತಿವೃದ್ಧಿಯನ್ನು ಖಂಡಿತವಾಗಿ ಮಾಡಲಿದ್ದಾರೆ. ಶ್ರೀಗುರುಗಳ ಆಜ್ಞೆಯನ್ನು ಶಿರಸಾ ಪಾಲಿಸಿ ಅವರು ಹೇಳಿದ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯನ್ನು ಮಾಡಿದರೆ ಅದರಿಂದ ನಮ್ಮಲ್ಲಿನ ‘ಸಮರ್ಪಣಾಭಾವ’ ಹೆಚ್ಚುತ್ತದೆ.

ಸಾಧಕರೇ, ‘ಕರುಣಾವತ್ಸಲ ಶ್ರೀ ಗುರುಗಳ ಕೃಪಾಪ್ರವಾಹದಲ್ಲಿ ಖಂಡಿತವಾಗಿಯೂ ನಮ್ಮೆಲ್ಲರ ಉದ್ಧಾರವಾಗಲಿದೆ’, ಎಂಬ ಶ್ರದ್ಧೆಯಿಂದ ಸ್ವಂತದ ಆಧ್ಯಾತ್ಮಿಕ ಪ್ರಗತಿಯ ಬಗ್ಗೆ ನಿಃಸಂದೇಹವಾಗಿದ್ದು ಗುರುಸೇವೆಯಲ್ಲಿ ನಿರತರಾಗೋಣ !’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ