ನೆಲಮಂಗಲ, ಶಿವಮೊಗ್ಗ, ತುಮಕೂರು, ನವಲಗುಂದದಲ್ಲಿ ‘ಕರ್ನಾಟಕ ದೇವಸ್ಥಾನ-ಮಠ ಧಾರ್ಮಿಕ ಸಂಸ್ಥೆಗಳ ಮಹಾಸಂಘ’ ಮತ್ತು ಹಿಂದೂ ಜನಜಾಗೃತಿ ಸಮಿತಿಯಿಂದ ದೇವಸ್ಥಾನ ಪರಿಷತ್ತು

ಶಿವಮೊಗ್ಗದಲ್ಲಿ ನಡೆದ ಪರಿಷತ್ತಿನಲ್ಲಿ ವೇದಿಕೆ ಮೇಲೆ (ಎಡದಿಂದ) ಅಭಿನವ ಶಂಕರ ಭಾರತಿ ಮಹಾಸ್ವಾಮಿಗಳು, ಶ್ರೀ. ಶಂಕರಾನಂದ ಜೋಯಿಸ್, ಶ್ರೀ. ಪ್ರಭಾಕರ್‌ ಬೀರಯ್ಯ, ಶ್ರೀ. ಮೋಹನ ಗೌಡ

ನೆಲಮಂಗಲ

ಫೆಬ್ರವರಿ ೨೯ ರಂದು ‘ಕರ್ನಾಟಕ ದೇವಸ್ಥಾನ -ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ’ ಹಾಗೂ ಹಿಂದೂ ಜನಜಾಗೃತಿ ಸಮಿತಿಯಿಂದ ಇಲ್ಲಿನ ಮಾರುತಿ ನಗರದ ಅರಿಶಿನಕುಂಟೆಯಲ್ಲಿ ನಡೆದ ದೇವಸ್ಥಾನ ಪರಿಷತ್ತಿನಲ್ಲಿ ನೆಲಮಂಗಲದ ಶ್ರೀಪವಾಡ ಬಸವಣ್ಣ ದೇವರ ಮಠದ ಪೂ. ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಶ್ರೀ. ಮೋಹನ ಗೌಡ, ನೆಲಮಂಗಲ ಪುರಸಭೆ ಸದಸ್ಯರಾದ ಶ್ರೀ. ರವಿ, ಶ್ರೀವೈಷ್ಣವ ಸಂಘ, ಟಿ. ಬೇಗೂರು ಇದರ ಅಧ್ಯಕ್ಷರಾದ ಶ್ರೀ. ಅಣ್ಣಯ್ಯ ಇವರು ದೀಪಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶಿವಮೊಗ್ಗ

ಇಲ್ಲಿಯ ಬೆಕ್ಕಿನಕಲ್ಮಠದಲ್ಲಿ ಮಾರ್ಚ್ ೩ ರಂದು ನಡೆದ ಕಾರ್ಯಕ್ರಮದಲ್ಲಿ ಶೃಂಗೇರಿ ಮಹಾಸಂಸ್ಥಾನ ಕೂಡಲಿಯ ಅಭಿನವ ಶಂಕರ ಭಾರತಿ ಮಹಾಸ್ವಾಮಿಗಳು, ಕರ್ನಾಟಕ ರಾಜ್ಯ ಮುಜರಾಯಿ ಇಲಾಖೆ ಅರ್ಚಕರ ಸಂಘದ ಗೌರವಾಧ್ಯಕ್ಷರಾದ ಶ್ರೀ. ಶಂಕರಾನಂದ ಜೋಯಿಸ್, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕರಾದ ಶ್ರೀ. ಪ್ರಭಾಕರ ಬೀರಯ್ಯ, ಶ್ರೀ. ಮೋಹನ ಗೌಡ ಮುಂತಾದವರು ಉಪಸ್ಥಿತರಿದ್ದರು.

ತುಮಕೂರು

ಮಾರ್ಚ್ ೩ ರಂದು ತುಮಕೂರು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ದೇವಸ್ಥಾನ ಪರಿಷತ್ತನ್ನು ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ. ರಮೇಶ ಬಾಬು, ಅಯ್ಯಪ್ಪ ಸೇವಾ ಸಮಿತಿಯ ಕೋಶಾಧ್ಯಕ್ಷ ಶ್ರೀ. ಮೋಹನ ಕುಮಾರ್, ಶ್ರೀ ಗುಡ್ಡದ ರಂಗನಾಥ ಸ್ವಾಮಿ ದೇವಸ್ಥಾನದ ವಿಶ್ವಸ್ಥರಾದ ಶ್ರೀ. ಮಂಜುನಾಥ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕ ಶ್ರೀ. ಚಂದ್ರ ಮೊಗವೀರ ಇವರು ದೀಪಪ್ರಜ್ವಲಿಸಿ ಉದ್ಘಾಟಿಸಿದರು.

ನವಲಗುಂದ

ಮಾರ್ಚ್ ೩ ರಂದು ನವಲಗುಂದದಲ್ಲಾದ ಈ ಪರಿಷತ್ತಿಗೆ  ದೇವಸ್ಥಾನಕ್ಕೆ ಸಂಬಂಧಿತ ಸುಮಾರು ೪೦೦ ಕ್ಕಿಂತ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಈ ವೇಳೆ ವ್ಯಾಸಪೀಠದಲ್ಲಿ ಶ್ರೀ. ರಾಯನಗೌಡ ಪಾಟೀಲ, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಗುರುಪ್ರಸಾದ ಗೌಡ, ಪೂ. ಶ್ರೀ ವೀರೇಂದ್ರ ಸ್ವಾಮಿಗಳು ಅಜಾತ ನಾಗಲಿಂಗ ಸ್ವಾಮಿ ಮಠ, ಪೂ. ಶಿವಯೋಗಿ ಸ್ವಾಮಿ, ಭೂದ್ದೇಪ್ಪಜನ ಮಠ ಇವರ ಉಪಸ್ಥಿತಿ ಇತ್ತು.

ಪರಿಷತ್ತಿನಲ್ಲಿ ಸಂತರ ಮತ್ತು ಗಣ್ಯರ ಮಾರ್ಗದರ್ಶನ

ಪುರೋಹಿತರು, ಮಠಾಧೀಶರು ಹಿಂದೂ ಸಮಾಜಕ್ಕೆ ನಮ್ಮ ಧರ್ಮದ ಆಚಾರ-ವಿಚಾರ, ಸಂಸ್ಕಾರವನ್ನು ತಿಳಿಸಬೇಕು ! –  ಪೂ. ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ನೆಲಮಂಗಲ

ರಾಜ್ಯ ಸರಕಾರ ನೂರಾರು ಕೋಟಿ ರೂಪಾಯಿಗಳನ್ನು ಅನ್ಯಮತೀಯರ ಧಾರ್ಮಿಕ ಸ್ಥಳಗಳಿಗೆ ನೀಡಿದೆ. ಆದರೆ ಹಿಂದೂ ಧಾರ್ಮಿಕ ಸ್ಥಳಗಳಿಗೆ ಮಾತ್ರ ಬಜೆಟ್‌ನಲ್ಲಿ ನಯಾಪೈಸೆಯನ್ನು ನೀಡುವುದಿಲ್ಲ. –  ಶ್ರೀ. ಮೋಹನ ಗೌಡ, ನೆಲಮಂಗಲ

ನಾವೆಲ್ಲರೂ ಸಂಘಟಿತರಾಗಿ ಸರಕಾರದ ಹಿಡಿತದಲ್ಲಿರುವ ದೇವಸ್ಥಾನಗಳನ್ನು ಮುಕ್ತಗೊಳಿಸಬೇಕಿದೆ ! – ಪೂ. ಅಭಿನವ ಶಂಕರ ಭಾರತಿ ಮಹಾಸ್ವಾಮಿಗಳು, ಶಿವಮೊಗ್ಗ

ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನದ ಹಣವನ್ನು ದೇವಾಲಯದ ಅಭಿವೃದ್ಧಿಗಾಗಿ ಬಳಸದೆ ಸರಕಾರಿ ಅಧಿಕಾರಿಗಳ ಕಾರ್ಯಾಲಯದ ಟೆಲಿಫೋನ್‌ ಬಿಲ್‌ ಪೇಮೆಂಟ್‌ ಮಾಡಿದ್ದಾರೆ, ಪ್ರಾಥಮಿಕ ಆರೋಗ್ಯ ಕೇಂದ್ರದ ಬಿಲ್‌ ಪೇಮೆಂಟ್‌ ಮಾಡಿರುವುದು ಆರ್‌.ಟಿ.ಐ ಮೂಲಕ ಬೆಳಕಿಗೆ ಬಂದಿದೆ. – ಶ್ರೀ. ಚಂದ್ರ ಮೊಗವೀರ, ನೆಲಮಂಗಲ

ದೇವಸ್ಥಾನಗಳ ಹಾಗೂ ಮಠಗಳ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಹಾಗಾಗಿ ನಾವೆಲ್ಲರೂ ಸಂಘಟಿತರಾಗೋಣ ! – ಶ್ರೀ ಶ್ರೀ ಶ್ರೀ ವೀರಭದ್ರ  ಶಿವಚಾರ್ಯ ಸ್ವಾಮೀಜಿ, ತುಮಕೂರು

ದೇವಸ್ಥಾನದ ಆದಾಯ ಮಾತ್ರ ಸರಕಾರಕ್ಕೆ ಬೇಕು ಆದರೆ ದೇವಸ್ಥಾನಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಿಲ್ಲ. – ಶ್ರೀ. ಮಂಜುನಾಥ, ತುಮಕೂರು