ಭಾರತ ಮತ್ತು ಚೀನಾ ಗಡಿಯಲ್ಲಿ ಇಂದಿಗೂ ಉದ್ವಿಗ್ನ ಸ್ಥಿತಿ ! – ಸೇನಾ ಮುಖ್ಯಸ್ಥ ಮನೋಜ ಪಾಂಡೆ

ಸೇನಾಮುಖ್ಯಸ್ಥ ಮನೋಜ ಪಾಂಡೆ

ನವದೆಹಲಿ – ಚೀನಾದ ಉತ್ತರ ಗಡಿಭಾಗಗಳಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ, ಉದ್ವಿಗ್ನ ಸ್ಥಿತಿಯಲ್ಲಿದೆ ಎಂದು ಭಾರತದ ಸೇನಾ ಮುಖ್ಯಸ್ಥ ಮನೋಜ ಪಾಂಡೆ ಇವರು ಪತ್ರಿಕಾ ಗೋಷ್ಠಿಯನ್ನು ಸಂಬೋಧಿಸಿ ಹೇಳಿದರು.

1. ಸೇನಾಮುಖ್ಯಸ್ಥ ಮನೋಜ ಪಾಂಡೆಯವರು, ಉತ್ತರದ ಗಡಿಭಾಗದಲ್ಲಿ ಪರಿಸ್ಥಿತಿ ಸ್ಥಿರ ಮತ್ತು ನಿಯಂತ್ರಣದಲ್ಲಿದ್ದು ಯಾವುದೇ ಆಪತ್ಕಾಲೀನ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ಇಲ್ಲಿ ಚೀನಾ ಸೈನಿಕರ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದರೂ, ನಾವು ಅವರ ಮೇಲೆ ನಿಗಾ ವಹಿಸಿದ್ದೇವೆ. ಜಮ್ಮೂ-ಕಾಶ್ಮೀರದಲ್ಲಿ ಫೆಬ್ರುವರಿ 2021 ರಿಂದ ಗಡಿಯಲ್ಲಿ ಯುದ್ಧವಿರಾಮವಿದೆ; ಆದರೆ ಗಡಿಯಾಚೆಯಿಂದ ಭಯೋತ್ಪಾದನೆಯನ್ನು ನಿರಂತರವಾಗಿ ಬೆಂಬಲಿಸಲಾಗುತ್ತಿದೆ. ಅಲ್ಲಿ ಭಯೋತ್ಪಾದನೆಯ ಮೂಲಭೂತ ಸೌಕರ್ಯಗಳು ಇಂದಿಗೂ ಅಸ್ತಿತ್ವದಲ್ಲಿದೆ. ಆದ್ದರಿಂದ ಭಾರತ ಜಾಗರೂಕವಾಗಿದೆ. ಈಶಾನ್ಯದ ಹೆಚ್ಚಿನ ರಾಜ್ಯಗಳಲ್ಲಿ ಶಾಂತಿ ಮರಳಿದೆ. ಈ ರಾಜ್ಯಗಳ ಆರ್ಥಿಕ ಚಟುವಟಿಕೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳು ಒಳ್ಳೆಯ ಪರಿಣಾಮ ಬೀರಿರುವುದು ಕಂಡು ಬರುತ್ತಿದೆ ಎಂದು ಹೇಳಿದರು.

2. ಜಮ್ಮೂವಿನ ರಾಜೌರಿಯಲ್ಲಿ ಭಯೋತ್ಪಾದಕರು ಹಿಂದೂಗಳನ್ನು ಗುರಿ ಮಾಡಿ ಹತ್ಯೆ ಮಾಡಿರುವ ಪ್ರಕರಣದ ಕುರಿತು ಮನೋಜ ಪಾಂಡೆಯವರು, ನಮ್ಮ ಶತ್ರು ಗುರಿಯಿಟ್ಟು ಹತ್ಯೆ ಮಾಡುತ್ತಿದ್ದಾನೆ. ಪೀರ ಪಂಜಾಲ ಪ್ರದೇಶದ ದಕ್ಷಿಣದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಗುರಿಯಿಟ್ಟು ಹತ್ಯೆ ಮಾಡಲಾಗುತ್ತಿದೆ. ಇಲ್ಲಿ ಹೆಚ್ಚು ಪ್ರಮಾಣದಲ್ಲಿ ನುಸುಳುವಿಕೆ ಆಗುತ್ತಿದೆ. ಡ್ರೋನ್ ನ ಸಹಾಯದಿಂದ ಗಡಿ ಭದ್ರತಾ ಪಡೆ ಮತ್ತು ಭಾರತೀಯ ಸೈನ್ಯವು ಅದನ್ನು ತಡೆಯಲು ಪ್ರಯತ್ನಿಸುತ್ತಿದೆ ಎಂದರು.

ಸೇನಾ ಮುಖ್ಯಸ್ಥ ಮನೋಜ ಪಾಂಡೆಯವರು ಮಾತನಾಡುತ್ತಾ, ಶೀಘ್ರದಲ್ಲೇ ಭಾರತೀಯ ಸೈನ್ಯದ `ಕೋರ್ ಆಪ್ ಆರ್ಟಿಲರಿ’ ಯಲ್ಲಿ ಮಹಿಳಾ ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಈ ಸಂದರ್ಭದಲ್ಲಿ ನಾವು ಸರಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದ್ದು, ಅದು ಆದಷ್ಟು ಬೇಗನೆ ಅನುಮೋದನೆಗೊಳ್ಳುವ ಭರವಸೆಯಿದೆ ಎಂದು ಹೇಳಿದರು.

ಜೋಶಿಮಠ ಗ್ರಾಮದಿಂದ ಸೇನೆಯ 25 ಸ್ಥಳಗಳ ತೆರವು !

ಉತ್ತರಾಖಂಡದ ಜೋಶಿಮಠದಲ್ಲಿ ಭೂಕುಸಿತದಿಂದ ಮನೆಗಳು ಮತ್ತು ಇತರೆ ಕಟ್ಟಡಗಳು ಬಿರುಕು ಬಿಡುತ್ತಿವೆ. ಅದರಲ್ಲಿ ಸೇನಾ ಸ್ಥಳಗಳೂ ಸೇರಿವೆ. ಸೇನೆಯ 25 ರಿಂದ 28 ಸ್ಥಳಗಳಲ್ಲಿ ಬಿರುಕು ಬಂದಿರುವುದರಿಂದ ಅಲ್ಲಿ ನಿಯೋಜಿಸಲಾಗಿರುವ ಸೈನಿಕರನ್ನು ಮತ್ತೊಂದೆಡೆ ಸ್ಥಳಾಂತರಿಸಿ ಸ್ಥಾನವನ್ನು ತೆರವುಗೊಳಿಸಲಾಗಿದೆ. ಈ ವಿಷಯದಲ್ಲಿ ಸೇನಾಮುಖ್ಯಸ್ಥ ಮನೋಜ ಪಾಂಡೆಯವರು ಮಾತನಾಡುತ್ತಾ, ನಾವು ತಾತ್ಕಾಲಿಕವಾಗಿ ಸೈನಿಕರನ್ನು ಸ್ಥಳಾಂತರಗೊಳಿಸಿದ್ದೇವೆ. ಆವಶ್ಯಕತೆ ಬಿದ್ದರೆ ನಾವು ಓಲಿಯಲ್ಲಿ ಸೈನಿಕರನ್ನು ಶಾಶ್ವತವಾಗಿ ನಿಯೋಜಿಸುತ್ತೇವೆ. ಜೋಶಿಮಠದಿಂದ ಮಾಣಾಕ್ಕೆ ಹೋಗುವ ಮಾರ್ಗವು ಬಿರುಕು ಬಿಟ್ಟಿದ್ದು, ಈ ಮಾರ್ಗವನ್ನು ನಾವು ಸರಿ ಪಡಿಸುತ್ತಿದ್ದೇವೆ ಎಂದು ಹೇಳಿದರು.