’ಹಿಂದೂ ಧರ್ಮವನ್ನು ಸ್ವೀಕರಿಸಿದ ಉತ್ತರ ಪ್ರದೇಶ ಶಿಯಾ ವಕ್ಫ್ ಬೋರ್ಡ್’ ನ ಮಾಜಿ ಅಧ್ಯಕ್ಷರಾದ ವಸೀಮ ರಿಝವಿ!

ಇನ್ನು ಮುಂದೆ ಅವರ ಹೆಸರು ’ಜಿತೇಂದ್ರ ನಾರಾಯಣ ಸಿಂಹ ತ್ಯಾಗಿ’ ಎಂದಾಗಿರಲಿದೆ !

ಗಾಝಿಯಾಬಾದ (ಉತ್ತರಪ್ರದೇಶ) – ’ಉತ್ತರಪ್ರದೇಶ ಶಿಯಾ ವಕ್ಫ್ ಬೋರ್ಡ್’ನ ಮಾಜಿ ಅಧ್ಯಕ್ಷರಾದ ವಸೀಮ ರಿಝವಿಯವರು ಇಲ್ಲಿನ ಡಾಸನಾದೇವಿ ದೇವಸ್ಥಾನದಲ್ಲಿ ಜುನಾ ಆಖಾಡದ ಮಹಾಮಂಡಲೇಶ್ವರ ನರಸಿಂಹಾನಂದ ಗಿರಿ ಸರಸ್ವತಿಯವರ ಉಪಸ್ಥಿತಿಯಲ್ಲಿ ಹಿಂದೂ ಧರ್ಮವನ್ನು ಪ್ರವೇಶಿಸಿದರು. ನರಸಿಂಹಾನಂದ ಸರಸ್ವತಿಯವರು ಅವರಿಗೆ ಸನಾತನಧರ್ಮದ ದೀಕ್ಷೆಯನ್ನು ನೀಡಿದರು, ಅನಂತರ ರಿಝವಿಯವರ ಹೆಸರನ್ನು ಬದಲಾಯಿಸಿ ’ಜಿತೇಂದ್ರ ನಾರಾಯಣ ಸಿಂಹ ತ್ಯಾಗಿ’ ಎಂದು ಇಡಲಾಯಿತು. ಈ ಸಮಯದಲ್ಲಿ ವಸೀಮ ರಿಝವಿಯವರ ಶುದ್ಧೀಕರಣ ಮಾಡಲಾಯಿತು. ಇದರೊಂದಿಗೆ ಹವನ ಮತ್ತು ಯಜ್ಞವನ್ನೂ ಮಾಡಲಾಯಿತು.

ನನಗೆ ’ಮುಸಲ್ಮಾನ’ನಾಗಿರಲು ನಾಚಿಕೆ ಅನಿಸುತ್ತಿತ್ತು ! – ಜಿತೇಂದ್ರ ನಾರಾಯಣ ಸಿಂಹ ತ್ಯಾಗಿ (ಪೂರ್ವಾಶ್ರಮದ ವಸೀಮ ರಿಝವಿ)

ಹಿಂದೂ ಧರ್ಮವನ್ನು ಸ್ವೀಕರಿಸಿದ ನಂತರ ಜಿತೇಂದ್ರ ನಾರಾಯಣ ಸಿಂಹ ತ್ಯಾಗಿಯವರು ’ಇಲ್ಲಿ ಮತಾಂತರದ ಯಾವುದೇ ಅಂಶವಿಲ್ಲ. ನನ್ನನ್ನು ಇಸ್ಲಾಂನಿಂದ ತೆಗೆದುಹಾಕಿದ ನಂತರ ನನ್ನೆದುರು ಯಾವ ಧರ್ಮವನ್ನು ಸ್ವೀಕರಿಸಬೇಕು ಎಂಬ ಪ್ರಶ್ನೆ ನಿರ್ಮಾಣವಾಗಿತ್ತು. ಸನಾತನ ಧರ್ಮವು ಜಗತ್ತಿನ ಎಲ್ಲಕ್ಕೂ ಮೊದಲ ಧರ್ಮವಾಗಿದ್ದು ಇದರಲ್ಲಿರುವ ಒಳ್ಳೆಯ ಅಂಶಗಳು ಇತರ ಯಾವುದೇ ಧರ್ಮದಲ್ಲಿ ಇಲ್ಲ. ’ಜುಮ್ಮಾ’ದ ದಿನದಂದು (ಶುಕ್ರವಾರದಂದು) ನಮಾಜು ಪಠಣದ ನಂತರ ನನ್ನನ್ನು ಕೊಲ್ಲಲು ಭಕ್ಷೀಸನ್ನು ಘೋಷಿಸಲಾಗುತ್ತದೆ. ಶಿರಚ್ಛೇದನ ಮಾಡುವ ಫತ್ವಾಗಳನ್ನು ಹೊರಡಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನನಗೆ ’ಮುಸಲ್ಮಾನ’ನಾಗಿ ಉಳಿಯಲು ನಾಚಿಕೆಯಾಗುತ್ತಿತ್ತು’ ಎಂದು ಹೇಳಿದರು.

ಕೇಂದ್ರ ಸರಕಾರವು ಜಿತೇಂದ್ರ ನಾರಾಯಣ ಸಿಂಹ ತ್ಯಾಗಿ ಯವರಿಗೆ ಸುರಕ್ಷೆ ನೀಡಬೇಕು ! – ಅಖಿಲ ಭಾರತೀಯ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜರು

ಅಖಿಲ ಭಾರತೀಯ ಹಿಂದೂ ಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಸ್ವಾಮಿ ಚಕ್ರಪಾಣಿ ಮಹಾರಾಜರು ಜಿತೇಂದ್ರ ನಾರಾಯಣ ಸಿಂಹ ತ್ಯಾಗಿಯವರನ್ನು ಸನಾತನ ಧರ್ಮದಲ್ಲಿ ಸ್ವಾಗತಿಸಿ ಅವರ ನಿರ್ಣಯವು ಯೋಗ್ಯವಾಗಿದೆ ಎಂದು ಹೇಳಿದ್ದಾರೆ. ಅವರು ವಸೀಮ ರಿಝವಿಯವರು ಈಗ ಹಿಂದೂ ಆಗಿದ್ದು ಅವರ ವಿರುದ್ಧ ಫತ್ವಾ ಹೊರಡಿಸುವ ಧೈರ್ಯವನ್ನು ಯಾರು ತೋರಿಸಬಾರದು. ಕೇಂದ್ರ ಸರಕಾರವು ಅವರಿಗೆ ಯೋಗ್ಯ ಸುರಕ್ಷೆಯನ್ನು ನೀಡಬೇಕು, ಎಂದು ಮನವಿ ಮಾಡಿದರು.

ಮುಸಲ್ಮಾನರು ಹತ್ಯೆಗೈಯ್ಯುವ ಫತ್ವಾ ಹೊರಡಿಸಿದ್ದರಿಂದ ಹಿಂದೂ ಪದ್ಧತಿಯ ಅನುಸಾರ ಅಗ್ನಿಯನ್ನು ನೀಡಿ ಅಂತ್ಯಸಂಸ್ಕಾರ ಮಾಡುವ ಬಗ್ಗೆ ಮೃತ್ಯು ಪತ್ರವನ್ನು ಸಿದ್ಧಪಡಿಸಿಟ್ಟಿರುವ ರಿಝವಿ !

ವಸೀಮ ರಿಝವಿಯವರು ಕುರಾನಿನ ೨೬ ಆಯತಗಳನ್ನು (ವಾಕ್ಯ) ತೆಗೆದುಹಾಕುವ ಬೇಡಿಕೆಯ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಿದ್ದರು; ಆದರೆ ನ್ಯಾಯಾಲಯವು ಇದನ್ನು ತಿರಸ್ಕರಿಸಿತ್ತು. ಆನಂತರ ಬರೇಲಿಯಲ್ಲಿನ ’ಆಲ್ ಇಂಡಿಯಾ ಫೈಜನ್ ಏ ಮದೀನಾ ಕೌನ್ಸಿಲ್’ ಎಂಬ ಸಂಘಟನೆಯು ’ವಸೀಮ ರಿಝವಿಯವರ ಕುತ್ತಿಗೆ ಕತ್ತರಿಸುವವರಿಗೆ ೧೦ ಲಕ್ಷ ರೂಪಾಯಿ ನೀಡಿ ಉಚಿತ ಹಜ್ಜ್ ಯಾತ್ರೆ ಮಾಡಿಸಲಾಗುವುದು’ ಎಂಬ ಫತ್ವಾ ಹೊರಡಿಸಿತ್ತು. ರಿಝವಿಯವರ ’ಇಸ್ಲಾಂ’ ಮತ್ತು ’ಶಿಯಾ ’ ಸಮಾಜದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಮುಸಲ್ಮಾನ ಸಂಘಟನೆಗಳು ಹೇಳಿವೆ. ಅನಂತರ ರಿಝವಿ ಯವರು ಮತಾಂತರ ಮಾಡುವ ನಿರ್ಣಯ ತೆಗೆದುಕೊಂಡರು. ಅವರು ಮೃತ್ಯು ಪತ್ರವನ್ನು ಬರೆದು ಅದರಲ್ಲಿ ’ನನ್ನ ಮೃತ್ಯುವಿನ ನಂತರ ನನ್ನನ್ನು ಹೂಳದೇ ಹಿಂದೂ ಧರ್ಮದ ಅನುಸಾರ ಅಂತ್ಯಸಂಸ್ಕಾರ ಮಾಡಬೇಕು. ಕೆಲವರು ನನ್ನನ್ನು ಕೊಲ್ಲಲು ಇಚ್ಚಿಸುತ್ತಿದ್ದಾರೆ. ಮುಸಲ್ಮಾನರು ಸ್ಮಶಾನದಲ್ಲಿ ನನ್ನನ್ನು ಹೂಳಲು ನೀಡುವುದಿಲ್ಲ. ಹೀಗಿರುವಾಗ ನನ್ನನ್ನು ಯಾವುದೇ ಸ್ಮಶಾನದಲ್ಲಿ ಹೂಳದೇ ನನ್ನ ಶರೀರಕ್ಕೆ ಅಗ್ನಿಯನ್ನು ನೀಡಿ ಅಂತ್ಯಸಂಸ್ಕಾರ ಮಾಡಬೇಕು. ಮಹಂತ ನರಸಿಂಹಾನಂದರು ನನ್ನ ಚಿತೆಗೆ ಅಗ್ನಿಸಂಸ್ಕಾರ ಮಾಡಬೇಕು’ ಎಂದು ಬರೆದಿದ್ದರು.

೧. ವಸೀಮ ರಿಝವಿಯವರು ಈ ಹಿಂದೆ ೨೦೦೦ನೇ ಇಸವಿಯಲ್ಲಿ ಲಕ್ಷ್ಮಣಪುರಿಯ ಕಾಶ್ಮೀರಿ ಮೊಹಲ್ಲಾದಿಂದ ಸಮಾಜವಾದಿ ಪಕ್ಷದ ಟಿಕೇಟು ಪಡೆದು ನಗರಸೇವಕರೆಂದು ಆಯ್ಕೆಯಾಗಿದ್ದರು. ಅನಂತರ ೨೦೦೮ರಲ್ಲಿ ಅವರು ’ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್’ನ ಸದಸ್ಯರಾದರು. ಆದರೆ ೨೦೧೨ರಲ್ಲಿ ಮೌಲ್ವಿ (ಇಸ್ಲಾಮಿನ ಧಾರ್ಮಿಕ ನೇತಾರರು) ಕಲ್ಬೇ ಜಾವೇದರೊಂದಿಗೆ ಆದಂತಹ ವಾದದಿಂದಾಗಿ ರಿಝವಿಯವರನ್ನು ಸಮಾಜವಾದಿ ಪಕ್ಷದಿಂದ ತೆಗೆದುಹಾಕಲಾಗಿತ್ತು.

೨. ವಸೀಮ ರಿಝವಿಯವರ ಮೇಲೆ ಆರ್ಥಿಕ ಹಗರಣ ಮಾಡಿರುವ ಆರೋಪ ಮಾಡಲಾಗಿತ್ತು. ಹಗರಣದ ಪ್ರಕರಣವು ನ್ಯಾಯಾಲಯದಲ್ಲಿಯೂ ಹೋಗಿತ್ತು; ಆದರೆ ಅವರು ಪ್ರಕರಣದಿಂದ ನಿರಪರಾಧಿಯಾಗಿ ಹೊರಬಂದರು.

೩. ೨೦೧೮ರಲ್ಲಿ ರಿಝವಿಯವರು ’ಮದರಸಾಗಳಲ್ಲಿ ಸಮಲೈಂಗಿಕ ಸಂಬಂಧಗಳು ಹೆಚ್ಚಾಗುತ್ತವೆ’ ಎಂಬ ದೊಡ್ಡ ಆರೋಪ ಮಾಡಿದ್ದರು. ಇಷ್ಟೇ ಅಲ್ಲ, ಅವರು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದು ಮದರಸಾಗಳ ಮೇಲೆ ನಿರ್ಬಂಧ ಹೇರುವ ಬಗ್ಗೆ ಮನವಿ ಮಾಡಿದ್ದರು. ಅವರು ಈ ಮದರಸಾಗಳಲ್ಲಿ ಭಯೋತ್ಪಾದನೆಗೆ ಗೊಬ್ಬರ ಹಾಕಲಾಗುತ್ತಿರುವುದರ ಆರೋಪವನ್ನೂ ಮಾಡಿದ್ದರು.