ಹಬ್ಬಗಳ ಸಮಯದಲ್ಲಿ ಜಾಗರೂಕರಾಗಿದ್ದು ಆಹಾರ ಪದಾರ್ಥಗಳನ್ನು ಖರೀದಿಸಿ ! – ಶ್ರೀ. ಮೋಹನ ಕೆಂಬಳಕರ, ಸಹಾಯಕ ಆಯುಕ್ತರು, ಆಹಾರ ಮತ್ತು ಔಷಧ ಆಡಳಿತ

‘ಆನ್‌ಲೈನ್’ ವಿಶೇಷ ಚರ್ಚಾಕೂಟ ! :‘ಆಹಾರ ಪದಾರ್ಥಗಳಲ್ಲಿ ಕಲಬೆರಕೆಯನ್ನು ಹೇಗೆ ಗುರುತಿಸುವುದು ಮತ್ತು ಅದಕ್ಕೆ ಪರಿಹಾರ ?’

ಅನಾರೋಗ್ಯಕರ ವಾತಾವರಣದಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸುತ್ತಿರುವುದು ಕಂಡುಬಂದಲ್ಲಿ, ಕಲಬೆರಕೆಯುಕ್ತ ಆಹಾರ ಜೊತೆಗಿಟ್ಟುಕೊಂಡಿದ್ದರೆ ಅದೇ ರೀತಿ ಕಲಬೆರಕೆಯುಕ್ತ ಆಹಾರ ಪದಾರ್ಥಗಳ ಸೇವನೆಯಿಂದ ಯಾರಾದರೂ ಮೃತಪಟ್ಟಲ್ಲಿ ಅಥವಾ ವ್ಯಕ್ತಿಗೆ ಶಾರೀರಿಕ ತೊಂದರೆ, ಅನಾರೋಗ್ಯ ಹೀಗೆ ಅನೇಕ ಅಪರಾಧಗಳಿಗಾಗಿ ಆಹಾರ ಸುರಕ್ಷತೆಯ ಬಗ್ಗೆ ಈಗಿರುವ ಕಾನೂನಿಗನುಸಾರ ಆರೋಪಿಗೆ ಶಿಕ್ಷೆ ವಿಧಿಸುವ ವ್ಯವಸ್ಥೆ ಅಸ್ತಿತ್ವದಲ್ಲಿದೆ. ಈ ನಿಟ್ಟಿನಲ್ಲಿ ಅಪರಾಧಗಳಿಗೆ ಆರ್ಥಿಕ ದಂಡ, ಸೆರೆಮನೆ ಇತ್ಯಾದಿ ಶಿಕ್ಷೆಗಳಿವೆ. ಆಹಾರವು ಒಳ್ಳೆಯ ಗುಣಮಟ್ಟದ್ದಾಗಿರಬೇಕು, ಇದಕ್ಕಾಗಿ ಆಡಳಿತವು ವಿಶೇಷ ಗಮನ ನೀಡುತ್ತದೆ; ಆದರೆ ಹಬ್ಬದ ಸಮಯದಲ್ಲಿ ನಾಗರಿಕರು ಸಹ ಜಾಗರೂಕರಾಗಿದ್ದು ಆಹಾರ ಪದಾರ್ಥಗಳನ್ನು ಖರೀದಿಸಬೇಕು, ಎಂದು ಕೊಲ್ಹಾಪುರದ ಆಹಾರ ಮತ್ತು ಔಷಧ ಆಡಳಿತ ಇಲಾಖೆಯ ಸಹಾಯಕ ಆಯುಕ್ತರಾದ ಶ್ರೀ. ಮೋಹನ ಕೆಂಬಳಕರ ಕರೆ ನೀಡಿದರು. ಅವರು ‘ಆರೋಗ್ಯ ಸಹಾಯ ಸಮಿತಿ’ ಮತ್ತು ‘ಸುರಾಜ್ಯ ಅಭಿಯಾನ’ದ ವತಿಯಿಂದ ಆಯೋಜಿಸಿದ ‘ಆಹಾರ ಕಲಬೆರಕೆಯನ್ನು ಹೇಗೆ ಗುರುತಿಸುವುದು ಮತ್ತು ಅದಕ್ಕೆ ಪರಿಹಾರ ?’ (ಭಾಗ 2) ಈ ‘ಆನ್‌ಲೈನ್’ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.

ಈ ಕಾರ್ಯಕ್ರಮದಲ್ಲಿ ಸತಾರಾ ಮತ್ತು ಕೊಲ್ಹಾಪುರದ ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದ ಕಿರಿಯ ವೈಜ್ಞಾನಿಕ ಅಧಿಕಾರಿ ಶ್ರೀ. ಸುನೀಲ ಪಾಖರೆ ಮತ್ತು ಅವರ ಸಹೋದ್ಯೋಗಿಗಳು ಹಾಲಿನ ಖೊವಾ, ಕೇಸರಿ, ದ್ವಿದಳ ಧಾನ್ಯ ಇತ್ಯಾದಿಗಳಲ್ಲಿ ಕಲಬೆರಕೆಯನ್ನು ಹೇಗೆ ಗುರುತಿಸಬಹುದು ಎಂಬುದನ್ನು ಪ್ರಾತ್ಯಕ್ಷಿಕೆಯೊಂದಿಗೆ ತೋರಿಸಿದರು. ಈ ಕಾರ್ಯಕ್ರಮವನ್ನು Hindujagruti.org ಈ ಜಾಲತಾಣ, ಸಮಿತಿಯ ‘HinduJagruti’ ಈ ‘ಯೂಟ್ಯೂಬ್ ಚಾನೆಲ್, ಹಿಂದೂ ಜನಜಾಗೃತಿ ಸಮಿತಿ, ಹಾಗೂ ಆರೋಗ್ಯ ಸಹಾಯ ಸಮಿತಿ ಮತ್ತು ಸುರಾಜ್ಯ ಅಭಿಯಾನದ ಟ್ವಿಟರ್ ಹ್ಯಾಂಡಲ್‌ಗಳಲ್ಲಿ ಪ್ರಸಾರ ಮಾಡಲಾಯಿತು. ಅದೇ ರೀತಿ ಅಕ್ಟೋಬರ್ 13 ರಂದು ಪ್ರಸಾರವಾದ ಈ ಕಾರ್ಯಕ್ರಮದ ಭಾಗ -1 ಅನ್ನು ನಾಗರಿಕರು ತಪ್ಪದೇ ನೋಡಬೇಕು ಮತ್ತು ‘ಕಲಬೆರಕೆ’ ಸಮಸ್ಯೆಯ ವಿರುದ್ಧ ಹೋರಾಡಲು ‘ಸುರಜ್ಯ ಅಭಿಯಾನ’ವನ್ನು ಸಂಪರ್ಕಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ವೈಭವ ಆಫಳೆ ಇವರು ಕರೆ ನೀಡಿದರು.

ಶ್ರೀ. ಕೆಂಬಳಕರ ಇವರು ತಮ್ಮ ಮಾತನ್ನು ಮುಂದುವರಿಸುತ್ತಾ, ದೀಪಾವಳಿಯಂತಹ ಹಬ್ಬಗಳಲ್ಲಿ ಸಿಹಿತಿಂಡಿಗಳ ಮೇಲೆ ಬೆಳ್ಳಿಯ ಬದಲು ಅಲ್ಯೂಮಿನಿಯಂನ ಲೇಪನವನ್ನು ಬಳಸಲಾಗುತ್ತದೆ. ಸಿಹಿ ತಿಂಡಿಗಳಲ್ಲಿ, ಅದೇ ರೀತಿ ಬೆಲ್ಲಸಕ್ಕರೆಯಂತಹ ಖಾದ್ಯ ಪದಾರ್ಥಗಳಲ್ಲಿ, ಅತಿಯಾಗಿ ಬಣ್ಣಗಳನ್ನು ಬಳಸಲಾಗುತ್ತದೆ. ಮಾರುಕಟ್ಟೆಯಲ್ಲಿ ಕರಿದ ಆಹಾರವನ್ನು ತಯಾರಿಸಲು ಬಳಸುವ ಖಾದ್ಯ ಎಣ್ಣೆಯನ್ನು ಸಂಬಂಧಿತ ವೃತ್ತಿಪರರು ಕೇವಲ ೩ ಬಾರಿ ಬಳಸಬೇಕು, ಆದರೆ ಅದನ್ನು ಪಾಲಿಸದೇ ಅನೇಕ ಸಲ ಸಿಹಿ ತಿಂಡಿಯ ವ್ಯಾಪಾರಿಗಳು ಮತ್ತು ರಸ್ತೆ ಬದಿಯಲ್ಲಿ ಆಹಾರ ಪದಾರ್ಥಗಳನ್ನು ಮಾರುವವರು ಖಾದ್ಯ ಎಣ್ಣೆಯು ಕಪ್ಪಾಗುವ ತನಕ ಅದನ್ನು ಉಪಯೋಗಿಸುತ್ತಾರೆ, ನಾಗರಿಕರು ಜಾಗರೂಕತೆಯಿಂದ ಇದ್ದು ಕರಿದ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಪ್ಯಾಕ್ ಮಾಡಿದ ಆಹಾರವನ್ನು ತೆಗೆದುಕೊಳ್ಳುವಾಗಲೂ, ಆ ಪದಾರ್ಥಗಳ ‘ಎಕ್ಸಪೈರಿ ಡೇಟ್’ ಇತ್ಯಾದಿಗಳನ್ನು ನೋಡಿದ ನಂತರವೇ ಅದನ್ನು ತೆಗೆದುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ, ಚೈನೀಸ್ ಆಹಾರದಲ್ಲಿ ಹಾಗೂ ಕೆಲವು ಪ್ಯಾಕ್ ಮಾಡಿದ ಆಹಾರಗಳಲ್ಲಿ ಅಜಿನೊಮೊಟೊವನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಅಜಿನೊಮೊಟೊ ಹೊಂದಿರುವ ಪದಾರ್ಥಗಳ ಸೇವನೆಯು ದೇಹಕ್ಕೆ ಹಾನಿಕರವಾಗಿದ್ದು ಇದರಿಂದ ಕರುಳಿನ ರೋಗಗಳು, ಆಮ್ಲಪಿತ್ಥ ಮತ್ತು ಅಜೀರ್ಣಕ್ಕೆ ಕಾರಣವಾಗುತ್ತದೆ. ಇದರಿಂದ ನಾಗರಿಕರು ಇಂತಹ ಪದಾರ್ಥಗಳನ್ನು ಸೇವಿಸುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ನಾಗರಿಕರು ಯಾವುದೇ ರೀತಿಯ ಕಲಬೆರಕೆ ಕಂಡು ಬಂದಲ್ಲಿ ‘FSSAI’ ಇಲಾಖೆಗೆ ಟೋಲ್ ಫ್ರೀ ಸಂಖ್ಯೆ 1800112100 ಗೆ ದೂರು ನೀಡಬೇಕು. ‘FSSAI’ ಬಳಿ ದೂರವಾಣಿ ಮೂಲಕ, ಆನ್‌ಲೈನ್ ಅಥವಾ ಪ್ರತ್ಯಕ್ಷ ದಾಖಲೆಗಳ ಮೂಲಕ ದೂರುಗಳನ್ನು ಸಲ್ಲಿಸಬಹುದು. ಅದರ ನಂತರ, ‘ಆಹಾರ ಭದ್ರತಾ ಪಡೆ’ಯ ಅಧಿಕಾರಿಗಳು ಸಹ ಕ್ರಮ ಕೈಗೊಂಡ ಬಗ್ಗೆ ದೂರುದಾರರಿಗೆ ಮಾಹಿತಿ ನೀಡುತ್ತಾರೆ’, ಎಂದರು.