ಪಿತೃಗಳ ಶಾಂತಿಗಾಗಿ ವಿವಿಧ ದೇಶಗಳಲ್ಲಿ ಮಾಡಲಾಗುವ ಪರಂಪರಾಗತ ಕೃತಿಗಳು  !

ಶ್ರೀ. ರಮೇಶ ಶಿಂದೆ

ಕೇವಲ ಭಾರತದಲ್ಲಿ ಮಾತ್ರ ಪೂರ್ವಜರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಸಂಕಲ್ಪನೆ ಇದೆ ಎಂದೇನಿಲ್ಲ, ವಿದೇಶಗಳಲ್ಲಿಯೂ ಪಿತೃಗಳ ಶಾಂತಿಗಾಗಿ ವಿವಿಧ ಪಾರಂಪರಿಕ ಕೃತಿಗಳನ್ನು ಮಾಡಲಾಗುತ್ತದೆ. ಅದರಲ್ಲಿ ಪೂರ್ವಜರ ಮುಕ್ತಿಗಾಗಿ ಶಾಸ್ತ್ರೋಕ್ತ ಸಂಕಲ್ಪನೆ ಇಲ್ಲದಿದ್ದರೂ, ಕನಿಷ್ಟ ‘ಪೂರ್ವಜರ ಬಗ್ಗೆ ಕೃತಜ್ಞತೆಯಿರಬೇಕು, ಎನ್ನುವ ಭಾವನೆಯಂತೂ ಖಂಡಿತವಾಗಿ ಇದೆ. ಹಾಗೆಯೇ ವಿದೇಶಗಳಲ್ಲಿ ಇತರ ಪಂಥಗಳಲ್ಲಿ ಜನಿಸಿರುವ ಅನೇಕ ಪಾಶ್ಚಿಮಾತ್ಯರು ತಮ್ಮ ಪೂರ್ವಜರಿಗೆ ಮುಕ್ತಿ ದೊರಕಬೇಕೆಂದು ಭಾರತಕ್ಕೆ ಬಂದು ಪಿಂಡದಾನ ಮತ್ತು ತರ್ಪಣ ವಿಧಿಗಳನ್ನು ಮಾಡುತ್ತಾರೆ.

ಕಳೆದ ಸಂಚಿಕೆಯಲ್ಲಿ ಪೂರ್ವಜರ ಆತ್ಮಕ್ಕೆ ಶಾಂತಿ ದೊರಕಬೇಕೆಂದು ಇತರ ಧರ್ಮಗಳಲ್ಲಿ ಮಾಡಲಾಗುವ ಪಾರಂಪರಿಕ ಕೃತಿಗಳು, ವಿದೇಶದ ವಿವಿಧ ದೇಶಗಳಲ್ಲಿ ಪೂರ್ವಜರ ಆತ್ಮಕ್ಕಾಗಿ ಮಾಡಲಾಗುವ ಪಾರಂಪರಿಕ ಕೃತಿಗಳು.ಲ್ಯಾಟೀನ್ ಅಮೇರಿಕಾ ದೇಶಗಳಲ್ಲಿ ಆಚರಿಸುವ ಪದ್ಧತಿ,  ಏಷ್ಯಾ ಖಂಡದ ದೇಶಗಳಲ್ಲಿನ ಪಿತೃಪೂಜೆಯ ಪದ್ಧತಿಯ ಬಗ್ಗೆ  ತಿಳಿದುಕೊಂಡೆವು.ಶ್ರಾದ್ಧ ವಿಧಿಯನ್ನು ಟೀಕಿಸುವವರಿಗೆ ಉತ್ತರಿಸಲು ಸಾಧ್ಯವಾಗಬೇಕೆಂದು ಅವರ ಮುಂದುವರೆದ ಭಾಗವನ್ನು ಲೇಖನದಲ್ಲಿ ನೀಡುತ್ತಿದ್ದೇವೆ.

ಸಂಕಲನಕಾರರು : ಶ್ರೀ ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

೭.ರಶ್ಯಾದ ನೇತಾರ ದಿವಂಗತ ಬೊರಿಸ ಯೆಲ್ತಸಿನ್ ಇವರ ಆತ್ಮದ ಶಾಂತಿಗಾಗಿ ರಶ್ಯಾದ ಸಾಮ್ಯವಾದಿ ಮುಖಂಡರಾದ ಸಾಝೀ ಉಮಾಲಾತೊವಾ ಇವರು ಭಾರತಕ್ಕೆ ಬಂದು ತರ್ಪಣ ಮತ್ತು ಪಿಂಡದಾನ ವಿಧಿ ಮಾಡುವುದು

೭ ಅ. ಉಮಾಲಾತೊವಾ ಇವರ ಕಟ್ಟಾ ವಿರೋಧಿಯಾಗಿದ್ದ ಬೊರಿಸ ಯೆಲ್ತಸಿನ್ ಇವರು ಉಮಾಲಾತೊವಾ ಇವರ ಕನಸಿನಲ್ಲಿ ಬರುವುದು ಮತ್ತು ಅವರು ಅಸಂತುಷ್ಟರಾಗಿದ್ದಾರೆಂದು ಉಮಾಲಾತೊವಾ ಇವರಿಗೆ ಅರಿವಾಗುವುದು : ಮಾರ್ಚ್ ೨೦೧೦ರಲ್ಲಿ ರಶಿಯನ್ ಸಾಮ್ಯವಾದಿ ನೇತಾರರಾದ ಸಾಝೀ ಉಮಾಲಾತೊವಾ ಇವರು ರಶಿಯಾದ ಮಾಜಿ ರಾಷ್ಟ್ರಪತಿ ಬೊರಿಸ್ ಯೆಲ್ತಸಿನ್ ಇವರ ಆತ್ಮದ ಶಾಂತಿಗಾಗಿ ಭಾರತಕ್ಕೆ ಬಂದು ತರ್ಪಣ ಮತ್ತು ಪಿಂಡದಾನ ವಿಧಿಯನ್ನು ಮಾಡಿದ್ದರು. ಉಮಾಲಾತೊವಾ ರಶಿಯಾದ ಮಾಜಿ ಸಂಸದರಾಗಿದ್ದು, ಅವರು ‘ಪಾರ್ಟಿ ಆಫ್ ಪೀಸ ಎಂಡ್ ಯುನಿಟಿಯ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಅವರು ಸಾಮ್ಯವಾದಿ (ಕಮ್ಯುನಿಸ್ಟ್) ವಿಚಾರಗಳಿಗೆ ಸಂಬಂಧಿಸಿದ ಮುಖಂಡರಾಗಿದ್ದರು. ಉಮಾಲಾತೊವಾ ಇವರು ಗೊರ್ಬಾಚೇವ್ ಮತ್ತು ಯೆಲ್ತಸಿನ್ ಇವರ ಕಟ್ಟಾ ವಿರೋಧಿಗಳಾಗಿದ್ದರು. ಸೋವಿಯತ್ ಸಂಘದ ವಿಘಟನೆಗೆ ಅವರಿಂದ ತೀವ್ರ ವಿರೋಧವಿತ್ತು. ಸೋವಿಯತ್ ಸಂಘದ ವಿಘಟನೆಯ ಕಾರಣದಿಂದ ಅವರಲ್ಲಿ ತೀವ್ರ ಮತಭೇದವೂ ಆಗಿತ್ತು. ಉಮಾಲಾತೊವಾ ಇವರು ಹೇಳಿದಂತೆ ಯೆಲ್ತಸಿನ್‌ರವರು ಮೇಲಿಂದ ಮೇಲೆ ಅವರ ಕನಸಿನಲ್ಲಿ ಬರುತ್ತಾರೆ ಮತ್ತು ಅವರೊಂದಿಗೆ ರಾಜಕೀಯ ವಿಷಯಗಳ ಬಗ್ಗೆ ವಾದವಿವಾದ ಮಾಡುತ್ತಾರೆ. ಕೆಲವೊಮ್ಮೆ ಅವರು ಅಪರಾಧಿ ಭಾವನೆಯಿಂದ ದುಃಖಿತರಾಗುತ್ತಾರೆ ಎಂದು ಅನಿಸುತ್ತದೆ. ಇದರಿಂದ ಯೆಲ್ತಸಿನ್ ಇವರ ಆತ್ಮ ಅಸಂತುಷ್ಟವಾಗಿದೆ ಮತ್ತು ಅಶಾಂತವಾಗಿದೆ ಎಂದು ಅನಿಸುತ್ತದೆ ಎಂದು ಉಮಾಲಾತೊವಾ ಇವರ ಅನಿಸಿಕೆಯಾಗಿತ್ತು.

೭ ಆ. ಉಮಾಲಾತೊವಾ ಇವರು ಯೆಲ್ತಸಿನ್ ಇವರ ಆತ್ಮದ ಶಾಂತಿಗಾಗಿ ಯಜ್ಞ ಮತ್ತು ತರ್ಪಣ ಮಾಡುವ ಇಚ್ಛೆಯನ್ನು  ವ್ಯಕ್ತಪಡಿಸುವುದು :

ಉಮಾಲಾತೊವಾರವರು ತಮ್ಮ ಈ ಕನಸಿನ ಬಗ್ಗೆ ಹರಿದ್ವಾರದಲ್ಲಿನ ದೇವ ಸಂಸ್ಕೃತಿ ವಿಶ್ವವಿದ್ಯಾಲಯದ ವಿದೇಶ ವಿಭಾಗದ ಅಧ್ಯಕ್ಷರಾದ ಡಾ. ಜ್ಞಾನೇಶ್ವರ ಮಿಶ್ರ ಇವರೊಂದಿಗೆ ಚರ್ಚೆಯನ್ನು ಮಾಡಿದರು ಮತ್ತು ಅವರಲ್ಲಿ ಯೆಲ್ತಸಿನ್ ಇವರ ಆತ್ಮದ ಶಾಂತಿಗಾಗಿ ಯಜ್ಞ ಮತ್ತು ತರ್ಪಣ ಕೊಡುವ ಇಚ್ಛೆಯನ್ನು ವ್ಯಕ್ತಪಡಿಸಿದರು.

೭ ಇ. ಉಮಾಲಾತೊವಾ ಇವರಿಗೆ ಶ್ರಾದ್ಧ-ತರ್ಪಣ ವಿಧಿಯನ್ನು  ಮಾಡಿದಾಗಿನಿಂದ ಬಹಳ ಸಹಜತೆಯೆನಿವುದು ಮತ್ತು ಅವರು ವೈದಿಕ ಧರ್ಮದ ದೀಕ್ಷೆಯನ್ನು ಸ್ವೀಕರಿಸಲು ನಿರ್ಣಯಿಸುವುದು : ಉಮಾಲಾತೊವಾ ಇವರ ಇಚ್ಛೆಯಂತೆ ಹರಿದ್ವಾರದಲ್ಲಿ ಪಂಡಿತ ಉದಯ ಮಿಶ್ರ ಮತ್ತು ಪಂಡಿತ ಶಿವಪ್ರಸಾದ ಮಿಶ್ರ ಇವರ ಮಾರ್ಗದರ್ಶನದಂತೆ ಈ ವಿಧಿಯನ್ನು ಪೂರ್ಣಗೊಳಿಸಲಾಯಿತು. ಅಲ್ಲಿ ಅವರು ಯೆಲ್ತಸಿನ್ ಇವರಿಗಾಗಿ ತರ್ಪಣವನ್ನು ನೀಡಿದರು. ಹಾಗೆಯೇ ಅವರು ತಮ್ಮ ತಂದೆ-ತಾಯಿ ಮತ್ತು ಅಫಘಾನಿಸ್ತಾನದಲ್ಲಿ ಹತ್ಯೆಗೀಡಾದ ತಮ್ಮ ಇಬ್ಬರು ಸಹೋದರರಿಗಾಗಿಯೂ ಯಜ್ಞ ಮತ್ತು ಪಿಂಡದಾನವನ್ನು ಮಾಡಿದರು, ಹಾಗೆಯೇ ಶಾಂತಿಗಾಗಿ ಪ್ರಾರ್ಥನೆಯನ್ನು ಮಾಡಿದರು. ತದನಂತರ ಉಮಾಲಾತೋವಾ ಇವರು “ಶ್ರಾದ್ಧ -ತರ್ಪಣ ಮಾಡಿದಾಗಿನಿಂದ ನನಗೆ ಬಹಳ ಸಹಜತೆಯೆನಿಸುತ್ತಿದೆ. ನನ್ನ ಮೇಲಿದ್ದ ಋಣಗಳು ತೀರಿದವು ಎಂದು ನನಗನ್ನಿಸುತ್ತಿದೆ, ಎಂದು ಹೇಳಿದರು. ತದನಂತರ ಉಮಾಲಾತೊವಾ ಭಾರತೀಯ ಸಂಸ್ಕೃತಿ ಮತ್ತು ತತ್ತ್ವಜ್ಞಾನಗಳಿಂದ ಎಷ್ಟು ಪ್ರಭಾವಿತರಾದರೆಂದರೆ, ಅವರು ವೈದಿಕ ಧರ್ಮದ ದೀಕ್ಷೆಯನ್ನು ತೆಗೆದುಕೊಳ್ಳಲು ನಿರ್ಣಯಿಸಿದರು.

೮. ಭಾರತದಲ್ಲಿ ಶಾಸ್ತ್ರಾನುಸಾರ ಅಮಾವಾಸ್ಯೆಯು ಪಿತೃರಿಗಾಗಿ ‘ಅತ್ಯಧಿಕ ಪ್ರಿಯ ತಿಥಿ ಆಗಿರುವುದರ ಹಿಂದಿನ ಕಾರಣಗಳು ಮತ್ತು ಆ ತಿಥಿಯ ಮಹತ್ವ

ಈ ಸಂದರ್ಭದಲ್ಲಿ ಮತ್ಸ್ಯಪುರಾಣದಲ್ಲಿ ಒಂದು ಕಥೆಯಿದೆ. ಮತ್ಸ್ಯಪುರಾಣದಲ್ಲಿ ಅಚ್ಛೋದ ಸರೋವರ ಮತ್ತು ಅಚ್ಛೋದ ನದಿಯ ಉಲ್ಲೇಖವಿದೆ. ಈ ಸರೋವರ ಮತ್ತು ನದಿ ಕಾಶ್ಮೀರದಲ್ಲಿವೆ.

ಅಚ್ಛೋದಾ ನಾಮ ತೇಷಾಂ ತು ಮಾನಸೀ ಕನ್ಯಕಾ ನದಿ ||

ಅಚ್ಛೋದಂ ನಾಮ ಚ ಸರಃ ಪಿತೃಭಿರ್ನಿರ್ಮಿತಂ ಪುರಾ|

ಅಚ್ಛೋದಾ ತು ತಪಶ್ಚಕ್ರೆ ದಿವ್ಯಂ ವರ್ಷಸಹಸ್ರಕಮ್||

-ಮತ್ಸ್ಯಪುರಾಣ, ಅಧ್ಯಾಯ ೧೪, ಶ್ಲೋಕ ೨ ಮತ್ತು ೩.

ಅರ್ಥ: ಭಗವಾನ ಮರಿಚೀಯ ವಂಶಜರು ಎಲ್ಲಿ ಇರುತ್ತಿದ್ದರೋ, ಅಲ್ಲಿ ಅಚ್ಛೋದಾ ಹೆಸರಿನ ನದಿ ಹರಿಯುತ್ತದೆ. ಅಚ್ಛೋದಾ ಪಿತೃ ಗಣಗಳ ಮಾನಸಕನ್ಯೆಯಾಗಿದ್ದಾಳೆ. ಪ್ರಾಚೀನ ಕಾಲದಲ್ಲಿ ಪಿತೃಗಳು ಅಲ್ಲಿ ಅಚ್ಛೋದ ಹೆಸರಿನ ಒಂದು ಸರೋವರವನ್ನು ಉತ್ಪತ್ತಿ ಮಾಡಿದ್ದರು. ಹಿಂದೆ ಅಚ್ಛೋದಾಳು (ಅಗ್ನಿಷ್ವಾತ್ತನ ಮಾನಸ ಪುತ್ರಿ) ೧ ಸಾವಿರ ವರ್ಷಗಳವರೆಗೆ ಕಠಿಣ ತಪಸ್ಸನ್ನು ಮಾಡಿದ್ದಳು. ಕಾಶ್ಮೀರವು ಭಾರತದಲ್ಲಿನ ಪ್ರಾಚೀನ ರಾಜ್ಯವಾಗಿದೆ. ಮರಿಚಿಯ ಪುತ್ರ ಕಶ್ಯಪನ ಹೆಸರಿನಿಂದ ಮೊದಲು ಕಾಶ್ಮೀರದ ಹೆಸರು ‘ಕಶ್ಯಪಮರ ಅಥವಾ ‘ಕಶೇಮರ್ರ ಆಗಿತ್ತು. ಮತ್ಸ್ಯಪುರಾಣದಲ್ಲಿ ಸೋಮಪಥ ಹೆಸರಿನ ಸ್ಥಳದಲ್ಲಿ ಮರೀಚಿಯ ಪುತ್ರ ಅಗ್ನಿಷ್ವಾತ್ತ ಹೆಸರಿನ ದೇವತೆಯ ಪಿತೃಗಣರು ವಾಸಿಸುತ್ತಿದ್ದರು. ಕಾಲಾಂತರದಲ್ಲಿ ಅಲ್ಲಿಯೇ ಅಗ್ನಿಷ್ವಾತ್ತನ ಮಾನಸಪುತ್ರಿ ಅಚ್ಛೋದಾ ೧ ಸಾವಿರ ವರ್ಷಗಳ ಕಾಲ ಕಠಿಣ ತಪಸ್ಸನ್ನು ಮಾಡಿದಳು. ಅವಳ ತಪಸ್ಸಿಗೆ ಪ್ರಸನ್ನರಾಗಿ ದೇವತೆಗಳ ಸಮಾನರಾಗಿರುವ ಸುಂದರ ಮತ್ತು ಕಾಂತಿಯುಕ್ತ ಪಿತೃಗಣಗಳು ವರವನ್ನು ನೀಡಲು ಅಚ್ಛೋದಾಳ ಬಳಿಗೆ ಬಂದರು. ಎಲ್ಲ ಪಿತೃರು ಮನಸೂರೆಗೊಳ್ಳುವಂತಿದ್ದರು. ಅವರ ಸೌಂದರ್ಯ ಮತ್ತು ರೂಪದಿಂದ ಪ್ರಭಾವಿತಳಾದ ಅಚ್ಛೋದಾ ‘ಅಮಾವಸು ಹೆಸರಿನ ಒಬ್ಬ ಪಿತೃನ ಮೇಲೆ ಆಸಕ್ತಳಾದಳು. ಪಿತೃಗಣಗಳ ವಿಷಯದಲ್ಲಿ ಈ ರೀತಿಯ ಇಚ್ಛೆಯನ್ನು ಮನಸ್ಸಿನಲ್ಲಿ ತರುವುದು ಒಂದು ದೊಡ್ಡ ಅಪರಾಧವಾಗಿತ್ತು. ಆಗ ಅಮಾವಸು ತಕ್ಷಣವೇ ಅಚ್ಛೋದಾಳ ಕೋರಿಕೆಯನ್ನು ನಿರಾಕರಿಸಿ, ಅವಳಿಗೆ ಶಾಪ ಕೊಟ್ಟನು. ಯಾವ ಪುಣ್ಯತಿಥಿಗೆ ಅಮಾವಸು ಅಚ್ಛೋದಾಳ ವಾಸನೆಯನ್ನು ನಿರಾಕರಿಸಿದ್ದನೋ, ಆ ತಿಥಿಯು ಅವನ ಗೌರವಾರ್ಥ ಅವನ ಹೆಸರಿನಿಂದಲೇ ‘ಅಮಾವಾಸ್ಯಾ ಎಂದು ಪ್ರಸಿದ್ಧವಾಯಿತು ಮತ್ತು ಆಗಿನಿಂದ ನಮ್ಮ ಪಿತೃಗಳಿಗೆ ಅದು ಅತ್ಯಧಿಕ ಇಷ್ಟವಾದ ತಿಥಿಯಾಯಿತು.

೯. ವಿದೇಶಗಳಲ್ಲಿರುವ ಭಾರತೀಯರು ಸಂಚಾರವಾಣಿಯ ಮೂಲಕ ಪುರೋಹಿತರಿಂದ ಶ್ರಾದ್ಧ ಮತ್ತು ತರ್ಪಣ ವಿಧಿಯನ್ನು ಮಾಡಿಸಿಕೊಳ್ಳುವುದು ಅಯೋಗ್ಯ !

ಕಳೆದ ಕೆಲವು ವರ್ಷಗಳಿಂದ ವಿದೇಶಗಳಲ್ಲಿರುವ ಭಾರತೀಯರು ತಮ್ಮ ಪಿತೃಗಳ ತರ್ಪಣ ಮತ್ತು ಪಿಂಡದಾನ ವಿಧಿಯನ್ನು ಮಾಡಲು ಉಜ್ಜೈನಿಯ ಮತ್ತು ಗಯಾದ ಪುರೋಹಿತರನ್ನು ಸಂಚಾರವಾಣಿಯ ಮುಖಾಂತರ ಸಂಪರ್ಕಿಸುತ್ತಿದ್ದಾರೆ ಮತ್ತು ಅವರಿಂದ ಶ್ರಾದ್ಧಕರ್ಮಗಳನ್ನು ಮಾಡಿಸಿಕೊಳ್ಳುತ್ತಾರೆ. ಕೆಲವು ಪುರೋಹಿತರು ಇದಕ್ಕೆ ಸಮ್ಮತಿಯನ್ನೂ ನೀಡಿದ್ದಾರೆ. ಅವರು ಸಂಚಾರವಾಣಿಯ ಮೂಲಕ ಯಜಮಾನನಿಂದ ಸಂಕಲ್ಪವನ್ನು ಮಾಡಿಸಿಕೊಳ್ಳುತ್ತಾರೆ. ತದನಂತರ ಯಜಮಾನನು ಹೇಳಿರುವ ಹೆಸರುಗಳಿಂದ ಪುರೋಹಿತರು ತರ್ಪಣ ಮತ್ತು ಪಿಂಡದಾನವನ್ನು ಮಾಡುತ್ತಾರೆ. ಆಪದ್ಧರ್ಮದ ಕೆಲವು ಪರಿಸ್ಥಿತಿಗಳಲ್ಲಿ ಬ್ರಾಹ್ಮಣರಿಂದ ತರ್ಪಣವನ್ನು ಮಾಡಿಸಿಕೊಳ್ಳಬಹುದು; ಆದರೆ ಬ್ರಾಹ್ಮಣರು ಕೇವಲ ಧನದ ಲೋಭದಿಂದ ವಿದೇಶದಲ್ಲಿನ ಜನರಿಂದ ಈ ರೀತಿ ಸಂಚಾರವಾಣಿ ಮೂಲಕ ಸಂಕಲ್ಪವನ್ನು ಮಾಡಿಸಿಕೊಂಡು ಶ್ರಾದ್ಧದ ವಿಧಿಯನ್ನು ಮಾಡುವುದು ಅಯೋಗ್ಯವಾಗಿದೆ. ಪಿತೃಗಳ ಮುಕ್ತಿಗಾಗಿ ವ್ಯಕ್ತಿಯು ಸ್ವತಃ ತೀರ್ಥಸ್ಥಾನಗಳಲ್ಲಿ ದೇವತೆಗಳ ಸಾಕ್ಷಿಯಿಂದ ತಮ್ಮ ಪಿತೃಗಳಿಗೆ ತರ್ಪಣ ಮತ್ತು ಪಿಂಡದಾನವನ್ನು ಮಾಡಬೇಕು. ಇದರಿಂದ ಪಿತೃಗಳಿಗೆ ತೃಪ್ತಿಯಾಗಿ ಅವರ ಮುಕ್ತಿಯ ಮಾರ್ಗ ಸುಲಭವಾಗುತ್ತದೆ.

೧೦. ಹಿಂದೂ ಧರ್ಮದಲ್ಲಿ ಶ್ರಾದ್ಧದ ಮಹತ್ವದ ಘಟಕವಾಗಿರುವ ಪವಿತ್ರ ದರ್ಭೆಯ ಮಹತ್ವ

ಮಹಾಭಾರತದಲ್ಲಿರುವ ಕಥೆಗನುಸಾರ ಗರುಡದೇವನು ಸ್ವರ್ಗ ದಿಂದ ಅಮೃತ ಕಲಶವನ್ನು ತೆಗೆದುಕೊಂಡು ಬಂದು ಕೆಲವು ಸಮಯ ಆ ಕಲಶವನ್ನು ದರ್ಭೆಯ ಮೇಲೆ ಇಟ್ಟಿದ್ದನು. ದರ್ಭೆಯ ಮೇಲೆ ಅಮೃತ ಕಲಶವನ್ನು ಇಟ್ಟಿದ್ದರಿಂದ ದರ್ಭೆಯನ್ನು ಪವಿತ್ರವೆಂದು ತಿಳಿಯಲಾಗುತ್ತದೆ. ಶ್ರಾದ್ಧದ ಸಮಯದಲ್ಲಿ ದರ್ಭೆಯಿಂದ ತಯಾರಿಸಿದ ಉಂಗುರವನ್ನು ಅನಾಮಿಕಾದಲ್ಲಿ ಹಾಕಿಕೊಳ್ಳುವ ಪರಂಪರೆಯಿದೆ. ದರ್ಭೆಯ ಅಗ್ರಭಾಗದಲ್ಲಿ ಬ್ರಹ್ಮ, ಮಧ್ಯಭಾಗದಲ್ಲಿ ವಿಷ್ಣು ಮತ್ತು ಮೂಲಭಾಗ ದಲ್ಲಿ ಭಗವಾನ ಶಿವನು ವಾಸಿಸುತ್ತಾನೆ ಎಂದು ಹೇಳಲಾಗುತ್ತದೆ. ಶ್ರಾದ್ಧ ಕರ್ಮದಲ್ಲಿ ದರ್ಭೆಯ ಉಂಗುರವನ್ನು ಧರಿಸುವುದರಿಂದ ‘ನಾವು ಪವಿತ್ರರಾಗಿ ನಮ್ಮ ಪಿತೃಗಳ ಶಾಂತಿಗಾಗಿ ಶ್ರಾದ್ಧಕರ್ಮ ಮತ್ತು ಪಿಂಡದಾನವನ್ನು ಮಾಡುತ್ತೇವೆ, ಎಂಬುದು ಅದರ ಅರ್ಥವಾಗಿದೆ.

೧೧. ಸುವರ್ಣದಾನಕ್ಕಿಂತ ತಮ್ಮ ಪಿತೃಗಳಿಗಾಗಿ ಪಿಂಡದಾನ ಮತ್ತು ಅನ್ನದಾನ ಮಾಡುವುದು ಶ್ರೇಷ್ಠ ಎಂಬುದು ಕರ್ಣನ ಉದಾಹರಣೆಯಿಂದ ಗಮನಕ್ಕೆ ಬರುತ್ತದೆ

ಒಂದು ಪ್ರಚಲಿತ ಕಥೆಗನುಸಾರ ಕರ್ಣನ ಮರಣದ ಬಳಿಕ ಅವನ ಆತ್ಮವು ಸ್ವರ್ಗಕ್ಕೆ ಹೋಗುತ್ತದೆ, ಆಗ ಅವನಿಗೆ ಭೋಜನಕ್ಕಾಗಿ ಬಹಳಷ್ಟು ಬಂಗಾರ ಮತ್ತು ಆಭರಣಗಳನ್ನು ನೀಡಲಾಗುತ್ತದೆ. ಇದನ್ನು ನೋಡಿ ಕರ್ಣನ ಆತ್ಮಕ್ಕೆ ಪ್ರಶ್ನೆ ಮೂಡಿತು, ಆಗ ಅವನು ಇಂದ್ರದೇವನಿಗೆ ಭೋಜನದ ಬದಲು ಬಂಗಾರವನ್ನೇಕೆ ನೀಡಲಾಗಿದೆ ಎಂದು ಕೇಳಿದನು. ಆಗ ಇಂದ್ರನು ಕರ್ಣನಿಗೆ ‘ನೀನು ಜೀವಂತವಿರುವಾಗ ಜೀವನವಿಡೀ ಸುವರ್ಣದಾನವನ್ನೇ ಮಾಡಿರುವೆ, ಯಾವತ್ತೂ ನಿಮ್ಮ ಪಿತೃಗಳಿಗೆ ಅನ್ನದಾನ ಮಾಡಲಿಲ್ಲ ಎಂದು ಹೇಳಿದನು. ಆಗ ಕರ್ಣನು ‘ನನಗೆ ನನ್ನ ಪೂರ್ವಜರ ಬಗ್ಗೆ ಮಾಹಿತಿಯಿರಲಿಲ್ಲ. ಆದುದರಿಂದ ನಾನು ಅವರಿಗೆ ಏನನ್ನೂ ದಾನ ಮಾಡಲು ಸಾಧ್ಯವಾಗಲಿಲ್ಲ, ಎಂದು ಹೇಳಿದನು. ಕರ್ಣನಿಗೆ ಅವನ ತಪ್ಪನ್ನು ಸುಧಾರಿಸಿಕೊಳ್ಳಲು ಅವಕಾಶವನ್ನು ನೀಡಲಾಯಿತು ಮತ್ತು ಅವನನ್ನು ಪಿತೃ ಪಕ್ಷದ ೧೬ ದಿನಗಳವರೆಗೆ ಪೃಥ್ವಿಗೆ ಮರಳಿ ಕಳುಹಿಸಲಾಯಿತು. ಅಲ್ಲಿ ಅವನು ತನ್ನ ಪೂರ್ವಜರನ್ನು ಸ್ಮರಿಸಿ ಅವರ ಶ್ರಾದ್ಧವನ್ನು ಮಾಡಿದನು ಮತ್ತು ಅನ್ನದಾನವನ್ನು ಮಾಡಿದನು. ಹಾಗೆಯೇ ಅವರಿಗೆ ತರ್ಪಣವನ್ನೂ ನೀಡಿದನು. ಈ ಪ್ರಚಲಿತ ಕಥೆಯಿಂದ ನಮಗೆ ಸುವರ್ಣದಾನಕ್ಕಿಂತ ನಮ್ಮ ಪಿತೃಗಳಿಗೆ ಪಿಂಡದಾನ, ಅನ್ನದಾನ ಮತ್ತು ತರ್ಪಣ ನೀಡುವುದಕ್ಕೆ ಹೆಚ್ಚು ಮಹತ್ವವಿದೆ ಎಂಬುದು ತಿಳಿಯುತ್ತದೆ.

೧೨. ಅಜ್ಞಾನದಿಂದ ಹಿಂದೂವಿರೋಧಿಗಳು ಶ್ರಾದ್ಧದಂತಹ ವಿಧಿಯನ್ನು ಟೀಕಿಸುವುದು

ಹಿಂದೂವಿರೋಧಿಗಳು ಶ್ರಾದ್ಧದ ಸಂದರ್ಭದಲ್ಲಿ ಬ್ರಾಹ್ಮಣರನ್ನು ಗುರಿ ಮಾಡಿ ವಿವಿಧ ಆರೋಪಗಳನ್ನು ಮಾಡುತ್ತಾರೆ. ಶ್ರಾದ್ಧಾದಿ ವಿಧಿಗಳನ್ನು ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಬ್ರಾಹ್ಮಣರ ವಿಷಯದಲ್ಲಿ ಬರುವ ಉಲ್ಲೇಖದ ಸಂದರ್ಭದಲ್ಲಿ ತಿಳಿದುಕೊಂಡರೆ ಈ ಆರೋಪದಲ್ಲಿರುವ ಮಿಥ್ಯೆ ಬಹಿರಂಗವಾಗುತ್ತದೆ. ಉದಾಹರಣೆಗೆ ಶ್ರಾದ್ಧಕರ್ಮಗಳನ್ನು ಮಾಡುವ ಬ್ರಾಹ್ಮಣರ ವಿಷಯದಲ್ಲಿ ಶಾಸ್ತ್ರಗ್ರಂಥದಲ್ಲಿ ಕೆಲವು ನಿಯಮಗಳನ್ನು ಹೇಳಲಾಗಿದೆ, ಉದಾ. ಬ್ರಾಹ್ಮಣನು ವೇದಜ್ಞಾನಿಯಾಗಿರಬೇಕು. ಅವನು ಪರಿಶುದ್ಧನಾಗಿರಬೇಕು. ಅವನು ಶಾಂತಚಿತ್ತ, ನಿಯಮ-ಧರ್ಮದಿಂದ ನಡೆದುಕೊಳ್ಳುವವನು, ತಪಸ್ಸು ಮಾಡುವವನು, ಧರ್ಮಶಾಸ್ತ್ರದಲ್ಲಿ ಶ್ರದ್ಧೆ ಇರುವವನು, ತಂದೆಯನ್ನು ಗೌರವಿಸುವವನು, ಆಚಾರವಂತ ಮತ್ತು ಅಗ್ನಿಹೋತ್ರಿಯಾಗಿರಬೇಕು. ಒಂದು ವೇಳೆ ಇಂತಹ ಯೋಗ್ಯತೆಯುಳ್ಳ ಬ್ರಾಹ್ಮಣ ಸಿಗದಿದ್ದರೆ, ತತ್ತ್ವಜ್ಞಾನಿ ಯೋಗಿಯನ್ನು ಕರೆಯಿಸಿ ಶ್ರಾದ್ಧಕರ್ಮಗಳನ್ನು ಮಾಡಿಸಿಕೊಳ್ಳಬೇಕು. ಇಂತಹ ಯೋಗಿಯೂ ಸಿಗದಿದ್ದರೆ, ಯಾವುದಾದರೂ ವಾನಪ್ರಸ್ಥಾಶ್ರಮಿಗೆ ಅನ್ನದಾನವನ್ನು ಮಾಡಿ ಶ್ರಾದ್ಧಕರ್ಮವನ್ನು ಮಾಡಬೇಕು. ವಾನಪ್ರಸ್ಥಾಮಿಯು ಸಿಗದಿದ್ದರೆ, ಮೋಕ್ಷದ ಇಚ್ಛೆಯನ್ನು ಇಟ್ಟುಕೊಳ್ಳುವ, ಅರ್ಥಾತ್ ಸಾಧಕವೃತ್ತಿಯನ್ನು ಹೊಂದಿರುವ ಗೃಹಸ್ಥನಿಗೆ ಅನ್ನದಾನವನ್ನು ಮಾಡಬೇಕು. ಯಾವ ಬ್ರಾಹ್ಮಣನು ಧ್ಯಾನ-ಪೂಜೆ, ಯಜ್ಞ ಇತ್ಯಾದಿ ನಿಯಮಿತ ಕರ್ಮಗಳನ್ನು ಮಾಡುವುದಿಲ್ಲವೋ, ಅವನನ್ನು ಕರೆಯಿಸಿ ಶ್ರಾದ್ಧಕರ್ಮಗಳನ್ನು ಮಾಡುವುದರಿಂದ ಪಿತೃಗಳಿಗೆ ಅಸುರಿ ಯೋನಿ ಪ್ರಾಪ್ತವಾಗುತ್ತದೆ. ಇಷ್ಟೇ ಅಲ್ಲ, ಮದ್ಯಪಾನ ಮಾಡುವವನು, ವೇಶ್ಯಾ ಗಮನ ಮಾಡುವವನು, ಅಸತ್ಯ ನುಡಿಯುವವನು, ತಂದೆ-ತಾಯಿ, ಗುರುಗಳಿಗೆ ಗೌರವ ನೀಡದವನು, ಚಾರಿತ್ರ್ಯಶೂನ್ಯ, ವೇದಗಳನ್ನು ನಿಂದಿಸುವವನು, ಈಶ್ವರನ ಮೇಲೆ ವಿಶ್ವಾಸ ಇಡದಿರುವವನು, ಹಾಗೆಯೇ ಉಪಕಾರಗಳನ್ನು ಸ್ಮರಿಸದಿರುವವನು ಇಂತಹ ಬ್ರಾಹ್ಮಣರನ್ನು ಶ್ರಾದ್ಧಕರ್ಮ ಮಾಡಲು ಕರೆಯಬಾರದು, ಅಲ್ಲದೇ ಅವರಿಗೆ ದಕ್ಷಿಣೆಯನ್ನು ಕೂಡ ಕೊಡಬಾರದು. ಯಾವ ದಾನವನ್ನು ಸದಾಚಾರಿ ವ್ಯಕ್ತಿಗೆ ಕೊಡಲಾಗುತ್ತದೆಯೋ, ಅದನ್ನೇ ‘ದಾನ ಎನ್ನಲಾಗುತ್ತದೆ. ಶಾಸ್ತ್ರದಲ್ಲಿ ಹೇಳಿದ ಈ ನಿಯಮಗಳಿಂದ ವಿರೋಧಕರ ಆರೋಪಗಳಲ್ಲಿ ಹುರುಳಿಲ್ಲ ಎಂದು ಸ್ಪಷ್ಟವಾಗುತ್ತದೆ. – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಹಿಂದೂ ಧರ್ಮದಲ್ಲಿನ ಸಿದ್ಧಾಂತಗಳು ವೈಶ್ವಿಕ ಆಗಿರುವುದರಿಂದ ಅವುಗಳಿಗೆ ಯಾವುದೇ ಧರ್ಮದ (ಪಂಥದ) ಬಂಧನವಿಲ್ಲದಿರುವುದು ಮತ್ತು ಇತರ ಧರ್ಮದವರಿಗೂ ಅದರ ಲಾಭವಾಗುವುದು

ಹಿಂದೂ ಧರ್ಮದಲ್ಲಿನ ಸಿದ್ಧಾಂತಗಳನ್ನು ಚಿರಂತನ ಮತ್ತು ವೈಶ್ವಿಕ ಸಿದ್ಧಾಂತಗಳೆಂದು ತಿಳಿಯಲಾಗುತ್ತದೆ. ಹಿಂದೂವಿರಲಿ ಅಥವಾ ಇತರ ಯಾವುದೇ ಧರ್ಮದ ವ್ಯಕ್ತಿಯಾಗಿರಲಿ, ಯಾರು ಧರ್ಮಶಾಸ್ತ್ರವನ್ನು ಪಾಲಿಸುತ್ತಾರೆಯೋ, ಅವರಿಗೆ ಖಂಡಿತವಾಗಿಯೂ ಅದರ ಲಾಭ ಸಿಗುತ್ತದೆ. ಯಾವ ರೀತಿ ಯಾವುದಾದರೂಂದು ಔಷಧಿಯನ್ನು ತೆಗೆದುಕೊಳ್ಳುವ ವ್ಯಕ್ತಿಗೆ, ಆ ವ್ಯಕ್ತಿ ಯಾವುದೇ ಪಂಥ, ಜಾತಿ, ಧರ್ಮದವನಾಗಿರಲಿ, ಅವನಿಗೆ ಅದರ ಲಾಭವಾಗುತ್ತದೆ, ಅದೇ ರೀತಿ ಹಿಂದೂ ಧರ್ಮಶಾಸ್ತ್ರಾನುಸಾರ ಕೃತಿಯನ್ನು ಮಾಡುವುದರಿಂದ ಎಲ್ಲರಿಗೂ ಲಾಭವಾಗುತ್ತದೆ.

ಸದ್ಯ ವಿದೇಶಗಳಲ್ಲಿನ ಪ್ರಗತಿಶೀಲ ದೇಶಗಳಲ್ಲಿ ಬಹುತೇಕ (ಶೇ. ೬೦ ರಿಂದ ೮೦ ರಷ್ಟು) ಜನರು ಮಾನಸಿಕ ರೋಗಗಳಿಂದ ಬಳಲುತ್ತಿದ್ದಾರೆ. ಅಮೇರಿಕಾದಲ್ಲಿಯೂ ೫ ವ್ಯಕ್ತಿಗಳಲ್ಲಿನ ಒಬ್ಬ ವ್ಯಕ್ತಿಗೆ ಮಾನಸಿಕ ರೋಗವಿದೆ, ಅದರ ತುಲನೆಯಲ್ಲಿ ಭಾರತ ದಂತಹ ಅಭಿವೃದ್ಧಿ ಹೊಂದುತ್ತಿರುವ; ಆದರೆ ಆಧ್ಯಾತ್ಮಿಕ ದೇಶ ವಾಗಿರುವ ಭಾರತದಲ್ಲಿ ಅಂತಹವರ ಪ್ರಮಾಣ ಅಲ್ಪವೇಕೆ, ಇದರ ಅಭ್ಯಾಸವನ್ನು ಏಕೆ ಮಾಡಬೇಕು. ಕೇವಲ ಆಧುನಿಕ ವಿಜ್ಞಾನ ಮತ್ತು ಭೌತಿಕತೆಯ ಆಧಾರದಲ್ಲಿ ಎಲ್ಲ ಸಮಸ್ಯೆಗಳ ಮೇಲೆ ಉಪಾಯ ಸಿಗುವುದಿಲ್ಲ. ಇದೇ ಕಾರಣದಿಂದ ಗಯಾ(ಬಿಹಾರ) ಈ ತೀರ್ಥ ಕ್ಷೇತ್ರದಲ್ಲಿ ಅನೇಕ ವಿದೇಶಿ ನಾಗರಿಕರು ಶ್ರಾದ್ಧ-ಪಿಂಡದಾನ, ತರ್ಪಣ ಇತ್ಯಾದಿ ಮಾಡಲು ಬರುತ್ತಾರೆ.

ಹಾಲಿವುಡ್‌ನ ಪ್ರಸಿದ್ಧ ನಟ ಸಿಲ್ವೆಸ್ಟರ್ ಸ್ಟೆಲೋನ್ ಇವರ ಮೃತ ಪುತ್ರನ ಶಾಂತಿಗಾಗಿ ಹರಿದ್ವಾರದಲ್ಲಿ ಪಿಂಡದಾನ ಮತ್ತು ಶ್ರಾದ್ಧ ಮಾಡುವುದು

ಹಾಲಿವುಡ್‌ನ ಪ್ರಸಿದ್ಧ ನಟ ಸಿಲ್ವೆಸ್ಟರ್ ಸ್ಟೆಲೋನ್ ಇವರಿಗೆ ಅವರ ಮರಣ ಹೊಂದಿದ ಮಗನ ಆತ್ಮದ ನಿರಂತರ ಅರಿವಾಗುತ್ತಿತ್ತು. ಇದರಿಂದ ಅವರು ಮಗನ ಆತ್ಮಕ್ಕೆ ಶಾಂತಿ ದೊರಕಬೇಕು ಎಂದು ಸಂಪೂರ್ಣ ಕುಟುಂಬವನ್ನು ಭಾರತಕ್ಕೆ ಕಳುಹಿಸಿ ಹರಿದ್ವಾರದಲ್ಲಿ ಪಿಂಡದಾನ ಮತ್ತು ಶ್ರಾದ್ಧ ವಿಧಿಯನ್ನು ಮಾಡಿಸಿಕೊಂಡರು. ಈ ವಿಧಿಯ ಬಳಿಕ ಒಬ್ಬನೇ ಒಬ್ಬ ಹಿಂದೂವು ಅವರಿಗೆ ನೀವು ಕ್ರೈಸ್ತನಾಗಿದ್ದೀರಿ ಹಾಗಾಗಿ ಪಿಂಡದಾನ ಆಗಲು ಸಾಧ್ಯವಿಲ್ಲ ವೆಂದು ಹೇಳಿದ್ದಾರೆಯೇ ? ಅಂದರೆ ಹಿಂದೂ ಧರ್ಮದಲ್ಲಿನ ಶ್ರಾದ್ಧವಿಧಿಗಳಿಗೆ ಮತ್ತು ಪಂಥಗಳಿಗೆ ಯಾವುದೇ ಸಂಬಂಧವಿಲ್ಲ.