ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept

  • 'ಶ್ರೀ ಮಹಾಲಕ್ಷ್ಮಿದೇವಿ ಅಭಿವೃದ್ಧಿ ಯೋಜನೆ'ಯ ಕೆಲಸದಲ್ಲಿ ಪುರಾತತ್ವ ಇಲಾಖೆಯಿಂದ ಅಕ್ಷಮ್ಯ ನಿರ್ಲಕ್ಷ್ಯ ಮತ್ತು ಹಲವು ಲೋಪಗಳು

  • ಶ್ರೀ ಮಹಾಲಕ್ಷ್ಮಿ ದೇವಿ ದೇವಸ್ಥಾನದಲ್ಲಿ ನೀರು ಸೋರಿಕೆ

  • ಅನೇಕ ಸಣ್ಣ ಮೂರ್ತಿಗಳ ಅಂಗಾಂಗಗಳು ಭಗ್ನ

ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳ ಪ್ರತಿನಿಧಿಗಳು, ಕಾರ್ಯಕರ್ತರು

ಕೊಲ್ಲಾಪುರ, ಜುಲೈ ೨೩ (ವಾರ್ತೆ) – ‘ಶ್ರೀ ಮಹಾಲಕ್ಷ್ಮಿ ದೇವಿ ಅಭಿವೃದ್ಧಿ ಯೋಜನೆ’ಗೆ ಸಂಬಂಧಿಸಿದಂತೆ ಪುರಾತತ್ವ ಇಲಾಖೆಯು ಮಾಡುತ್ತಿರುವ ಕೆಲಸದ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತ, ದೇವಸ್ಥಾನ ಆಡಳಿತ, ಪುರಾತತ್ವ ಇಲಾಖೆ, ಜನಪ್ರತಿನಿಧಿಗಳು ಹಾಗೂ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳ ನಡುವೆ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಎಲ್ಲಾ ಹಿಂದುತ್ವನಿಷ್ಠರು ಪುರಾತತ್ವ ಇಲಾಖೆಯ ಕೆಲಸದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಅತ್ಯಂತ ಆಕ್ರೋಶಿತ ಪ್ರತಿಕ್ರಿಯೆಗಳನ್ನು ನೀಡಿದರು. ಈ ಎಲ್ಲಾ ಗೊಂದಲಗಳಿಗೆ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ವಿಲಾಸ್ ವಹಾನೆ ಸೇರಿದಂತೆ ಜವಾಬ್ದಾರಿಯುತ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಎಲ್ಲರೂ ಪಟ್ಟುಹಿಡಿದರು. ಈ ಸಭೆಯಲ್ಲಿ ವಿಲಾಸ್ ವಹಾನೆ ಹಾಗೂ ಕೆಲಸಕ್ಕಾಗಿ ನೇಮಕಗೊಂಡ ಖಾಸಗಿ ಸಂಸ್ಥೆಯ ಅಧಿಕಾರಿಗಳು ಬೇಜವಾಬ್ದಾರಿಯ ಉತ್ತರಗಳನ್ನು ನೀಡಿದರು.

ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಮೂರ್ತಿ ಅಭ್ಯಾಸಕ ವಕೀಲ ಪ್ರಸನ್ನ ಮಾಲೇಕರ್

ಎಲ್ಲರ ವಾದವನ್ನು ಆಲಿಸಿದ ಜಿಲ್ಲಾಧಿಕಾರಿ ಹಾಗೂ ‘ಪಶ್ಚಿಮ ಮಹಾರಾಷ್ಟ್ರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ’ಯ ಅಧ್ಯಕ್ಷರಾದ ಡಾ. ವಿಜಯ ರಾಠೋಡ್, “ಆಡಳಿತಾತ್ಮಕ ಮಟ್ಟದಲ್ಲಿ ಆಗಿರುವ ತಪ್ಪುಗಳು ಮುಂದಿನ ದಿನಗಳಲ್ಲಿ ಆಗದಂತೆ ಎಚ್ಚರ ವಹಿಸುತ್ತೇವೆ. ಇದುವರೆಗೆ ನಡೆದ ಕೆಲಸದ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳುವ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ಘೋಷಿಸಿದರು. ಶಿವಸೇನೆಯ ಶಾಸಕರಾದ ಶ್ರೀ. ರಾಜೇಶ ಕ್ಷೀರಸಾಗರ್ ಅವರು, “ಎಲ್ಲಾ ಹಿಂದುತ್ವನಿಷ್ಟರ ಭಾವನೆಗಳು ಸರಿಯಾಗಿವೆ. ಪ್ರಸ್ತುತ ನಡೆಯುತ್ತಿರುವ ಕೆಲಸವು ಸರಿಯಾದ ರೀತಿಯಲ್ಲೇ ನಡೆಯಬೇಕು. ದೇವಸ್ಥಾನದ ಕೆಲಸದಿಂದಾಗಿ ಆಗಿರುವ ಹಾನಿಯ ಬಗ್ಗೆ ತನಿಖೆಯಾಗಲೇಬೇಕು. ಯಾವ ಕೆಲಸಕ್ಕೆ ತಜ್ಞರ ನೇಮಕ ಅಗತ್ಯವಿದೆಯೋ, ಅಲ್ಲಿ ತಜ್ಞರನ್ನೇ ನೇಮಿಸಿ. ಮುಂದಿನ ಎಲ್ಲಾ ಕೆಲಸಗಳನ್ನು ಮಾಡುವಾಗ ಕಟ್ಟುನಿಟ್ಟಾಗಿ ಮತ್ತು ಸರಿಯಾದ ರೀತಿಯಲ್ಲೇ ಮಾಡಬೇಕು. ಶ್ರೀ ಮಹಾಲಕ್ಷ್ಮಿ ದೇವಿ ದೇವಸ್ಥಾನದಲ್ಲಿ ನೀರು ಸೋರುತ್ತಿರುವುದು ಅತ್ಯಂತ ಅಸಹನೀಯವಾಗಿದ್ದು, ಇಂತಹ ಘಟನೆಗಳನ್ನು ಮುಂದೆ ಸಹಿಸುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.

ಸಭೆಗೆ ಉಪಸ್ಥಿತರಿದ್ದ ಶಿವಸೇನೆಯ ಶಾಸಕ ರಾಜೇಶ್ ಕ್ಷೀರಸಾಗರ್, ಜಿಲ್ಲಾಧಿಕಾರಿ, ಹಾಗೂ ಇತರ ಅಧಿಕಾರಿಗಳು

ಈ ಸಭೆಯಲ್ಲಿ ಹಿಂದೂ ಜನಜಾಗೃತಿ ಸಮಿತಿ, ಹಿಂದೂ ಏಕತಾ ಆಂದೋಲನ, ಶಿವಸೇನೆ, ಹಿಂದೂ ಮಹಾಸಭಾ, ವಿಶ್ವ ಹಿಂದೂ ಪರಿಷತ್, ಮಂದಿರ ಮಹಾಸಂಘ, ಶ್ರೀ ಮಹಾಲಕ್ಷ್ಮಿ ದೇವಿ ದೇವಸ್ಥಾನದ ಅರ್ಚಕರು, ದೇವಸ್ಥಾನದ ಪದಾಧಿಕಾರಿಗಳು ಸೇರಿದಂತೆ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳ ಪ್ರತಿನಿಧಿಗಳು, ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾತನಾಡುತ್ತಿರುವ ಶಿವಸೇನೆಯ ಶಾಸಕ ರಾಜೇಶ್ ಕ್ಷೀರಸಾಗರ್ (ಗುಲಾಬಿ ಜಾಕೆಟ್), ಹಾಗೂ ಉಪಸ್ಥಿತರಿದ್ದ ಇತರ ಅಧಿಕಾರಿಗಳು

ಹಿಂದುತ್ವನಿಷ್ಠರು ಎತ್ತಿದ ಪ್ರಮುಖ ಆಕ್ಷೇಪಣೆಗಳು

. ದೇವಸ್ಥಾನದ ಕೆಲಸ ಮಾಡುವಾಗ ‘ಸ್ಯಾಂಡ್ ಬ್ಲಾಸ್ಟಿಂಗ್’ (ಮರಳನ್ನು ಬಳಸಿ ಬಂದೂಕಿನ ಮೂಲಕ ವೇಗವಾಗಿ ಕಲ್ಲಿನ ಮೇಲೆ ನೀರಿನ ಸ್ಪ್ರೇ ಹೊಡೆಯುವ ಪ್ರಕ್ರಿಯೆ) ಬಳಸಲಾಗುತ್ತಿದೆ. ಇದರಿಂದಾಗಿ ಅನೇಕ ಸಣ್ಣ-ಸಣ್ಣ ಮೂರ್ತಿಗಳ ಕಿವಿ, ಮೂಗು, ಕಣ್ಣುಗಳು ಹಾಗೂ ಅಂಗಾಂಗಗಳು ಮುರಿದುಬಿದ್ದಿವೆ. ಹಲವು ಸಣ್ಣ ಮೂರ್ತಿಗಳು ಸಂಪೂರ್ಣ ಸವೆದು ಹೋಗಿದ್ದು, ಸರಿಪಡಿಸಲಾಗದಷ್ಟು ಹಾನಿಯಾಗಿದೆ.

. ಕಳೆದ ತಿಂಗಳು ದೇವಸ್ಥಾನದ ಮೇಲೆ ಸ್ಥಾಪಿಸಲಾದ ಕಳಸವನ್ನು ಯಾವುದೇ ರೀತಿಯ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸದೇ ಸ್ಥಾಪಿಸಲಾಯಿತು. ಕಳಸ ಸ್ಥಾಪನೆಗೆ ಶಂಕರಾಚಾರ್ಯರನ್ನಾಗಲಿ ಅಥವಾ ಯಾವುದೇ ಧಾರ್ಮಿಕ ಅಧಿಕೃತ ವ್ಯಕ್ತಿಗಳನ್ನಾಗಲಿ ಕರೆಯಲಿಲ್ಲ. ಶ್ರೇಯಸ್ಸು ಪಡೆಯುವ ಧಾವಂತದಲ್ಲೇ ಈ ಕೆಲಸವನ್ನು ಮಾಡಲಾಯಿತು.

. ದೇವಸ್ಥಾನದ ಆವರಣದಲ್ಲಿದ್ದ ಪುರಾತನ ಕಾರಂಜಿಯನ್ನು ಒಂದೇ ರಾತ್ರಿಯಲ್ಲಿ ಕೆಡವಲಾಯಿತು. ಈ ಕುರಿತು ದೇವಸ್ಥಾನ ಸಮಿತಿಯು ಯಾವುದೇ ತೃಪ್ತಿಕರ ಉತ್ತರ ನೀಡಿಲ್ಲ.

. ದೇವಸ್ಥಾನದ ಆವರಣದಲ್ಲಿರುವ ಕಲ್ಲುಗಳನ್ನು ಸ್ವಚ್ಛಗೊಳಿಸುವಾಗ ಅನುಮತಿ ಇಲ್ಲದಿದ್ದರೂ ‘ಬ್ರೇಕರ್’ ಬಳಸುವುದು, ಮಾತೃಲಿಂಗ ದೇವಸ್ಥಾನದಲ್ಲಿ ಕಾರ್ಮಿಕರು ಮಲಗುವುದು ಸೇರಿದಂತೆ ಹಲವು ದುರ್ನಡತೆಗಳು ಬೆಳಕಿಗೆ ಬಂದಿವೆ.

. ದೇವಸ್ಥಾನದ ಮೂರ್ತಿಗಳ ಸಂರಕ್ಷಣೆ ನಡೆಯುತ್ತಿರುವಾಗ, ಅವುಗಳನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಿಡದೆ ಚೀಲಗಳಲ್ಲಿ ತುಂಬಿಡಲಾಗಿದೆ.

. ‘ಗರುಡ ಮಂಟಪ’ದ ಕೆಲಸ ಕಳೆದ ೩ ವರ್ಷಗಳಿಂದ ನಡೆಯುತ್ತಿದ್ದು, ಪ್ರತಿ ಬಾರಿಯೂ ಕೆಲಸಕ್ಕೆ ಕಾಲಾವಕಾಶವನ್ನು ವಿಸ್ತರಿಸಲಾಗುತ್ತಿದೆ.

ಸಂಪಾದಕೀಯ ನಿಲುವು

ದೇವಸ್ಥಾನದ ಕೆಲಸವನ್ನೂ ಸರಿಯಾಗಿ ಮಾಡಲು ಸಾಧ್ಯವಾಗದ ಪುರಾತತ್ವ ಇಲಾಖೆಯಿಂದ, ಛತ್ರಪತಿ ಶಿವಾಜಿ ಮಹಾರಾಜರ ಅನೇಕ ಕೋಟೆ-ಕೊತ್ತಲಗಳ ಮೇಲೆ ಆಗಿರುವ ಮತಾಂಧರ ಅತಿಕ್ರಮಣವನ್ನೂ ತಡೆಯಲು ಸಾಧ್ಯವಾಗಿಲ್ಲ. ಇಂತಹ ಅಸಮರ್ಥ ಇಲಾಖೆಯನ್ನು ವಜಾಗೊಳಿಸಿ ದಕ್ಷ ಅಧಿಕಾರಿಗಳನ್ನು ನೇಮಿಸುವುದು ಅಗತ್ಯ!