ಛತ್ತೀಸ್‌ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ

ಸೋಮನಾಥ ಶಿವಲಿಂಗದ ದಿವ್ಯಾಂಶಗಳ ದರ್ಶನಕ್ಕಾಗಿ ಮುಖ್ಯಮಂತ್ರಿಗಳ ಸಹಕಾರದ ಆಶ್ವಾಸನೆ!

ಸನಾತನ ಸಂಸ್ಥೆಯವತಿಯಿಂದ ಶ್ರೀಕೃಷ್ಣಾರ್ಜುನನ ಪ್ರತಿಮೆಯನ್ನು ಉಡುಗೋರೆಯಾಗಿ ನೀಡುವಾಗ ಎಡಗಡೆಯಿಂದ ಶ್ರೀ. ಚೇತನ ರಾಜಹಂಸ, ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಹಾಗೂ ಪ್ರತಿಮೆಯನ್ನು ಸ್ವೀಕರಿಸುವಾಗ ಮುಖ್ಯಮಂತ್ರಿ ಶ್ರೀ. ವಿಷ್ಣುದೇವ ಸಾಯ ಮತ್ತು ಭಾಜಪದ ಛತ್ತೀಸ್‌ಗಢ ಉಪಾಧ್ಯಕ್ಷ ಶ್ರೀ. ಪ್ರಬಲ ಪ್ರತಾಪ ಜುದೇವ

ರಾಯಪುರ (ಛತ್ತೀಸ್‌ಗಢ) – ರಾಜ್ಯದ ವಿವಿಧ ತೀರ್ಥ ಕ್ಷೇತ್ರಗಳು, ಪವಿತ್ರ ನದಿಗಳು ಹಾಗೂ ಪೌರಾಣಿಕ ಸ್ಥಳಗಳಲ್ಲಿನ ಆಧ್ಯಾತ್ಮಿಕ ಮೌಲ್ಯವಿರುವ ವಸ್ತುಗಳು ಮತ್ತು ವಾಸ್ತುಗಳನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವ ದೃಷ್ಟಿಯಿಂದ ರಾಜ್ಯ ಸರಕಾರವು ‘ಸನಾತನ ಸಂಸ್ಥೆ’ಗೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡಲಿದೆ ಎಂದು ಛತ್ತೀಸ್‌ಗಢದ ಮುಖ್ಯಮಂತ್ರಿ ಶ್ರೀ. ವಿಷ್ಣುದೇವ ಸಾಯ ಅವರು ಮಹತ್ವದ ಆಶ್ವಾಸನೆ ನೀಡಿದರು. ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ ಅವರು ಇತ್ತೀಚೆಗೆ ಛತ್ತೀಸ್‌ಗಢದ ಮುಖ್ಯಮಂತ್ರಿ ಶ್ರೀ. ವಿಷ್ಣುದೇವ ಸಾಯ ಅವರನ್ನು ಭೇಟಿಯಾದರು. ಈ ಭೇಟಿಯ ಸಮಯದಲ್ಲಿ ಸಾಂಸ್ಕೃತಿಕ ವಾರಸ್ದಾರಿಯ ಸಂರಕ್ಷಣೆಯ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು. ಆ ಸಮಯದಲ್ಲಿ ಮುಖ್ಯಮಂತ್ರಿಗಳು ಈ ಆಶ್ವಾಸನೆ ನೀಡಿದರು.

ಮುಖ್ಯಮಂತ್ರಿ ಶ್ರೀ. ವಿಷ್ಣುದೇವ ಸಾಯ ಅವರ ಹಸ್ತದಿಂದ ಉಡುಗೊರೆಯನ್ನು ಸ್ವೀಕರಿಸುವಾಗ ಎಡಗಡೆಯಿಂದ ಸನಾತನ ಸಂಸ್ಥೆಯ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ

ಸೋಮನಾಥ ಶಿವಲಿಂಗದ ದಿವ್ಯಾಂಶಗಳ ದರ್ಶನವನ್ನು ಭಕ್ತರಿಗೆ ಕಲ್ಪಿಸಲಾಗುವುದು

ಒಂದು ಸಾವಿರ ವರ್ಷಗಳ ಹಿಂದೆ ಗಜ್ನಿಯ ಮಹಮೂದನು ಐತಿಹಾಸಿಕ ಸೊರಟಿ ಸೋಮನಾಥ ಶಿವಲಿಂಗವನ್ನು ಧ್ವಂಸಗೊಳಿಸಿದ್ದನು; ಆದರೆ ಸೌಭಾಗ್ಯವಶಾತ್ ಈ ಶಿವಲಿಂಗದ ಕೆಲವು ‘ದಿವ್ಯಾಂಶ’ಗಳು ಇಂದಿಗೂ ಸುರಕ್ಷಿತವಾಗಿವೆ. ನಿರ್ದಿಷ್ಟ ಕಾಂತೀಯ ತತ್ವವನ್ನು ಹೊಂದಿರುವ ಈ ಸೋಮನಾಥ ಶಿವಲಿಂಗದ ದಿವ್ಯಾಂಶಗಳ ದರ್ಶನವನ್ನು ಛತ್ತೀಸ್‌ಗಢದ ಭಕ್ತರಿಗೂ ಪಡೆಯಲು ಸಾಧ್ಯವಾಗುವಂತೆ, ಕೇಂದ್ರ ಸರಕಾರದ ‘ಸೋಮನಾಥ ಸ್ವಾಭಿಮಾನ ಪರ್ವ’ ಈ ಅಭಿಯಾನದಡಿ ರಾಜ್ಯದಲ್ಲಿ ವಿಶೇಷ ಆಯೋಜನೆ ಮಾಡುವ ಕುರಿತಾಗಿಯೂ ಮುಖ್ಯಮಂತ್ರಿ ಶ್ರೀ. ಸಾಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಸರಕಾರದ ವತಿಯಿಂದ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಮುಖ್ಯಮಂತ್ರಿ ಶ್ರೀ. ವಿಷ್ಣುದೇವ ಸಾಯ ಅವರನ್ನು ಭೇಟಿಯಾಗಲು ತೆರಳಿದ್ದ ಶಿಷ್ಟಮಂಡಳದಲ್ಲಿ ಭಾಗವಹಿಸಿದ್ದ ಸಂತರು ಹಾಗೂ ಇತರೆ ಗಣ್ಯ ವ್ಯಕ್ತಿಗಳು ಹಾಗೂ ಹಿಂದುತ್ವನಿಷ್ಠರು!

ಸನಾತನದ ಕಾರ್ಯವನ್ನು ಮುಖ್ಯಮಂತ್ರಿಗಳಿಂದ ಶ್ಲಾಘನೆ

ಈ ವಿಶೇಷ ಭೇಟಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ಸನಾತನ ಸಂಸ್ಥೆಯು ದೇಶಾದ್ಯಂತ ನಡೆಸುತ್ತಿರುವ ರಾಷ್ಟ್ರ ಮತ್ತು ಧರ್ಮ ಹಿತದ ಕಾರ್ಯ ಹಾಗೂ ಗೋವಾದಲ್ಲಿರುವ ಸನಾತನದ ಆಶ್ರಮದಲ್ಲಿ ನಡೆಯುತ್ತಿರುವ ಆಧ್ಯಾತ್ಮಿಕ ಸಂಶೋಧನೆಯ ವಿವಿಧ ಉಪಕ್ರಮಗಳ ಕುರಿತು ಅತ್ಯಂತ ಶ್ರದ್ಧೆಯಿಂದ ಮಾಹಿತಿ ಪಡೆದುಕೊಂಡರು. ಈ ಮಹತ್ವದ ಸಂದರ್ಭದಲ್ಲಿ ಭಾಜಪದ ರಾಜ್ಯ ಉಪಾಧ್ಯಕ್ಷ ಶ್ರೀ. ಪ್ರಬಲ ಪ್ರತಾಪ ಜುದೇವ, ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ, ಹಿಂದು ರಾಷ್ಟ್ರ ಸಮನ್ವಯ ಸಮಿತಿಯ ವಕೀಲ ಆಶಿಷ ಶರ್ಮಾ, ಹಿಂದು ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯ ಸಂಘಟಕ ಶ್ರೀ. ಸುನೀಲ ಘನವಟ ಹಾಗೂ ಸಮಿತಿಯ ಛತ್ತೀಸ್‌ಗಢದ ಶ್ರೀಯುತರುಗಳಾದ ಕಮಲ ವಿಶ್ವಾಸ, ಆಶಿಷ ಪರೇಡಾ, ರೋಹಿತಸಿಂಹ ತಿರಂಗಾ, ಹೇಮಂತ ಕಾನಸಕರ ಮತ್ತು ನೀರಜ ಕ್ಷೀರಸಾಗರ ಉಪಸ್ಥಿತರಿದ್ದರು.