೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri

  • ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಸಭೆಯಲ್ಲಿ ನಿರ್ಧಾರ

  • ಟ್ರಸ್ಟ್‌ಗೆ ಅಧಿಕೃತ ವಕ್ತಾರರ ನೇಮಕವೂ ಶೀಘ್ರ

  • ಪ್ರಧಾನ ಕಾರ್ಯದರ್ಶಿ ಹುದ್ದೆಯ ಹೆಸರಿನ ಬಗ್ಗೆ ಇನ್ನೂ ಮೂಡದ ಒಮ್ಮತ

ಪೂಜ್ಯ ಸ್ವಾಮಿ ಗೋವಿಂದದೇವ ಗಿರಿ

ಅಯೋಧ್ಯೆ (ಉತ್ತರ ಪ್ರದೇಶ) – ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಜುಲೈ ೨೨ ರಂದು ನಡೆದ ಸಭೆಯಲ್ಲಿ ೯ ಸಂತರನ್ನೊಳಗೊಂಡ ಧಾರ್ಮಿಕ ಸಮಿತಿಯನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಅಯೋಧ್ಯೆಯ ೫ ಸಂತರು ಮತ್ತು ಟ್ರಸ್ಟ್‌ನ ೪ ಸಂತರು ಸೇರಿದ್ದಾರೆ. ಟ್ರಸ್ಟ್‌ನ ಖಜಾಂಚಿ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರನ್ನು ಈ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಜೊತೆಗೆ ಸಮಾಜ ಮತ್ತು ಮಾಧ್ಯಮಗಳೊಂದಿಗೆ ನಿಯಮಿತವಾಗಿ ಸಂವಹನ ನಡೆಸಲು ಅಧಿಕೃತ ವಕ್ತಾರರನ್ನು ನೇಮಿಸಲು ಟ್ರಸ್ಟ್ ನಿರ್ಧರಿಸಿದೆ. ಈ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಮತ್ತು ೩ ವಿಶ್ವಸ್ತರುಗಳ (ಟ್ರಸ್ಟಿಗಳು) ಹೆಸರುಗಳನ್ನು ಅಂತಿಮಗೊಳಿಸಬೇಕಿತ್ತು; ಆದರೆ ಅದು ಸಾಧ್ಯವಾಗಲಿಲ್ಲ. ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಜರಂಗ್ ಲಾಲ್ ಬಾಗಡಾ ಅವರ ಹೆಸರನ್ನು ಸೂಚಿಸಲಾಗಿತ್ತು; ಆದರೆ ಅದಕ್ಕೆ ಒಮ್ಮತ ಮೂಡಲಿಲ್ಲ. ಅಯೋಧ್ಯೆಯ ಸಂತರಿಗೆ ಸ್ಥಳೀಯ ವ್ಯಕ್ತಿಯನ್ನೇ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲು ಇಷ್ಟವಿದೆ. ಹಾಗಾಗಿ ಈ ವಿಷಯವನ್ನು ಮುಂದೂಡಲಾಯಿತು. ಮುಂದಿನ ಸಭೆಯು ಸೆಪ್ಟೆಂಬರ್ ೨ ರಂದು ನಡೆಯಲಿದ್ದು, ಅದರಲ್ಲಿಯೇ ಹೊಸ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ (CEO) ಹೆಸರುಗಳನ್ನು ಘೋಷಿಸಲಾಗುವುದು.

ಟ್ರಸ್ಟ್‌ನ ಸಭೆಯು ಇಲ್ಲಿನ ಶ್ರೀ ಸ್ವಾಮಿ ಮಣಿ ರಾಮದಾಸ್ ಛಾವಣಿಯಲ್ಲಿ ಮಧ್ಯಾಹ್ನ ೩ ರಿಂದ ಸಂಜೆ ೫ ಗಂಟೆಯವರೆಗೆ ನಡೆಯಿತು. ಟ್ರಸ್ಟ್‌ನ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಮಹಾರಾಜ್ ಅವರು ಸ್ವತಃ ಈ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿಲ್ಲ!

ವಿವಿಧ ಆರೋಪಗಳು ಮತ್ತು ಅಪಪ್ರಚಾರಗಳ ನಡುವೆಯೂ ಶ್ರೀರಾಮಮಂದಿರಕ್ಕೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಯಾವುದೇ ಇಳಿಮುಖವಾಗಿಲ್ಲ ಎಂದು ಟ್ರಸ್ಟ್ ತಿಳಿಸಿದೆ. ಇದು ಕೋಟ್ಯಂತರ ರಾಮಭಕ್ತರ ಅಚಲ ನಂಬಿಕೆಗೆ ಸಾಕ್ಷಿಯಾಗಿದೆ. ಇದಕ್ಕಾಗಿ ಸಂತ ಸಮಾಜ, ಭಕ್ತರು ಮತ್ತು ಅಯೋಧ್ಯೆಯ ನಿವಾಸಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು.

ವಿಶೇಷ ತನಿಖಾ ತಂಡದ (SIT) ವರದಿ ಇನ್ನೂ ಲಭ್ಯವಾಗಿಲ್ಲ

ಕಾಣಿಕೆ ಎಣಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಅಂತಿಮ ವರದಿ ಇನ್ನೂ ಲಭ್ಯವಾಗಿಲ್ಲ ಎಂದು ಟ್ರಸ್ಟ್ ತಿಳಿಸಿದೆ. ಹೀಗಾಗಿ ಈ ವಿಚಾರದ ಕುರಿತು ಸುದೀರ್ಘ ಚರ್ಚೆ ನಡೆಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆ ಮತ್ತು ನ್ಯಾಯಾಲಯದ ಆದೇಶವನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ.