Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !

ಕೇಂದ್ರ ಸರಕಾರಿ ಮುಂಗಾರು ಅಧಿವೇಶನದಲ್ಲಿ ಮಹತ್ವದ ವಿಧೇಯಕ

ನವ ದೆಹಲಿ – ಜುಲೈ ೨೦ ರಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸಾರಕಾರವು ಹಲವು ಮಹತ್ವದ ವಿಧೇಯಕಗಳನ್ನು ಮಂಡಿಸಲಿದೆ. ಇವುಗಳಲ್ಲಿ ‘ಪ್ರಿವೆನ್ಷನ್ ಆಫ್ ಇನ್ಸಲ್ಟ್ಸ್ ಟು ನ್ಯಾಷನಲ್ ಆನರ್ (ತಿದ್ದುಪಡಿ) ವಿಧೇಯಕ’ ಅತ್ಯಂತ ಹೆಚ್ಚು ಚರ್ಚೆಯಲ್ಲಿದೆ.

ಈ ಪ್ರಸ್ತಾವಿತ ಕಾಯ್ದೆಯ ಮೂಲಕ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಅನ್ನು ಅವಮಾನಿಸುವುದು, ವಂದೇ ಮಾತರಂ ಹಾಡುವುದನ್ನು ಉದ್ದೇಶಪೂರ್ವಕವಾಗಿ ತಡೆಯುವುದು ಅಥವಾ ಅಡ್ಡಿಪಡಿಸುವುದು ಮುಂತಾದವುಗಳನ್ನು ದಂಡನೀಯ ಅಪರಾಧವನ್ನಾಗಿ ಮಾಡಲು ಸಿದ್ಧತೆ ನಡೆಯುತ್ತಿದೆ. ಕೇಂದ್ರ ಸಚಿವ ಸಂಪುಟವು ಈ ವಿಧೇಯಕಕ್ಕೆ ಈಗಾಗಲೇ ಅನುಮೋದನೆ ನೀಡಿದ್ದು, ಇದನ್ನು ಮೊದಲು ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡಿಸಲಿದ್ದಾರೆ.

​೧. ‘ರಾಷ್ಟ್ರೀಯ ಗೌರವಕ್ಕೆ ಸಂಬಂಧಿಸಿದ ಇತರ ಪ್ರತೀಕಗಳಂತೆಯೇ ‘ವಂದೇ ಮಾತರಂ’ಗೂ ಕಾನೂನಾತ್ಮಕ ರಕ್ಷಣೆ ನೀಡುವುದು ಅಗತ್ಯವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿನ ಐತಿಹಾಸಿಕ ಪಾತ್ರದ ಕಾರಣದಿಂದ ವಂದೇ ಮಾತರಂ ಯಾವ ಗೌರವಕ್ಕೆ ಅರ್ಹವಾಗಿತ್ತೋ, ಆ ಗೌರವವನ್ನು ಹಿಂದಿನ ಜಾತ್ಯತೀತ ಸರಕಾರಗಳು ನೀಡಲಿಲ್ಲ’, ಎಂಬುದು ಸರಕಾರದ ದೀರ್ಘಕಾಲದ ವಾದವಾಗಿದೆ.

​೨. ಪ್ರಸ್ತಾವಿತ ತಿದ್ದುಪಡಿ ಜಾರಿಗೆ ಬಂದ ನಂತರ, ವಂದೇ ಮಾತರಂ ಗೀತೆಗೆ ರಾಷ್ಟ್ರಧ್ವಜ, ರಾಷ್ಟ್ರಗೀತೆ ‘ಜನ ಗಣ ಮನ’ ಮುಂತಾದ ರಾಷ್ಟ್ರೀಯ ಗೌರವದ ಪ್ರತೀಕಗಳ ಶ್ರೇಣಿಯಲ್ಲಿ ಕಾನೂನಾತ್ಮಕ ರಕ್ಷಣೆ ಸಿಗಲಿದೆ. ಒಂದು ವೇಳೆ ಯಾವುದೇ ವ್ಯಕ್ತಿಯು ಉದ್ದೇಶಪೂರ್ವಕವಾಗಿ ರಾಷ್ಟ್ರೀಯ ಗೀತೆಗೆ ಅವಮಾನ ಮಾಡಿದರೆ, ಅದರ ಗಾಯನವನ್ನು ತಡೆದರೆ, ಗಾಯನದ ಸಮಯದಲ್ಲಿ ಅಡ್ಡಿಪಡಿಸಿದರೆ ಅಥವಾ ಯಾವುದೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಗಲಾಟೆ ಮಾಡಿ ಅಡಚಣೆ ಉಂಟು ಮಾಡಿದರೆ, ಅವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬಹುದು.

​೩. ಇಂತಹ ಪ್ರಕರಣಗಳಲ್ಲಿ ಗರಿಷ್ಠ ಮೂರು ವರ್ಷಗಳವರೆಗಿನ ಜೈಲು ಶಿಕ್ಷೆಯ ನಿಬಂಧನೆಯನ್ನು ಪ್ರಸ್ತಾಪಿಸಲಾಗಿದೆ. ಯಾವ ಸರಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ ‘ಜನ ಗಣ ಮನ’ವನ್ನು ಹಾಕಲಾಗುತ್ತದೆಯೋ ಅಥವಾ ಹಾಡಲಾಗುತ್ತದೆಯೋ, ಅಲ್ಲಿ ‘ವಂದೇ ಮಾತರಂ’ ಗಾಯನವನ್ನೂ ಕಡ್ಡಾಯಗೊಳಿಸುವಂತೆ ಸರಕಾರವು ಗೃಹ ಸಚಿವಾಲಯದ ಮೂಲಕ ಈಗಾಗಲೇ ನಿರ್ದೇಶನ ನೀಡಿದೆ. ಈಗ ಈ ವ್ಯವಸ್ಥೆಗೆ ಕಾನೂನಾತ್ಮಕ ಬಲ ನೀಡುವ ನಿಟ್ಟಿನಲ್ಲಿ ಈ ತಿದ್ದುಪಡಿ ಮಾಡಲಾಗುತ್ತಿದೆ.

ಸಂಪಾದಕೀಯ ನಿಲುವು

ಇದು ಕೇಂದ್ರ ಸರಕಾರ ಕೈಗೊಂಡಿರುವ ಮಹತ್ವದ ಕ್ರಮವಾಗಿದ್ದು, ಇಂತಹ ವಿಧೇಯಕ ತರುವುದು ಶ್ಲಾಘನೀಯ ನಿರ್ಧಾರವಾಗಿದೆ !