ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಅನ್ಯಾಯದ ಬಂಧನದ ವಿರುದ್ಧ ಅಲ್ಪಸಂಖ್ಯಾತರಿಂದ ಪ್ರತಿಭಟನೆ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಹಿಂದೂ ಯುವಕನೊಬ್ಬನ ಬಂಧನವನ್ನು ವಿರೋಧಿಸಿ ಇಲ್ಲಿ ಜುಲೈ ೧೭ ರಂದು ದೊಡ್ಡ ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನರು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯನ್ನು ‘ಬಾಂಗ್ಲಾದೇಶ ಹಿಂದೂ-ಬೌದ್ಧ-ಕ್ರಿಶ್ಚಿಯನ್ ಐಕ್ಯತಾ ಪರಿಷತ್’ ವತಿಯಿಂದ ‘ನ್ಯಾಷನಲ್ ಪ್ರೆಸ್ ಕ್ಲಬ್’ ಎದುರು ಆಯೋಜಿಸಲಾಗಿತ್ತು. ಹಿಂದೂ ಯುವಕ ಹರಿದಾಸ ಚಂದ್ರ ತರಣಿ ದಾಸ್ ಅವರನ್ನು ಆರ್ಥಿಕ ಅವ್ಯವಹಾರದ ಸುಳ್ಳು ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಉತ್ತರ ಬಾಂಗ್ಲಾದೇಶದ ಗಾಯಿಬಾಂಧಾ ಜಿಲ್ಲೆಯ ಪಲಾಶಬಾಡಿ ಭಾಗದಲ್ಲಿ ಭಗವಾನ್ ಶ್ರೀರಾಮನ ೮೧ ಅಡಿ ಎತ್ತರದ ಮೂರ್ತಿಯನ್ನು ಪ್ರತಿಷ್ಠಾಪಿಸಲು ಅವರು ಮುಂದಾಳತ್ವ ವಹಿಸಿದ್ದರು; ಇದೇ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂಬುದು ಅವರ ವಾದವಾಗಿದೆ.

ಹಿಂದೂಗಳ ಮೇಲಿನ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ !

‘ಬಾಂಗ್ಲಾದೇಶ ಹಿಂದೂ-ಬೌದ್ಧ-ಕ್ರಿಶ್ಚಿಯನ್ ಐಕ್ಯತಾ ಪರಿಷತ್’ನ ಪ್ರಧಾನ ಕಾರ್ಯದರ್ಶಿ ಮಣೀಂದ್ರ ಕುಮಾರ ನಾಥ್ ಅವರು ಈ ಬಂಧನವನ್ನು ತೀವ್ರವಾಗಿ ಖಂಡಿಸಿದರು. ಅವರು ಮಾತನಾಡಿ, ಸರಕಾರವು ೨-೩ ದಿನಗಳ ಹಿಂದೆ ಹರಿದಾಸ ಚಂದ್ರ ತರಣಿ ದಾಸ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದೆ. ಕೇವಲ ಭಗವಾನ್ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧ ಹೊಂದಿರುವುದಕ್ಕಾಗಿ ಒಬ್ಬ ವ್ಯಕ್ತಿಯನ್ನು ಬಂಧಿಸುವುದನ್ನು ಸ್ವೀಕಾರಾರ್ಹವಲ್ಲ. ಕಳೆದ ೨ ವರ್ಷಗಳಲ್ಲಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನರ ವಿರುದ್ಧ ಸತತವಾಗಿ ಹಿಂಸಾಚಾರ ಮತ್ತು ಕಿರುಕುಳದ ಘಟನೆಗಳು ನಡೆದಿವೆ. ಕಳೆದ ಒಂದು ವರ್ಷದಲ್ಲಿ ದೇಶಾದ್ಯಂತ ೩ ಸಾವಿರ ಘಟನೆಗಳು ಮುನ್ನೆಲೆಗೆ ಬಂದಿವೆ. ಇವುಗಳಲ್ಲಿ ೬೬ ಜನರ ಕೊಲೆಯಾಗಿದ್ದು, ಅನೇಕ ದೇವಸ್ಥಾನಗಳ ಮೇಲೆ ಮತಾಂಧರು ದಾಳಿ ನಡೆಸಿದ್ದಾರೆ. ಇಂತಹ ಘಟನೆಗಳು ಅತ್ಯಂತ ದುರದೃಷ್ಟಕರವಾಗಿದ್ದು, ಇವುಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಸರಕಾರಕ್ಕೆ ಎಚ್ಚರಿಕೆ ನೀಡಿದರು

ಐಕ್ಯತಾ ಪರಿಷತ್‌ ನ ಹಿರಿಯ ನಾಯಕ ಸುಬ್ರತ ಚೌಧರಿ ಅವರು, ಇಂತಹ ಜನರನ್ನು ಗುರುತಿಸಿ ಅವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸರಕಾರವನ್ನು ಆಗ್ರಹಿಸಿದರು. ಹರಿದಾಸ ಚಂದ್ರ ತರಣಿ ದಾಸ್ ಅವರನ್ನು ಯಾರ ನಿರ್ದೇಶನದ ಮೇರೆಗೆ ಬಂಧಿಸಲಾಗಿದೆ? ಈ ಕ್ರಮದ ಹಿಂದೆ ಯಾರ ಕೈವಾಡವಿದೆ?, ಎಂಬುದನ್ನು ಸರಕಾರವು ಸ್ಪಷ್ಟಪಡಿಸಬೇಕು ಮತ್ತು ಅವರು ಎಷ್ಟೇ ದೊಡ್ಡ ಅಧಿಕಾರಿಯಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಬಿಡುಗಡೆಯಾಗದಿದ್ದರೆ ಬೃಹತ್ ಆಂದೋಲನದ ಎಚ್ಚರಿಕೆ

ಹರಿದಾಸ ಚಂದ್ರ ತರಣಿ ದಾಸ್ ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಒಂದು ವೇಳೆ ಹಾಗೆ ಮಾಡದಿದ್ದರೆ ಬಾಂಗ್ಲಾದೇಶದ ಹಿಂದೂ, ಬೌದ್ಧ ಮತ್ತು ಕ್ರಿಶ್ಚಿಯನ್ ಸಮುದಾಯಗಳು ಒಟ್ಟಾಗಿ ದೇಶಾದ್ಯಂತ ಬೃಹತ್ ಆಂದೋಲನವನ್ನು ಪ್ರಾರಂಭಿಸಲಿವೆ ಎಂದು ಅವರು ಎಚ್ಚರಿಸಿದರು.

ಭಾರತವೂ ಕಳವಳ ವ್ಯಕ್ತಪಡಿಸಿತ್ತು !

ಇದಕ್ಕೂ ಮುನ್ನ ಜೂನ್ ೨೩ ರಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಹಿಂದೂ ದೇವತೆಗಳ ಮೂರ್ತಿಗಳು ಮತ್ತು ಧಾರ್ಮಿಕ ಪ್ರತೀಕಗಳಿಗೆ ಅಪಮಾನ ಮಾಡುತ್ತಿರುವ ಸುದ್ದಿಗಳು ಕಳವಳಕಾರಿಯಾಗಿವೆ ಎಂದು ಹೇಳಿದ್ದರು. ಬಾಂಗ್ಲಾದೇಶ ಸರಕಾರವು ಕಟ್ಟರವಾದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅಲ್ಪಸಂಖ್ಯಾತ ಸಮುದಾಯದ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ಅವರು ಹೇಳಿದ್ದರು.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರು ಸಂಘಟಿತರಾಗಿ ಧ್ವನಿ ಎತ್ತುವುದೊಂದೇ ಅವರ ರಕ್ಷಣೆಯ ಏಕೈಕ ಮಾರ್ಗವಾಗಿದೆ. ಭಾರತವಾಗಲಿ ಅಥವಾ ಇತರ ಯಾವುದೇ ದೇಶವಾಗಲಿ ತಮ್ಮ ಸಹಾಯಕ್ಕೆ ಬರುತ್ತದೆ ಎಂಬ ನಿರೀಕ್ಷೆಯನ್ನು ಅವರು ಇಟ್ಟುಕೊಳ್ಳಬಾರದು ಎಂಬುದನ್ನು ಇದುವರೆಗಿನ ಘಟನೆಗಳಿಂದ ಅರಿತುಕೊಳ್ಳಬೇಕಾಗಿದೆ !