ವಿಠ್ಠಲ-ರುಕ್ಮಿಣಿ ಮೂರ್ತಿಗೆ ರಾಸಾಯನಿಕ ಲೇಪನಕ್ಕೆ ಗ್ರೀನ್ ಸಿಗ್ನಲ್ : Pandharpur Temple News

​ಸೋಲಾಪುರ – ಪಂಢರಪುರದ ‘ಸ್ವಯಂಭೂ’ ಶ್ರೀ ವಿಠ್ಠಲ-ರುಕ್ಮಿಣಿ ಮೂರ್ತಿಯ ಮೇಲೆ ಶ್ರೀ ವಿಠ್ಠಲ ರುಕ್ಮಿಣಿ ಮಂದಿರ ಸಮಿತಿ ಮತ್ತು ಪುರಾತತ್ವ ಇಲಾಖೆಯ ವತಿಯಿಂದ ಜೂನ್ ೨೨ ಮತ್ತು ೨೩ ರಂದು ರಾಸಾಯನಿಕ ವಜ್ರಲೇಪನ ಮಾಡುವ ಯೊಜನೆಯಿತ್ತು. ಇದರ ವಿರುದ್ಧ ವಾರಕರಿ ಸಂಪ್ರದಾಯ ಮತ್ತು ಮಹಾರಾಷ್ಟ್ರ ಮಂದಿರ ಮಹಾಸಂಘವು ಪಂಢರಪುರದ ಸಿವಿಲ್ ನ್ಯಾಯಾಲಯದಲ್ಲಿ (ಕಿರಿಯ ವಿಭಾಗ) ಅರ್ಜಿ ಸಲ್ಲಿಸಿದ್ದವು. ಅದರ ವಿಚಾರಣೆ ನಡೆಸಿದ್ದ ನ್ಯಾಯಾಲಯವು ರಾಸಾಯನಿಕ ಲೇಪನಕ್ಕೆ ತಡೆಯಾಜ್ಞೆ ನೀಡಿ ತೀರ್ಪು ಪ್ರಕಟಿಸಿತ್ತು. ಇದನ್ನು ವಿರೋಧಿಸಿ ಮಂದಿರ ಸಮಿತಿಯು ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಉಭಯ ಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿದ ಜಿಲ್ಲಾ ನ್ಯಾಯಾಲಯವು ಜುಲೈ ೧೭ ರಂದು ತೀರ್ಪು ನೀಡಿದ್ದು, ಈ ತಡೆಯಾಜ್ಞೆಯನ್ನು ತೆರವುಗೊಳಿಸಿದೆ. ​ವಾರಕರಿ ಸಂಪ್ರದಾಯದ ಪರವಾಗಿ ಶ್ರೀ. ಬಾಲಕೃಷ್ಣ ಡಿಂಗ್ರೆ ಮತ್ತು ಮಹಾರಾಷ್ಟ್ರ ಮಂದಿರ ಮಹಾಸಂಘದ ಶ್ರೀ. ಪುರುಷೋತ್ತಮ್ (ಗಣೇಶ್) ಲಂಕೆ ಅವರು ಪಂಢರಪುರದ ಸಿವಿಲ್ ನ್ಯಾಯಾಧೀಶರ (ಕಿರಿಯ ವಿಭಾಗ) ನ್ಯಾಯಾಲಯದಲ್ಲಿ ಈ ದಾವೆಯನ್ನು ದಾಖಲಿಸಿದ್ದರು.

ಕೊಲ್ಹಾಪುರದ ಹೈಕೋರ್ಟ್ ‘ಸರ್ಕ್ಯೂಟ್ ಬೆಂಚ್’ನಲ್ಲಿ ನ್ಯಾಯಕ್ಕಾಗಿ ಮನವಿ ಸಲ್ಲಿಸಲಾಗುವುದು! – ನ್ಯಾಯವಾದಿ ಸುಧೀರ್ ರಾನಡೆ

ಈ ಕುರಿತು ವಾರಕರಿ ಸಂಪ್ರದಾಯ ಮತ್ತು ಮಹಾರಾಷ್ಟ್ರ ಮಂದಿರ ಮಹಾಸಂಘದ ಪರವಾಗಿ ಪಂಢರಪುರ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ನ್ಯಾಯವಾದಿ ಸುಧೀರ್ ರಾನಡೆ ಮಾತನಾಡಿ, “ನ್ಯಾಯಾಲಯವು ತೀರ್ಪು ನೀಡುವಾಗ ತಾಂತ್ರಿಕ ಅಂಶಗಳನ್ನು ಪರಿಗಣಿಸಿ ನಿರ್ಧಾರ ಕೈಗೊಂಡಿದೆ. ಇದರಲ್ಲಿ ಧಾರ್ಮಿಕ ದೃಷ್ಟಿಕೋನದಿಂದ ಯಾವುದೇ ಆಲೋಚನೆ ನಡೆದಿಲ್ಲ. ಆದ್ದರಿಂದ ಈ ತೀರ್ಪಿನ ವಿರುದ್ಧ ನಾವು ಕೊಲ್ಹಾಪುರದಲ್ಲಿರುವ ಮುಂಬಯಿನ ಉಚ್ಛ ನ್ಯಾಯಾಲಯದ ‘ಸರ್ಕ್ಯೂಟ್ ಬೆಂಚ್’ನಲ್ಲಿ (ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ನಿರ್ದಿಷ್ಟ ಅವಧಿಯಲ್ಲಿ ಬಂದು ಪ್ರಕರಣಗಳ (ಖಟ್ಲೆಗಳ) ವಿಚಾರಣೆ ನಡೆಸುವ ತಾತ್ಕಾಲಿಕ ನ್ಯಾಯಪೀಠ) ನ್ಯಾಯಕ್ಕಾಗಿ ಮೇಲ್ಮನವಿ ಸಲ್ಲಿಸಲಿದ್ದೇವೆ,” ಎಂದು ತಿಳಿಸಿದ್ದಾರೆ.