ಪಾಕಿಸ್ತಾನದ ಗುರುದ್ವಾರಕ್ಕೆ ನುಗ್ಗಿ ಸಿಖ್ ಸೇವಕ ದಂಪತಿಯ ಹತ್ಯೆ

ಪೇಶಾವರ (ಪಾಕಿಸ್ತಾನ) – ಪಾಕಿಸ್ತಾನದ ವಾಯುವ್ಯ ಭಾಗದಲ್ಲಿರುವ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಮರ್ದನ್ ನಗರದಲ್ಲಿ ಜೂನ್ 17 ರಂದು ಒಂದು ಗುರುದ್ವಾರದಲ್ಲಿ ಸಿಖ್ ಸೇವಕ ದಂಪತಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು. ಮರ್ದನ್ ಜಿಲ್ಲಾ ಪೊಲೀಸ್ ಅಧಿಕಾರಿ ಮಸೂದ್ ಅಹ್ಮದ್ ನೀಡಿದ ಮಾಹಿತಿಯ ಪ್ರಕಾರ, ಅಪರಿಚಿತ ದಾಳಿಕೋರರು ಗುರುದ್ವಾರಕ್ಕೆ ನುಗ್ಗಿ ಗುಂಡಿನ ದಾಳಿ ನಡೆಸಿದರು. ಇದರಲ್ಲಿ ಸೇವಕ ಜಗನ್ನಾಥ್ ಮತ್ತು ಅವರ ಪತ್ನಿ ಆಸ್ಮಾ ವಾಂತಿ ಮೃತಪಟ್ಟಿದ್ದಾರೆ. ಈ ಹತ್ಯೆಯ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ಖೈಬರ್ ಪಖ್ತುನ್ಖ್ವಾ ವಿಧಾನಸಭೆಯ ಶಾಸಕ ಸುರೇಶ್ ಕುಮಾರ್ ಅವರು ಹಂತಕರನ್ನು ತಕ್ಷಣವೇ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ ಮತ್ತು ತನಿಖೆಯಲ್ಲಿ ಪ್ರಗತಿ ತೋರಿಸಲು ಪೊಲೀಸರಿಗೆ 24 ಗಂಟೆಗಳ ಗಡುವನ್ನು ನೀಡಿದ್ದಾರೆ. ಈ ದಾಳಿಯನ್ನು ಖಂಡಿಸಿದ ಸುರೇಶ್ ಕುಮಾರ್, ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ನಿಯೋಜಿತರಾಗಿದ್ದರೂ ಇಂತಹ ಘಟನೆ ನಡೆದಿರುವುದು ಅತ್ಯಂತ ಆತಂಕಕಾರಿ ಎಂದು ಹೇಳಿದರು. ಅವರು ಈ ಪ್ರಕರಣದ ಎಲ್ಲಾ ಆಯಾಮಗಳ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದರು.

ಕುಮಾರ್ ಅವರು ಅಪರಾಧ ನಡೆದ ಸ್ಥಳದಿಂದ ಸಂಗ್ರಹಿಸಿದ ಸಿಸಿಟಿವಿ ಸಾಕ್ಷ್ಯಗಳ ನಿರ್ವಹಣೆಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. ಡಿಜಿಟಲ್ ವಿಡಿಯೋ ರೆಕಾರ್ಡರ್ ಅನ್ನು ಅತ್ಯಂತ ನಿರ್ಲಕ್ಷ್ಯದಿಂದ ತೆಗೆದುಹಾಕಲಾಗಿದೆ, ಇದರಿಂದ ಸಾಕ್ಷ್ಯಗಳ ಸಂರಕ್ಷಣೆ ಮತ್ತು ತನಿಖೆಯ ಪಾರದರ್ಶಕತೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆ ಉಂಟಾಗಿದೆ ಎಂದು ಅವರು ಆರೋಪಿಸಿದ್ದಾರೆ. ಅವರು ಮರ್ದನ್ ಜಿಲ್ಲಾ ಪೊಲೀಸ್ ಅಧಿಕಾರಿ, ಮರ್ದನ್ ವಲಯದ ಪ್ರಾದೇಶಿಕ ಪೊಲೀಸ್ ಅಧಿಕಾರಿ ಮತ್ತು ಖೈಬರ್ ಪಖ್ತುನ್ಖ್ವಾದ ಪೊಲೀಸ್ ಮಹಾನಿರೀಕ್ಷಕರಿಗೆ ಈ ಘಟನೆಯ ಸಮಗ್ರ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

…ಹಾಗಾದರೆ ಪೇಶಾವರ, ಇಸ್ಲಾಮಾಬಾದ್‌ನಲ್ಲಿ ಪ್ರತಿಭಟನೆ ನಡೆಸಲಾಗುವುದು!

24 ಗಂಟೆಯೊಳಗೆ ಶಂಕಿತರನ್ನು ಬಂಧಿಸದಿದ್ದರೆ ಅಥವಾ ತನಿಖೆಯಲ್ಲಿ ಮಹತ್ವದ ಪ್ರಗತಿಯಾಗದಿದ್ದರೆ ಮರ್ದನ್, ಪೇಶಾವರ ಮತ್ತು ಇಸ್ಲಾಮಾಬಾದ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು ಎಂದು ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯಿಂದ ಖಂಡನೆ!

ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಗುರುದ್ವಾರ ಸಾಹಿಬ್‌ನಂತಹ ಪವಿತ್ರ ಧಾರ್ಮಿಕ ಸ್ಥಳಕ್ಕೆ ನುಗ್ಗಿ ಮುಗ್ಧ ಜನರ ಹತ್ಯೆ ಮಾಡುವುದು ಮಾನವೀಯತೆಯ ವಿರುದ್ಧದ ಅಪರಾಧ ಎಂದು ಧಾಮಿ ಹೇಳಿದ್ದಾರೆ. ಈ ಘಟನೆಯು ಸಿಖ್ ಸಮುದಾಯದಲ್ಲಿ ಮಾತ್ರವಲ್ಲದೆ, ಪಾಕಿಸ್ತಾನದ ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಉಂಟುಮಾಡಿದೆ.

ಸಂಪಾದಕೀಯ ನಿಲುವು

ಭಾರತ, ಹಾಗೂ ಕೆನಡಾ ಮತ್ತು ಪಾಕಿಸ್ತಾನದಲ್ಲಿರುವ ಖಲಿಸ್ತಾನಿಗಳು ಈ ಬಗ್ಗೆ ಸುಮ್ಮನಿರುವುದೇಕೆ?