​‘ಹಿಂದೂ ದೇವತೆಗಳು ಮಾಂಸ-ಮದ್ಯ ಸೇವಿಸುತ್ತಿದ್ದರು’ ಎಂದು ಹೇಳುವ ಧ್ರುವ್ ರಾಠಿಯ ವೀಡಿಯೊವನ್ನು ೨೪ ಗಂಟೆಗಳಲ್ಲಿ ತೆಗೆದುಹಾಕಿ !

  • ಕೇಂದ್ರ ಸರಕಾರದ ದೂರು ನಿವಾರಣಾ ಮೇಲ್ಮನವಿ ಸಮಿತಿಯಿಂದ ಯೂಟ್ಯೂಬ್‌ ಗೆ ನಿರ್ದೇಶನ

  • ನ್ಯಾಯವಾದಿ ​ಅಮಿತಾ ಸಚದೇವ ಅವರ ಹೋರಾಟದ ಫಲಿತಾಂಶ !

  • ​ಮೊಕದ್ದಮೆ ದಾಖಲಿಸಲು ಆಗ್ರಹಿಸಿ ನ್ಯಾಯಾಲಯದಲ್ಲಿ ಅರ್ಜಿ !

​ನವದೆಹಲಿ – ಮಾಹಿತಿ ತಂತ್ರಜ್ಞಾನ ಸಚಿವಾಲಯದ ವ್ಯಾಪ್ತಿಗೆ ಬರುವ ದೂರು ನಿವಾರಣಾ ಮೇಲ್ಮನವಿ ಸಮಿತಿಯು ಯೂಟ್ಯೂಬರ್(ಯೂ ಟ್ಯೂಬ್ ಚಾನಲ್ ಮೂಲಕ ಸ್ವಂತ ವಿಡಿಯೊ ಪ್ರಸಾರ ಮಾಡುವ ವ್ಯಕ್ತಿ)ಧ್ರುವ್ ರಾಠಿ ಅವರ ಹಿಂದೂ ದೇವತೆಗಳ ಮೇಲಿನ ವಿವಾದಾತ್ಮಕ ವಿಡಿಯೊವನ್ನು ನಿಷೇಧಿಸಿದ್ದು, ಇದನ್ನು ೨೪ ಗಂಟೆಗಳ ಒಳಗೆ ತೆಗೆದುಹಾಕುವಂತೆ ಯೂಟ್ಯೂಬ್‌ ಗೆ ನಿರ್ದೇಶನ ನೀಡಿದೆ. ಈ ವಿಡಿಯೊದಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

​೧. ಧ್ರುವ್ ರಾಠಿ ಅವರ ‘ಹಿಂದೂಗಳು ಗೋಮಾಂಸ ತಿನ್ನಬಹುದೇ?: ‘ಕೇರಳ ಸ್ಟೋರಿ ೨’ರ ರಹಸ್ಯ ಬಯಲು’ ಎಂಬ ಶೀರ್ಷಿಕೆಯ ೨೧ ನಿಮಿಷಗಳ ವಿಡಿಯೊವನ್ನು ಮಾರ್ಚ್ ೨೧, ೨೦೨೬ ರಂದು ಆತನ ಅಧಿಕೃತ ಯೂಟ್ಯೂಬ್ ಚಾನೆಲ್‌ ನಲ್ಲಿ ಪ್ರಸಾರ ಮಾಡಲಾಗಿತ್ತು. ಈ ವಿಡಿಯೊವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ೪ ಲಕ್ಷಕ್ಕೂ ಹೆಚ್ಚು ಜನರು ವಿಡಿಯೋ ಇಷ್ಟಪಟ್ಟಿದ್ದಾರೆ.

೨. ‘ದಿ ಕೇರಳ ಸ್ಟೋರಿ ೨’ ಚಿತ್ರದ ಕುರಿತು ಮಾತನಾಡುವಾಗ, ರಾಠಿ ಈ ವಿಡಿಯೊದಲ್ಲಿ ಹಿಂದೂಗಳ ಆಹಾರ ಪದ್ಧತಿಯ ಬಗ್ಗೆ ಟೀಕೆ ಮಾಡಿದ್ದರು. ಗೋಮಾಂಸ ಸೇವನೆಗೆ ಸಂಬಂಧಿಸಿದ ಸೂಕ್ಷ್ಮತೆಯನ್ನು ಬದಿಗೊತ್ತಿ, ಭಾರತದಲ್ಲಿನ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸಾಮಾಜಿಕ ನಂಬಿಕೆಗಳ ಬಗ್ಗೆ ಆತ ಚರ್ಚಿಸಿದನು. ಪ್ರಾಚೀನ ಗ್ರಂಥಗಳು, ಶಾಸ್ತ್ರಗಳು ಮತ್ತು ಆಧುನಿಕ ಸಮೀಕ್ಷೆಗಳನ್ನು ಉಲ್ಲೇಖಿಸಿ, ರಾಮಾಯಣ ಮತ್ತು ಮಹಾಭಾರತ ಕಾಲದ ಯೋಧರು ತಮ್ಮ ವನವಾಸದ ಸಮಯದಲ್ಲಿ ಜಿಂಕೆ ಮಾಂಸ ಸೇರಿದಂತೆ ಇತರ ಮಾಂಸ ಮತ್ತು ಮದ್ಯ ಸೇವಿಸುತ್ತಿದ್ದರು ಎಂದು ರಾಠಿ ಹೇಳಿದ್ದನು. ತನ್ನ ಈ ವಿಡಿಯೋದಲ್ಲಿ ಪ್ರಭು ಶ್ರೀರಾಮ, ಭಗವಾನ್ ಶ್ರೀಕೃಷ್ಣ ಮತ್ತು ಪಾಂಡವರ ಹೆಸರುಗಳನ್ನು ಆತ ಪ್ರಸ್ತಾಪಿಸಿದ್ದನು.

೩. ಈ ವಿಡಿಯೊ ವಿರುದ್ಧ ನ್ಯಾಯವಾದಿ ಅಮಿತಾ ಸಚದೇವ ಅವರು ಮಾರ್ಚ್ ೨೨, ೨೦೨೬ ರಂದು ನವದೆಹಲಿಯ ‘ಸೈಬರ್ ಕ್ರೈಮ್ ಸೆಲ್’ನಲ್ಲಿ ದೂರು ನೀಡಿದ್ದರು. ತದನಂತರ ಮಾರ್ಚ್ ೨೩ ರಂದು ಯೂಟ್ಯೂಬ್‌ ನ ದೂರು ಅಧಿಕಾರಿಗೆ ಅಧಿಕೃತ ದೂರು ನೀಡಲಾಯಿತು.

೪. ಯೂಟ್ಯೂಬ್ ಈ ವಿಡಿಯೊ ಕುರಿತು ಹೆಚ್ಚಿನ ಮಾಹಿತಿ ಕೇಳಿ, ಪರಿಶೀಲನೆ ನಡೆಸಿದ ನಂತರ ಮಾರ್ಚ್ ೨೫ ರಂದು ಈ ದೂರನ್ನು ತಿರಸ್ಕರಿಸಿತು. ಈ ವಿಷಯವು ಸ್ಥಳೀಯ ಕಾನೂನುಗಳನ್ನು ಅಥವಾ ತಮ್ಮ ಸಮುದಾಯದ ಮಾರ್ಗದರ್ಶಿ ಅಂಶಗಳನ್ನು ಉಲ್ಲಂಘಿಸುವುದಿಲ್ಲವೆಂದು ಯೂಟ್ಯೂಬ್ ಹೇಳಿದೆ. ಅಲ್ಲದೆ, ಈ ವಿಡಿಯೊ ಭಾರತೀಯ ಕಾನೂನನ್ನು ಉಲ್ಲಂಘಿಸುತ್ತದೆ ಎಂದು ಅನಿಸಿದರೆ, ದೂರುದಾರರು ಅದನ್ನು ‘ಬ್ಲಾಕ್’ ಮಾಡಬೇಕು ಅಥವಾ ನ್ಯಾಯಾಲಯದ ನೆರವು ಪಡೆಯಬೇಕೆಂದು ಸಲಹೆ ನೀಡಿತು.

೫. ಇದರ ನಂತರ ನ್ಯಾಯವಾದಿ ಸಚದೇವ ಅವರು ಮಾರ್ಚ್ ೨೭, ೨೦೨೬ ರಂದು ದೂರು ನಿವಾರಣಾ ಮೇಲ್ಮನವಿ ಸಮಿತಿಗೆ ಮೇಲ್ಮನವಿ ಸಲ್ಲಿಸಿದರು. ಎರಡು ತಿಂಗಳಿಗೂ ಹೆಚ್ಚು ಕಾಲ ಈ ಮೇಲ್ಮನವಿ ಬಾಕಿ ಉಳಿದಿತ್ತು. ನಂತರ ಅವರು ರಿಟ್ ಅರ್ಜಿಯ ಮೂಲಕ ದೆಹಲಿ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದರು. ಜುಲೈ ೩, ೨೦೨೬ ರಂದು ನ್ಯಾಯಾಲಯವು ಮೇಲ್ಮನವಿ ಪ್ರಾಧಿಕಾರಕ್ಕೆ ಈ ಪ್ರಕರಣದ ಬಗ್ಗೆ ಶೀಘ್ರ ನಿರ್ಧಾರ ತೆಗೆದುಕೊಳ್ಳುವಂತೆ ಮತ್ತು ಆದೇಶದ ಪ್ರತಿಯನ್ನು ೧೫ ದಿನಗಳ ಒಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೇಶನ ನೀಡಿತು.

೬. ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ವಾದವನ್ನು ತಿರಸ್ಕರಿಸಿದ ಸಮಿತಿ, ಈ ವಿಡಿಯೊ ತೆಗೆದುಹಾಕುವಂತೆ ಯೂಟ್ಯೂಬ್‌ ಗೆ ಸೂಚಿಸಿದೆ. ಈ ವಿಡಿಯೊ ಪರಿಶೀಲನೆಯ ಬಳಿಕ ಇದು ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬಹುದು, ಇದು ಇಡೀ ಸಮಾಜಕ್ಕೂ ಒಳ್ಳೆಯ ಸಂಕೇತವಲ್ಲ ಎಂದು ಸಮಿತಿ ಹೇಳಿದೆ.

೭. ರಾಠಿ ವಿರುದ್ಧ ಮೊಕದ್ದಮೆ ದಾಖಲಿಸಲು ನ್ಯಾಯವಾದಿ ಸಚದೇವ ಅವರು ಸಾಕೇತ್‌ ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೆಟ್ಟಿಲೇರಿದ್ದು, ಆ ಪ್ರಕರಣ ಇನ್ನೂ ಬಾಕಿ ಉಳಿದಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ ೧೦, ೨೦೨೬ ರಂದು ನಡೆಯಲಿದೆ.

ಇಂತಹ ಪ್ರಕರಣಗಳಲ್ಲಿ ಆದಷ್ಟು ಬೇಗ ನಿರ್ಧಾರವಾಗಬೇಕು! – ನ್ಯಾಯವಾದಿ ಅಮಿತಾ ಸಚದೇವ

ನ್ಯಾಯವಾದಿ ಸಚದೇವ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ಆದೇಶವನ್ನು ಹಂಚಿಕೊಳ್ಳುತ್ತಾ, ಇದನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟ ಹೆಜ್ಜೆ ಎಂದು ಹೇಳಿದ್ದಾರೆ. ಸೃಜನಶೀಲತೆಯ ಹೆಸರಿನಲ್ಲಿ ಶ್ರದ್ಧೆಯ ಅಪಹಾಸ್ಯ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ನ್ಯಾಯ ಹಂತ ಹಂತವಾಗಿ ಸಿಗುತ್ತಿದೆ. ವಾಸ್ತವವಾಗಿ ಇಂತಹ ಪ್ರಕರಣಗಳು ತಕ್ಷಣ ಇತ್ಯರ್ಥವಾಗಬೇಕು; ಏಕೆಂದರೆ ಇದರ ಬಗ್ಗೆ ಚರ್ಚೆ ನಡೆಯುವಷ್ಟರಲ್ಲಿ ಲಕ್ಷಾಂತರ ಜನರು ಆ ವಿಡಿಯೊ ವೀಕ್ಷಿಸಿರುತ್ತಾರೆ ಮತ್ತು ಇದರ ತಯಾರಕರಿಗೂ ‘ವಿವಾದಾತ್ಮಕ ವಿಡಿಯೊ ಮಾಡಿ ಹೆಚ್ಚು ವೀಕ್ಷಕರನ್ನು ಪಡೆಯಬೇಕು’ ಎಂಬುದೇ ಉದ್ದೇಶವಾಗಿರುತ್ತದೆ ಎಂದು ಹೇಳಿದರು.