ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !

ಹಿಂದೂಗಳಿಂದ ವಿರೋಧ !

ತುಮಕೂರು – ನಗರದ ಕೆ.ಆರ್. ಲೇಔಟ್ ಭಾಗದಲ್ಲಿರುವ ಶ್ರೀರಾಮಮಂದಿರದ ಬಳಿ ಇರುವ ಸರಕಾರಿ ಶಾಲೆಯ ಜಾಗದಲ್ಲಿ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಪ್ರಸ್ತಾವನೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ನಗರದ ಶಾಸಕ ಜಿ.ಬಿ. ಜ್ಯೋತಿಗಣೇಶ ನೇತೃತ್ವದ ನಿಯೋಗವು ಜಿಲ್ಲಾಡಳಿತಕ್ಕೆ ಆಗ್ರಹಿಸಿದೆ. ಈ ನಿಯೋಗದಲ್ಲಿ ಭಾಜಪ ಜಿಲ್ಲಾಧ್ಯಕ್ಷ ಎಚ್.ಎಸ್. ರವಿಶಂಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎಚ್. ಹನುಮಂತರಾಜು, ಭಾಜಪ ನಗರಾಧ್ಯಕ್ಷ ಟಿ.ಕೆ. ಧನುಷ್ ಮುಂತಾದವರು ಇದ್ದರು.

1. ಈ ವಿಷಯವು ಅತ್ಯಂತ ಸೂಕ್ಷ್ಮವಾಗಿದ್ದು, ಇದರಿಂದ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬರುವ ಸಾಧ್ಯತೆಯಿದೆ. ಇದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿರುವುದರಿಂದ ಸಾರ್ವಜನಿಕ ಶಾಂತಿ, ಸೌಹಾರ್ದತೆ ಮತ್ತು ಕಾನೂನು ಹಾಗೂ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಈ ನಿಯೋಗವು ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಅವರನ್ನು ಭೇಟಿ ಮಾಡಿ ಒತ್ತಾಯಿಸಿತು.

2. ಶಾಸಕ ಜ್ಯೋತಿಗಣೇಶ ಮಾತನಾಡಿ, ಶ್ರೀರಾಮಮಂದಿರಕ್ಕೆ ಸಂಬಂಧಿಸಿದ ಸಂಪೂರ್ಣ ಜಾಗದ ಅಧಿಕೃತ ಸಮೀಕ್ಷೆ, ಗಡಿ ನಿರ್ಧಾರ ಮತ್ತು ಅಳತೆ ಕಾರ್ಯವನ್ನು ತಕ್ಷಣವೇ ಕೈಗೊಳ್ಳಬೇಕು. ಮುಜರಾಯಿ ಇಲಾಖೆಯ ದಾಖಲೆಗಳು ಮತ್ತು ರಾಜಪತ್ರದಲ್ಲಿ ಉಲ್ಲೇಖಿಸಲಾದ ಜಾಗವನ್ನು ಮಂದಿರದ ಆಸ್ತಿಯಾಗಿ ಸಂರಕ್ಷಿಸಲು ಕ್ರಮ ಕೈಗೊಳ್ಳಬೇಕು. ಆ ಪ್ರದೇಶದಲ್ಲಿ ಅಲ್ಪಸಂಖ್ಯಾತರ ವಸತಿಗೃಹ ಸೇರಿದಂತೆ ಯಾವುದೇ ಹೊಸ ನಿರ್ಮಾಣದ ಪ್ರಸ್ತಾವನೆ ಇದ್ದರೆ ಅದನ್ನು ತಕ್ಷಣವೇ ರದ್ದುಗೊಳಿಸಬೇಕು. ಮಂದಿರಕ್ಕೆ ಸಂಬಂಧಿಸಿದ ಜಾಗವನ್ನು ಕೇವಲ ಹಿಂದೂಗಳ ಧಾರ್ಮಿಕ ವಿಧಿಗಳು, ಹಾಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿಡಲು ಜಿಲ್ಲಾಡಳಿತವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಸಂಪಾದಕೀಯ ನಿಲುವು

ಕಾಂಗ್ರೆಸ್ ಆಡಳಿತದಲ್ಲಿ ಇದಕ್ಕಿಂತ ಬೇರೆ ಏನು ನಡೆಯಲು ಸಾಧ್ಯ ?