ಕೇರಳಮ್‌ನ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳು ನಾಪತ್ತೆ ! : Temple Gold Theft

ಗುಪ್ತಚರ ವರದಿಯಲ್ಲಿ ಮಾಹಿತಿ !

ತಿರುವನಂತಪುರಂ (ಕೇರಳಮ್) – ಕೇರಳಮ್ದ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಗುಪ್ತಚರ ವರದಿ ಮುನ್ನೆಲೆಗೆ ಬಂದಿದೆ. ಇದರಲ್ಲಿ ದೇವಸ್ಥಾನದಿಂದ ಅಮೂಲ್ಯ ವಸ್ತುಗಳು ನಾಪತ್ತೆಯಾಗುವುದು, ಚಿನ್ನದ ಆಭರಣಗಳು ನಾಪತ್ತೆಯಾಗುವುದು, ಭದ್ರತೆಯಲ್ಲಿ ಲೋಪದೋಷಗಳು ಮತ್ತು ಭಕ್ತರು ಅರ್ಪಿಸಿದ ದಾನವನ್ನು ತಪ್ಪು ರೀತಿಯಲ್ಲಿ ಬಳಸಲಾಗುತ್ತಿದೆ ಎಂದು ಉಲ್ಲೇಖಿಸಲಾಗಿದೆ. ಪೊಲೀಸ್ ಮಹಾನಿರ್ದೇಶಕರು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಂದ (ಗುಪ್ತಚರ) ದೊರೆತ ಮಾಹಿತಿಯ ಆಧಾರದ ಮೇಲೆ ಕೇರಳಮ್ದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಕಳುಹಿಸಿದ್ದಾರೆ. ಈ ವರದಿಯಲ್ಲಿ ದೇವಸ್ಥಾನದ ಅಮೂಲ್ಯ ವಸ್ತುಗಳ ನಿರ್ವಹಣೆ ಮತ್ತು ಭದ್ರತೆಯ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಲಾಗಿದೆ.

ವರದಿಯಲ್ಲಿ ಮಂಡಿಸಲಾದ ಮುಖ್ಯಾಂಶಗಳು !

ಚಿನ್ನದ ಉಡುಗೊರೆ ನಾಪತ್ತೆ ?

ಕಳೆದ ಕೆಲವು ತಿಂಗಳುಗಳಲ್ಲಿ ಭಕ್ತರು ದೇವಸ್ಥಾನದ ನಿರ್ವಹಣೆಗಾಗಿ ದಾನ ನೀಡಿದ್ದ ಸುಮಾರು ೭೮ ಗ್ರಾಂ ಚಿನ್ನದ ಬಿಸ್ಕತ್ ಮತ್ತು ನಾಣ್ಯಗಳು ನಾಪತ್ತೆಯಾಗಿವೆ. ನಿರ್ವಹಣೆಗಾಗಿ ಹಿಂದೆ ತೆಗೆಯಲಾಗಿದ್ದ ಒಂದು ಚಿನ್ನದ ಬಹುವಿಧದ (ಮಲ್ಟಿಲೇಯರ್ಡ್) ದೀಪವು ಈಗ ದೇವಸ್ಥಾನದ ಆವರಣದಲ್ಲಿ ಇಲ್ಲ.

ದೇವರ ಚಿನ್ನದ ಆಭರಣಗಳೂ ನಾಪತ್ತೆ

ಮೂಲ ಚಿನ್ನದ ದೀಪವನ್ನು ಬೆಳ್ಳಿಯ ದೀಪದಿಂದ ಬದಲಾಯಿಸಲಾಗಿದೆ. ಈ ಬದಲಾವಣೆಯ ಯಾವುದೇ ಅಧಿಕೃತ ದಾಖಲೆ ಲಭ್ಯವಿಲ್ಲ. ‘ವೈರಾ ನಾಮಾ’ ಒಂದು ಸಾಂಪ್ರದಾಯಿಕ ಆಭರಣವಾಗಿದ್ದು, ಇದನ್ನು ಸಾಮಾನ್ಯವಾಗಿ ದೇವಸ್ಥಾನದ ಗರ್ಭಗುಡಿಯೊಳಗೆ ಇಡಲಾಗುತ್ತದೆ. ದುರಸ್ತಿ ಮತ್ತು ನಿರ್ವಹಣೆಯ ಕೆಲಸದ ಹೆಸರಿನಲ್ಲಿ ಇದನ್ನು ತೆಗೆದ ನಂತರ ಕಳೆದ ೬ ತಿಂಗಳುಗಳಿಂದ ಅದರ ಮೂಲ ಸ್ಥಳದಲ್ಲಿ ಇಟ್ಟಿಲ್ಲ.

ಭದ್ರತಾ ತಪಾಸಣೆಯ ನಿರ್ಲಕ್ಷ್ಯ ?

ದೇವಸ್ಥಾನದ ಕೆಲವು ಸಿಬ್ಬಂದಿ, ಭದ್ರತಾ ಸಿಬ್ಬಂದಿ ಮತ್ತು ತಿರುವಾಂಕೂರು ರಾಜಮನೆತನಕ್ಕೆ ಸಂಬಂಧಿಸಿದ ಕೆಲವು ಜನರು ಚೆಂಬಕತುಮ್ಮೂಡು ಪ್ರವೇಶದ್ವಾರದಲ್ಲಿ ಕಡ್ಡಾಯ ಭದ್ರತಾ ತಪಾಸಣೆಯನ್ನು ನಿರ್ಲಕ್ಷಿಸುತ್ತಿದ್ದರು. ವರದಿಯಲ್ಲಿ ಇಂತಹ ಅನೇಕ ಜನರ ಹೆಸರುಗಳನ್ನು ನೀಡಲಾಗಿದ್ದು, ಅವರು ಯಾವುದೇ ಭದ್ರತಾ ತಪಾಸಣೆಯಿಲ್ಲದೆ ಪದೇ ಪದೇ ದೇವಸ್ಥಾನಕ್ಕೆ ಬಂದು ಹೋಗುತ್ತಿದ್ದರು.

‘ಸ್ಟ್ರಾಂಗ್ ರೂಮ್’ನಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಇಡಲು ಹೇಳಲಾಗಿದೆ

ತನಿಖೆಯ ಮುಕ್ತಾಯದ ನಂತರ ಅಧಿಕಾರಿಗಳು ದೇವಸ್ಥಾನದ ಭದ್ರತೆಯನ್ನು ಇನ್ನಷ್ಟು ಬಲಪಡಿಸಲು ಮತ್ತು ಅಮೂಲ್ಯ ವಸ್ತುಗಳನ್ನು ಸುರಕ್ಷಿತವಾಗಿಡಲು ಅನೇಕ ಕ್ರಮಗಳನ್ನು ಸೂಚಿಸಿದ್ದಾರೆ. ಇದರಲ್ಲಿ ಪ್ರಸ್ತುತ ಖಜಾನೆಯಿಂದ ಹೊರಗಿರುವ ಚಿನ್ನ, ಬೆಳ್ಳಿ ಮತ್ತು ಇತರ ಅಮೂಲ್ಯ ವಸ್ತುಗಳನ್ನು “ಸ್ಟ್ರಾಂಗ್ ರೂಮ್”ಗೆ (ಅಮೂಲ್ಯ ವಸ್ತುಗಳು ಅಥವಾ ಪ್ರಮುಖ ದಾಖಲೆಗಳನ್ನು ಅತ್ಯಂತ ಸುರಕ್ಷಿತವಾಗಿಡಲು ನಿರ್ಮಿಸಲಾದ ಭದ್ರವಾದ ಕೊಠಡಿ) ಸ್ಥಳಾಂತರಿಸಬೇಕು. ಹಾಗೆಯೇ ಭಕ್ತರಿಂದ ಬರುವ ಎಲ್ಲ ದಾನಗಳನ್ನು ಯೋಗ್ಯವಾಗಿ ದಾಖಲಿಸಿ ಅದನ್ನು ಸುರಕ್ಷಿತ ಸ್ಥಳದಲ್ಲಿ ಇಡಲು ಶಿಫಾರಸು ಮಾಡಲಾಗಿದೆ.

ಪೊಲೀಸರ ಕಠಿಣ ಕಣ್ಗಾವಲಿಗೆ ಶಿಫಾರಸು

ಎಲ್ಲಾ ಲಾಕರ್‌ಗಳು ಮತ್ತು ಸಾಮಾನು ಇಡುವ ಸ್ಥಳಗಳ ಮೇಲೆ ಕಠಿಣ ಕಣ್ಗಾವಲು ಇರಬೇಕು. ಭದ್ರತಾ ನಿಯಮಗಳನ್ನು ಉಲ್ಲಂಘಿಸಿದರೆ ಶೂನ್ಯ ಸಹಿಷ್ಣುತೆ ನೀತಿಯನ್ನು ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬ ವ್ಯಕ್ತಿಯು, ಅವರ ಹುದ್ದೆ ಅಥವಾ ಗುರುತು ಏನೇ ಇರಲಿ, ಅವರು ದೇವಸ್ಥಾನದ ಆವರಣಕ್ಕೆ ಪ್ರವೇಶಿಸುವ ಮೊದಲು ನಿಗದಿತ ಭದ್ರತಾ ತಪಾಸಣೆಗೆ ಒಳಗಾಗಬೇಕಾಗುತ್ತದೆ.

ಸರ್ವೋಚ್ಚ ನ್ಯಾಯಾಲಯದ ಸಮಿತಿಯು ದೇವಸ್ಥಾನದ ಮೇಲ್ವಿಚಾರಣೆ ನಡೆಸುತ್ತದೆ

ಪದ್ಮನಾಭಸ್ವಾಮಿ ದೇವಸ್ಥಾನವು ಕೇರಳಮ್ ಸರಕಾರದ ನಿಯಂತ್ರಣದಲ್ಲಿರುವ ಯಾವುದೇ ‘ದೇವಸ್ವಂ ಮಂಡಳಿ’ಯ ಅಡಿಯಲ್ಲಿ ಬರುವುದಿಲ್ಲ. ಈ ದೇವಸ್ಥಾನದ ನಿರ್ವಹಣೆಯನ್ನು ಸರ್ವೋಚ್ಚ ನ್ಯಾಯಾಲಯವು ನೇಮಿಸಿದ ಕಾರ್ಯಕಾರಿ ಸಮಿತಿಯು ಮಾಡುತ್ತದೆ, ಇದು ದೈನಂದಿನ ಆಡಳಿತಕ್ಕೆ ಜವಾಬ್ದಾರಿಯಾಗಿದೆ. ಜಿಲ್ಲಾ ನ್ಯಾಯಾಧೀಶರು ಕಾರ್ಯಕಾರಿ ಸಮಿತಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ. ಈ ಸಮಿತಿಯಲ್ಲಿ ಕೇಂದ್ರ ಸರಕಾರದ ಪ್ರತಿನಿಧಿ, ಹಾಗೆಯೇ ಭಾಜಪ ನಾಯಕ ಕರಮನಾ ಜಯನ್ ಅವರೂ ಸೇರಿದ್ದಾರೆ. ಈ ಸಮಿತಿಯಲ್ಲಿ ಕೇರಳಮ್ ಸರಕಾರದ ಪ್ರತಿನಿಧಿ ನ್ಯಾಯವಾದಿ ವೇಲಾಯುಧನ್ ಇದ್ದಾರೆ. ಇನ್ನೊಬ್ಬ ಶ್ರೀ ಮೂಲಂ ತಿರುನಾಳ್ ರಾಮ ವರ್ಮಾ ಆಗಿದ್ದಾರೆ, ಅವರು ತಿರುವಾಂಕೂರು ರಾಜಮನೆತನದ ಮುಖ್ಯಸ್ಥರಾಗಿದ್ದಾರೆ. ಆದಿತ್ಯ ವರ್ಮಾ ಅವರೂ ರಾಜಮನೆತನದ ಮುಖ್ಯಸ್ಥರ ನಾಮನಿರ್ದೇಶಿತರಾಗಿ ಈ ಸಮಿತಿಯ ಭಾಗವಾಗಿದ್ದಾರೆ. ಕಾರ್ಯಕಾರಿ ಸಮಿತಿಯಲ್ಲಿ ದೇವಸ್ಥಾನದ ಮುಖ್ಯ ಅರ್ಚಕರೂ ಇದ್ದಾರೆ.

ಸಂಪಾದಕೀಯ ನಿಲುವು

ಈಗ ಹಿಂದೂಗಳ ದೇವಸ್ಥಾನಗಳನ್ನು ಭಕ್ತರ ನಿಯಂತ್ರಣಕ್ಕೆ ನೀಡುವ ಸಮಯ ಬಂದಿದೆ ಎಂಬುದು ಈ ಘಟನೆಯಿಂದ ತಿಳಿಯುತ್ತದೆ ಮತ್ತು ಭಕ್ತರು ಇದಕ್ಕಾಗಿ ದೇಶದಾದ್ಯಂತ ಸಂಘಟಿತರಾಗಿ ಸರಕಾರಗಳ ಮೇಲೆ ಒತ್ತಡ ಹೇರಬೇಕು !