ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ದೇವಾಲಯದ ಅರ್ಚಕರ ವಿರುದ್ಧ ಪೋಕ್ಸೊ ಮತ್ತು ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾದ ನಂತರ ಬ್ರಾಹ್ಮಣ ಸಮುದಾಯದಿಂದ ಪ್ರತಿಭಟನೆ

  • ಪೊಲೀಸ್ ಅಧೀಕ್ಷಕರ ಕಚೇರಿಗೆ ಮುತ್ತಿಗೆ ಹಾಕಿ ಹನುಮಾನ್ ಚಾಲೀಸಾ ಪಠಣ

  • ಭೀಮ್ ಆರ್ಮಿ ಸಂಘಟನೆಯ ಮೇಲೆ ದೇವಸ್ಥಾನವನ್ನು ವಶಪಡಿಸಿಕೊಳ್ಳುವ ಆರೋಪ

ಸಹಾರನ್‌ಪುರ (ಉತ್ತರಪ್ರದೇಶ) – ಇಲ್ಲಿ ದೇವಸ್ಥಾನವೊಂದರ ಅರ್ಚಕರ ಮೇಲೆ ಪೋಕ್ಸೊ ಮತ್ತು ಅಟ್ರಾಸಿಟಿ ಕಾಯ್ದೆಯಡಿ ಮೊಕದ್ದಮೆ ದಾಖಲಾದ ನಂತರ ಭೀಮ್ ಆರ್ಮಿ ಸಂಘಟನೆಯ ವಿರುದ್ಧ ಬ್ರಾಹ್ಮಣ ಹಾಗೂ ಸವರ್ಣ ಸಮಾಜದ ಸಾವಿರಾರು ಜನರು ರಸ್ತೆಗಿಳಿದರು. ಪ್ರತಿಭಟನಾಕಾರರು ಹಿರಿಯ ಪೊಲೀಸ್ ಅಧೀಕ್ಷಕರ ಕಚೇರಿಗೆ ಮುತ್ತಿಗೆ ಹಾಕಿ ಹನುಮಾನ್ ಚಾಲೀಸಾ ಪಠಿಸಿದರು ಮತ್ತು ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದರು.

ಇದು ಸಂಪೂರ್ಣವಾಗಿ ಒಂದು ಸುಯೋಜಿತ ಪಿತೂರಿಯಾಗಿದೆ ಎಂದು ಓರ್ವ ಬ್ರಾಹ್ಮಣರು ಹೇಳಿದರು. ೪೫ ವರ್ಷದ ಅರ್ಚಕ ವಿಜಯ ಶಾಸ್ತ್ರಿ ಅವರನ್ನು ಸುಳ್ಳು ಆರೋಪದಡಿ ಸಿಲುಕಿಸಲಾಗಿದೆ. ಕೆಲವು ಜನರಿಗೆ ದೇವಸ್ಥಾನದ ಅಮೂಲ್ಯವಾದ ಆಸ್ತಿಯನ್ನು ವಶಪಡಿಸಿಕೊಳ್ಳುವ ಆಸೆಯಿದೆ. ಅರ್ಚಕರನ್ನು ಹೆದರಿಸಿ ಅಲ್ಲಿಂದ ಓಡಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಯಾವ ಹುಡುಗಿಯ ಹೆಸರನ್ನು ತೆಗೆದುಕೊಳ್ಳಲಾಗುತ್ತಿದೆಯೋ, ಆ ಹುಡುಗಿ ದೇವಸ್ಥಾನಕ್ಕೆ ಆಟವಾಡಲು ಬರುತ್ತಿದ್ದಳು. ಅರ್ಚಕರು ಕೇವಲ ಮಕ್ಕಳಿಗೆ ಪ್ರಸಾದ ನೀಡುತ್ತಿದ್ದರು.

ದೇವಸ್ಥಾನಗಳ ಬಾಗಿಲು ಬಂದ್, ಸಮಾಜದಲ್ಲಿ ತೀವ್ರ ಆಕ್ರೋಶ

ಅರ್ಚಕರ ವಿರುದ್ಧ ದಾಖಲಾಗಿರುವ ದೂರನ್ನು ಪ್ರತಿಭಟಿಸಿ ಸಹಾರನ್‌ಪುರದ ಅನೇಕ ದೇವಸ್ಥಾನಗಳ ಬಾಗಿಲುಗಳನ್ನು ಮುಚ್ಚಲಾಗಿತ್ತು. ದೇವಸ್ಥಾನದಲ್ಲಿ ಪೂಜೆ ಮಾಡಿ ಇಂತಹ ಸುಳ್ಳು ಮೊಕದ್ದಮೆಗಳನ್ನು ಎದುರಿಸಬೇಕಾಗಿ ಬಂದರೆ ಅರ್ಚಕರು ಸೇವೆ ಹೇಗೆ ಮಾಡುತ್ತಾರೆ ? ಎಂದು ಸವರ್ಣ ಸಮಾಜದ ಜನರು ಹೇಳುತ್ತಿದ್ದಾರೆ. ಪ್ರತಿಭಟನೆಯ ಸಮಯದಲ್ಲಿ ಅಲ್ಲಿ ಉಪಸ್ಥಿತರಿದ್ದ ಭೀಮ್ ಆರ್ಮಿಯ ಕೆಲವು ಕಾರ್ಯಕರ್ತರನ್ನು ನೋಡಿ ಜನರು ಇನ್ನಷ್ಟು ಕೆರಳಿದರು. ಭೀಮ್ ಆರ್ಮಿಯ ಕೆಲವು ಜನರೇ ಎಲ್ಲಾ ಕಡೆಗೆ ಹೋಗಿ ಸುಳ್ಳು ಮೊಕದ್ದಮೆಗಳನ್ನು ದಾಖಲಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ತದನಂತರ ರಾಜಿ ಮಾಡಿಕೊಳ್ಳುವ ಹೆಸರಿನಲ್ಲಿ ಅವರು ದೊಡ್ಡ ಮೊತ್ತದ ಹಣವನ್ನು ವಸೂಲಿ ಮಾಡುತ್ತಾರೆ. ಇಂತಹ ಮಾರ್ಗಗಳ ಮೂಲಕ ಸಂಪೂರ್ಣ ದೇಶದಲ್ಲಿ ಸವರ್ಣ ಸಮಾಜಕ್ಕೆ ಕಿರುಕುಳ ನೀಡಲಾಗುತ್ತಿದೆ. ಯಾವುದೇ ಒತ್ತಡಕ್ಕೆ ಮಣಿದು ತಪ್ಪು ಕ್ರಮ ಕೈಗೊಂಡರೆ ಸಂಪೂರ್ಣ ಸಮಾಜವು ರಸ್ತೆಗಿಳಿಯುತ್ತದೆ ಮತ್ತು ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಸಂಪಾದಕೀಯ ನಿಲುವು

  • ಉತ್ತರಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಇಂತಹ ಘಟನೆಗಳು ನಡೆಯಬಾರದು ಎಂದೇ ಹಿಂದೂಗಳಿಗೆ ಅನಿಸುತ್ತದೆ !
  • ದೇವಸ್ಥಾನದ ಅರ್ಚಕರು ಎಲ್ಲಾ ಹಿಂದೂಗಳಿಗೆ ಸೇರಿದವರಾಗಿದ್ದಾರೆ, ಕೇವಲ ಬ್ರಾಹ್ಮಣರಿಗೆ ಮಾತ್ರವಲ್ಲ. ಆದರೂ ಅವರ ಮೇಲೆ ಅನ್ಯಾಯವಾಗುತ್ತಿರುವುದನ್ನು ಕಂಡು ಕೇವಲ ಬ್ರಾಹ್ಮಣರೇ ಏಕೆ ರಸ್ತೆಗಿಳಿದು ಪ್ರತಿಭಟಿಸುತ್ತಿದ್ದಾರೆ ? ಇತರ ಹಿಂದೂಗಳಿಗೆ ಅದರ ಬಗ್ಗೆ ಯಾವುದೇ ಕಾಳಜಿ ಇಲ್ಲವೇ ? ಹಿಂದೂಗಳಿಗೆ ಇದು ಅತ್ಯಂತ ನಾಚಿಕೆಗೇಡಿನ ಸಂಗತಿ !