ಕ್ಯಾಥೋಲಿಕ್ ಚರ್ಚ್‌ ನಿಂದ ನಡೆಸಲಾದ ಗುಲಾಮಗಿರಿಯ ಕುರಿತು ಕ್ಷಮೆಯಾಚಿಸಿದ ಪೋಪ್ ಲಿಯೋ

ವ್ಯಾಟಿಕನ್ ಸಿಟಿ – ಕ್ಯಾಥೋಲಿಕ್ ಚರ್ಚ್‌ನ ಇತಿಹಾಸದ ಒಂದು ಕರಾಳ ಅಧ್ಯಾಯವನ್ನು ಒಪ್ಪಿಕೊಳ್ಳುತ್ತಾ, ಪೋಪ್ ಲಿಯೋ ಅವರು ಚರ್ಚ್‌ನ ಗುಲಾಮಗಿರಿಯ ಪರಂಪರೆಯ ಬಗ್ಗೆ ಅಧಿಕೃತವಾಗಿ ಕ್ಷಮೆಯಾಚಿಸಿದ್ದಾರೆ. ಅವರು ಇದನ್ನು ‘ಕ್ರಿಶ್ಚಿಯನ್ ಸ್ಮೃತಿಯಲ್ಲಿನ ಒಂದು ಆಳವಾದ ಗಾಯ’ ಎಂದು ಕರೆದಿದ್ದಾರೆ.

ಒಂದು ಪ್ರಮುಖ ಭಾಷಣದಲ್ಲಿ ಪೋಪ್ ಅವರು, ಶತಮಾನಗಳವರೆಗೆ ಚರ್ಚ್‌ನ ಕೆಲವು ವ್ಯಕ್ತಿಗಳು ಮತ್ತು ಸಂಸ್ಥೆಗಳು ಮಾನವ ಘನತೆಗೆ ವಿರುದ್ಧವಾಗಿದ್ದ ಗುಲಾಮಗಿರಿಯ ವ್ಯವಸ್ಥೆಗೆ ಕೇವಲ ಮೂಕ ಸಮ್ಮತಿಯನ್ನು ನೀಡಿದ್ದು ಮಾತ್ರವಲ್ಲದೆ, ಕೆಲವು ಸಂದರ್ಭಗಳಲ್ಲಿ ಅದನ್ನು ಬೆಂಬಲಿಸಿದ್ದವು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಈ ಕೃತ್ಯಗಳು ‘ಅಮಾನುಷ’ ಮತ್ತು ‘ಕ್ರಿಶ್ಚಿಯನ್ ಬೋಧನೆಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿವೆ’ ಎಂದಿದ್ದಾರೆ.

ಪೋಪ್ ಲಿಯೋ ಅವರು ಮಾತನಾಡಿ, ‘ನಾವು ದೇವರ ಮುಂದೆ ಮತ್ತು ಯಾರ ಪೂರ್ವಜರು ಈ ಅನ್ಯಾಯದ ಪರಿಣಾಮವನ್ನು ಎದುರಿಸಿದ್ದಾರೋ, ಅಂತಹ ಜನರ ಮುಂದೆ ಚರ್ಚ್‌ನ ಇತಿಹಾಸದ ಈ ಕಾಲಘಟ್ಟವು ಮಾನವೀಯತೆಗೆ ಕಳಂಕ ತಂದಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಕ್ರಿಶ್ಚಿಯನ್ ಧರ್ಮದ ಮೂಲ ಆಧಾರವಾಗಿರುವ ಭ್ರಾತೃತ್ವ ಮತ್ತು ಸಮಾನತೆಯ ಬೋಧನೆಗೆ ಇದರಿಂದ ದೊಡ್ಡ ಧಕ್ಕೆಯಾಗಿದೆ’, ಎಂದರು.

ತಪ್ಪುಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗಿದೆ !

ಚರ್ಚ್‌ಗೆ ಭೂತಕಾಲದ ತಪ್ಪುಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗಿದೆ ಮತ್ತು ಭವಿಷ್ಯದಲ್ಲಿ ಇನ್ನಷ್ಟು ನ್ಯಾಯಯುತ ಸಮಾಜದ ನಿರ್ಮಾಣಕ್ಕಾಗಿ ಪ್ರಯತ್ನಿಸಬೇಕಾಗಿದೆ ಎಂದು ಪೋಪ್ ಸ್ಪಷ್ಟಪಡಿಸಿದರು. ಕೇವಲ ಕ್ಷಮೆಯಾಚಿಸುವುದು ಅಷ್ಟೇ ಸಾಕಾಗುವುದಿಲ್ಲ, ಬದಲಿಗೆ ನಾವು ಈ ಇತಿಹಾಸದಿಂದ ಪಾಠ ಕಲಿತು ಪ್ರಸ್ತುತ ಕಾಲದಲ್ಲಿ ಅಸ್ತಿತ್ವದಲ್ಲಿರುವ ಆಧುನಿಕ ಗುಲಾಮಗಿರಿಯ ರೂಪಗಳ ವಿರುದ್ಧ ಹೋರಾಡಬೇಕಾಗಿದೆ ಎಂದು ಅವರು ಕರೆ ನೀಡಿದರು.

ಲಕ್ಷಾಂತರ ಆಫ್ರಿಕನ್ ಜನರನ್ನು ಬಲವಂತವಾಗಿ ಗುಲಾಮರನ್ನಾಗಿಸಿ ಅಮೆರಿಕ ಸೇರಿದಂತೆ ಇತರ ಖಂಡಗಳಿಗೆ ಕರೆದೊಯ್ಯಲಾಗಿತ್ತು !

ಪೋಪ್ ಅವರು ತಮ್ಮ ಭಾಷಣದಲ್ಲಿ ವಿಶೇಷವಾಗಿ ಅಟ್ಲಾಂಟಿಕ್ ಗುಲಾಮಗಿರಿ ವ್ಯಾಪಾರವನ್ನು ಉಲ್ಲೇಖಿಸಿದರು, ಇದರಲ್ಲಿ ಲಕ್ಷಾಂತರ ಆಫ್ರಿಕನ್ ಜನರನ್ನು ಬಲವಂತವಾಗಿ ಗುಲಾಮರನ್ನಾಗಿಸಿ ಅಮೆರಿಕ ಸೇರಿದಂತೆ ಇತರ ಖಂಡಗಳಿಗೆ ಕರೆದೊಯ್ಯಲಾಗಿತ್ತು. ಚರ್ಚ್ ಈ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಬದಲು ಅನೇಕ ಬಾರಿ ಮೌನವಾಗಿರಲು ಆದ್ಯತೆ ನೀಡಿತ್ತು, ಇದು ತಪ್ಪು ಎಂಬುದನ್ನು ಅವರು ಒಪ್ಪಿಕೊಂಡರು.

ಸಂಪಾದಕೀಯ ನಿಲುವು

ಭಾರತ ಮತ್ತು ಇತರೆಡೆಗಳಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಬಲವಂತದ ಮತಾಂತರದ ಅಭ್ಯಾಸದ ವಿರುದ್ಧ ಪೋಪ್ ಮಾತನಾಡುವ ಅಗತ್ಯವಿದೆ. ಅಂತಹ ಘಟನೆಗಳನ್ನು ತಡೆಯಲು ಅವರು ಏಕೆ ಪ್ರಯತ್ನಿಸುತ್ತಿಲ್ಲ ಎಂಬುದನ್ನು ಸಹ ಅವರು ಹೇಳಬೇಕು!