ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ, ದೇಶಾದ್ಯಂತ ಗೋ ಹತ್ಯೆ ನಿಷೇಧಿಸಿ ! – ಹಾಜಿ ಮೊಹಮ್ಮದ್ ಪರ್ವೇಜ್ ಸಿದ್ದಿಕಿ

ರಾಷ್ಟ್ರೀಯ ಅಲ್ಪಸಂಖ್ಯಾತ ಮೀಸಲಾತಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಹಾಜಿ ಮೊಹಮ್ಮದ್ ಪರ್ವೇಜ್ ಸಿದ್ದಿಕಿ ಅವರಿಂದ ಪ್ರಧಾನಿ ಮೋದಿ ಮತ್ತು ಎಲ್ಲಾ ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಮನವಿ

ಮುಜಾಫರ್‌ಪುರ (ಬಿಹಾರ) – ರಾಷ್ಟ್ರೀಯ ಅಲ್ಪಸಂಖ್ಯಾತ ಮೀಸಲಾತಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಮತ್ತು ಇಸ್ಲಾಮಿಕ್ ಚಿಂತಕ ಹಾಜಿ ಮೊಹಮ್ಮದ್ ಪರ್ವೇಜ್ ಸಿದ್ದಿಕಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಹಾಗೂ ದೇಶಾದ್ಯಂತ ಗೋಹತ್ಯೆ ಮತ್ತು ಗೋವುಗಳ ಬಲಿಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಒತ್ತಾಯಿಸಿದ್ದಾರೆ.

ಹಸು ಭಾರತೀಯ ಸಂಸ್ಕೃತಿ ಮತ್ತು ಗ್ರಾಮೀಣ ಆರ್ಥಿಕತೆಯ ಆಧಾರ

ಹಾಜಿ ಮೊಹಮ್ಮದ್ ಪರ್ವೇಜ್ ಸಿದ್ದಿಕಿ ಮಾತನಾಡಿ, ‘ಹಸು ಕೇವಲ ಧಾರ್ಮಿಕ ನಂಬಿಕೆಯ ಸಂಕೇತವಲ್ಲ, ಬದಲಿಗೆ ಭಾರತೀಯ ಗ್ರಾಮೀಣ ಆರ್ಥಿಕತೆ, ಕೃಷಿ ವ್ಯವಸ್ಥೆ ಮತ್ತು ಪರಿಸರ ಸಂರಕ್ಷಣೆಯ ಜೀವಂತ ಸಂಕೇತವಾಗಿದೆ’. ಕೋಟ್ಯಂತರ ಜನರ ಭಾವನೆಗಳು ಹಸುವಿನೊಂದಿಗೆ ಬೆಸೆದುಕೊಂಡಿವೆ ಮತ್ತು ಗೋಸಂರಕ್ಷಣೆಯು ಭಾರತೀಯ ಸಮಾಜದ ಸಾಂಸ್ಕೃತಿಕ ಗುರುತಿಗೆ ಸಂಬಂಧಿಸಿದ ವಿಷಯವಾಗಿದೆ ಎಂದಿದ್ದಾರೆ. ಪತ್ರದಲ್ಲಿ ಅವರು ಭಾರತೀಯ ಸಂವಿಧಾನದ ಮಾರ್ಗದರ್ಶಕ ತತ್ವಗಳನ್ನು ಉಲ್ಲೇಖಿಸಿ, ಗೋವಂಶ ಸಂರಕ್ಷಣೆಯ ಬಗ್ಗೆ ಮಾತನಾಡುವ ವಿಧಿ 48 ರ ಉಲ್ಲೇಖವನ್ನು ನೀಡಿದ್ದಾರೆ.

ಈ ಬೇಡಿಕೆ ಯಾವುದೇ ಧರ್ಮದ ವಿರುದ್ಧವಲ್ಲ!

ತಮ್ಮ ಗೋಹತ್ಯೆ ನಿಷೇಧದ ಬೇಡಿಕೆಯು ಯಾವುದೇ ನಿರ್ದಿಷ್ಟ ಧರ್ಮ ಅಥವಾ ಸಮುದಾಯದ ವಿರುದ್ಧವಾಗಿಲ್ಲ ಎಂದು ಸಿದ್ದಿಕಿ ಸ್ಪಷ್ಟಪಡಿಸಿದ್ದಾರೆ. (ಎಷ್ಟು ಮುಸ್ಲಿಂ ನಾಯಕರು ಸಿದ್ದಿಕಿ ಅವರ ಹೇಳಿಕೆಯನ್ನು ಬಹಿರಂಗವಾಗಿ ಬೆಂಬಲಿಸಲಿದ್ದಾರೆ? – ಸಂಪಾದಕರು). ಭಾರತದಲ್ಲಿನ ಮುಸ್ಲಿಂ ಸಮುದಾಯವು ಯಾವಾಗಲೂ ಶಾಂತಿ, ಸಹೋದರತೆ ಮತ್ತು ಪರಸ್ಪರ ಗೌರವವನ್ನು ಬೆಂಬಲಿಸುತ್ತಾ ಬಂದಿದೆ. ಸಾಮಾಜಿಕ ಸೌಹಾರ್ದತೆ, ಪ್ರಾಣಿಗಳ ಸಂರಕ್ಷಣೆ ಮತ್ತು ರಾಷ್ಟ್ರೀಯ ಐಕ್ಯತೆಯನ್ನು ಬಲಪಡಿಸುವುದು ನನ್ನ ಉದ್ದೇಶವಾಗಿದೆ. ಸೂಕ್ಷ್ಮ ವಿಷಯಗಳ ಮೇಲೆ ಸಂಘರ್ಷ ಬೇಡ, ಬದಲಿಗೆ ಸಂವಾದ ಮತ್ತು ಸಮತೋಲನದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರಕಾರಕ್ಕೆ ಇಟ್ಟಿರುವ ಬೇಡಿಕೆಗಳು!

1. ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು.

2. ರಾಷ್ಟ್ರೀಯ ಮಟ್ಟದಲ್ಲಿ ಗೋಸಂರಕ್ಷಣಾ ಆಯೋಗವನ್ನು ಸ್ಥಾಪಿಸಬೇಕು.

3. ಎಲ್ಲಾ ಧರ್ಮ ಮತ್ತು ಸಮುದಾಯಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿ ರಾಷ್ಟ್ರೀಯ ಸಹಮತವನ್ನು ಮೂಡಿಸಬೇಕು.

ಸಂಪಾದಕೀಯ ನಿಲುವು

  • ಇದನ್ನು ಸರಕಾರಗಳಿಗೆ ಪ್ರತ್ಯೇಕವಾಗಿ ಹೇಳಬೇಕೇ?
  • ಈ ಹೇಳಿಕೆಯನ್ನು ರಾಷ್ಟ್ರೀಯ ಮುಸ್ಲಿಂ ಸಂಘಟನೆಯೊಂದರ ಅಧ್ಯಕ್ಷರು ನೀಡಿರುವುದರಿಂದ, ಮುಸ್ಲಿಮರ ಓಲೈಕೆ ಮಾಡುವ ಹಿಮಾಚಲ ಪ್ರದೇಶ, ತೆಲಂಗಾಣ, ಕರ್ನಾಟಕ ಮುಂತಾದ ಕಾಂಗ್ರೆಸ್ ಆಡಳಿತವಿರುವ ಸರಕಾರಗಳು ತಮ್ಮ ರಾಜ್ಯಗಳಲ್ಲಿ ಇದರ ವಿರುದ್ಧ ಕ್ರಮ ಕೈಗೊಳ್ಳಲಿವೆಯೇ?