ರಾಜಕೋಟ್ (ಗುಜರಾತ್) ನಲ್ಲಿ ಪಾಲಿಕೆಯಿಂದ ರಾತ್ರೋರಾತ್ರಿ 12 ದೇವಸ್ಥಾನಗಳ ಧ್ವಂಸ!

  • 12 ದೇವಸ್ಥಾನಗಳ ಪೈಕಿ 7 ಹನುಮಂತನ ದೇವಸ್ಥಾನಗಳು

  • ಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಭಾಜಪ (BJP) ವಿರುದ್ಧ ಸ್ಥಳೀಯ ಹಿಂದೂಗಳ ಆಕ್ರೋಶ!

ಹಿಂದೂಗಳ ಪ್ರತಿಭಟನೆ

ರಾಜಕೋಟ್ (ಗುಜರಾತ್) – ಇಲ್ಲಿ ಮೇ 14ರ ಮಧ್ಯರಾತ್ರಿ ಮಹಾನಗರ ಪಾಲಿಕೆಯು ಅನಧಿಕೃತ ಎಂದು ಹೇಳಿ ಏಕಕಾಲದಲ್ಲಿ 12 ದೇವಸ್ಥಾನಗಳನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿದೆ. ಇವುಗಳಲ್ಲಿ 7 ಹನುಮಂತನ ದೇವಸ್ಥಾನಗಳಾಗಿವೆ. ಇದರ ವಿರುದ್ಧ ಭಾರಿ ಸಂಖ್ಯೆಯಲ್ಲಿ ಹಿಂದೂಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಸ್ಥಳೀಯ ಜನರೊಂದಿಗಿನ ಸಂಘರ್ಷವನ್ನು ತಪ್ಪಿಸಲು ರಾಜಕೋಟ್ ಮಹಾನಗರ ಪಾಲಿಕೆಯು ರಸ್ತೆಬದಿಯ ಸಣ್ಣ ದೇವಸ್ಥಾನಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ರಾತ್ರಿ 1:30 ಕ್ಕೆ ಪ್ರಾರಂಭಿಸಿತ್ತು. ಅತಿಕ್ರಮಣ ತೆರವುಗೊಳಿಸುವ ಈ ಕಾರ್ಯಾಚರಣೆಯು ಮುಂಜಾನೆ 5 ಗಂಟೆಯವರೆಗೆ ನಡೆಯಿತು. ಅಧಿಕಾರಿಗಳು ಅಗ್ನಿಶಾಮಕ ದಳ, ಜಾಗೃತ ದಳ ಮತ್ತು ಸ್ಥಳೀಯ ಪೊಲೀಸರ ಸಹಾಯದಿಂದ ಈ ಕ್ರಮ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಭಾಜಪ ವಿರುದ್ಧ ಸ್ಥಳೀಯ ಜನರು ತೀವ್ರ ಪದಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಳವೀಯ ನಗರ ಪೊಲೀಸ್ ಠಾಣೆಯ ಸಮೀಪವಿರುವ ಹನುಮಂತನ ದೇವಸ್ಥಾನಕ್ಕೂ ತೆರವು ನೋಟಿಸ್ ನೀಡಲಾಗಿತ್ತು; ಆದರೆ ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನದ ಹೊರಗೆ ಜಮಾಯಿಸಿದರು. ದೇವಸ್ಥಾನದ ಹೊರಗೆ ಸತತ 4 ಗಂಟೆಗಳ ಕಾಲ ಧರಣಿ ನಡೆಸಿದ ನಂತರ, ಇಲಾಖೆಯ ಅಧಿಕಾರಿಗಳು ಸ್ಥಳೀಯ ಜನರಿಗೆ ದೇವಸ್ಥಾನದ ರಸ್ತೆಗೆ ಬರುವ ಒಂದು ಸಣ್ಣ ಭಾಗವನ್ನು ಮಾತ್ರ ತೆರವುಗೊಳಿಸುವುದಾಗಿ ಭರವಸೆ ನೀಡಿದರು.