ಸಮವಸ್ತ್ರಧಾರಿ ಪೊಲೀಸರು ತಿಲಕ ಇಟ್ಟರೆ ಕ್ರಮ! – ಬಿಹಾರ ಪೊಲೀಸ್ ಮಹಾನಿರ್ದೇಶಕರ ಎಚ್ಚರಿಕೆ

ಪಾಟಲಿಪುತ್ರ (ಬಿಹಾರ) – ಬಿಹಾರ ರಾಜ್ಯದ ಪೊಲೀಸ್ ಮಹಾನಿರ್ದೇಶಕ ವಿನಯ ಕುಮಾರ ಅವರು ರಾಜ್ಯದ ಎಲ್ಲಾ ಪೊಲೀಸರಿಗೆ ಎಚ್ಚರಿಕೆ ನೀಡಿ, ಕರ್ತವ್ಯದ ಮೇಲಿರುವಾಗ ಸಮವಸ್ತ್ರಧಾರಿ ಪೊಲೀಸರು ಹಣೆಯ ಮೇಲೆ ತಿಲಕ ಅಥವಾ ಯಾವುದೇ ರೀತಿಯ ಧಾರ್ಮಿಕ ಚಿಹ್ನೆಗಳನ್ನು ಧರಿಸಿದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಅವರು ಮಾತನಾಡುತ್ತಾ, ಪೊಲೀಸರು ಟೋಪಿ ಧರಿಸುವುದು ಮತ್ತು ಬೆಲ್ಟ್ ಹಾಕುವುದು ಕಡ್ಡಾಯವಾಗಿದೆ. ಹಾಗೆ ಮಾಡದ ಪೊಲೀಸರ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲಾಗುವುದು. ಸಮವಸ್ತ್ರಧಾರಿ ಪೊಲೀಸರು ಹತ್ತೂ ಬೆರಳುಗಳಿಗೆ ಉಂಗುರಗಳನ್ನು ಧರಿಸುವಂತಿಲ್ಲ. ಮಹಿಳಾ ಪೊಲೀಸರು ಕೂಡ ಕರ್ತವ್ಯದ ಸಮಯದಲ್ಲಿ ಅತಿ ಹೆಚ್ಚು ಅಲಂಕಾರ ಮಾಡಿಕೊಳ್ಳುವುದು ಮತ್ತು ಆಭರಣಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಪೊಲೀಸ್ ಪಡೆಯಲ್ಲಿ ಏಕರೂಪತೆ ಮತ್ತು ವೃತ್ತಿಪರತೆಯನ್ನು ಕಾಪಾಡುವುದು ಇದರ ಹಿಂದಿನ ಉದ್ದೇಶ ಎಂದು ಹೇಳಲಾಗುತ್ತಿದೆ.

ಅನೇಕ ಸಂಘಟನೆಗಳ ಆಕ್ಷೇಪ!

ಈ ಆದೇಶವನ್ನು ‘ವಿಶ್ವಾಮಿತ್ರ ಸೇನಾ’ ಸಂಘಟನೆಯ ರಾಷ್ಟ್ರೀಯ ಸಂಚಾಲಕ ರಾಜಕುಮಾರ ಚೌಬೆ ಅವರು ಖಂಡಿಸಿದ್ದು, ಈ ಆದೇಶವು ಧಾರ್ಮಿಕ ಸ್ವಾತಂತ್ರ್ಯದ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಗಂಧ ಮತ್ತು ತಿಲಕವು ಸನಾತನ ಪರಂಪರೆ ಹಾಗೂ ಶ್ರದ್ಧೆಯ ಸಂಕೇತವಾಗಿದ್ದು, ಅದರ ಮೇಲೆ ನಿಷೇಧ ಹೇರುವುದು ಅಯೋಗ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನಿಯಮವೇನು ಹೇಳುತ್ತದೆ?

‘ಬಿಹಾರ ಪೊಲೀಸ್ ಮ್ಯಾನುವಲ್ ೧೯೭೮’ ರ ಪ್ರಕಾರ ಕರ್ತವ್ಯದ ಮೇಲಿರುವ ಯಾವುದೇ ಪೊಲೀಸ್ ಸಿಬ್ಬಂದಿಗೆ ಯಾವುದೇ ಧರ್ಮದ ಚಿಹ್ನೆ, ಸಂಕೇತ ಅಥವಾ ಉಡುಪನ್ನು ಪ್ರದರ್ಶಿಸಲು ಅನುಮತಿಯಿಲ್ಲ. ಇದರಲ್ಲಿ ಹಿಂದೂ ಧರ್ಮದ ತಿಲಕ ಅಥವಾ ಗಂಧ ಮತ್ತು ಇಸ್ಲಾಂ ಧರ್ಮದ ಪ್ರಕಾರ ಬಿಡುವ ಗಡ್ಡದ ಮೇಲೆ ಸಮಾನವಾಗಿ ನಿಷೇಧ ಅನ್ವಯಿಸುತ್ತದೆ. ಸಮವಸ್ತ್ರದಲ್ಲಿರುವ ಪೊಲೀಸ್ ಸಿಬ್ಬಂದಿಯು ಯಾವುದೇ ಒಂದು ಧರ್ಮ ಅಥವಾ ಸಮುದಾಯದ ಪ್ರತಿನಿಧಿಯಂತೆ ಕಾಣದೆ ರಾಜ್ಯದ ಪ್ರತಿನಿಧಿಯಂತೆ ಕಾಣಬೇಕು ಎಂಬುದು ಇದರ ಮೂಲ ಉದ್ದೇಶವಾಗಿದೆ. ಆದಾಗ್ಯೂ, ಈ ನಿಯಮದಲ್ಲಿ ಸಿಖ್ ಧರ್ಮಕ್ಕೆ ವಿಶೇಷ ರಿಯಾಯಿತಿ ನೀಡಲಾಗಿದೆ. ನವರಾತ್ರಿಯಲ್ಲಿ ತಿಲಕ ಇಡಲು ಅಥವಾ ರಂಜಾನ್ ಸಮಯದಲ್ಲಿ ಗಡ್ಡ ಬಿಡಲು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮುಂಚಿತವಾಗಿ ಲಿಖಿತ ರೂಪದಲ್ಲಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅನುಮತಿಯಿಲ್ಲದೆ ಈ ರೀತಿ ಮಾಡುವುದು ನಿಯಮಗಳ ಉಲ್ಲಂಘನೆಯೆಂದು ಪರಿಗಣಿಸಲಾಗುತ್ತದೆ.

ಸಂಪಾದಕೀಯ ನಿಲುವು

  • ತಮ್ಮನ್ನು ‘ಜಾತ್ಯಾತೀತ’ ಎಂದು ಕರೆದುಕೊಳ್ಳುವ ಪೊಲೀಸರು ಯಾವಾಗಲೂ ಹಿಂದೂಗಳ ಮೇಲೆಯೇ ಏಕೆ ತಮ್ಮ ಪ್ರತಾಪ ತೋರಿಸುತ್ತಾರೆ? ಪೊಲೀಸರ ಉಡುಪಿನಲ್ಲಿರುವ ಈ ‘ಜಾತ್ಯಾತೀತ’ಸ್ವಭಾವ ಅವರ ನಡವಳಿಕೆಯಲ್ಲಿ ಯಾವಾಗ ಕಂಡು ಬರುತ್ತದೆ?
  • ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮವು ಭಾರತದ ಆತ್ಮವಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ಇತ್ತೀಚೆಗಷ್ಟೇ ಹೇಳಿದೆ. ಹೀಗಿರುವಾಗ ಇಂತಹ ನಿರ್ಧಾರಗಳನ್ನು ತುಘಲಕಿ ಎನ್ನದೆ ಮತ್ತೇನನ್ನಬೇಕು? ಹಿಂದೂಗಳಲ್ಲಿನ ಅಸ್ಮಿತೆಯ ಕೊರತೆಯಿಂದಲೇ ಇಂತಹ ಫತ್ವಾಗಳನ್ನು ಹೊರಡಿಸಲಾಗುತ್ತದೆ ಎಂಬುದು ಕೂಡ ಅಷ್ಟೇ ನಿಜ!