ಭಾರತವನ್ನು ಸೋಲಿಸಲು ವಿಫಲವಾದ ಕಾರಣ ಅಫ್ಘಾನಿಸ್ತಾನದೊಂದಿಗೆ ಪಾಕಿಸ್ತಾನದ ಸಂಘರ್ಷ!

‘ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್’ ಸಂಘಟನೆಯ ಆರೋಪ

ನವದೆಹಲಿ – ‘ಆಪರೇಷನ್ ಸಿಂದೂರ್’ನಲ್ಲಿ ಸೋಲನುಭವಿಸಿದ ನಂತರ ಪಾಕಿಸ್ತಾನವು ಉದ್ದೇಶಪೂರ್ವಕವಾಗಿ ಅಫ್ಘಾನಿಸ್ತಾನವನ್ನು ಗುರಿಯಾಗಿಸಿಕೊಂಡಿದೆ. ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ತಮ್ಮ ವರ್ಚಸ್ಸನ್ನು ಸುಧಾರಿಸಿಕೊಳ್ಳಲು ಅಫ್ಘಾನಿಸ್ತಾನದೊಂದಿಗಿನ ಉದ್ವಿಗ್ನತೆಯನ್ನು ಹೆಚ್ಚಿಸಿದ್ದಾರೆ ಎಂದು ‘ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್’ (ಟಿಟಿಪಿ) ತನ್ನ ‘ಮುಜಲ್ಲಾ ತಾಲಿಬಾನ್’ ನಿಯತಕಾಲಿಕೆಯಲ್ಲಿ ಆರೋಪಿಸಿದೆ. ಈ ದಾಳಿಗಳಿಂದಾಗಿಯೇ ಫೆಬ್ರವರಿ ತಿಂಗಳಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಟಿಟಿಪಿ ಹೇಳಿದೆ.

ಅಫ್ಘಾನಿಸ್ತಾನವನ್ನು ಸುಲಭ ಗುರಿ ಎಂದು ಭಾವಿಸಿದ ಪಾಕಿಸ್ತಾನ!

ಭಾರತಕ್ಕಿಂತ ಅಫ್ಘಾನಿಸ್ತಾನ ಸುಲಭ ಗುರಿ ಎಂದು ಮುನೀರ್ ಅವರು ಪರಿಗಣಿಸಿದರು. ಮೇ 2025 ರಲ್ಲಿ ಭಾರತದೊಂದಿಗಿನ ಸಂಘರ್ಷದಲ್ಲಿ ಸೋಲನ್ನಪ್ಪಿದ ನಂತರ ಮತ್ತು ಜಗತ್ತಿನಾದ್ಯಂತ ಭಾರತಕ್ಕೆ ಭಾರಿ ಬೆಂಬಲ ಸಿಕ್ಕ ನಂತರ ಮುನೀರ್ ಈ ಮಾರ್ಗ ಆರಿಸಿಕೊಂಡರು. ತಮ್ಮ ಮಿಲಿಟರಿ ಯಶಸ್ಸನ್ನು ಪ್ರದರ್ಶಿಸುವುದು ಮತ್ತು ಪಾಕಿಸ್ತಾನದ ಮೇಲಿನ ತಮ್ಮ ಹಿಡಿತವನ್ನು ಇನ್ನಷ್ಟು ಬಲಪಡಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು ಎಂದು ಟಿಟಿಪಿ ಹೇಳಿದೆ.
ಪಾಕಿಸ್ತಾನವು ಫೆಬ್ರವರಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧ ಬಹಿರಂಗ ಯುದ್ಧ ಘೋಷಿಸಿತು. ‘ಆಪರೇಷನ್ ಗಜ್ಬ್-ಲಿಲ್-ಹಕ್’ ಭಾಗವಾಗಿ ಪಾಕಿಸ್ತಾನಿ ಸೈನ್ಯವು ಅಫ್ಘಾನಿಸ್ತಾನದ ಹಲವಾರು ಸ್ಥಳಗಳ ಮೇಲೆ ದಾಳಿ ಮಾಡಿತು. ಈ ದಾಳಿಗೆ ಅಫ್ಘಾನಿಸ್ತಾನ ಕೂಡ ತಕ್ಕ ಪ್ರತ್ಯುತ್ತರ ನೀಡಿತು. ಎರಡೂ ದೇಶಗಳ ನಡುವಿನ 2,611 ಕಿಲೋಮೀಟರ್ ಉದ್ದದ ಗಡಿಯನ್ನು ‘ಡ್ಯುರಾಂಡ್ ಲೈನ್’ ಎಂದು ಕರೆಯಲಾಗುತ್ತದೆ. ಆದರೆ, ಅಫ್ಘಾನಿಸ್ತಾನ ಈ ರೇಖೆಗೆ ಅಧಿಕೃತ ಮಾನ್ಯತೆ ನೀಡುವುದಿಲ್ಲ.