ಕತಾರ್ ನ್ಯಾಯಾಲಯದಿಂದ ನಿರಪರಾಧಿ ಎಂದು ತೀರ್ಪು ಬಂದರೂ ಮಾಜಿ ಭಾರತೀಯ ನೌಕಾಪಡೆ ಅಧಿಕಾರಿ ಇನ್ನೂ ಜೈಲಲ್ಲೇ! – Naval Veteran Purnendu Tiwary

ದೋಹಾ (ಕತಾರ್) – ಇಲ್ಲಿನ ಉಚ್ಚ ನ್ಯಾಯಾಲಯವು ಮಾಜಿ ಭಾರತೀಯ ನೌಕಾಪಡೆಯ ಕಮಾಂಡರ್ ಪೂರ್ಣೇಂದು ತಿವಾರಿ (ವಯಸ್ಸು 65 ವರ್ಷ) ಅವರನ್ನು ಆರ್ಥಿಕ ಅಕ್ರಮ ಪ್ರಕರಣದಲ್ಲಿ ನಿರಪರಾಧಿ ಎಂದು ಘೋಷಿಸಿದೆ; ಆದರೆ ಇನ್ನೂ ಅವರನ್ನು ಭಾರತಕ್ಕೆ ವಾಪಸ್ ಕಳುಹಿಸಲಾಗಿಲ್ಲ. ಆಪಾದಿತ ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದ 8 ಮಾಜಿ ಭಾರತೀಯ ನೌಕಾಪಡೆಯ ಅಧಿಕಾರಿಗಳಲ್ಲಿ ಪೂರ್ಣೇಂದು ತಿವಾರಿ ಕೂಡ ಒಬ್ಬರಾಗಿದ್ದಾರೆ. ಮಾರ್ಚ್ 12 ರಂದು ನೀಡಿದ ತೀರ್ಪಿನಲ್ಲಿ ನ್ಯಾಯಾಲಯವು ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದೆ. ‘ಎಲ್ಲಾ ವಹಿವಾಟುಗಳು ದೂರುದಾರರ ಒಪ್ಪಿಗೆಯೊಂದಿಗೆ ನಡೆದಿವೆ ಮತ್ತು ಅದರ ಹಿಂದೆ ಯಾವುದೇ ಅಪರಾಧದ ಉದ್ದೇಶವಿರಲಿಲ್ಲ’ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತಕ್ಷೇಪದ ನಂತರ ಈ 8 ಅಧಿಕಾರಿಗಳಿಗೆ ಕ್ಷಮಾದಾನ ನೀಡಲಾಗಿತ್ತು; ಆದರೆ ಪೂರ್ಣೇಂದು ತಿವಾರಿ ಅವರನ್ನು ಮಾತ್ರ ಇನ್ನೂ ಬಿಡುಗಡೆ ಮಾಡಲಾಗಿಲ್ಲ.

ಕುಟುಂಬಸ್ಥರು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿಯೂ ಹಸ್ತಕ್ಷೇಪಕ್ಕೆ ಆಗ್ರಹಿಸಿದ್ದಾರೆ. ತಿವಾರಿ ಅವರೊಂದಿಗೆ ಬಂಧಿಸಲ್ಪಟ್ಟಿದ್ದ ಇತರ 7 ಭಾರತೀಯರು ಹಿಂದಿರುಗಿದ್ದಾರೆ; ಆದರೆ 2 ವರ್ಷಗಳ ಕಾಯುವಿಕೆಯ ನಂತರವೂ ಪೂರ್ಣೇಂದು ತಿವಾರಿ ಅವರ ಬಿಡುಗಡೆಯಾಗಿಲ್ಲ. ದೋಹಾದಲ್ಲಿರುವ ಜೈಲು ಅಮೆರಿಕಕ್ಕೆ ಸಂಬಂಧಿಸಿದ ಕಟ್ಟಡಗಳ ಸಮೀಪದಲ್ಲಿದೆ ಮತ್ತು ಆ ಪ್ರದೇಶದ ಮೇಲೆ ಇರಾನ್‌ನಿಂದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ನಡೆಯುತ್ತಿವೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಯಾರು ಈ ಪೂರ್ಣೇಂದು ತಿವಾರಿ?

ಭಾರತೀಯ ನೌಕಾಪಡೆಯಿಂದ ನಿವೃತ್ತರಾದ ನಂತರ ಪೂರ್ಣೇಂದು ತಿವಾರಿ ಅವರು ‘ದಹರಾ ಗ್ಲೋಬಲ್ ಕಂಪನಿ’ಯಲ್ಲಿ ಕೆಲಸ ಪ್ರಾರಂಭಿಸಿದ್ದರು. ಈ ಸಂಸ್ಥೆಯು ಕತಾರ್ ನೌಕಾಪಡೆಗೆ ತರಬೇತಿ ನೀಡುವ ಕಾರ್ಯವನ್ನು ಮಾಡುತ್ತದೆ. ತಿವಾರಿ ಅವರು ನೌಕಾಯಾನ ತಜ್ಞರಾಗಿದ್ದು, ಅವರು ಭಾರತೀಯ ನೌಕಾಪಡೆಯ ಐ.ಎನ್.ಎಸ್. ಮಗರ್ ಯುದ್ಧನೌಕೆಯ ನೇತೃತ್ವ ವಹಿಸಿದ್ದರು. ಮೀತು ತಿವಾರಿ ಅವರು ‘ದಹರಾ ಗ್ಲೋಬಲ್ ಕಂಪನಿ’ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಮೇಲೆ ಆರೋಪ ಮಾಡುತ್ತಾ, ಅವರು ತಮ್ಮ ಅಧಿಕಾರವನ್ನು ಬಳಸಿ ತಮ್ಮ ಸಹೋದರನ ಮೇಲೆ ಆರೋಪ ಹೊರಿಸಿದ್ದಾರೆ ಎಂದಿದ್ದಾರೆ.