ಹಿಂದೂ, ಸಿಖ್ ಮತ್ತು ಬೌದ್ಧ ಧರ್ಮ ಬಿಟ್ಟು ಮತಾಂತರಗೊಂಡರೆ ಹಿಂದುಳಿದ ವರ್ಗದ ಮಾನ್ಯತೆ ಇಲ್ಲ! – Supreme Court

ಹಿಂದುಳಿದ ವರ್ಗದ ಕುರಿತು ಮಹತ್ವಪೂರ್ಣ ತೀರ್ಪು ನೀಡಿದ ಸರ್ವೋಚ್ಚ ನ್ಯಾಯಾಲಯ

ನವದೆಹಲಿ – ಹಿಂದೂ, ಸಿಖ್ ಮತ್ತು ಬೌದ್ಧ ಧರ್ಮಗಳನ್ನು ಹೊರತುಪಡಿಸಿ ಅನ್ಯ ಧರ್ಮವನ್ನು ಸ್ವೀಕರಿಸುವ ವ್ಯಕ್ತಿಗೆ ಅನುಸೂಚಿತ ಜಾತಿ (SC) ಸ್ಥಾನಮಾನ ಸಿಗುವುದಿಲ್ಲವೆಂದು ಸರ್ವೋಚ್ಚ ನ್ಯಾಯಾಲಯವು ಮಾರ್ಚ್ 24 ರಂದು ಮಹತ್ವದ ತೀರ್ಪು ನೀಡಿದೆ. ಮತಾಂತರಗೊಂಡ ವ್ಯಕ್ತಿಗೆ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ (ದೌರ್ಜನ್ಯ ತಡೆ – ಅಟ್ರೋಸಿಟಿ) ಕಾಯ್ದೆಯಡಿ ಸಿಗುವ ರಕ್ಷಣೆಯನ್ನು ಸಹ ನ್ಯಾಯಾಲಯವು ನಿರಾಕರಿಸಿದೆ.

ನ್ಯಾಯಮೂರ್ತಿ ಪಿ.ಕೆ. ಮಿಶ್ರಾ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠವು ಈ ತೀರ್ಪನ್ನು ನೀಡುತ್ತಾ, “ಸಂವಿಧಾನದ 3ನೇ ವಿಧಿಯ ಪ್ರಕಾರ, ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮದ ಹೊರತಾಗಿ ಅನ್ಯ ಧರ್ಮವನ್ನು ಪಾಲಿಸುವ ವ್ಯಕ್ತಿಯನ್ನು ಅನುಸೂಚಿತ ಜಾತಿಯ ಸದಸ್ಯ ಎಂದು ಪರಿಗಣಿಸಲಾಗುವುದಿಲ್ಲ. ಮತಾಂತರಗೊಂಡ ಕ್ಷಣದಿಂದಲೇ ಆ ವ್ಯಕ್ತಿಯ ಮೂಲ ಜಾತಿಯ ಮಾನ್ಯತೆಯು ತಕ್ಷಣವೇ ಮತ್ತು ಸಂಪೂರ್ಣವಾಗಿ ರದ್ದಾಗುತ್ತದೆ,” ಎಂದು ವಿವರಿಸಿದೆ.

ಪ್ರಕರಣದ ಹಿನ್ನೆಲೆ ಏನು?

ಆಂಧ್ರಪ್ರದೇಶದ ಪಾಸ್ಟರ್ ಚಿಂತದ ಆನಂದ್ ಎಂಬುವವರು ಅಕ್ಕಾಲ ರಾಮಿರೆಡ್ಡಿ ಮತ್ತು ಇತರರ ವಿರುದ್ಧ ಜಾತಿ ನಿಂದನೆ ಮಾಡಿದ್ದಕ್ಕಾಗಿ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಆಂಧ್ರಪ್ರದೇಶ ಹೈಕೋರ್ಟ್ ಈ ಪ್ರಕರಣವನ್ನು ರದ್ದುಗೊಳಿಸಿತ್ತು. ಆನಂದ್ ಅವರು ಕಳೆದ 10 ವರ್ಷಗಳಿಂದ ಕ್ರೈಸ್ತ ಧರ್ಮವನ್ನು ಪಾಲಿಸುತ್ತಿದ್ದು, ಚರ್ಚ್‌ನಲ್ಲಿ ಪಾಸ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. “ಕ್ರೈಸ್ತ ಧರ್ಮದಲ್ಲಿ ಜಾತಿ ವ್ಯವಸ್ಥೆ ಇಲ್ಲ, ಆದ್ದರಿಂದ ಮತಾಂತರದ ನಂತರ ಅವರು ತಮ್ಮ ಅನುಸೂಚಿತ ಜಾತಿ ಸ್ಥಾನಮಾನವನ್ನು ಕಳೆದುಕೊಂಡಿದ್ದಾರೆ,” ಎಂದು ಹೈಕೋರ್ಟ್ ನಮೂದಿಸಿತು. ಇದನ್ನು ಪ್ರಶ್ನಿಸಿ ಆನಂದ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಜಾತಿ ಪ್ರಮಾಣಪತ್ರವಿದ್ದರೂ ಮತಾಂತರಗೊಂಡವರಿಗೆ ಪ್ರಯೋಜನವಿಲ್ಲ!

ಸರ್ವೋಚ್ಚ ನ್ಯಾಯಾಲಯವು ಹೈಕೋರ್ಟ್‌ನ ತೀರ್ಪನ್ನು ಎತ್ತಿ ಹಿಡಿದಿದೆ. “ಕೇವಲ ಜಾತಿ ಪ್ರಮಾಣಪತ್ರ ಕೈಯಲ್ಲಿದೆ ಎಂಬ ಕಾರಣಕ್ಕೆ ಯಾವುದೇ ಪ್ರಯೋಜನ ಸಿಗುವುದಿಲ್ಲ; ಏಕೆಂದರೆ ಮತಾಂತರಗೊಂಡ ವ್ಯಕ್ತಿಯು ಈ ಕಾಯ್ದೆಯಡಿ ರಕ್ಷಣೆಯನ್ನು ಪಡೆಯಲು ಸಾಧ್ಯವಿಲ್ಲ,” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಒಬ್ಬ ವ್ಯಕ್ತಿಯು ಏಕಕಾಲದಲ್ಲಿ ಕ್ರೈಸ್ತ ಧರ್ಮವನ್ನು ಪಾಲಿಸುವುದು ಮತ್ತು ಅನುಸೂಚಿತ ಜಾತಿಯವನೆಂದು ಹೇಳಿಕೊಳ್ಳುವುದು ಎಂಬ ದ್ವಿಮುಖ ಹಕ್ಕನ್ನು ಹೊಂದಲು ಸಾಧ್ಯವಿಲ್ಲ. ಹಾಗೂ ಮತಾಂತರಗೊಂಡ ನಂತರ ರಾಜ್ಯ ಅಥವಾ ಕೇಂದ್ರ ಸರಕಾರದಿಂದ ಪಡೆಯುವ ಮೀಸಲಾತಿ ಲಾಭಗಳು, ಸಾಂವಿಧಾನಿಕ ರಕ್ಷಣೆ ಮತ್ತು ಇತರ ಸವಲತ್ತುಗಳು ತಕ್ಷಣವೇ ನಿಲ್ಲಬೇಕು. ಒಂದು ವೇಳೆ ಮತಾಂತರಗೊಂಡ ವ್ಯಕ್ತಿಯು ಮತ್ತೆ ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮಕ್ಕೆ ಮರಳಿ ಅನುಸೂಚಿತ ಜಾತಿ ಸ್ಥಾನಮಾನ ಪಡೆಯಬೇಕೆಂದಿದ್ದರೆ, ಅದಕ್ಕಾಗಿ ವಿಧಿಸಲಾದ ಮೂರು ಕಟ್ಟುನಿಟ್ಟಾದ ಷರತ್ತುಗಳನ್ನು ಸಂಪೂರ್ಣವಾಗಿ ಸಾಬೀತುಪಡಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.