ಶಿವಸೇನೆಯ ಪ್ರತಿಭಟನೆ; ‘ಐ.ಡಿ.ಎಫ್.ಸಿ. ಫಸ್ಟ್’ ಬ್ಯಾಂಕ್‌ನ ಸಾಲಗಾರನ ಕ್ಷಮೆಯಾಚನೆ!

  • ಸಾಲಗಾರನ ಆರ್ಥಿಕ ಸುಲಿಗೆ ಮಾಡಲು ಅನಿಯಂತ್ರಿತ ಪ್ರಯತ್ನ!

  • ಸಾಲಗಾರನಿಗೆ ಅಶ್ಲೀಲ ನಿಂದನೆ ಮತ್ತು ಕೊಲೆ ಬೆದರಿಕೆ!

ನಾಗಪುರ – ಇಲ್ಲಿನ ಗ್ರಾಹಕರೊಬ್ಬರು ತಮ್ಮ ವ್ಯವಹಾರಕ್ಕಾಗಿ ‘ಐ.ಡಿ.ಎಫ್.ಸಿ. ಫಸ್ಟ್’ ಬ್ಯಾಂಕ್‌ನಿಂದ ಸಾಲ ಪಡೆದಿದ್ದರು; ಆದರೆ ವ್ಯವಹಾರ ಸರಿಯಾಗಿ ನಡೆಯದ ಕಾರಣ ಸಾಲದ ಕಂತು ಪಾವತಿಸಲು ಸಾಧ್ಯವಾಗಲಿಲ್ಲ. ಆ ಗ್ರಾಹಕನಿಗೆ ಬ್ಯಾಂಕ್ ‘ಒನ್ ಟೈಮ್ ಸೆಟಲ್ಮೆಂಟ್’ (ಒಂದೇ ಹಂತದಲ್ಲಿ ಪೂರ್ಣ ಮೊತ್ತ ಪಾವತಿಸುವುದು) ಮಾಡಲು ಸೂಚಿಸಿತು. ಗ್ರಾಹಕನು ಬ್ಯಾಂಕ್ ಸೂಚಿಸಿದ ಮೊತ್ತವನ್ನು ಪಾವತಿಸಿದರೂ, ಅವನಿಗೆ ಸಾಲ ತೀರಿಸಿದ ಬಗ್ಗೆ ಪ್ರಮಾಣಪತ್ರ (ಲೋನ್ ಕ್ಲಿಯರೆನ್ಸ್ ಸರ್ಟಿಫಿಕೇಟ್) ನೀಡಲಿಲ್ಲ. ಬ್ಯಾಂಕ್ ಅಧಿಕಾರಿಗಳು ಪದೇ ಪದೇ ಸಂಪರ್ಕಿಸಿ ಇನ್ನೂ ಒಂದು ಲಕ್ಷ ರೂಪಾಯಿ ಪಾವತಿಸುವಂತೆ ಒತ್ತಾಯಿಸಿದರು. ಬ್ಯಾಂಕ್ ಸಿಬ್ಬಂದಿಯು ಅತ್ಯಂತ ಅವಾಚ್ಯ ಭಾಷೆಯಲ್ಲಿ ನಿಂದಿಸಿದರೆಂದು ಸಾಲಗಾರನು ಆರೋಪಿಸಿದ್ದಾನೆ.

ಸಾಲಗಾರನ ಮದುವೆ ಮುರಿಯುವ ಹಂತಕ್ಕೆ ಹೋದ ಬ್ಯಾಂಕ್ ಅಧಿಕಾರಿಗಳು!

ಬ್ಯಾಂಕ್ ಅಧಿಕಾರಿಗಳು ಇಷ್ಟಕ್ಕೇ ನಿಲ್ಲದೆ, ಸಂತ್ರಸ್ತ ಗ್ರಾಹಕನ ಭಾವಿ ಪತ್ನಿ ಮತ್ತು ಅತ್ತೆ-ಮಾವಂದಿರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರಿಂದಾಗಿ ಮದುವೆ ಮುರಿಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರ ನಂತರ ಗ್ರಾಹಕನು ಶಿವಸೇನೆಯ ಸಹಾಯ ಕೋರಿದನು. ಶಿವಸೇನೆಯ ನಗರ ಉಪಾಧ್ಯಕ್ಷ ಪ್ರಮುಖ ಶ್ರೀ. ರಾಹುಲ್ ಪಾಂಡೆ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಬ್ಯಾಂಕ್ ನ ಎದುರು ಪ್ರತಿಭಟನೆ ನಡೆಸಿದರು. ಶಿವಸೈನಿಕರು ಬ್ಯಾಂಕ್ ಕಚೇರಿಗೆ ನುಗ್ಗಿ ೧೫ ರಿಂದ ೨೦ ಕೆಜಿ ಕೊಳೆತ ಟೊಮೆಟೊಗಳನ್ನು ಎಸೆದರು, ಅಲ್ಲದೆ ಕ್ಷಮಾಪಣೆ ಪತ್ರ ಮತ್ತು ಸಾಲ ತೀರಿಸಿದ ಪ್ರಮಾಣಪತ್ರ ನೀಡದಿದ್ದರೆ ಇನ್ನು ದೊಡ್ಡ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ತದನಂತರ ಬ್ಯಾಂಕ್ ಪ್ರಮಾಣಪತ್ರ ಹಾಗೂ ಕ್ಷಮಾಪಣೆ ಪತ್ರವನ್ನು ನೀಡಿತು. ಶ್ರೀ. ರಾಹುಲ್ ಪಾಂಡೆ ಅವರು ಈ ಕುರಿತಾದ ಮಾಹಿತಿಯನ್ನು ‘ಸನಾತನ ಪ್ರಭಾತ್’ಗೆ ನೀಡಿದರು. (ಶ್ರೀ. ರಾಹುಲ್ ಪಾಂಡೆ ಮತ್ತು ಎಲ್ಲಾ ಶಿವಸೈನಿಕರಿಗೆ ಅಭಿನಂದನೆಗಳು! ಇಂತಹ ಶಿವಸೈನಿಕರೇ ಜನಸಾಮಾನ್ಯರ ನಿಜವಾದ ಶಕ್ತಿ! – ಸಂಪಾದಕರು).

ಸಂಪಾದಕೀಯ ನಿಲುವು

  • ಕೇವಲ ಕ್ಷಮೆಯಾಚನೆಯಿಂದ ವಿಷಯ ಮುಗಿಸದೆ, ಗ್ರಾಹಕರ ಆರ್ಥಿಕ ಸುಲಿಗೆ ಮಾಡುವವರನ್ನು ‘ಐ.ಡಿ.ಎಫ್.ಸಿ. ಫಸ್ಟ್’ ಬ್ಯಾಂಕ್‌ನಿಂದ ವಜಾಗೊಳಿಸಬೇಕು!
  • ತಮ್ಮನ್ನು ತಾವು ‘ಕಾರ್ಪೊರೇಟ್’ ಎಂದು ಹೇಳುವ ಹಾಗೂ ನಾವು ಎಲ್ಲಾ ಮಾನವೀಯ ಮೌಲ್ಯಗಳನ್ನು ಪಾಲಿಸುತ್ತೇವೆ ಎಂದು ಡಂಬಾಚಾರ ಪ್ರದರ್ಶಿಸುವ ಇಂತಹ ಬ್ಯಾಂಕ್‌ಗಳ ವಿರುದ್ಧ ಸಾರ್ವಜನಿಕರು ಧ್ವನಿ ಎತ್ತುವುದು ಅವಶ್ಯಕ!