ಹಿಂದೂ ಸಾಧು-ಸಂತರನ್ನು ವಿಡಂಬನೆ ಮಾಡುವ ಜಾಹೀರಾತನ್ನು ಹಿಂಪಡೆದ ಸರಕಾರ !

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ಆಕ್ಷೇಪಾರ್ಹ ಜಾಹೀರಾತು

(ಈ ಜಾಹೀರಾತನ್ನು ಪ್ರಕಟಿಸುವ ಹಿಂದೆ ಯಾರ ಧಾರ್ಮಿಕ ಭಾವನೆಗಳನ್ನು ನೋಯಿಸುವ ಉದ್ದೇಶ ನಮ್ಮದಲ್ಲ. ವಿಡಂಬನೆ ಹೇಗೆ ನಡೆದಿದೆ ಎಂಬುದನ್ನು ತಿಳಿಸಲು ಇದನ್ನು ಪ್ರಕಟಿಸಲಾಗಿದೆ ಎಂಬುದನ್ನು ಗಮನಿಸಬೇಕು. – ಸಂಪಾದಕರು)

ದೋಷಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಿಂದೂ ಜನಜಾಗೃತಿ ಸಮಿತಿಯ ಆಗ್ರಹ !

ಮುಂಬಯಿ, ೨೬ ಫೆಬ್ರವರಿ (ವಾರ್ತೆ.) – ಸ್ವಂತ ಸಾಮರ್ಥ್ಯದ ಮೇಲೆ ವಿಶ್ವಾಸವಿಡಿ, ಬೂಟಾಟಿಕೆಯ ಮೇಲಲ್ಲ, ಎಂಬ ಬರಹವಿರುವ ಮತ್ತು ಸಾಧು-ಸಂತರ ವೇಷದಲ್ಲಿರುವ ವ್ಯಂಗ್ಯಚಿತ್ರದ ಮೂಲಕ ಹಿಂದೂ ಧರ್ಮವನ್ನು ಅವಮಾನಿಸಿರುವ ಸಾಮಾಜಿಕ ನ್ಯಾಯ ಇಲಾಖೆಯ ವಿವಾದಾತ್ಮಕ ಜಾಹೀರಾತಿನ ಬಗ್ಗೆ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಹಿಂದೂ ಜನಜಾಗೃತಿ ಸಮಿತಿಯ ಮುಂಬಯಿಯ ಶ್ರೀ. ಸತೀಶ್ ಸೋನಾರ್ ಅವರು ಸಾಮಾಜಿಕ ನ್ಯಾಯ ಸಚಿವ ಸಂಜಯ ಶಿರಸಾಟ್ ಅವರನ್ನು ಭೇಟಿಯಾಗಿ ಈ ಜಾಹೀರಾತನ್ನು ತಕ್ಷಣವೇ ಹಿಂಪಡೆಯುವಂತೆ ಮತ್ತು ದೋಷಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಸಾಮಾಜಿಕ ನ್ಯಾಯ ಸಚಿವ ಶ್ರೀ. ಸಂಜಯ್ ಶಿರಸಾಟ್ ಅವರಿಗೆ ಮನವಿ ಸಲ್ಲಿಸುತ್ತಿರುವ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಸತೀಶ್ ಸೋನಾರ್

ಈ ಕುರಿತು ಸಚಿವರು ಮಾತನಾಡಿ, ‘‘ಈ ಜಾಹೀರಾತನ್ನು ರಾತ್ರಿಯೇ ಹಿಂಪಡೆಯಲಾಗಿದೆ. ಈ ಜಾಹೀರಾತನ್ನು ನಮ್ಮ ಇಲಾಖೆಯ ವತಿಯಿಂದ ಹೊರಡಿಸಿರಲಿಲ್ಲ. ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇದನ್ನು ಪ್ರಕಟಿಸಿತ್ತು’’ ಎಂದು ಹೇಳಿದರು.

ಮಹಾರಾಷ್ಟ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ವಿಶೇಷ ಸಹಾಯ ಇಲಾಖೆಯ ಹೆಸರಿನಲ್ಲಿ ಪ್ರಕಟವಾದ ಜಾಹೀರಾತಿನಲ್ಲಿ ಜಟಾ, ತಿಲಕ, ರುದ್ರಾಕ್ಷಿ ಮಾಲೆ, ತಲೆಬುರುಡೆ ಮತ್ತು ನಿಂಬೆಹಣ್ಣು-ಮೆಣಸಿನಕಾಯಿಯಂತಹ ಚಿತ್ರಗಳನ್ನು ತೋರಿಸಿ ಓರ್ವ ಸಾಧುವಿನ ವಿಡಂಬನಾತ್ಮಕ ವ್ಯಂಗ್ಯಚಿತ್ರವನ್ನು ಪ್ರಕಟಿಸಲಾಗಿತ್ತು. ಇದರೊಂದಿಗೆ ‘ಬೇಡ ಬೂಟಾಟಿಕೆ, ಪಡೆಯೋಣ ಶಿಕ್ಷಣದ ಬುತ್ತಿ’, ಎಂಬ ಘೋಷವಾಕ್ಯವನ್ನು ಬಳಸಿ ಉದ್ದೇಶಪೂರ್ವಕವಾಗಿ ಹಿಂದೂ ಧರ್ಮವನ್ನು ಗುರಿಯಾಗಿಸಲಾಗಿತ್ತು.

ಹಿಂದುತ್ವವಾದಿ ಸಂಘಟನೆಗಳ ತೀವ್ರ ವಿರೋಧ !

ಈ ಚಿತ್ರಣದಿಂದ ಹಿಂದೂ ಸಾಧು-ಸಂತರು ಮತ್ತು ಋಷಿ-ಮುನಿಗಳ ಪರಂಪರೆಯ ಅವಮಾನಕಾರಕ ಪ್ರಸ್ತುತಿಯಾಗಿದೆ ಎಂಬ ಭಾವನೆಯನ್ನು ವಿವಿಧ ಹಿಂದುತ್ವವಾದಿ ಸಂಘಟನೆಗಳು ವ್ಯಕ್ತಪಡಿಸಿವೆ. ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಂಘಟಕರಾದ ಶ್ರೀ. ಸುನೀಲ್ ಘನವಟ್ ಅವರು ಸರಕಾರಕ್ಕೆ ಲಿಖಿತ ದೂರು ನೀಡಿ ದೋಷಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಸಂಪಾದಕೀಯ ನಿಲುವು

  • ಒಂದೆಡೆ ಮಹಾರಾಷ್ಟ್ರವು ನಾಸಿಕ್ ಸಿಂಹಸ್ಥ ಕುಂಭಮೇಳದ ಮೂಲಕ ಹಿಂದೂ ಧರ್ಮದ ಮಹತ್ವವನ್ನು ಜಗತ್ತಿನ ಮುಂದಿಡಲು ಯೋಜನೆ ರೂಪಿಸುತ್ತಿದೆ, ಆದರೆ ಇನ್ನೊಂದೆಡೆ ಈ ಕುಂಭಮೇಳದಲ್ಲಿ ಪಾಲ್ಗೊಳ್ಳುವ ಸಾಧುಗಳ ಇಂತಹ ನಿಂದನೀಯ ವಿಡಂಬನೆ ನಡೆಯುತ್ತಿದೆ. ಇದು ಮಹಾರಾಷ್ಟ್ರದ ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ !
  • ಪ್ರಗತಿಪರತೆಯ ಹೆಸರಿನಲ್ಲಿ ಪದೇ-ಪದೇ ಹಿಂದೂ ಧರ್ಮದ ಪ್ರತೀಕಗಳನ್ನೇ ಏಕೆ ವಿಡಂಬನೆ ಮಾಡಲಾಗುತ್ತದೆ ? ಅನ್ಯ ಧರ್ಮೀಯರ ಮೂಢನಂಬಿಕೆಗಳ ಬಗ್ಗೆ ಮಾತನಾಡುವ ಧೈರ್ಯವನ್ನು ಸರಕಾರವೇಕೆ ತೋರುವುದಿಲ್ಲ ? ಕೇವಲ ಜಾಹೀರಾತನ್ನು ಹಿಂಪಡೆದರೆ ಸಾಲದು, ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದ ಜವಾಬ್ದಾರಿಯುತ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಲೇಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಜಾಹೀರಾತುಗಳ ಪೂರ್ವಪರಿಶೀಲನೆ ಮಾಡುವ ಸ್ವತಂತ್ರ ಸಮಿತಿಯನ್ನು ಸ್ಥಾಪಿಸುವುದು ಅಗತ್ಯ!
  • ಸರಕಾರವು ಸಂಬಂಧಪಟ್ಟ ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಿ ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುವುದು ಎಂಬುದನ್ನು ಪ್ರಸ್ತುತ ನಡೆಯುತ್ತಿರುವ ವಿಧಾನಮಂಡಳ ಅಧಿವೇಶನದಲ್ಲೇ ಹೇಳಬೇಕು. ಇದಕ್ಕಾಗಿ ಧರ್ಮಪ್ರೇಮಿ ಹಿಂದೂಗಳು ಈ ಬೇಡಿಕೆಯನ್ನು ಬಲವಾಗಿ ಮುಂದಿಡುವುದು ಅಗತ್ಯ !