ಪಾಕಿಸ್ತಾನ: ಪೊಲೀಸರ ಮೇಲೆ ೪ ಭಯೋತ್ಪಾದಕ ದಾಳಿ: ೧೧ ಅಧಿಕಾರಿಗಳ ಸಾವು ! – Pakistan Police Officers Killed

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಸದ್ಯ ಪಟಾಕಿಗಳಂತೆ ಬಾಂಬ್ ಸ್ಫೋಟಗಳು ಸಂಭವಿಸುತ್ತಿದ್ದು, ಅಲ್ಲಿನ ಪೊಲೀಸರು ಮತ್ತು ಸೈನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವಾಯುವ್ಯ ಭಾಗದಲ್ಲಿ ಫೆಬ್ರವರಿ ೨೪ ರಂದು ಪೊಲೀಸರ ಮೇಲೆ ೨ ದಾಳಿಗಳು ನಡೆದಿವೆ. ಈ ದಾಳಿಯಲ್ಲಿ ೬ ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಓರ್ವ ನಾಗರಿಕ ಹತರಾಗಿದ್ದಾರೆ. ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಕೋಹಾಟ್ ಜಿಲ್ಲೆಯಲ್ಲಿ ಭಯೋತ್ಪಾದಕರು ಪೊಲೀಸರ ವಾಹನಗಳನ್ನೇ ಗುರಿಯಾಗಿಸಿಕೊಂಡು ಹೊಂಚು ಹಾಕಿ ದಾಳಿ ನಡೆಸಿದ್ದಾರೆ. ಈ ಎರಡೂ ಘಟನೆಗಳ ನಂತರ ದಾಳಿಕೋರರು ಪರಾರಿಯಾಗಿದ್ದಾರೆ.

ಬುಕರ್ ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿ

ಅದೇ ದಿನ ಪಂಜಾಬ್ ಪ್ರಾಂತ್ಯದ ಬುಕರ್ ಜಿಲ್ಲೆಯಲ್ಲೂ ಪೊಲೀಸ್ ಚೌಕಿಯೊಂದರ ಮೇಲೆ ಆತ್ಮಹತ್ಯೆ ದಾಳಿಕೋರ ಸ್ಫೋಟ ಮಾಡಿದ್ದಾನೆ. ಈ ಸ್ಫೋಟದಲ್ಲಿ ೨ ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಮತ್ತು ೪ ಜನರು ಗಾಯಗೊಂಡಿದ್ದಾರೆ. ಭದ್ರತಾ ಸಂಸ್ಥೆಗಳು ಸಂಭವನೀಯ ಭಯೋತ್ಪಾದಕ ಜಾಲದ ಪತ್ತೆಗಾಗಿ ಹುಡುಕಾಟ ನಡೆಸುತ್ತಿವೆ.

ಇದಕ್ಕೂ ಮೊದಲು ಫೆಬ್ರವರಿ ೨೩ ರಂದು ಕರಾಕ್ ಭಾಗದ ಅರೆಸೇನಾ ಪಡೆಯ ಚೌಕಿಯ ಮೇಲೆ ಸ್ಫೋಟಕ ತುಂಬಿದ ಡ್ರೋನ್ ಮೂಲಕ ದಾಳಿ ನಡೆಸಲಾಗಿತ್ತು, ಅನೇಕ ಅಧಿಕಾರಿಗಳು ಗಾಯಗೊಂಡಿದ್ದರು. ನಂತರ ಗಾಯಾಳುಗಳನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಮೇಲೆಯೂ ಹೊಂಚು ಹಾಕಿ ದಾಳಿ ನಡೆಸಲಾಯಿತು. ಪರಿಣಾಮ ೩ ಅಧಿಕಾರಿಗಳು ಹತರಾದರು ಮತ್ತು ಅವರ ಮೃತದೇಹಗಳನ್ನು ಸುಟ್ಟುಹಾಕಲಾಗಿದೆ.

ಇತ್ತೀಚಿನ ದಾಳಿಗಳ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲವಾದರೂ, ತಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಸಂಘಟನೆಯ ಮೇಲೆ ಸಂಶಯ ವ್ಯಕ್ತಪಡಿಸಲಾಗುತ್ತಿದೆ. ಕರಾಕ್ ನಲ್ಲಿನ ಭಯೋತ್ಪಾದಕ ದಾಳಿಯ ಹಿಂದಿನ ದಿನವೇ, ಅಂದರೆ ಫೆಬ್ರವರಿ ೨೨ ರಂದು ಪಾಕ್ ಸೈನ್ಯವು ಅಫ್ಘಾನ್ ಗಡಿಯ ಬಳಿ ಕಾರ್ಯಾಚರಣೆ ನಡೆಸಿ ೭೦ ಭಯೋತ್ಪಾದಕರನ್ನು ಹತ್ಯೆಗೈದಿರುವುದಾಗಿ ಹೇಳಿಕೊಂಡಿತ್ತು.

ಭಯೋತ್ಪಾದನೆ ವಿರುದ್ಧದ ಹೋರಾಟ ಮುಂದುವರಿಯಲಿದೆ ! – ಅಧ್ಯಕ್ಷ ಝರದಾರಿ

ಭಯೋತ್ಪಾದಕ ದೇಶದ, ಅಂದರೆ ಭಯೋತ್ಪಾದಕರ ರಾಷ್ಟ್ರಾಧ್ಯಕ್ಷನ ಇಂತಹ ಹೇಳಿಕೆಗಿಂತ ದೊಡ್ಡ ಹಾಸ್ಯ ಬೇರೇನಿದೆ?
ಅಧ್ಯಕ್ಷ ಆಸಿಫ್ ಅಲಿ ಝರದಾರಿ ಅವರು ಈ ದಾಳಿಗಳನ್ನು ಖಂಡಿಸುತ್ತಾ, ಭಯೋತ್ಪಾದನೆಯ ವಿರುದ್ಧದ ತಮ್ಮ ಹೋರಾಟವು ಮುಂದುವರಿಯಲಿದೆ ಎಂದು ಹೇಳಿದ್ದಾರೆ.

 

ಸಂಪಾದಕೀಯ ನಿಲುವು

  • ‘ಮಾಡಿದ್ದುಣ್ಣೋ ಮಹಾರಾಯ’ ಎಂಬ ಗಾದೆ ಮಾತಿನಂತೆ ಪಾಕಿಸ್ತಾನದ ಸ್ಥಿತಿ ಅಧೋಗತಿಯಾಗಿದೆ.
  • ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಈ ದಾಳಿಗಳ ಹಿಂದೆ ಭಾರತವಿದೆ ಎಂದು ಕನಸು ಕಂಡರೆ ಆಶ್ಚರ್ಯಪಡಬೇಕಾಗಿಲ್ಲ
  • ಮೇಲಿಂದ ಮೇಲೆ ನಡೆಯುತ್ತಿರುವ  ಬಾಂಬ್ ಸ್ಫೋಟಗಳ ಪರಿಣಾಮವಾಗಿ ನಾಳೆ ಪಾಕಿಸ್ತಾನವು ಬಲೂಚಿಸ್ತಾನ್, ಖೈಬರ್ ಪಖ್ತುನ್ಖ್ವಾ, ಪಶ್ಚಿಮ ಪಂಜಾಬ್, ಸೆರೈಕಿ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ ಎಂದು ೫ ತುಂಡುಗಳಾದರೂ ಆಶ್ಚರ್ಯಪಡಬೇಕಿಲ್ಲ !