‘ಆಪರೇಷನ್ ಸಿಂಧೂರ್’ ಸಮಯದಲ್ಲಿ ಭಾರತವು ಪಾಕಿಸ್ತಾನದ ಅಣು ಯೋಜನೆಯನ್ನು ಗುರಿ ಮಾಡಿತ್ತು!

ವಿಶ್ವವಿಖ್ಯಾತ ವಿಮಾನಯಾನ ತಜ್ಞ ಮತ್ತು ರಕ್ಷಣಾ ವಿಶ್ಲೇಷಕ ಟಾಮ್ ಕೂಪರ್ ಅವರ ದಾವೆ

ನವದೆಹಲಿ – ‘ಆಪರೇಷನ್ ಸಿಂಧೂರ್’ ಸಮಯದಲ್ಲಿ ಭಾರತವು ಪಾಕಿಸ್ತಾನದ ಕಿರಾನಾ ಹಿಲ್ಸ್‌ನಲ್ಲಿರುವ ಅಣು ಯೋಜನೆಯನ್ನು ಗುರಿ ಮಾಡಿತ್ತು ಎಂದು ಖ್ಯಾತ ವಿಮಾನಯಾನ ತಜ್ಞ ಮತ್ತು ರಕ್ಷಣಾ ವಿಶ್ಲೇಷಕ ಟಾಮ್ ಕೂಪರ್ ಅವರು ಭಾರತೀಯ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ದಾವೆ ಮಾಡಿದ್ದಾರೆ. ಅವರ ಪ್ರಕಾರ, ಈ ಕುರಿತು ಅವರ ಬಳಿ ಅನೇಕ ಪುರಾವೆಗಳಿವೆ.

೧. ದಾಳಿಯ ಸಮಯ ಮತ್ತು ವಿಧಾನವನ್ನು ಗಮನಿಸಿದರೆ, ಅದು ದೃಢವಾದ ವ್ಯೂಹಾತ್ಮಕ ಸಂದೇಶವನ್ನು ನೀಡಲು ಮಾಡಲಾಗಿತ್ತು ಎಂದು ಕೂಪರ್ ತಿಳಿಸಿದ್ದಾರೆ. ಹೆಚ್ಚಿನ ವಿನಾಶವನ್ನು ಉಂಟುಮಾಡದೆ ಸ್ಪಷ್ಟ ಎಚ್ಚರಿಕೆಯನ್ನು ನೀಡಬೇಕೆಂದಿದ್ದರೆ, ಇಂತಹ ಸ್ಥಳಗಳ ಮೇಲೆ ಪ್ರಹಾರ ಮಾಡಲಾಗುತ್ತದೆ. ‘ಪಾಕಿಸ್ತಾನದ ಜನರೇ, ನಾವು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ, ಎಷ್ಟು ಬೇಕಾದರೂ ಶಸ್ತ್ರಾಸ್ತ್ರಗಳೊಂದಿಗೆ ನಿಮ್ಮ ಮೇಲೆ ತೀವ್ರ ದಾಳಿ ನಡೆಸಬಲ್ಲೆವು’ ಎಂಬ ಸಂದೇಶವನ್ನು ಇದರ ಮೂಲಕ ನೀಡಲಾಗಿತ್ತು.

೨. ಪುರಾವೆಗಳ ಬಗ್ಗೆ ಮಾತನಾಡಿದ ಕೂಪರ್, ತಮ್ಮ ಬಳಿ ಅನೇಕ ಪುರಾವೆಗಳಿವೆ ಎಂದು ಹೇಳಿದರು. ಅದರಲ್ಲಿ ಕ್ಷಿಪಣಿಗಳ ಹೊಗೆಯ ಗುರುತುಗಳು ಬೆಟ್ಟಗಳ ಮೇಲೆ ಇಳಿಯುತ್ತಿರುವುದು ಕಂಡುಬರುವ ವಿಡಿಯೋಗಳೂ ಸೇರಿವೆ. ಅವರು ಪಾಕಿಸ್ತಾನ ವಾಯುಪಡೆಯ ೪೦೯೧ನೇ ಸ್ಕ್ವಾಡ್ರನ್‌ನ (ತುಕಡಿಯ) ರೇಡಾರ್ ಕೇಂದ್ರದಿಂದ ಏಳುತ್ತಿದ್ದ ಹೊಗೆಯ ಕಡೆಯೂ ಗಮನ ಸೆಳೆದರು.

೩. ಪುರಾವೆಗಳು ಎಷ್ಟು ಸ್ಪಷ್ಟವಾಗಿವೆ ಎಂದರೆ, ಪಾಕಿಸ್ತಾನದ ಪ್ರತ್ಯುತ್ತರ ನೀಡುವ ಸಾಮರ್ಥ್ಯವನ್ನು ನಿಷ್ಕ್ರಿಯಗೊಳಿಸಲು ಭಾರತೀಯ ವಾಯುಪಡೆಯು ಮೊದಲು ಈ ರೇಡಾರ್ ಕೇಂದ್ರಗಳ ಮೇಲೆ ದಾಳಿ ಮಾಡಿತು ಮತ್ತು ನಂತರ ಭೂಗತ ಸಂಗ್ರಹಣಾ ಸೌಲಭ್ಯಗಳ ಕನಿಷ್ಠ ೨ ಪ್ರವೇಶದ್ವಾರಗಳನ್ನು ಗುರಿಯಾಗಿಸಿಕೊಂಡಿತು ಎಂದು ಕೂಪರ್ ಹೇಳಿದರು.

೪. ಕೂಪರ್ ಅವರ ಪ್ರಕಾರ, ಕಿರಾನಾ ಹಿಲ್ಸ್ ಪಾಕಿಸ್ತಾನದ ಅಣು ಕಾರ್ಯಕ್ರಮದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ. ಅಲ್ಲಿ ಸುಮಾರು ೨೦ ರಿಂದ ೨೪ ಉಪ-ಅಣು ಪರೀಕ್ಷೆಗಳನ್ನು ನಡೆಸಲಾಗಿದೆ. ಇದು ಕೇವಲ ಮನೋರಂಜನಾ ಉದ್ಯಾನವನವಲ್ಲ.

೫. ಭಾರತೀಯ ವಾಯುಪಡೆಯು ಆ ಸ್ಥಳದಲ್ಲಿ ದಾಳಿ ಮಾಡಿರುವುದನ್ನು ನಿರಾಕರಿಸುತ್ತಿರುವುದಕ್ಕೆ ಅವರು ಆಶ್ಚರ್ಯ ವ್ಯಕ್ತಪಡಿಸಿದರು. ಅವರ ಪ್ರಕಾರ, ದಾಳಿ ನಡೆದಿರುವುದು ಇಷ್ಟು ಸ್ಪಷ್ಟವಾಗಿರುವಾಗ ಅದನ್ನು ಏಕೆ ತಿರಸ್ಕರಿಸಲಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಈ ವಿಷಯವನ್ನು ನಿರಾಕರಿಸುವುದು ಎಂದರೆ ಸೂರ್ಯ ಪೂರ್ವದಲ್ಲಿ ಉದಯಿಸುವುದಿಲ್ಲ ಎಂದು ಹೇಳಿದಂತೆ. ಇದನ್ನು ಯಾರು ತಾನೇ ನಂಬುತ್ತಾರೆ?