‘ಆಪರೇಷನ್ ಸಿಂದೂರ್’ನಲ್ಲಿ ‘ಲಷ್ಕರ್-ಎ-ತೊಯ್ಬಾ’ದ ಉಗ್ರರ ತರಬೇತಿ ಕೇಂದ್ರ ಧೂಳೀಪಟ – Hafiz Abdur Rauf on Operation Sindhoor

‘ಲಷ್ಕರ್-ಎ-ತೊಯ್ಬಾ’ ಕಮಾಂಡರ್ನಿಂದಲೇ ಸತ್ಯ ಒಪ್ಪಿಗೆ!


ಇಸ್ಲಾಮಾಬಾದ (ಪಾಕಿಸ್ತಾನ) – ಭಾರತೀಯ ಸೈನ್ಯದ ಕಾರ್ಯಾಚರಣೆಯಲ್ಲಿ ‘ಮರ್ಕಜ್ ಎ ತೊಯ್ಬಾ’ ಅಕ್ಷರಶಃ ಅವಶೇಷಗಳ ರಾಶಿಯಾಗಿ ಬದಲಾಗಿದೆ. ಮೇ ೬ ಮತ್ತು ೭, 2025 ರಂದು ನಡೆದದ್ದು ಅತ್ಯಂತ ದೊಡ್ಡ ದಾಳಿಯಾಗಿತ್ತು. ಆ ಸ್ಥಳವು ಈಗ ಮಸೀದಿಯಾಗಿ ಉಳಿದಿಲ್ಲ. ಇಂದು ಅಲ್ಲಿ ಕುಳಿತುಕೊಳ್ಳಲು ಸಹ ಸಾಧ್ಯವಿಲ್ಲ, ಎಲ್ಲವೂ ನಾಶವಾಗಿದೆ ಎಂದು ಲಷ್ಕರ್-ಎ-ತೊಯ್ಬಾದ ಭಯೋತ್ಪಾದಕ ಹಾಫಿಜ್ ಅಬ್ದುಲ್ ರೌಫ್ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಾ ಒಪ್ಪಿಕೊಂಡಿದ್ದಾನೆ. ಈ ಬಹಿರಂಗಪಡಿಸುವಿಕೆಯು ಪಾಕಿಸ್ತಾನಕ್ಕೆ ದೊಡ್ಡ ರಾಜತಾಂತ್ರಿಕ ಸವಾಲಾಗಿ ಪರಿಣಮಿಸಬಹುದು; ಏಕೆಂದರೆ ಹಲವು ದಿನಗಳಿಂದ ನಿರಾಕರಿಸಲಾಗುತ್ತಿದ್ದ ಆರೋಪಗಳನ್ನು ಈಗ ಯಾವುದೇ ಗುಪ್ತಚರ ಸಂಸ್ಥೆಯಲ್ಲ, ಬದಲಾಗಿ ನೇರವಾಗಿ ಲಷ್ಕರ್-ಎ-ತೊಯ್ಬಾದ ಕಮಾಂಡರ್ ಒಪ್ಪಿಕೊಂಡಿದ್ದಾನೆ.

೧. ರೌಫ್ ಭಯೋತ್ಪಾದಕರ ತರಬೇತಿ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಲಾಂಚ್ ಪ್ಯಾಡ್‌ಗಳ (ಭಯೋತ್ಪಾದಕರು ಭಾರತದೊಳಗೆ ನುಸುಳಲು ಒಟ್ಟುಗೂಡುವ ಸ್ಥಳ) ಮೂಲಕ ಅವರನ್ನು ಭಾರತಕ್ಕೆ ಕಳುಹಿಸುವ ಕೃತ್ಯಗಳಲ್ಲಿ ನೇರವಾಗಿ ಭಾಗಿಯಾಗಿದ್ದನು. ‘ಮರ್ಕಜ್ ಎ ತೊಯ್ಬಾ’ ಕೇಂದ್ರವನ್ನು ಪಾಕಿಸ್ತಾನವು ದೀರ್ಘಕಾಲದವರೆಗೆ ಧಾರ್ಮಿಕ ಮತ್ತು ದತ್ತಿ ಕೇಂದ್ರವೆಂದು ಬಿಂಬಿಸುತ್ತಿತ್ತು; ಆದರೆ ಇದು ಲಷ್ಕರ್-ಎ-ತೊಯ್ಬಾದ ಮುಖ್ಯ ಭಯೋತ್ಪಾದಕ ಅಡಗುತಾಣವಾಗಿದೆ ಎಂದು ಭಾರತವು ನಿರಂತರವಾಗಿ ಹೇಳುತ್ತಾ ಬಂದಿತ್ತು. ಇದೇ ಸ್ಥಳದಲ್ಲಿ ಉಗ್ರರಿಗೆ ತರಬೇತಿ ನೀಡಲಾಗುತ್ತಿತ್ತು.

೨. ತನ್ನ ಭಾಷಣದಲ್ಲಿ ರೌಫ್ ಇನ್ನೊಂದು ಹೇಳಿಕೆಯನ್ನೂ ಮಾಡಿದ್ದಾನೆ. ಪಾಕಿಸ್ತಾನದಲ್ಲಿ ಜಿಹಾದ್ ಗಾಗಿ ಮುಕ್ತ ವಾತಾವರಣವಿದ್ದು, ಅಲ್ಲಿ ಭಯೋತ್ಪಾದಕರ ನೇಮಕಾತಿ ಮತ್ತು ತರಬೇತಿಯು ಜಗತ್ತಿನಲ್ಲಿಯೇ ಅತ್ಯಂತ ಸುಲಭವಾಗಿದೆ ಎಂದು ಅವನು ಹೇಳಿದ್ದಾನೆ. ದೇಶವೇ ಅಂತಹ ನಿರ್ಧಾರವನ್ನು ತೆಗೆದುಕೊಂಡಿರುವುದರಿಂದ ಇದು ಸಾಧ್ಯವಾಗುತ್ತಿದೆ ಎಂಬುದು ಅವನ ಅಭಿಪ್ರಾಯವಾಗಿದೆ.

೩. ರೌಫ್ ಚೀನಾವನ್ನು ಬಹಿರಂಗವಾಗಿ ಹೊಗಳಿದ್ದು, ಪಹಲ್ಗಾಮ್ ಘಟನೆಯ ನಂತರ ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಸಮಯದಲ್ಲಿ ಚೀನಾ ಪಾಕಿಸ್ತಾನಕ್ಕೆ ತಕ್ಷಣವೇ ಗುಪ್ತಚರ ಮಾಹಿತಿಯನ್ನು ನೀಡಿದೆ ಎಂದು ಹೇಳಿಕೆ ನೀಡಿದ್ದಾನೆ.

ಸಂಪಾದಕೀಯ ನಿಲುವು

 ‘ಆಪರೇಷನ್ ಸಿಂದೂರ್’ ಇನ್ನೂ ಮುಗಿದಿಲ್ಲ ಎಂದು ಭಾರತ ಸರಕಾರವು ಹಲವು ಬಾರಿ ಹೇಳಿದೆ. ಪಾಕಿಸ್ತಾನದಲ್ಲಿರುವ ಈ ಉಗ್ರರನ್ನು ನಾಮಾವಶೇಷ ಮಾಡಲು ಭಾರತವು ಈ ಕಾರ್ಯಾಚರಣೆಯನ್ನು ಪುನಃ ಆರಂಭಿಸುವುದು ಅತ್ಯಗತ್ಯವಾಗಿದೆ!