ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಅಮೆರಿಕ ಮತ್ತು ಪಾಕಿಸ್ತಾನ ಕಾರಣ!

ಸತ್ಯವನ್ನು ಬಹಿರಂಗಪಡಿಸಿದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ

ನವದೆಹಲಿ – ಕಳೆದ ವರ್ಷ ಜುಲೈ-ಆಗಸ್ಟ್‌ನಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಘಟನೆಗಳು ನನ್ನನ್ನು ಅಧಿಕಾರದಿಂದ ಕೆಳಗಿಳಿಸುವ ಉದ್ದೇಶದಿಂದ ನಡೆದ ವಿದೇಶಿ ಪಿತೂರಿಯ ಭಾಗವಾಗಿತ್ತು. ಇದನ್ನು ಕ್ರಾಂತಿ ಎಂದು ಕರೆಯಬೇಡಿ. ಇದು ಬಾಂಗ್ಲಾದೇಶದ ಮೇಲಿನ ಭಯೋತ್ಪಾದಕ ದಾಳಿಯಾಗಿದ್ದು, ಇವೆಲ್ಲವನ್ನೂ ಅಮೆರಿಕ ಪಿತೂರಿ ನಡೆಸಿತ್ತು ಮತ್ತು ಪಾಕಿಸ್ತಾನದಿಂದ ಜಾರಿಗೊಳಿಸಲಾಗಿತ್ತು. ದಂಗೆಯನ್ನು ವಿದ್ಯಾರ್ಥಿಗಳ ದಂಗೆಯ ರೂಪದಲ್ಲಿ ಪ್ರಸ್ತುತಪಡಿಸಲಾಗಿತ್ತು. ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಈ ದಾಳಿಯನ್ನು ಮಾಡಲಾಗಿತ್ತು. ನನ್ನ ಸರಕಾರದ ಮೇಲೆ ಹತ್ಯೆ ಮಾಡಿದ ಆರೋಪ ಹೊತ್ತಿದ್ದವರು ಪೊಲೀಸರಲ್ಲ, ಆದರೆ ಸಾರ್ವಜನಿಕರನ್ನು ನನ್ನ ವಿರುದ್ಧ ಕೆರಳಿಸಲು ಭಯೋತ್ಪಾದಕರು ಹತ್ಯೆಗಳನ್ನು ಮಾಡಿದ್ದರು ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಸ್ವದೇಶ ತೊರೆದ ನಂತರ ಇದೇ ಮೊದಲ ಬಾರಿಗೆ ಆರೋಪಿಸಿದ್ದಾರೆ.

ಅಮೆರಿಕಕ್ಕೆ ಬೇಕಾಗಿದ್ದ ‘ಸೇಂಟ್ ಮಾರ್ಟಿನ್ ದ್ವೀಪ’ವನ್ನು ನೀಡದ ಕಾರಣ ನನ್ನನ್ನು ತೆಗೆದುಹಾಕಲಾಯಿತು! ಈವರೆಗೆ ಚರ್ಚೆಯಾಗುತ್ತಿದ್ದ ವಿಷಯಕ್ಕೆ ಶೇಖ್ ಹಸೀನಾ ಅವರು ಈಗ ದೃಢೀಕರಣ ನೀಡುತ್ತಾ, ಅಮೆರಿಕಕ್ಕೆ ಬಾಂಗ್ಲಾದೇಶದ ‘ಸೇಂಟ್ ಮಾರ್ಟಿನ್ ದ್ವೀಪ’ ಬೇಕಿತ್ತು. ನಾನು ಒಪ್ಪಿಕೊಂಡಿದ್ದರೆ, ಅವರು ನನ್ನನ್ನು ಅಧಿಕಾರದಿಂದ ಕೆಳಗಿಳಿಸುತ್ತಿರಲಿಲ್ಲ; ಆದರೆ ನಾನು ನನ್ನ ದೇಶವನ್ನು ಮಾರಲು ನಿರಾಕರಿಸಿದೆ ಎಂದು ಹಸೀನಾ ತಿಳಿಸಿದರು.

ಅಮೆರಿಕದ ಸೂಚನೆಯ ಮೇರೆಗೆ ದೇಶದ್ರೋಹಿ ಮೊಹಮ್ಮದ್ ಯುನೂಸ್ ಹಿಂಸಾಚಾರಕ್ಕೆ ಕಾರಣರಾದರು!

ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರರಾದ ಮೊಹಮ್ಮದ್ ಯುನೂಸ್ ಅವರ ಮೇಲೆ ಶೇಖ್ ಹಸೀನಾ ಅವರು ಆರೋಪ ಮಾಡುತ್ತಾ, ಈ ಪಿತೂರಿಯ ಹಿಂದಿನ ನಿಜವಾದ ವ್ಯಕ್ತಿ ಯಾರು ಎಂದು ನಿಮಗೆ ತಿಳಿದಿದೆಯೇ? ಅದು ಯುನೂಸ್. ಯುನೂಸ್ ಅವರು ಅಮೆರಿಕನ್ನರ ಸೂಚನೆಯ ಮೇರೆಗೆ ಕಳೆದ ವರ್ಷ ಜುಲೈ-ಆಗಸ್ಟ್‌ನಲ್ಲಿ ಬಾಂಗ್ಲಾದೇಶದಲ್ಲಿ ಭಯೋತ್ಪಾದಕ ದಾಳಿಗಳನ್ನು ಯೋಜಿಸಿದರು, ಹಣ ನೀಡಿದರು ಮತ್ತು ಅದನ್ನು ಜಾರಿಗೆ ತಂದರು. ಅವರು ಒಬ್ಬ ದೇಶದ್ರೋಹಿ. ಅವರು ತಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆಗಳಿಗಾಗಿ ತಮ್ಮ ದೇಶವನ್ನು ಹಾಳು ಮಾಡಿದರು ಎಂದು ಗಂಭೀರ ಆರೋಪ ಮಾಡಿದರು.

ಪಾಕಿಸ್ತಾನವು ಬಾಂಗ್ಲಾದೇಶದಲ್ಲಿನ ಭಯೋತ್ಪಾದಕ ಜಾಲವನ್ನು ಯಾವಾಗಲೂ ಬೆಂಬಲಿಸಿದೆ!

ಈ ಸಂದರ್ಭದಲ್ಲಿ ಶೇಖ್ ಹಸೀನಾ ಅವರು ಪಾಕಿಸ್ತಾನದ ಮೇಲೆ ಕೂಡ ಗಂಭೀರ ಆರೋಪಗಳನ್ನು ಮಾಡಿದರು. ಪಾಕಿಸ್ತಾನದಲ್ಲಿನ ಮೂಲಭೂತವಾದಿ ಶಕ್ತಿಗಳು ಬಾಂಗ್ಲಾದೇಶದಲ್ಲಿನ ಭಯೋತ್ಪಾದಕ ಜಾಲವನ್ನು ದೀರ್ಘಕಾಲದಿಂದ ಬೆಂಬಲಿಸುತ್ತಿವೆ. 1971 ರಿಂದಲೂ ಈ ರೀತಿಯ ಹಸ್ತಕ್ಷೇಪ ಮುಂದುವರೆದಿದೆ ಎಂದು ಅವರು ವಿವರಿಸಿದರು.

ಸಂಪಾದಕೀಯ ನಿಲುವು

ಶೇಖ್ ಹಸೀನಾ ಅವರು ಇದನ್ನು ಇಲ್ಲಿಯವರೆಗೆ ಏಕೆ ಮುಚ್ಚಿಟ್ಟಿದ್ದರು? ಭಾರತದಲ್ಲಿ ಆಶ್ರಯ ಪಡೆದಿರುವ ಹಸೀನಾ ಅವರನ್ನು ಸರಕಾರ ಕೂಡ ಈ ಕುರಿತು ಪ್ರಶ್ನಿಸಬೇಕು!