ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲಿನ ಹಿಡಿತವನ್ನು ಪಾಕಿಸ್ತಾನ ಬಿಡಬೇಕು!

ಜಿನೇವಾ (ಸ್ವಿಟ್ಜರ್ಲೆಂಡ್) ಅಂತರ-ಸಂಸದೀಯ ಒಕ್ಕೂಟದ ಸಭೆಯಲ್ಲಿ ಪಾಕಿಸ್ತಾನವನ್ನು ತಿವಿದ ಭಾರತ!

ಜಿನೇವಾ (ಸ್ವಿಟ್ಜರ್ಲೆಂಡ್) – ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಯ ಮೂಲಕ ಜಮ್ಮು-ಕಾಶ್ಮೀರವನ್ನು ಅಸ್ಥಿರಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ ಮತ್ತು ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಭಾರತವು ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದೆ. ಇಲ್ಲಿ ನಡೆದ ಅಂತರ-ಸಂಸದೀಯ ಒಕ್ಕೂಟದ (‘ಇಂಟರ್ ಪಾರ್ಲಿಮೆಂಟ್ ಯೂನಿಯನ್’) ಸಭೆಯಲ್ಲಿ ಪಾಕಿಸ್ತಾನದ ಪ್ರತಿನಿಧಿಯು ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದಾಗ, ಭಾರತದ ಸಂಸದೆ ಅಪರಾಜಿತಾ ಸಾರಂಗಿ ಅವರು ಈ ಪ್ರತ್ಯುತ್ತರ ನೀಡಿದರು.

ಸಂಸದೆ ಸಾರಂಗಿ ಅವರು,

1. ಈ ಸಭೆಯ ವ್ಯಾಪ್ತಿಗೆ ಬರದ ರಾಜಕೀಯ ವಿಷಯಗಳನ್ನು ಈ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರಸ್ತಾಪಿಸುವ ಪಾಕಿಸ್ತಾನವನ್ನು ನಾವು ಖಂಡಿಸುತ್ತೇವೆ. ಅವರ ಉದ್ದೇಶ ಕೇವಲ ಸುಳ್ಳು ಪ್ರಚಾರ ಮಾಡುವುದು ಮತ್ತು ಭಾರತದ ವರ್ಚಸ್ಸನ್ನು ಹಾಳುಮಾಡುವುದು ಆಗಿದೆ.

2. ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಪಾಕಿಸ್ತಾನವು ತನ್ನ ಅಕ್ರಮ ನಿಯಂತ್ರಣದಲ್ಲಿರುವ ಪ್ರದೇಶವನ್ನು ತಕ್ಷಣವೇ ತೆರವುಗೊಳಿಸಬೇಕು. ಜಮ್ಮು-ಕಾಶ್ಮೀರವು ಭಾರತದ್ದಾಗಿತ್ತು, ಭಾರತದ್ದಾಗಿದೆ ಮತ್ತು ಯಾವಾಗಲೂ ಭಾರತದ್ದೇ ಆಗಿರುತ್ತದೆ. ಪಾಕಿಸ್ತಾನವು ಈಗ ಈ ವಾಸ್ತವವನ್ನು ಒಪ್ಪಿಕೊಳ್ಳಬೇಕು.

3. ಪಾಕಿಸ್ತಾನವು ಮೊದಲು ತನ್ನ ದೇಶದ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬೇಕು. ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿವೆ.

4. ಪಾಕಿಸ್ತಾನವು ಭಾರತದ ಮೇಲೆ ಪದೇ ಪದೇ ಸುಳ್ಳು ಆರೋಪಗಳನ್ನು ಮಾಡುತ್ತಿದೆ; ಆದರೆ ನಿಜವಾದ ಸಂಗತಿಯೆಂದರೆ, ಗಡಿಯಾಚೆಗಿನ ಭಯೋತ್ಪಾದನೆಯ ಮೂಲವೇ ಆ ದೇಶದಲ್ಲಿದೆ. ಭಾರತವು ಭಯೋತ್ಪಾದನೆಯ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳುತ್ತದೆ ಮತ್ತು ಈ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ.

5. ಪಾಕಿಸ್ತಾನವು ನಿರಂತರವಾಗಿ ಗಡಿಯಾಚೆಗಿನ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿರುವ ಕಾರಣದಿಂದಾಗಿ ಭಾರತವು ಸಿಂಧೂ ನದಿ ಒಪ್ಪಂದವನ್ನು ಸ್ಥಗಿತಗೊಳಿಸಿದೆ. ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ಸಾಗಲು ಸಾಧ್ಯವಿಲ್ಲ.