೨ ವರ್ಷಗಳವರೆಗಿನ ಮಕ್ಕಳಿಗೆ ನೆಗಡಿ-ಕೆಮ್ಮಿನ ಔಷಧ ಕೊಡಬೇಡಿ! – ಕೇಂದ್ರ ಸರಕಾರ Cough Syrup Death

  • ಕೆಮ್ಮಿನ ಔಷಧದಿಂದಾಗುತ್ತಿರುವ ಮಕ್ಕಳ ಸಾವಿನ ಪ್ರಕರಣ

  • ಕಳೆದ ೨೪ ಗಂಟೆಗಳಲ್ಲಿ ೧೧ ಮಕ್ಕಳ ಸಾವು

ನವ ದೆಹಲಿ – ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಕೆಮ್ಮಿನ ಔಷಧ ತೆಗೆದುಕೊಂಡ ನಂತರ ಒಂದೇ ದಿನದಲ್ಲಿ ೧೧ ಮಕ್ಕಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಎಲ್ಲಾ ರಾಜ್ಯ ಸರಕಾರಗಳಿಗೆ ೨ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮು ಮತ್ತು ನೆಗಡಿಯ ಔಷಧಗಳನ್ನು ನೀಡಬಾರದು ಎಂದು ಸೂಚನೆ ನೀಡಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಬರುವ ‘ಆರೋಗ್ಯ ಸೇವೆಗಳ ಮಹಾ ನಿರ್ದೇಶನಾಲಯ’ ಈ ಸೂಚನೆಯನ್ನು ನೀಡಿದೆ.

ಮಹಾ ನಿರ್ದೇಶನಾಲಯವು ಮಾತು ಮುಂದುವರೆಸಿ, ೫ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮಿನ ಔಷಧಗಳನ್ನು ಶಿಫಾರಸು ಮಾಡಲಾಗುವುದಿಲ್ಲ. ಒಂದು ವೇಳೆ ನೀಡಲೇಬೇಕಾದರೆ, ಅವುಗಳನ್ನು ವೈದ್ಯರ ಮೇಲ್ವಿಚಾರಣೆಯಲ್ಲಿ, ಸರಿಯಾದ ಪ್ರಮಾಣದಲ್ಲಿ, ಹಾಗೂ ಅತಿ ಕಡಿಮೆ ಅವಧಿಗೆ ನೀಡಬೇಕು, ಎಂದು ಹೇಳಿದ್ದಾರೆ.

ಕೆಮ್ಮಿನ ಸಿರಪ್‌ನಲ್ಲಿ ‘ಡೈಥಿಲೀನ್ ಗ್ಲೈಕಾಲ್’ ಅಥವಾ ‘ಎಥಿಲೀನ್ ಗ್ಲೈಕಾಲ್’ ಇದ್ದರೆ, ಅವು ಮೂತ್ರಪಿಂಡಗಳಿಗೆ ಗಂಭೀರ ಹಾನಿ ಉಂಟುಮಾಡಬಹುದು ಎಂದು ಅಧ್ಯಯನಕಾರರ ಅಭಿಪ್ರಾಯವಾಗಿದೆ. ಆದಾಗ್ಯೂ, ಮಧ್ಯಪ್ರದೇಶದಲ್ಲಿ ಮೃತಪಟ್ಟ ಮಕ್ಕಳಿಗೆ ನೀಡಿದ ಸಿರಪ್‌ನಲ್ಲಿ ಈ ರಾಸಾಯನಿಕಗಳು ಕಂಡುಬಂದಿಲ್ಲ.

ಮಹಾರಾಷ್ಟ್ರದಲ್ಲಿ ೨೬ ಸಾವಿರದ ೯೩೫ ಲೀಟರ್ ಕಫ್ ಸಿರಪ್ ನಾಶ!

ಮಹಾರಾಷ್ಟ್ರದಲ್ಲಿ ಪೊಲೀಸರು ೨೬ ಸಾವಿರದ ೯೩೫ ಲೀಟರ್ ‘ಕೋಡಿನ್’ ರಾಸಾಯನಿಕಯುಕ್ತ ಕಫ್ ಸಿರಪ್ ಅನ್ನು ನಾಶಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾಗೆಯೇ, ತಮಿಳುನಾಡು ಸರಕಾರವು ‘ಕೋಲ್ಡ್ರಿಫ್ ಕಫ್ ಸಿರಪ್’ ಮಾರಾಟವನ್ನು ನಿಷೇಧಿಸಿದೆ. ಈ ಸಿರಪ್ ಬಾಟಲಿಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಆದೇಶ ನೀಡಲಾಗಿದೆ.